ಬೈಲಹೊಂಗಲ
ಸಮಾಜದಲ್ಲಿ ನಡೆಯುವ ಮೂಢನಂಬಿಕೆ, ಬಹುದೇವೋಪಾಸನೆ, ಡಾಂಭಿಕತೆ, ಹುಸಿ ಗುರು ಶಿಷ್ಯರು, ವೇಷದಾರಿಗಳ, ಅತ್ಯಾಚಾರ ಅನಾಚಾರಿಗಳ ಬಗ್ಗೆ ನೇರ ದಿಟ್ಟ ನಿಷ್ಠೂರ ವಚನಗಳ ಮೂಲಕ ಖಂಡಿಸಿ, ಅಖಂಡ ಸಮಾಜ ನಿರ್ಮಾಣದ ನಿಲುವು ಹೊಂದಿದ ನಿಜಶರಣ ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ಸರ್ವಕಾಲಿಕ ಸತ್ಯದ ಮೌಲ್ಯಗಳನ್ನು ನೀಡಿದ್ದಾರೆ, ಎಂದು ಚಿಕ್ಕೊಪ್ಪದ ಬಸವಾನುಭವ ಮಂಟಪದ ನಿರ್ಮಾರ್ಥ ಚೆನ್ನಪ್ಪ ನರಸನ್ನವರ್ ನುಡಿದರು.
ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ಶ್ರಾವಣ ಮಾಸದ ನಿಮಿತ್ಯ, ಪತ್ರಿ ಬಸವನಗರ ಅಭಿವೃದ್ಧಿ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಜಾಗತಿಕ ಲಿಂಗಾಯತ ಮಹಾಸಭಾ, ಹಿರಿಯ ನಾಗರಿಕರ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯನವರ ಪ್ರವಚನ, ಶ್ರಾವಣ ಮೊದಲ ಸೋಮವಾರ, 32ನೇ ಮಾಸಿಕ ಅನುಭಾವ ಗೋಷ್ಠಿ ಹಾಗೂ ಚೌಡಯ್ಯನವರ ನಾಮಕರಣೋತ್ಸವ ವಿಶೇಷ ಕಾರ್ಯಕ್ರಮದ ವಚನ ಚಿಂತಕರಾಗಿ ಆಗಮಿಸಿದ ನರಸನ್ನವರ್, ಅಂಬಿಗರ ಚೌಡಯ್ಯನವರ ವಚನಗಳಲ್ಲಿಯ ನುಡಿಗಳು ಸುಂದರ ಸಮಸಮಾಜದ ನಿರ್ಮಾಣದ ದಾರಿದೀಪವಾಗಿವೆ ಎಂದರು.

ನಗರದ ಶಾಂತಮ್ಮ ಬಸಪ್ಪ ಗೋಣಿ ದಂಪತಿಗಳು ತೊಟ್ಟಿಲೋತ್ಸವ ಕಾರ್ಯಕ್ರಮ ನೆರವೇರಿಸಿದರು. ಪ್ರೇಮಕ್ಕ ಅಂಗಡಿ ಪ್ರವಚನ ನುಡಿದರು. ಪತ್ರಯ್ಯ ಕುಲಕರ್ಣಿ ವಚನ ಗಾಯನ ಮಾಡಿದರು. ಗಿರಿಜಕ್ಕ ಪಾಟೀಲ, ಶಕುಂತಲಾ ನರಸನ್ನವರ, ಗೀತಾದೇವಿ ಬೇವಿನ, ಗೀತಾ ಆರಳಿಕಟ್ಟಿ, ಸುವರ್ಣ ಬಿಜುಗುಪ್ಪಿ, ದುಂಡಯ್ಯ ಕುಲಕರ್ಣಿ, ವೀರಣ್ಣ ಹವಳಪ್ಪನವರ, ಸಂತೋಷ್ ಕೊಳವಿ, ಗಂಗಣ್ಣ ಅಂಗಡಿ, ಗೌರದೇವಿ ತಾಳಿಕೋಟಿಮಠ, ಅನ್ನಪೂರ್ಣ ಕನೋಜ, ಮಹಾದೇವಿ ಗಣಾಚಾರಿ, ಪಾರ್ವತಿ ಎತ್ತಿನಗುಡ್ಡ, ಚಿಕ್ಕೊಪ್ಪ ಅಕ್ಕನಾಗ ಲಾಂಬಿಕಾ ಅಕ್ಕನ ಬಳಗ ಸಂಘಟನೆಗಳ ಸದಸ್ಯರು ಹಾಗೂ ನಗರದ ಹಿರಿಯರು ನೂರಾರು ಭಕ್ತರು ಉಪಸ್ಥಿತರಿದ್ದರು.
ಮುಕ್ತಾಯಕ್ಕ ಬಳಗ ಪ್ರಾರ್ಥಿಸಿತು. ವೀರಭದ್ರ ಕಾಪಸೆ ಸ್ವಾಗತಿಸಿದರು. ಅಶೋಕ ಸಾಲಿ ವಂದಿಸಿದರು. ಕಾಡಪ್ಪ ರಾಮಗುಂಡಿ ನಿರೂಪಿಸಿದರು.