ಜಾತಿ: ‘ಲಿಂಗಾಯತ’ ಅಥವಾ ‘ವೀರಶೈವ’ ಅಥವಾ ‘ವೀರಶೈವ ಲಿಂಗಾಯತ’ ಬರೆಸಿ
ಬೆಂಗಳೂರು
ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ “ಇತರೇ” ಕಾಲಂನಲ್ಲಿ “ವೀರಶೈವ ಲಿಂಗಾಯತ” ಎಂದು ಬರೆಸಿ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ, ಸಚಿವರು ಭಾನುವಾರ ಹೇಳಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಜಾತಿಯ ಕಾಲಂನಲ್ಲಿ “ಲಿಂಗಾಯತ” ಅಥವಾ “ವೀರಶೈವ” ಅಥವಾ “ವೀರಶೈವ ಲಿಂಗಾಯತ” ಎಂದು ಮತ್ತು ಉಪಜಾತಿ ಕಾಲಂನಲ್ಲಿ ತಾವು ಸೇರಿದ ಉಪಜಾತಿಯ ಸಂಕೇತ ಸಂಖ್ಯೆಯನ್ನು ಖಚಿತಪಡಿಸಿಕೊಂಡು ಬರೆಸಬೇಕು.
ಇವುಗಳ ಜೊತೆಗೆ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸ್ಪಷ್ಟವಾಗಿ ಗಣತಿದಾರರಿಗೆ ನೀಡಿ, ತಾವು ನೀಡಿದ ಮಾಹಿತಿಯನ್ನು ಸರಿಯಾಗಿ ದಾಖಲಿಸಿಕೊಂಡಿದ್ದಾರೆಯೇ ಎಂಬುದುನ್ನು ಖಚಿತಪಡಿಸಿಕೊಂಡು ಒಪ್ಪಿಗೆ ನೀಡುವುದು. ಆಯೋಗವು ಕೈಪಿಡಿಯನ್ನು ಬಿಡುಗಡೆ ಮಾಡಿದ ನಂತರ ಅಧಿಕೃತ ಮಾಹಿತಿಯನ್ನು ತಮ್ಮಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಮೀಸಲಾತಿಗಾಗಿ ನೀಡುವ ಜಾತಿ ಪ್ರಮಾಣ ಪತ್ರಕ್ಕೂ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಬರೆಸುವ ಮಾಹಿತಿಗೂ ಸಂಬಂಧವಿರುವುದಿಲ್ಲ. ಶಾಲಾ ದಾಖಲಾತಿ ಇನ್ನಿತರೇ ದಾಖಲಾತಿಗಳನ್ನು ಪರಾಮರ್ಶಿಸಿದ ಬಳಿಕವಷ್ಟೇ ಜಾತಿ ಪ್ರಮಾಣ ಪತ್ರ ನೀಡಲಾಗುತ್ತದೆ, ಎಂದು ಹೇಳಿದರು.
ಮಹಾಸಭೆಯ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾದ ಶಂಕರ ಬಿದರಿಯವರು ಮಾತನಾಡಿ ಈ ಹಿಂದಿನ ಸಮೀಕ್ಷೆಗಳಲ್ಲಿ ವೀರಶೈವ ಮತ್ತು ಲಿಂಗಾಯತರನ್ನು ಒಂದು ಜಾತಿ ಎಂದು ಪರಿಗಣಿಸಲಾಗಿದೆ. ಪ್ರತ್ಯೇಕ ಧರ್ಮದ ಮಾನ್ಯತೆಯನ್ನು ಅಧಿಕೃತವಾಗಿ ನೀಡಿಲ್ಲ. ಅದನ್ನು ಪರಿಗಣಿಸುವ ಅಗತ್ಯವಿದೆ.
ನಮ್ಮ ಸಮಾಜದಲ್ಲಿ ಹಿಂದುಳಿದವರು, ಅತಿ ಹಿಂದುಳಿದವರು ಮತ್ತು ಅತ್ಯಂತ ಹಿಂದುಳಿದವರಿದ್ದಾರೆ. ಹೀಗಾಗಿ ಪಾರದರ್ಶಕವಾಗಿ ವಿವಿಧ ವೃತ್ತಿಯನ್ನು ಮಾಡುವ ಬಡವ ಮತ್ತು ಕಡು ಬಡವರಿಗೆ ಪ್ರಾಮಾಣಿಕವಾಗಿ ಅಂಕ ನೀಡಿ, ಸೂಕ್ತ ಪ್ರವರ್ಗಕ್ಕೆ ಸೇರಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಕಾರ್ಯದರ್ಶಿ ಹೆಚ್.ಎಂ.ರೇಣುಕ ಪ್ರಸನ್ನ, ಉಪಾಧ್ಯಕ್ಷರಾದ ಬಿ.ಎಸ್. ಸಚ್ಚಿದಾನಂದಮೂರ್ತಿ, ರಾಷ್ಟ್ರೀಯ ಮಹಿಳಾ ಅಧ್ಯಕ್ಷರಾದ ವೀಣಾ ಕಾಶಪ್ಪನವರ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಹಳ್ಳಿ ಸೇರಿದಂತೆ ಮಹಾಸಭೆ ಮತ್ತು ಮಹಾಸಭೆಯ ಎಲ್ಲ ಹಂತದ ಘಟಕಗಳ/ವಿಭಾಗಗಳ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
