ಚಿಕ್ಕಮಗಳೂರು:
ತಾಲ್ಲೂಕು ಮಟ್ಟದ 6ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸೆಪ್ಟೆಂಬರ್ 6ರಂದು ನಗರದ ದೊಡ್ಡ ಕುರುಬರಹಳ್ಳಿ ಬಸವತತ್ವ ಪೀಠದ ಆವರಣದಲ್ಲಿ ನಡೆಸಲಾಗುವದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ಅವರು ತಿಳಿಸಿದರು.
ದೊಡ್ಡಕುರುಬರಹಳ್ಳಿ ಬಸವ ಮಂದಿರದಲ್ಲಿ ಸಮ್ಮೇಳನ ಆಯೋಜಿಸಲು ಬಸವತತ್ವ ಪೀಠದ ಬಸವ ಮರುಳಸಿದ್ಧ ಮಹಾಸ್ವಾಮೀಜಿ ಚಿಕ್ಕಮಗಳೂರು ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಸಲು ಅನುಮತಿ ನೀಡಿ, ಸಮ್ಮೇಳನ ಯಶಸ್ವಿಯಾಗಲು ಎಲ್ಲರೂ ಸಹಕರಿಸಬೇಕು, ಇಡೀ ದಿನದ ಕಾರ್ಯಕ್ರಮಗಳನ್ನು ಸಾಹಿತ್ಯ ಪರಿಷತ್ತು ತನ್ನ ಚೌಕಟ್ಟಿನಲ್ಲಿ ನಿರ್ವಹಿಸಲಿ ಎಂದು ಆಶಿಸಿ ಒಪ್ಪಿಗೆ ಮತ್ತು ಅನಿಸಿಕೆ ತಿಳಿಸಿದರು.
ಚಿಕ್ಕಮಗಳೂರು ತಾಲ್ಲೂಕು ಕಸಾಪ ಅಧ್ಯಕ್ಷ ಎಸ್.ಎಂ. ಲೋಕೇಶಪ್ಪ ಮಾತನಾಡುತ್ತ, 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲೆ ಮತ್ತು ತಾಲ್ಲೂಕು ಪದಾಧಿಕಾರಿಗಳ ಮತ್ತು ಸಾಹಿತ್ಯ ಅಭಿಮಾನಿಗಳ ಸಭೆ ಕರೆದು ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡಿಕೊಳ್ಳಲಾಗುವುದು.
ಸಮ್ಮೇಳನ ಮುಗಿದ ನಂತರ ಅದಕ್ಕೆ ಸಂಬಂಧಿಸಿದ ಎಲ್ಲ ಲೆಕ್ಕಪತ್ರವನ್ನು 30 ದಿನಗಳ ಒಳಗಾಗಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ವೆಂಕಟೇಶ ಮಾತನಾಡುತ್ತ, ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗುವುದು. ಕೃಷಿ, ಮಹಿಳಾ, ಜಾನಪದ ಮತ್ತು ಕವಿಗೋಷ್ಠಿಗಳನ್ನು ಆಯೋಜಿಸಲು ಗಮನ ಹರಿಸಲಾಗುವುದು ಎಂದು ತಿಳಿಸಿದರು.
ಚಿಕ್ಕಮಗಳೂರು ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿವಿಶ್ವನಾಥ, ಕಸಬಾ ಹೋಬಳಿ ಘಟಕದ ಅಧ್ಯಕ್ಷರಾದ ವೀಣಾ ಮಲ್ಲಿಕಾರ್ಜುನ, ತಾಲ್ಲೂಕು ಯುವ ಘಟಕದ ಅಧ್ಯಕ್ಷ ರೋಹನ್ ಭಾರ್ಗವ ಪುರಿ, ಜಿಲ್ಲಾ ಸಂಚಾಲಕ ಬಿ.ಆರ್ ಜಗದೀಶ, ನಗರ ಘಟಕದ ಅಧ್ಯಕ್ಷ ರೂಪಾ ನಾಯ್ಕ ಉಪಸ್ಥಿತರಿದ್ದರು.
