ಲಿಂಗಾಯತ ವಿರೋಧಿ ರಾಜಕಾರಣಿಗಳಿಗೆ ಅಂಕುಶ ಹಾಕಲು ‘ಬಸವ ಶಕ್ತಿ’ ಸಮಾವೇಶ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವ ಸಂಘಟನೆಗಳ ರಾಜಕೀಯ ಪ್ರಜ್ಞೆ ಮತ್ತು ಪ್ರಭಾವ ಬೆಳೆಸಲು ತರಬೇತಿ ಶಿಬಿರ

ಬೆಂಗಳೂರು

ಲಿಂಗಾಯತ ಸಮಾಜದ ಮುಂದೆ ಒಂದು ವಿಚಿತ್ರ ಸಮಸ್ಯೆಯಿದೆ: ಲಿಂಗಾಯತ ಮತಗಳು ಎಲ್ಲರಿಗೂ ಬೇಕು ಆದರೆ ಲಿಂಗಾಯತರು ಯಾರಿಗೂ ಬೇಡ.

ಚುನಾವಣೆ ಬಂದಾಗ ಲಿಂಗಾಯತ ಕೋಟಾದಲ್ಲಿ ಟಿಕೆಟ್ ಪಡೆಯಲು ರಾಜಕಾರಣಿಗಳಲ್ಲಿ ದೊಡ್ಡ ಜಟಾಪಟಿ, ನಂತರ ಸಚಿವರಾಗಲು ಹಪಾಹಪಿ. ಆದರೆ ಲಿಂಗಾಯತ ಸಮಾಜ, ಧರ್ಮದ ಪರವಾಗಿ ಎದ್ದು ನಿಲ್ಲಲು ಕೆಲವರನ್ನು ಬಿಟ್ಟರೆ ಯಾರೂ ಮುಂದೆ ಬರುವುದಿಲ್ಲ.

ಲಿಂಗಾಯತ ಧರ್ಮದ ಮೇಲೆ ವ್ಯವಸ್ಥಿತ ದಾಳಿ ನಡೆದಾಗಲೂ, ಲಿಂಗಾಯತ ಮಠಾಧೀಶರನ್ನು ಅಶ್ಲೀಲವಾಗಿ ನಿಂದಿಸಿದಾಗಲೂ, ಬಸವ ಭಕ್ತರನ್ನು ತಾಲಿಬಾನಿ ಎಂದು ಜರಿದಾಗಲೂ ಯಾವ ಪುಡಾರಿಯೂ ಬಾಯಿ ತೆಗೆಯುವುದಿಲ್ಲ.

ಲಿಂಗಾಯತರ ಮೇಲೆ ವ್ಯವಸ್ಥಿತ ದಾಳಿ ನಡೆದಾಗ ಯಾವ
ಪುಡಾರಿಯೂ ಬಾಯಿ ತೆಗೆಯುವುದಿಲ್ಲ.

ಬದಲಾಗಿ ನಮ್ಮನ್ನು ತುಳಿಯಲು ಬರುವವರ ಜೊತೆ ನಿರಾಯಾಸವಾಗಿ, ಯಾವುದೇ ಅಳುಕಿಲ್ಲದೆ ಕೈ ಜೋಡಿಸುತ್ತಾರೆ.

  • – ಲಿಂಗಾಯತರ ವಿರುದ್ಧ ಹೋರಾಡಲು ಕ್ಷತ್ರಿಯರು ಬೇಕೆಂದು ಸೂಲಿಬೆಲೆ ಕರೆ ಕೊಟ್ಟಾಗ ಚಪ್ಪಾಳೆ ತಟ್ಟಿದವರು ಬೆಲ್ಲದರಂತವರು.
  • – ಲಿಂಗಾಯತ ಸಮಾಜದ ಆಕ್ರೋಶಕ್ಕೆ ಗುರಿಯಾಗಿರುವ ಕನ್ನೇರಿ ಸ್ವಾಮಿಗೆ ಬೆನ್ನೆಲುಬಾಗಿ ನಿಂತಿರುವವರು ಜೊಲ್ಲೆ ದಂಪತಿಗಳಂತವರು.
  • – ಅನೇಕ ಲಿಂಗಾಯತ ಮಠಾಧಿಪತಿಗಳ ಬಗ್ಗೆ ಏಕ ವಚನದಲ್ಲಿಯೇ ಮಾತನಾಡುವ ಫ್ಯಾಷನ್ ಮಾಡಿಕೊಂಡಿರುವುದು ಯತ್ನಾಳಂತವರು.

