ಜಗತ್ತಿನಲ್ಲಿ ಕಣ್ಣಿಗೆ ಕಾಣುವ ಏಕೈಕ ದೇವರು ತಾಯಿ: ತೋಂಟದ ಸಿದ್ಧರಾಮ ಶ್ರೀಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ:

ಮನೆಗಳು ಇವತ್ತು ಮಕ್ಕಳಿಲ್ಲದ ವೃದ್ಧಾಶ್ರಮಗಳಾಗುತ್ತಿವೆ. ಆಧುನಿಕ ಸಂಸ್ಕೃತಿಗೆ ಒಳಗಾಗಿರುವ ಯುವ ಜನಾಂಗ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳವರು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೮೦೦ನೆಯ ಶಿವಾನುಭವದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಇವತ್ತಿನ ಸಂಸ್ಕೃತಿಯಲ್ಲಿ ಹೆತ್ತ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಪಾಲನೆ ಪೋಷಣೆ ಮಾಡದೇ ಅನೇಕ ನಗರಗಳಲ್ಲಿ ‘ತೆರೆದ ಮನೆ’ ಎಂಬ ಸಂಸ್ಕೃತಿಗೆ ಒಳಗಾಗಿ ಏನು ಅರಿಯದ ಮಕ್ಕಳನ್ನು ಬಾಲ್ಯದಲ್ಲಿ ತಮ್ಮಿಂದ ದೂರವಿಡುವುದರಿಂದ ಮಕ್ಕಳಲ್ಲಿ ಹೆತ್ತವರು, ಹಿರಿಯರು, ಕುಟುಂಬದ ಬಗ್ಗೆ ಪ್ರೀತಿ ಮಮತೆ ಬರಲು ಸಾಧ್ಯವಿಲ್ಲ.

ಆದ್ದರಿಂದ ಮೊದಲ ಆದ್ಯತೆಯನ್ನು ಮಕ್ಕಳ ಮನೋವಿಕಾಸ ಆಗುವ ರೀತಿಯಲ್ಲಿ ಬೆಳೆಸಿ, ಪ್ರೀತಿ ವಿಶ್ವಾಸ ಮೊದಲಾದ ಮಾನವೀಯ ಮೌಲ್ಯಗಳನ್ನು ಕೊಡಬೇಕೆಂದು ಹೇಳಿದರು.

‘ತಾಯಿಯ ಮಮತೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಗದುಗಿನ ವಿ.ಡಿ.ಎಸ್.ಟಿ. ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಮುಕ್ತಾ ವೆಂಕಟೇಶ ಉಡುಪಿ ಅವರು ಮಾತನಾಡಿ, ತಾಯಿ ಕಣ್ಣಿಗೆ ಕಾಣುವ ದೇವರು. ತಾಯಿ ಇಲ್ಲದೆ ಮಕ್ಕಳ ಬದುಕು ವಿಕಸನವಾಗಲು ಸಾಧ್ಯವಿಲ್ಲ. ಆದ್ದರಿಂದ ತಾಯಿ ತನ್ನ ಎಲ್ಲಾ ಅವಶ್ಯಕತೆಗಳನ್ನು ತ್ಯಾಗ ಮಾಡಿ ಮಕ್ಕಳನ್ನು ಪರಿಪೂರ್ಣರನ್ನಾಗಿ ರೂಪಿಸುತ್ತಾಳೆ. ಇದಕ್ಕೆ ಎಡಿಸನ್‌ನ ತಾಯಿ, ಶಿವಾಜಿಯ ತಾಯಿಯಾದ ಜೀಜಾಬಾಯಿ ಉದಾಹರಣೆಯಾಗಿದ್ದಾರೆ.

ಅವಿಭಕ್ತ ಕುಟುಂಬದಲ್ಲಿ ಬೆಳೆದ ಮಕ್ಕಳು ಸಂಬಂಧಗಳಿಗೆ ಬೆಲೆ ಕೊಡುವ ವ್ಯಕ್ತಿತ್ವದವರಾಗುತ್ತಾರೆ. ಆದ್ದರಿಂದ ಉತ್ತಮ ಪರಿಸರದಲ್ಲಿ ಮಕ್ಕಳನ್ನು ಬೆಳೆಸುವುದು ತುಂಬಾ ಅವಶ್ಯವಿದೆ ಎಂದು ಹೇಳಿದರು.

ಇವತ್ತಿನ ತಂತ್ರಜ್ಞಾನ ಮಕ್ಕಳ ಮನಸ್ಸನ್ನು ಕದಡುತ್ತಿದೆ. ಆದ್ದರಿಂದ ಮಕ್ಕಳು ತಂದೆ ತಾಯಿಗಳ ಬಗ್ಗೆ ಗೌರವವನ್ನು, ತಂದೆ ತಾಯಿಗಳು ಮಕ್ಕಳ ಬಗ್ಗೆ ಪ್ರೀತಿ ವಿಶ್ವಾಸವನ್ನು ಕೊಡುವುದರಲ್ಲಿ ವಿಫಲರಾಗುತ್ತಿದ್ದಾರೆ ಎಂದರು.

ವಚನ ಸಂಗೀತವನ್ನು ಉರ್ವಿ ಪ್ರಕಾಶ ಸಂಕನೂರ ಹಾಗೂ ಆರಾಧ್ಯ ಕುನಾಲ ಅಳ್ಳೊಳ್ಳಿ ಹಾಗೂ ಧರ್ಮಗ್ರಂಥ ಪಠಣವನ್ನು ವಿವೇಕ ಎಚ್ಚಲಗಾರ ಹಾಗೂ ನಂದಿನಿ ಎಚ್ಚಲಗಾರ ನಡೆಸಿದರು.

ದಾಸೋಹ ಸೇವೆಯನ್ನು ಗಂಗಾವತಿಯ ಶಾಂತಮ್ಮ ಹಾಗೂ ಗವಿಸಿದ್ದಪ್ಪ ನಾಗರಹಳ್ಳಿ ಅವರು ಹಾಗೂ ಕುಟುಂಬ ವರ್ಗ ನಡೆಸಿದರು. ಸ್ವಾಗತವನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ವಿ. ಪುರದ ನಡೆಸಿದರು. ಶಿವಾನುಭವದ ನಿರೂಪಣೆಯನ್ನು ಲಿಂಗಾಯತ ಪ್ರಗತಿಶೀಲ ಸಂಘದ ಸಹಕಾರ್ಯದರ್ಶಿ ಪ್ರತಿಭಾ ಮು. ಬಡ್ನಿ ನಡೆಸಿದರು.

ಶಿವಾನುಭವದಲ್ಲಿ ಶಿವಮೊಗ್ಗದ ಶ್ರೀ ಗುರುಮಲ್ಲೇಶ್ವರ ದಾಸೋಹ ಶಾಖಾ ಮಠದ ಪೂಜ್ಯ ಅಕ್ಕಮಹಾದೇವಿ ಮಾತಾಜಿ ಹಾಗೂ ಶಿವಾನುಭವ ಸಮಿತಿಯ ಚೇರ್ಮನ್ನ ಡಾ. ರಮೇಶ ಮ. ಕಲ್ಲನಗೌಡರ, ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಮು. ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ ಹಾಗೂ ಶ್ರೀಮಠದ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *