ಬಸವ ಕಲ್ಯಾಣ
ಒಂದು ಕಾಲದಲ್ಲಿ ಸಿದ್ದಾರೂಢರದು ಏಕದೇವೋಪಾಸಕ, ಅವೈದಿಕ ಪರಂಪರೆಯಾಗಿತ್ತು. ಅದು ಇಂದು ಸಂಪೂರ್ಣವಾಗಿ ಕೇಸರೀಕರಣಗೊಂಡಿದೆ. ಇದೇ ರೀತಿ ರೀತಿ ಗುರು ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮವನ್ನು ಆಪೋಶನ ತಗೆದುಕೊಳ್ಳಲು ವೈದಿಕ ಶಕ್ತಿಗಳು ಪ್ರಯತ್ನಿಸುತ್ತಿವೆ.
ಈ ಬೆಳವಣಿಗೆಯ ಬಗ್ಗೆ ಲಿಂಗಾಯತರಲ್ಲಿ ಜಾಗೃತಿ ಮೂಡುತ್ತಿದೆ.
ಬೀದರ ಕಾರ್ಯಕರ್ತರಲ್ಲಿ ಕಾರ್ಯಕ್ರಮಗಳ ವೇದಿಕೆಯಲ್ಲಿಯೇ ತಮಗೆ ಇಷ್ಟವಾಗದ ಬೆಳವಣಿಗೆಗಳನ್ನು ಪ್ರಶ್ನಿಸುವ ಮನಸ್ಥಿತಿಯಿದೆ.
ಆದರೆ ಬಸವ ಸಂಘಟನೆಗಳು ಇಂದು ರಾಜಕೀಯವಾಗಿ ಸಕ್ರಿಯವಾಗಿಲ್ಲದಿರುವುದು ಸಮಸ್ಯೆಯಾಗಿದೆ. ಇದರಿಂದ ಲಿಂಗಾಯತರ ಹೆಸರಿನಲ್ಲಿಯೇ ರಾಜಕೀಯ ಮಾಡುತ್ತಿರುವವರ ಮೇಲೆ ಯಾವುದೇ ಹಿಡಿತವಿಲ್ಲದಂತಾಗಿದೆ.
ಲಿಂಗಾಯತ ಧರ್ಮ, ವಚನಗಳ ಮೇಲೆ ದಾಳಿಯಾದಾಗ ಯಾವ ರಾಜಕಾರಣಿಯೂ ಬಾಯಿ ಬಿಡುವುದಿಲ್ಲ. ಇವರಿಗೆಲ್ಲಾ ರಾಜಕೀಯ ಅಧಿಕಾರಕ್ಕೆ ಲಿಂಗಾಯತರು ಬೇಕು, ಆದರೆ ಸಮಾಜ ಮತ್ತು ಧರ್ಮಕ್ಕೆ ಕೆಲಸ ಮಾಡುವ ಮನಸಿಲ್ಲ. ಬದಲಾಗಿ ಹೊರಗಿನವರ ಆದೇಶದಂತೆ ನಮ್ಮ ವಿರುದ್ಧವಾಗಿಯೇ ಕೆಲಸ ಮಾಡುತ್ತಾರೆ.
ಕನ್ನೇರಿ ಸ್ವಾಮಿ ಮೇಲೆ ಬೇರೆ ಬೇರೆ ಜಿಲ್ಲೆಗಳಲ್ಲಿ ನಿಷೇದಾಜ್ಞೆ ಜಾರಿಯಾದಾಗ ಅವರ ಪರ ನಡೆದ ಪ್ರತಿಭಟನೆಗಳ ಮುಂದಾಳತ್ವ ವಹಿಸಿದ್ದು ಲಿಂಗಾಯತ ರಾಜಕಾರಣಿಗಳೇ ಎನ್ನುವ ಕಠಿಣ ಸತ್ಯವನ್ನು ಯಾರೂ ಮರೆಯಬಾರದು.
ಈ ಪರಿಸ್ಥಿತಿ ಬದಲಾಗಬೇಕಾದರೆ ಬಸವ ಶಕ್ತಿ ಶಿಬಿರ, ಸಮಾವೇಶಗಳು ಎಲ್ಲಾ ತಾಲೂಕುಗಳಲ್ಲಿ ನಡೆಯಬೇಕು. ಬಸವ ಸಂಘಟನೆಗಳು ರಾಜಕೀಯವಾಗಿ ಜಾಗೃತಗೊಂಡು ಚುನಾವಣೆಯಲ್ಲಿ ಪ್ರತಿರೋಧಿಸುವ ಎಚ್ಚರಿಕೆ ನೀಡಿದರೆ ಮಾತ್ರ ಈ ರಾಜಕಾರಣಿಗಳು ಮಾತು ಕೇಳುತ್ತಾರೆ. ಚುನಾವಣೆಯಲ್ಲಿ ಹಿನ್ನಡೆಯಾಗುವ ಸಾಧ್ಯತೆಯಾದರೆ ಮಾತ್ರ ಅವರು ಬದಲಾಗುತ್ತಾರೆ.
ಈ ಕೆಲಸ ಮಾಡಲು ಒಂದು ಕ್ಷೇತ್ರದಲ್ಲಿ ಇರುವ ಎಲ್ಲಾ ಲಿಂಗಾಯತರ ಬದಲಿಸುವ ಅಗತ್ಯವಿಲ್ಲ. ಅಲ್ಲಲ್ಲಿ ಕೆಲವು ಮತಗಳನ್ನು ತಿರುಗಿಸಿದರೆ ಸಾಕು, ಎಲ್ಲಾ ದಾರಿಗೆ ಬರುತ್ತಾರೆ. ಹಲವಾರು ಕ್ಷೇತ್ರಗಳಲ್ಲಿ ಈ ಕೆಲಸ ಮಾಡಲು ಬಸವ ಸಂಘಟನೆಗಳಿಗೆ ಸಾಮರ್ಥ್ಯವಿದೆ.
ಯಾವುದೇ ಅಭ್ಯರ್ಥಿ ಅಥವಾ ಪಕ್ಷವನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡುವ ಅಗತ್ಯವಿಲ್ಲ. ಬಸವ ವಿರೋಧಿ ಕೆಲಸಗಳನ್ನು ನಿಲ್ಲಿಸುವಂತೆ ಒತ್ತಡ ತರುವುದು ಮುಖ್ಯ ಉದ್ದೇಶವಾಗಬೇಕು.
ಲಿಂಗಾಯತ ಸಮಾಜ ಜಾಗೃತವಾಗುತ್ತಿದೆ. ಕಾಲಕಾಲಕ್ಕೆ ಅಗತ್ಯವಾದ, ಸರಿಯಾದ ಕ್ರಮಗಳನ್ನು ಕೈಗೊಳ್ಳುವ ಸಾಮರ್ಥ್ಯ ಬಸವ ಕಾರ್ಯಕರ್ತರಿಗಿದೆ.