ಬಸನಗೌಡ ಯತ್ನಾಳ, ಸಿ.ಸಿ. ಪಾಟೀಲ, ಎಸ್. ವಿ. ಸಂಕನೂರ, ಸಿದ್ದು ಸವದಿ, ಎಂ.ಆರ್. ಪಾಟೀಲ, ಶಶಿಕಲಾ ಜೊಲ್ಲೆ, ಎ.ಎಸ್. ಪಾಟೀಲ ನಡಹಳ್ಳಿ, ಎಸ್.ಕೆ. ಬೆಳ್ಳುಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ – ಇವು ಸಂಘ ಪರಿವಾರದ ಸೂಚನೆಯಂತೆ ಲಿಂಗಾಯತರ ಮೇಲೆ ಬಹಿರಂಗವಾಗಿ ತಿರುಗಿ ಬಿದ್ದಿರುವ ಸಮಾಜದ ಕೆಲವು ಕಣ್ಮಣಿಗಳು.

ಇನ್ನು ವಿಜಯೇಂದ್ರ, ಶೆಟ್ಟರ್, ಬೊಮ್ಮಾಯಿಯಂತಹವರು ಸ್ವಲ್ಪ ಸೂಕ್ಷ್ಮವಾಗಿ ವರ್ತಿಸುವಂತೆ ಕಾಣಿಸುತ್ತದೆ. ಆದರೆ ಇವರಲ್ಲಿ ಬದ್ಧತೆಯಿರುವುದು ಲಿಂಗಾಯತ ಮತ ಬೇಟೆಗೆ ಮಾತ್ರ. ಅವರಿಗೆ ಬೇಕಾದಾಗ ನಮ್ಮ ವಿರೋಧಿಗಳ ಜೊತೆ ಸಲೀಸಾಗಿ ಕೈ ಜೋಡಿಸುತ್ತಾರೆ.

ಈ ಪಟ್ಟಿಯಲ್ಲಿ ಬಿಜೆಪಿಯವರೇ ಕಂಡರೂ, ಕಾಂಗ್ರೆಸ್ಸಿನವರಲ್ಲೂ ಸಮಸ್ಯೆಯಿದೆ. ಕನ್ನೇರಿ ಸ್ವಾಮಿ ಬೆಂಬಲಿಸುತ್ತಿರುವ ದೊಡ್ಡ ಹೆಸರು ಸಚಿವ ಶಿವಾನಂದ ಪಾಟೀಲ್. ಬಬಲೇಶ್ವರ ಸಮಾವೇಶಕ್ಕೆ ತನು-ಮನ-ಧನ ಎರೆದಿದ್ದು ಅವರ ತಮ್ಮ ವಿಜು ಪಾಟೀಲ್.

ಈ ಪಟ್ಟಿಯಲ್ಲಿ ಬಿಜೆಪಿಯವರೇ ಕಂಡರೂ,
ಕಾಂಗ್ರೆಸ್ಸಿನವರಲ್ಲೂ ಸಮಸ್ಯೆಯಿದೆ.

ಈ ಸಮಸ್ಯೆಯ ಬಗ್ಗೆ ಒಂದು ತಿಂಗಳಿಂದ ಬಸವ ಮೀಡಿಯಾ ತಂಡ ಸುಮಾರು 50 ಬಸವ ಸಂಘಟನೆಗಳ ಪ್ರಮುಖರ, ಕಾರ್ಯಕರ್ತರ ಜೊತೆ ಮಾತನಾಡಿದೆ. ಅವರ ಒಟ್ಟು ಅಭಿಪ್ರಾಯ ಇಲ್ಲಿದೆ:

