10ನೇ ದಿನದ ಲೈವ್ ಬ್ಲಾಗ್
ಸಂಜೆಯ ಕೆಲವು ದೃಶ್ಯಗಳು




ಗುಡ್ ಬೈ ಬಾಗಲಕೋಟೆ, ನಾಳೆ ಬೆಳಗಾವಿ
ಕಲ್ಯಾಣ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಎಸ್. ಆರ್. ಪಾಟೀಲರು ಇಡೀ ದಿನದ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ.

ಆಶೀರ್ವಚನ: ಬಸವ ಭೃಂಗೇಶ್ವರ ಶ್ರೀ
ಹೆಳವ ಗುರುಪೀಠ, ಕೋಡಿಹಳ್ಳಿ
ಅಲ್ಲದ ಸಂಸ್ಕೃತಿಗಳ ಭಯವನ್ನು ಬಿಟ್ಟು ಬಸವಣ್ಣನವರ ಅನುಯಾಯಿಗಳಾದಾಗ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದು. ಅಂದಾಗ ಈ ಅಭಿಯಾನ ಸಾರ್ಥಕಗೊಳ್ಳುತ್ತದೆ.

ಆಶೀರ್ವಚನ: ಇಮ್ಮಡಿ ಸಿದ್ಧರಾಮ ಶ್ರೀ
ನಿಮ್ಮ ಸಂಸ್ಕೃತಿಯ ಅರಿವು ನಿಮಗಿಲ್ಲದಿದ್ದರೆ ನಿಮ್ಮ ವಿನಾಶ ಖಂಡಿತ. ಆದರೆ ವಿಕಾಸವೋ-ವಿನಾಸವೋ ಅದು ನಿಮ್ಮ ಆಯ್ಕೆ. ನೆಲಮೂಲದ ಸಂಸ್ಕೃತಿಯನ್ನು ತಮ್ಮ ಕಾಲಾವಧಿಯಲ್ಲಿ ಅಳವಡಿಸಿಕೊಂಡು ಅದಕ್ಕೊಂದು ರೂಪು ಕೊಟ್ಟವರು ಬಸವಣ್ಣನವರು.
ಅವರೇ ನೆಲಮೂಲದ ಗುರುಗಳು. ಅವರನ್ನು ಧಿಕ್ಕರಿಸಿದರೆ ನಮ್ಮ ವಿನಾಶ ಖಂಡಿತ. ಆ ಸಂಸ್ಕೃತಿಯ ಉಳಿವಿಗಾಗಿಯೇ ಈ ಬಸವ ಸಂಸ್ಕೃತಿ ಅಭಿಯಾನ. ಇದು ಇತಿಹಾಸದಲ್ಲಿ ಉಳಿಯುವಂತಹದ್ದು. ನಿಡಸೋಸಿ ಶ್ರೀಗಳನ್ನು ಮೂರು ದಿನದಲ್ಲಿ ನೋಡಿದ್ದೇನೆ. ಮೂವತ್ತು ವರ್ಷಕ್ಕೆ ಆಗುವ ಜ್ಞಾನವನ್ನು ಧಾರೆಯೆರೆದಿದ್ದಾರೆ. ಅದು ಹೇಳುವುದರಿಂದ ಅಲ್ಲಾ ಬದಲಿಗೆ ಅವರ ನಡುವಳಿಕೆಯಿಂದ. ಇದೇ ಬಸವ ಸಂಸ್ಕೃತಿ. ಹೇಳುವುದಲ್ಲ ನಡೆಯುವುದು. ನಿಮ್ಮೆಲ್ಲ ಕಾರ್ಯಗಳಿಗೆ ನಾವೆಲ್ಲಾ ಬೆನ್ನೆಲುಬಾಗಿರುತ್ತೇವೆ.

ಮನುಷ್ಯರನ್ನು ರಿಪೇರಿ ಮಾಡುವ ಗ್ಯಾರೇಜ್ ಬಸವಣ್ಣ
ಆಶೀರ್ವಚನ: ಪೂಜ್ಯ ಅನ್ನದಾನಿ ಭಾರತಿ ಸ್ವಾಮಿಗಳು
- ಹಡಪದ ಅಪ್ಪಣ್ಣ ಪೀಠ
ಬಸವಣ್ಣ ಯಾಕೆ ಬಂದ? ಏನು ಮಾಡಿದ? ಆದರೆ ಇಂದು ನಾವೇನು ಆಗುತ್ತಿದ್ದೇವೆ? ಎಂಬುದೇ ಮುಖ್ಯವಾದ ವಿಷಯ. ನೀವೆಲ್ಲ ಬೆಂಗಳೂರಿಗೆ ಬಂದರೆ ಅಭಿಯಾನದ ಸಾರ್ಥಕತೆ ಆಗುತ್ತದೆ. ನಾವೆಲ್ಲಾ ಬಸವ ಜ್ಯೋತಿಗೆ ಪ್ರಾಣ ಮುಡುಪಾಗಿರಿಸುತ್ತೇವೆ.

ಆಶೀರ್ವಚನ: ಪೂಜ್ಯ ಬಸವ ಕುಮಾರ ಶ್ರೀ
ಮುರುಘಾ ಮಠ, ಚಿತ್ರದುರ್ಗ
ಜಾತಿ ಜನಗಣತಿಯಲ್ಲಿ ಲಿಂಗಾಯತವನ್ನು ಧರ್ಮದ ಕಾಲಂನಲ್ಲಿ ಬರೆಸಿ, ಜಾತಿಯ ಬಚ್ಚಲಿನಿಂದ ಲಿಂಗಾಯತವನ್ನು ಕಿತ್ತೆಸೆಯಿರಿ.
ಇಲ್ಲಿರುವ ಸಾಣೇಹಳ್ಳಿ, ಭಾಲ್ಕಿ, ಗದಗ ಶ್ರೀಗಳು ಸಣ್ಣ ಮಕ್ಕಳಂತೆ ಓಡೋಡಿ ಬರುತ್ತಾರೆ. ಇನ್ನು ಇಪ್ಪತೈದರ ನಾವು ಬರಲಿಲ್ಲವೆಂದರೆ ಬಸವಣ್ಣ ಮೆಚ್ಚುವುದಿಲ್ಲ. ನಾವೆಲ್ಲ ಕಂಕಣ ಕಟ್ಟಿ ನಿಲ್ಲೋಣ. ನಮ್ಮ ಲಿಂಗಾಯತವನ್ನು ಧರ್ಮ ಎಂದು ಪರಿಗಣಿಸೋಣ.

ಅನುಭಾವ: ವಚನಗಳಲ್ಲಿ ಮಾಯೆ
ಡಾ. ಮಹಾಂತ ಬಸವಲಿಂಗ ಸ್ವಾಮಿಗಳು, ಗುರುಬಸವೇಶ್ವರ ಮಠ, ಬೇಲೂರು
ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು
ಹೆಣ್ಣು ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ.
ಸ್ವಯಂ ಪರಶಿವ ತತ್ವ ಹೇಳುವುದೇ ಮಾಯೆಯೆಂದರೆ ಇಚ್ಛೆ-ಬಯಕ-ಆಸೆ ಎಂದು ಹೇಳುತ್ತದೆ. ಮಾ-ಎಂದರೆ ಇದೆ, ಯೆ-ಎಂದರೆ ಇಲ್ಲ. ಹೀಗೆ ಮಾಯೆಯನ್ನು ವಿಂಗಡಿಸುತ್ತಾರೆ. ಷರೀಫ ಶಿವಯೋಗಿಗಳು ಸಹ ಕತ್ತಲು ತುಂಬಿದ ಮನಸ್ಸುಗಳೇ ಮಾಯೆ ಎಂದು ಹೇಳುತ್ತಾರೆ.

ಅನುಭಾವ – ಬಸವಣ್ಣ ಸಾಂಸ್ಕೃತಿಕ ನಾಯಕ:
ಡಾ. ಪ್ರಶಾಂತ ನಾಯಕ

ಸಂಜೆ ಕಾರ್ಯಕ್ರಮ
ಅಶೋಕ ಬರಗುಂಡಿಯವರಿಂದ ಪ್ರಾಸ್ತಾವಿಕ ನುಡಿ.


ವಚನಗಳ ಬೆನ್ನಿಗೆ ಕಟ್ಟಿಕೊಂಡು ನಡೆದ ಪೂಜ್ಯರು
ವಚನಗಳ ಕಟ್ಟುಗಳನ್ನು ಬೆನ್ನಿಗೆ ಕಟ್ಟಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರು ಹಾಗೂ ಪೂಜ್ಯರು.


