ಹಾವೇರಿ
ಅಂಬಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿ, ಅದರ ವರದಿ ಆಧರಿಸಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲು ಬುಧವಾರ ನಡೆದ ರಾಜ್ಯಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಮೀಪದ ನರಸೀಪುರ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಬುಧವಾರ ಸಮಾಜದ ಸಭೆ ನಡೆಯಿತು.
ರಾಜ್ಯದಲ್ಲಿ ಅಂಬಿಗ ಸಮಾಜವನ್ನು 37 ಪರ್ಯಾಯ ಹೆಸರುಗಳಿಂದ ಕರೆಯಲಾಗುತ್ತಿದೆ. ಪ್ರವರ್ಗ ಒಂದರಲ್ಲಿನ ಜಾತಿಗಳ ಮೇಲೆ ಆದಾಯದ ಮಿತಿ ಹೇರಿ ಕೆನೆಪದರ ನೀತಿ ಜಾರಿಗೊಳಿಸುವ ಸರ್ಕಾರದ ಧೋರಣೆಯನ್ನು ವಿರೋಧಿಸಬೇಕು. ಈ ಎಲ್ಲ ವಿಷಯಗಳ ಬಗ್ಗೆ ನಿಜಶರಣ ಅಂಬಿಗರ ಚೌಡಯ್ಯನವರ ಪೀಠದಲ್ಲಿ ಮೂರು ದಿನದ ಕಾರ್ಯಾಗಾರ ನಡೆಸಿ ತಜ್ಞರಿಂದ ವಿಷಯ ಸಂಗ್ರಹಿಸಬೇಕು ಎಂದು ನಿರ್ಧರಿಸಲಾಯಿತು.

ಸಭೆಯಲ್ಲಿ ಭಾಗವಹಿಸಿದ ರಾಜ್ಯದ ಪ್ರತಿನಿಧಿಗಳು ಇದಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಿದರು.
ಗುರುಪೀಠದ ಕಾರ್ಯಾದ್ಯಕ್ಷ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ್ ಸೇರಿದಂತೆ ರಾಜ್ಯ ಸಂಘದ ಪದಾಧಿಕಾರಿಗಳು, ರಾಜ್ಯ ನೌಕರ ಸಂಘದ ಪದಾಧಿಕಾರಿಗಳು, ಮಾರುತಿ ಕಬ್ಬೇರ, ಮುರಗೋಡು ಮಲ್ಲಪ್ಪ, ಕೆ. ಶಾಂತಪ್ಪ, ಬಸವರಾಜ ಸಪ್ಪನಗೋಳ, ಡಿ.ಬಿ. ಕೆಂಚಪ್ಪ, ಅಶೋಕ ವಾಲಿಕಾರ, ಮಹಾರಾಯ ಅಗಸಿ, ಗದಿಗೆಪ್ಪ ಅಮರಗೋಳ, ಮಂಜುನಾಥ ಭೋವಿ, ರಾಮಚಂದ್ರ ಐರಣಿ, ಎಸ್.ಎನ್. ಮೆಡ್ಲೇರಿ, ಫಕೀರಪ್ಪ ತುಮ್ಮಿನಕಟ್ಟಿ, ಮಹಾದೇವ ಕರ್ಜಿಗಿ, ಪ್ರವೀಣ ವಡ್ನಿಕೊಪ್ಪ ಸೇರಿದಂತೆ ಎಲ್ಲ ಜಿಲ್ಲಾ ಘಟಕಗಳ ಅಧ್ಯಕ್ಷರು, ತಾಲೂಕು ಘಟಕದ ಅಧ್ಯಕ್ಷರು ಪಾಲ್ಗೊಂಡಿದ್ದರು.