ಅಭಿಯಾನ: ತಾಯಿಯ ಮೊಲೆ ನಂಜಾದರೆ ಇನ್ನಾರಿಗೆ ದೂರಲಿ

ಲಿಂಗಾಯತರ ಮೇಲೆ ಸಾಂಸ್ಕೃತಿಕ ದಾಳಿ ನಡೆಯುತ್ತಿದ್ದರೂ ಮಠಾಧೀಶರ ಒಕ್ಕೂಟ ಕೈ ಚೆಲ್ಲಿ ಕೂತಿದೆ

ಗಂಗಾವತಿ

ಲಿಂಗಾಯತ ಮಠಾಧೀಶರ ಒಕ್ಕೂಟ ಅಂದರೆ ಅದು ಬಸವತತ್ವ ಸಿದ್ದಾಂತಕ್ಕೆ ಬದ್ದವಾಗಿರಬೇಕಾಗಿತ್ತು, ಆದರೆ ಅದು ಯಾಕೊ ತನ್ನ ತಾಳ ತಪ್ಪುತ್ತಿದೆಯೇನೊ ಎನ್ನುವ ಅನುಮಾನ ಇಂದು ನಾಡಿನ ಎಲ್ಲಾ ಬಸವಭಕ್ತರು, ಅಭಿಮಾನಿಗಳು ಮತ್ತು ಅನುಯಾಯಿಗಳ ಮನಸ್ಸಿನಲ್ಲಿ ಮೂಡುತ್ತಿರುವುದು ಸತ್ಯ.

ತತ್ವ ಸಿದ್ದಾಂತ ಮಾತುಗಳನ್ನಾಡುತ್ತಾ ಜನರನ್ನು ಮರಳು ಮಾಡುತ್ತಿದೆ ಏನೊ ಎನ್ನುವ ಆತಂಕ ಸಹ ಇಂದು ಮೂಡುತ್ತಿದೆ.

ಹಿಂದುತ್ವದ ಕರಿ ಛಾಯೆ ಇಂದು ಲಿಂಗಾಯತದ ಸಿದ್ದಾಂತಗಳನ್ನು ಆಪೋಶನ್ ಮಾಡಲು ತಯಾರಿ ನಡೆಸಿದರೆ, ಮತ್ತೊಂದಡೆ ಲಿಂಗಾಯತ ಮಠಾಧೀಶರ ಒಕ್ಕೂಟ ಎನ್ನುವ ಸಂಸ್ಥೆ ತನಗೆ ಅದಾವುದು ಗೊತ್ತೆ ಇಲ್ಲ ಎನ್ನುವಂತೆ ವರ್ತಿಸುವುದು ನೋಡಿದರೆ, “ಮಾತು ಕಲಿತು ಮಂಡೆಯ ಬೋಳಿಸಿಕೊಂಡಡೇನು ವೇಷಲಾಂಛನಧಾರಿ ಉದರ ಪೋಷಕರಪ್ಪರಲ್ಲದೆ” ಎನ್ನುವ ಶರಣರ ಮಾತು ನೆನಪಿಗೆ ಬರುತ್ತಿದೆ.

ಲಿಂಗಾಯತ ಸಂಸ್ಕೃತಿಯ ಮೇಲೆ ಇಂದು ಸನಾತನಿಗಳು ಯಾವ ರೀತಿಯಾದ ಪ್ರಹಾರ ಮಾಡುತ್ತಿದ್ದಾರೆ ಎನ್ನುವುದು ನಾಡಿನ ಎಲ್ಲಾ ಬಸವ ಅನುಯಾಯಿಗಳಿಗೆ ಗೊತ್ತು, ಆದರೆ ಇಂದು ನಾವು ಆ ಲಿಂಗಾಯತ ತತ್ವ ಸಿದ್ದಾಂತಗಳನ್ನು ಯಾವ ರೀತಿಯಾಗಿ ಜನಮಾನಸದಲ್ಲಿ ಮುಟ್ಟಿಸಬೇಕೆಂಬ ಕಾಳಜಿ ಈ ಸಂಸ್ಥೆಗಳಿಗೆ ಇಲ್ಲ ಅನಿಸುತ್ತಿದೆ.

ಸೆಪ್ಟಂಬರ್ ನಲ್ಲಿ ಮಠಾಧೀಶರ ಒಕ್ಕೂಟದಿಂದ ಅಭಿಯಾನ ಪ್ರಾರಂಭವಾಗಬೇಕು, ಆದರೆ ಅದಕ್ಕೆ ಯಾವುದೇ ಪೂರ್ವ ಸಿದ್ದತೆಗಳೇ ಇಲ್ಲ. ಎಲ್ಲಾ ಮಠಾಧೀಶರೂ ಅಭಿಯಾನ ಮಾಡುವುದನ್ನು ಮರೆತಂತಿದೆ. ಅಭಿಯಾನದ ರೂಪರೇಷೆಗಳೇನು, ಅದನ್ನು ಕೊಂಡೊಯ್ಯುವ ಪರಿ ಯಾವ ರೀತಿ, ಅದನ್ನು ಮುನ್ನಡೆಸಿಕೊಂಡು ಹೋಗುವುದು ಹೇಗೆ, ಹೀಗೆ ಅನೇಕ ಪ್ರಶ್ನೆಗಳು ಮುಂದಿದ್ದರು ಅದರ ಬಗ್ಗೆ ಯಾವದೇ ಚಕಾರು ಎತ್ತದೆ ಸುಮ್ಮನೆ ಕುಳಿತಿರುವುದು ನೋಡಿದರೆ ಇದೊಂದು ಕಾಟಾಚಾರದ ಅಭಿಯಾನ ಆಗಿ ಬಿಡುತ್ತೇನೊ ಎನ್ನುವ ಅನುಮಾನ ಬಸವ ಭಕ್ತರಲ್ಲಿ ಮೂಡುತ್ತಿದೆ.

ಇಂದು ಸನಾತನಿ ಸಂಘಟನೆಗಳು ಎಷ್ಟು ಆಕ್ಟಿವ್ ಆಗಿ ತಮ್ಮ ಕುತಂತ್ರ ಕೆಲಸಗಳನ್ನು ಸಮಾಜದಲ್ಲಿ ಮಾಡುತ್ತಿವೆ. ಬಸವ ಜಯಂತಿ ಸಮಯದಲ್ಲಿ ರೇಣುಕಾಚಾರ್ಯರ ಜಯಂತಿ ಎನ್ನುವ ಕುತಂತ್ರವನ್ನು ಲಿಂಗಾಯತರಿಂದಲೇ ಹೇಳಿಸಿ ತನ್ನ ಕಾರ್ಯ ಸಾಧು ಮಾಡಿಕೊಳ್ಳಲು ಪ್ರಯತ್ನಿಸಿದವು. ವಚನ ದರ್ಶನ ಎನ್ನುವ ಗ್ರಂಥದಲ್ಲಿ ತನ್ನ ಎಲ್ಲಾ ಕುಟಿಲ ವಿಷಯಗಳನ್ನು ತುಂಬಿ ಇಡಿಯಾಗಿ ಆ ಸಿದ್ದಾಂತವನ್ನು ಹೈಜಾಕ್ ಮಾಡಲು ನೋಡಿತು ಮತ್ತು ಸಮಾಜದಲ್ಲಿ ಸಂಚಲವನ್ನು ಮೂಡಿಸಿತು. ಇದನ್ನು ಸಹ ಲಿಂಗಾಯತರಿಂದಲೇ ಮಾಡಿಸಿತು ಆ ಪಟ್ಟಭದ್ರ ವ್ಯವಸ್ಥೆ. ಇಡೀ ಲಿಂಗಾಯತ ಯುವಕರನ್ನು ತನ್ನೆಡೆ ಸೆಳೆದು ಜೈ ಶ್ರೀ ರಾಮ ಎನ್ನುವಂತೆ ಮಾಡಲು ಯಶಸ್ವಿಯಾಯಿತು.

ಇಷ್ಟೆಲ್ಲಾ ಸಾಂಸ್ಕೃತಿಕ ದಾಳಿಗಳು ಬಸವಾದಿ ಶರಣ ಲಿಂಗಾಯತ ಸಿದ್ದಾಂತಗಳ ಮೇಲೆ ಮೇಲಿಂದ ಮೇಲೆ ಆದರೂ, ಬಸವಪರ ಸಂಘಟನೆಗಳೆಲ್ಲಾ ಮತ್ತೆ ಮಠಾಧೀಶರ ಒಕ್ಕೂಟ ಸಹ ಬರಿ ಹೇಳಿಕೆ ನೀಡಿ ಕೈ ಚೆಲ್ಲಿತೆ ವಿನಃ ಯಾವುದೇ ಸಂಘಟನಾತ್ಮಕ ಕಾರ್ಯಕ್ಕೆ ಕೈ ಹಾಕಲಿಲ್ಲ.

ಇಂದಿಗೂ ಲಿಂಗಾಯತ ತತ್ವದ ಮೇಲೆ ಸೈದ್ದಾಂತಿಕ ದಾಳಿಗಳು ನಡೆಯುತ್ತಿದ್ದರೂ, ಯಾಕೆ ಒಂದು ಸಂಘಟನಾತ್ಮಕ ಅಭಿಯಾನಕ್ಕೆ ಕಾರ್ಯಗಳು ರೂಪಗೊಳ್ಳುತ್ತಿಲ್ಲ ಎನ್ನುವುದು ಸೋಜಿಗದ ಸಂಗತಿಯೆ ಆಗಿದೆ. ಬಸವಪರ ಸಂಘಟನೆಗಳು ಮತ್ತು ಮಠಾಧೀಶರ ಒಕ್ಕೂಟವು ಯಾಕೆ ಒಂದು ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿಲ್ಲ? “ತೊಡೆಯಲ್ಲಿ ಮುದ್ರೆಯೊತ್ತಿದಡೇನು ಅದು ನಡೆಯಲ್ಲಿ ಶುಚಿಯಾಗಬಲ್ಲುದೆ” ಎನ್ನುವಂತೆ ಬರಿ ಮಾತಿಗಷ್ಟೆ ಸಂಘಟನೆಗಳು ಒಕ್ಕೂಟ ಸೀಮಿತವಾದವೆ? ಎನ್ನುವ ಅನುಮಾನ ಕಾಡುತ್ತಿದೆ.

ಲಿಂಗಾಯತ ಸಮಾಜದಲ್ಲಿ ಮತ್ತು ಲಿಂಗಾಯತ ಯುವಕರಲ್ಲಿ ಬಸವಪ್ರಜ್ಞೆ ಜಾಗೃತವಾದ ಈ ಕಾಲಘಟ್ಟದಲ್ಲಿ ಸಂಘಟನೆಯ ಕಾರ್ಯಗಳು ಚಟುವಟಿಕೆಗಳು ಭರಪೂರಾಗಿ ನಡೆಯಬೇಕಿತ್ತು, ಆದರೆ ಯಾವುದೇ ಕಾರ್ಯ ಚಟುವಟಿಕೆ ಇಲ್ಲದೆ ನಿಷ್ಕ್ರಿಯವಾಗಿರುವ ಸಂಘಟನೆಗಳನ್ನು ಮತ್ತು ಒಕ್ಕೂಟಗಳನ್ನು ಬಡಿದೆಬ್ಬಿಸುವವರು ಯಾರು? ತಾಯಿಯ ಮೊಲೆ ನಂಜಾದರೆ ಇನ್ನಾರಿಗೆ ದೂರಬೇಕಿದೆ ಎನ್ನುವ ಅನಾಥ ಪ್ರಜ್ಞೆ ಲಿಂಗಾಯತ ಸಮುದಾಯವನ್ನು ಕಾಡುತ್ತಿರುವುದು ಮಾತ್ರ ಸತ್ಯ. ಇದಕ್ಕೆ ದಾರಿ ಯಾವುದು? ಎನ್ನುವುದು ಜವಾಬ್ದಾರಿಯನ್ನು ಹೊತ್ತವರು ಸಮುದಾಯಕ್ಕೆ ತಿಳಿಸಬೇಕಾದ ಅನಿವಾರ್ಯತೆಯೂ ಇದೆ.

ಈ ಎಲ್ಲಾ ಕಾರಣಕ್ಕಾಗಿ ಸೆಪ್ಟೆಂಬರ್ ನಲ್ಲಿ ನಡೆಯುವ ಲಿಂಗಾಯತ ಸಾಂಸ್ಕೃತಿಕ ಅಭಿಯಾನ ಕೇವಲ ಒಂದು ಕಾಟಾಚಾರದ ಅಭಿಯಾನ ಆಗದೆ ಲಿಂಗಾಯತ ಸಮುದಾಯದಲ್ಲಿ ಮತ್ತು ಲಿಂಗಾಯತ ಯುವಕರಲ್ಲಿ ಬಸವತತ್ವದ ಸಂಚಲನ ಮೂಡಿಸುವಂತ ಅಭಿಯಾನ ಆಗಲಿ, ಸೈದ್ದಾಂತಿಕ ವಿರೋಧಿಗಳ ಎದೆ ನಡುಗವಂತ ಅಭಿಯಾನ ಆಗಲಿ ಎಂದು ಆಶಿಸುವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Dv8eAoC8n2rJOtZKYt4o86

Share This Article
Leave a comment

Leave a Reply

Your email address will not be published. Required fields are marked *