1) ಈ ರಾಜಕಾರಣಿಗಳಿಗೆ ಪ್ರಶ್ನೆ ಮಾಡುವವರಿಲ್ಲ

ಒಂದು ತಮಾಷೆ ಗಮನಿಸಬೇಕು. ಆರೆಸ್ಸೆಸ್ ಕಡೆ ಯಾರಾದರೂ ಬೆಟ್ಟು ತೋರಿಸಿದರೆ ರಾಜಕಾರಣಿಗಳಿಂದ ಏನು ವಿರೋಧ, ಏನು ಪ್ರಲಾಪ ಹೊಮ್ಮುತ್ತದೆ. ಸದನದಲ್ಲಿ ಲಿಂಗಾಯತ ಶಾಸಕರೇ ನಿಂತು ಗಂಟಲು ಹರಿಯುವಂತೆ ಕೂಗಾಡುತ್ತಾರೆ.

ಆದರೆ ಲಿಂಗಾಯತರ ಮೇಲೆ ಯಾರು ಏನೇ ರಾಡಿ ಎರಚಿದರೂ ಇದೇ ಜನ ತೆಪ್ಪಗೆ ಸುಮ್ಮನಿರುತ್ತಾರೆ.

ಇದಕ್ಕೆ ಕಾರಣವಿದೆ. ರಾಜಕಾರಣಿಗಳ ಮೇಲೆ ಆರೆಸ್ಸೆಸ್ ಕಡೆಯಿಂದ ನಿರಂತರ ಒತ್ತಡವಿರುತ್ತದೆ. ಅವರನ್ನು ಎದುರು ಹಾಕಿಕೊಂಡರೆ ಇವರಿಗೆ ಟಿಕೆಟ್ ಸಿಗುವುದಿಲ್ಲ. ಆದರೆ ಲಿಂಗಾಯತ ಸಮಾಜದಿಂದ ಇವರ ಮೇಲೆ ಯಾವುದೇ ಒತ್ತಡ, ಬೆದರಿಕೆಯಿಲ್ಲ.

ಲಿಂಗಾಯತ ಸಮಾಜದಿಂದ ರಾಜಕಾರಣಿಗಳ ಮೇಲೆ
ಯಾವುದೇ ಒತ್ತಡ, ಬೆದರಿಕೆಯಿಲ್ಲ.

ಲಿಂಗಾಯತರು ಇವರಿಗೆಲ್ಲಾ ಜಾತಿ ಸೆಳೆತದಿಂದ ಮುಗ್ದವಾಗಿ ಮತ ಹಾಕುತ್ತಾರೆ. ಧರ್ಮ, ತತ್ವ ಸಿದ್ದಾಂತದ ಬಗ್ಗೆ, ಸಮುದಾಯದ ಹಿತಾಸಕ್ತಿಯ ಕುರಿತು ಯಾವುದೇ ಬೇಡಿಕೆ ಅಥವಾ ಒತ್ತಡ ಹಾಕುವುದಿಲ್ಲ. ಅದಕ್ಕೆ ತಮ್ಮ ಸ್ವಾರ್ಥಕ್ಕೆ ಸಮಾಜವನ್ನು ಬಲಿ ಕೊಡಲು ಯಾವುದೇ ಭೀತಿಯಿಲ್ಲದೆ ಈ ಪುಡಾರಿಗಳು ಮುಂದಾಗುತ್ತಾರೆ.

2) ಬಸವ ಸಂಘಟನೆಗಳಿಂದ ಮೂಗುದಾರ

ಲಿಂಗಾಯತ ಸಮಾಜದ ವೈಶಿಷ್ಟ್ಯವೆಂದರೆ ನಾಡಿನುದ್ದಕೂ ಹರಡಿಕೊಂಡಿರುವ ನೂರಾರು ಬಸವ ಸಂಘಟನೆಗಳು. ಬಸವ ತತ್ವಕ್ಕೆ ಸಂಪೂರ್ಣವಾಗಿ ಅರ್ಪಿಸಿಕೊಂಡಿರುವ ಇವರ ಸಂಘಟನಾ ಸಾಮರ್ಥ್ಯ ರಾಜ್ಯವೇ ನಿಂತು ನೋಡುವಂತೆ ಬಸವ ