ಶರಣರ ಭಾವಚಿತ್ರಗಳು ಲಿಂಗಾಯತರ ಸಂಸ್ಕೃತಿ ಉಳಿಸುತ್ತವೆ: ನಿಜಗುಣಪ್ರಭು ಶ್ರೀ
ಬಸವಕಲ್ಯಾಣ
ಶರಣರ ಭಾವಚಿತ್ರಗಳು ಲಿಂಗಾಯತರ ಸಂಸ್ಕೃತಿ, ಇತಿಹಾಸ, ಪರಂಪರೆ, ಸಂಸ್ಕೃತಿ ಉಳಿಸುತ್ತವೆ. ಮೂರ್ತಿಗಳಿಂದಲೇ ಧರ್ಮ ಉಳಿಯುತ್ತದೆ ಎಂದು ಜಗದ್ಗುರು ತೋಂಟದಾರ್ಯ ಮಠ ಮುಂಡರಗಿಯ ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ನುಡಿದರು.
ಅವರು ಅಕ್ಕಮಹಾದೇವಿ ಗವಿಯಲ್ಲಿ ನಡೆದ ಅಕ್ಕನ ಮೂರ್ತಿ ಅನಾವರಣ ಮಾಡಿ ಹಾಗೂ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರಣರನ್ನು ಅನುಭಾವದಿಂದ ತೆಗೆದುಕೊಂಡು ಹೋಗಬೇಕು. ವಚನಗಳ ಒಂದೊಂದು ಶಬ್ದದ ಮೇಲೆ ಹೋರಾಟವಿದೆ. ಲಿಂಗದ ಮೇಲೆ ಬಸವಧರ್ಮ ಉಳಿದಿದೆ. ವೈದಿಕ ಪರಂಪರೆಯನ್ನು ದೂರವಿರಿಸಿ ಅಜ್ಞಾನದಿಂದ ಜ್ಞಾನದೆಡೆಗೆ, ಮೂಢನಂಬಿಕೆಯಿಂದ ವೈಜ್ಞಾನಿಕತೆ, ವೈಚಾರಿಕತೆಯೆಡೆಗೆ ಕೊಂಡೊಯ್ದ ಶರಣರು, ಅವರ ಮೂರ್ತಿಗಳನ್ನು ಅನಾವರಣ ಮಾಡುವುದರಿಂದ ಮುಂದಿನ ಜನಾಂಗಕ್ಕೆ ಅವರ ತತ್ವಗಳ ಅರಿವು ಮೂಡಿ ದಾರಿಯಾಗುತ್ತವೆ. ಶರಣಧರ್ಮ ಕಾಯಕ ಪ್ರಧಾನವಾದ ಧರ್ಮ, ಕಾಯಕದ ಶರಣರಿಂದ ಕಟ್ಟಲ್ಪಟ್ಟ ಧರ್ಮವಾಗಿದೆ. ಲಿಂಗವಿಡಿದ ಅಕ್ಕನ ಮೂರ್ತಿಯನ್ನು ನೋಡಿದರೆ ಅವರ ವಚನಗಳು ಕಣ್ಣೆದುರಿಗೆ ಬರುತ್ತವೆ ಎಂದು ನುಡಿದರು.

ನೇತೃತ್ವ ವಹಿಸಿದ್ದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಅಕ್ಕನ ಮೂರ್ತಿಯ ದರ್ಶನ ಮಾಡುವುದರ ಜೊತೆಗೆ ಅವರ ವಚನಗಳನ್ನು ಅಧ್ಯಯನ ಮಾಡಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಂದರು.
ಅಕ್ಕಮಹಾದೇವಿಯ ಗವಿಯ ಪೂಜ್ಯ ಸತ್ಯಕ್ಕತಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಕ್ಕನ ಚರಿತ್ರೆ ಓದಿದಾಗ ನಿಜವಾದ ವೈರಾಗ್ಯ ಬರುತ್ತದೆ. ಶರಣರ ನೆನಹದಿಂದ, ಅಕ್ಕನ ಭಾವಚಿತ್ರದಿಂದ ನನಗೆ ವೈರಾಗ್ಯ ಬಂದಿದೆ. ಶರಣರ ವಿಶ್ವಾಸವೇ ನನಗೆ ಕಾಯ್ದಿದೆ. ಪೂಜ್ಯರ ಆಶಿರ್ವಾದದಿಂದ ಸಾಧನೆ ಮಾಡಲು ಅವಕಾಶವಾಗಿದೆ ಎಂದರು.
ದಿವ್ಯಸಾನಿಧ್ಯ ವಹಿಸಿಕೊಂಡಿದ್ದ ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಆಶಿರ್ವಚನ ನೀಡಿ, ಇತಿಹಾಸ ಅಳಿಯಬಾರದು ಅದು ಉಳಿಯಬೇಕು. ಸತ್ಯ ಮತ್ತು ಸತ್ವ ಯಾವಾಗಲೂ ಶಾಶ್ವತವಾಗಿ ಉಳಿಯುತ್ತವೆ. ಮೂರ್ತಿಯಿಂದ ಅಕ್ಕನ ಚರಿತ್ರೆ ಭವಿಷ್ಯದಲ್ಲಿಯೂ ಉಳಿಯುತ್ತದೆ, ಜೀವಂತವಾಗಿರುತ್ತದೆ. ಏನೇ ಬಂದರೂ ಸತ್ಯ ಹಿಡಿದುಕೊಂಡು ಹೋಗಬೇಕು, ಏಕಕಾಲಕ್ಕೆ ಎರಡು ಮೂರ್ತಿಗಳು ಅನಾವರಣಗೊಂಡಿದ್ದು ಐತಿಹಾಸಿಕವಾಗಿದ್ದು, ಅತಿ ಸಂತೋಷವಾಗಿದೆ ಎಂದರು.