ಸಾಮರಸ್ಯ ನಡಿಗೆ
ವಿದ್ಯಾಗಿರಿಯ ಎಂಬಿಎ ಕಾಲೇಜು ವೃತ್ತದಿಂದ ಕಲಾಭವನದ ತನಕ ಅಭಿಯಾನದ ಮೆರವಣಿಗೆ.


ಸಂವಾದ ಮುಕ್ತಾಯ
ಜಯಕಲ್ಯಾಣಕೆ ಗೀತೆಯೊಂದಿಗೆ ವಿದ್ಯಾರ್ಥಿ ಸಂವಾದ ಮುಕ್ತಾಯ.



ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ
ವಿದ್ಯಾರ್ಥಿಗಳಿಂದ ಬಂದ ಪ್ರಶ್ನೆಗಳು:
ಜಾತಿ ವ್ಯವಸ್ಥೆ ನಿವಾರಿಸಲು ವಚನ ಸಾಹಿತ್ಯದ ಪ್ರೇರಣೆ ಏನು?
12ನೇ ಶತಮಾನದಲ್ಲಿ ಬಸವಣ್ಣನವರು ಅಂತರ್ಜಾತಿ ವಿವಾಹ, ದಲಿತರ ಮನೆಯಲ್ಲಿ ಭೋಜನ ಮಾಡಿದ್ದರು. ನೀವು ಎಷ್ಟು ಜನ ಅ ಕೆಲಸ ಮಾಡಿದ್ದೀರಿ?
ನಿಜವಾದ ‘ಹೊಲೆಯರು’ ಯಾರು? ‘ಉಚ್ಛ ಕುಲದವರು’ ಯಾರು?
ಲಿಂಗ ತಾರತಮ್ಯ ಇಲ್ಲ ಎಂದು ಹೇಳುತ್ತೀರಿ. ಆದರೆ ನೀವೆಲ್ಲ ಸ್ವಾಮಿಗಳು ಮುಂದೆ ಕೂತಿದ್ದೀರಿ. ಮಾತಾಜಿಯವರೆಲ್ಲ ಹಿಂದೆ ಕೂತಿದ್ದಾರೆ. ಹೇಳುವುದೇ ನಿಜವಾಗಿದ್ದರೆ ನೀವೆ ಸಮಾನತೆಯನ್ನು ಕಾಯ್ದುಕೊಳ್ಳಬಹುದಿತ್ತು?
ಜಾತ್ಯಾತೀತ ಧರ್ಮ ಎನ್ನುವ ನೀವೆ ನಮ್ಮ ಜಾತಿಯ ರಾಜಕೀಯ ನಾಯಕರಿಗೆ ಟಿಕೇಟ್ ಕೊಡಲೇಬೇಕು ಎಂದು ರಾಜಕಾರಣ ಮಾಡುವ ಅವಶ್ಯಕತೆಯೇನು?
ಸ್ವಾಗತ, ಆಶಯ ನುಡಿ
ಬಾಗಲಕೋಟ ತಾಲೂಕಾ ಜಾಗತಿಕ ಲಿಂಗಾಯತ ಮಾಹಾಸಭಾದ ಅಧ್ಯಕ್ಷರು ಅನಗವಾಡಿಯವರು ಸಭೆಗೆ ಸರ್ವರನ್ನು ಸ್ವಾಗತಿಸಿದರು.

ಆಶಯ ನುಡಿ: ಪೂಜ್ಯ ಚನ್ನಬಸವ ಸ್ವಾಮೀಜಿ
“ಬಸವ ಸಂಸ್ಕೃತಿ ಅಭಿಯಾನ ವಿದ್ಯಾರ್ಥಿಗಳಿಗಾಗಿಯೇ ನಡೆಯುತ್ತಿರುವ ಕಾರ್ಯಕ್ರಮ. ಎಲ್ಲಾ ಸಂಸ್ಕೃತಿಗಳಿಗೂ ಭಿನ್ನವಾದ ಸಂಸ್ಕೃತಿಯೇ ಬಸವ ಸಂಸ್ಕೃತಿ. ಮಕ್ಕಳು ಇಂದಿನ ಸಾಮಾಜಿಕ ಜಾಲತಾಣಗಳ ದಾಸರಾಗಿದ್ದಾರೆ. ಅವರ ಮನಸ್ಸುಗಳು ದುಶ್ಕೃತ್ಯಗಳತ್ತ ಸೆಳೆಯುತ್ತಿದೆ. ಅದನ್ನು ನಿಲ್ಲಿಸಲು ಈ ಅಭಿಯಾನ ಸಹಾಯವಾಗುತ್ತದೆ. ಇದರ ಸದುಪಯೋಗ ನೀವೆಲ್ಲಾ ಪಡೆದುಕೊಳ್ಳಬೇಕು.”