ಬಸವ ಮಹಾಮನೆ ಸಂಸ್ಥೆಯ ಪೂಜ್ಯ ಡಾ. ಸಿದ್ಧರಾಮ ಬೆಲ್ದಾಳ ಶರಣರು ಅವರು ಪೂಜ್ಯ ಡಾ. ಗಂಗಾಂಬಿಕಾ ಅಕ್ಕನವರು ವಿರಚಿತ “ವೀರವೈರಾಗ್ಯನಿಧಿ ಮಹಾದೇವಿ ಅಕ್ಕನವರ ಸಾಹಿತ್ಯ ದರ್ಶನ” ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು.
ಒಂಬತ್ತು ದಿವಸಗಳ ಕಾಲ ಅಕ್ಕನ ಜೀವನ ದರ್ಶನ ಪ್ರವಚನ ಮಾಡಿದ ಪೂಜ್ಯ ಡಾ. ಮಹಾಂತ ಬಸವಲಿಂಗ ಮಹಾಸ್ವಾಮಿಗಳು, ಯಮಕನಮರಡಿಯ ಪೂಜ್ಯ ಸಿದ್ಧಬಸವದೇವರು ಮಾತನಾಡಿದರು.
ಪೂಜ್ಯ ಬಸವಪ್ರಭು ಸ್ವಾಮಿಗಳು, ಪೂಜ್ಯ ಗೋಣಿರುದ್ರ ಸ್ವಾಮಿಗಳು, ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿ ಸಾವಿತ್ರಿ ಸಲಗರ ಇದ್ದರು. ಪುಷ್ಪಾವತಿ ಧಾರವಾಡಕರ್ ಗುರುಪೂಜೆ ನೇರವೇರಿಸಿದರು.
ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಬಿಡಿಪಿಸಿ ನಿರ್ದೇಶಕಿ ವಿಜಯಲಕ್ಷ್ಮೀ ಗಡ್ಡೆ, ಬಸವರಾಜ ಬಾಲಿಕಿಲೆ, ಜಗನ್ನಾಥ ಕುಶನೂರೆ, ಸಿ.ಬಿ.ಪ್ರತಾಪೂರೆ, ಬಸವರಾಜ ರುದ್ರವಾಡಿ ಉಪಸ್ಥಿತರಿದ್ದರು.
ರಂಜನಾ ಭೂಶೆಟ್ಟಿ ಮತ್ತು ರಾಮಚಂದ್ರ ಕಲ್ಲಹಿಪ್ಪರ್ಗೆ ವಚನ ಸಂಗೀತ ನಡೆಸಿಕೊಟ್ಟರು. ರಾಷ್ಟ್ರೀಯ ಬಸವದಳದ ಅಧ್ಯಕ್ಷ ರವೀಂದ್ರ ಕೊಳಕೂರ ಸ್ವಾಗತಿಸಿದರೆ, ಜ್ಯೋತಿ ತುಗಾಂವೆ ನಿರೂಪಿಸಿದರು. ಸಂತೋಷ ಮಡಿವಾಳ ಶರಣು ಸಮರ್ಪಿಸಿದರು.
ಗವಿಯಲ್ಲಿ ಅಕ್ಕನ ಮೂರ್ತಿ ಸ್ಥಾಪನೆ:
ಪೂಜ್ಯ ಬಸವಲಿಂಗಪಟ್ಟದ್ದೇವರ ಸಾನಿಧ್ಯದಲ್ಲಿ ನಸುಕಿನಲ್ಲಿ ಇಷ್ಟಲಿಂಗಪೂಜಾ ಯೋಗ, ವಚನ ಪಠಣದೊಂದಿಗೆ ಮೂರ್ತಿ ಸ್ಥಾಪನೆ ಮಾಡಲಾಯಿತು. ಪೂಜ್ಯ ಡಾ. ಗಂಗಾಂಬಿಕಾ ಅಕ್ಕ, ಪೂಜ್ಯ ಶಿವಾನಂದ ದೇವರು, ಪೂಜ್ಯ ಬಸವಪ್ರಭು ಸ್ವಾಮಿಗಳು, ಪೂಜ್ಯ ಗಾಯತ್ರಿತಾಯಿ, ಪೂಜ್ಯ ಸತ್ಯಕ್ಕತಾಯಿ, ಪೂಜ್ಯ ಸತ್ಯದೇವಿತಾಯಿ, ಮಾತೆ ಕಲ್ಯಾಣಮ್ಮ ಸೇರಿದಂತೆ ಇತರರಿದ್ದರು.
ಅಕ್ಕಮಹಾದೇವಿಯವರ ತೊಟ್ಟಿಲು ಕಾರ್ಯಕ್ರಮ: ಶರಣೆಯರ ನೇತೃತ್ವದಲ್ಲಿ ಅಕ್ಕನ ತೊಟ್ಟಿಲು ಕಾರ್ಯಕ್ರಮ ನಡೆಯಿತು.