ಪ್ರತಿಜ್ಞಾ ವಿಧಿ ಸ್ವೀಕಾರ, ಸಂವಿಧಾನ ಪೀಠಿಕೆ ವಾಚನ
ಪೂಜ್ಯರು, ಸಭಿಕರಿಂದ ವಚನ ಪಠಣ, ಸಂವಿಧಾನ ಪೀಠಿಕೆ ವಾಚನ, ಪ್ರತಿಜ್ಞಾ ವಿಧಿ ಸ್ವೀಕಾರ.




ಬಾಗಲಕೋಟೆ ಅಭಿಯಾನ: ಲೈವ್ ವಿಡಿಯೋ
ಪುಷ್ಪಾರ್ಚನೆ, ಷಟಸ್ಥಲ ಧ್ವಜಾರೋಹಣ
ಸರ್ವ ಪೂಜ್ಯರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ.
ಮಾಜಿ ಸಚಿವ ಎಸ್.ಆರ್ ಪಾಟೀಲ ಅವರಿಂದ ಷಟಸ್ಥಲ ಧ್ವಜಾರೋಹಣ. ‘ಬನ್ನಿರೆಲ್ಲ ಹಾರಿಸೋಣ ಬಸವಧರ್ಮ ಬಾವುಟ’ ಎಂಬ ಧ್ವಜಗೀತೆಯನ್ನು ಎಲ್ಲರೂ ಹಾಡಿದರು.


ವೇದಿಕೆ, ಪೂಜ್ಯರು, ಸಭಿಕರು ಸಜ್ಜು



ಇಂದಿನ ಕಾರ್ಯಕ್ರಮಗಳು
ಸಂವಾದ
ಮುಂಜಾನೆ 11 ಗಂಟೆಗೆ ನವನಗರದ ಕಲಾಭವನದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ.
ಸಾಮರಸ್ಯ ನಡಿಗೆ
ಮಧ್ಯಾಹ್ನ 4 ಗಂಟೆಗೆ ವಿದ್ಯಾಗಿರಿಯ ಎಂಬಿಎ ಕಾಲೇಜು ವೃತ್ತದಿಂದ ಇಂಜಿನಿಯರಿಂಗ್ ಕಾಲೇಜ್ ವೃತ್ತದ ಮಾರ್ಗವಾಗಿ ಕಲಾಭವನ ತಲುಪುವುದು.
ಸಾರ್ವಜನಿಕ ಸಮಾವೇಶ
ಸಂಜೆ 6 ಗಂಟೆಗೆ ನವನಗರ ಕಲಾಭವನದಲ್ಲಿ.
ನಾಟಕ ಪ್ರದರ್ಶನ
ರಾತ್ರಿ 8 ಗಂಟೆಗೆ ಸಾಣೇಹಳ್ಳಿ ಶಿವಸಂಚಾರ ಕಲಾತಂಡದಿಂದ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ.
ಸಮಾವೇಶದ ನಂತರ ಪ್ರಸಾದ ದಾಸೋಹ ವ್ಯವಸ್ಥೆ ಇರುತ್ತದೆ.
ಅಭಿಯಾನದ ಸಹಭಾಗಿ ಸಂಘಟನೆಗಳು
ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ಬಸವ ಸಮಿತಿ, ರಾಷ್ಟ್ರೀಯ ಬಸವ ದಳ, ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಅಕ್ಕನ ಬಳಗಗಳು, ಕದಳಿ ವೇದಿಕೆ ಮತ್ತು ಜಿಲ್ಲೆಯ ಎಲ್ಲಾ ಬಸವಪರ ಸಂಘಟನೆಗಳು.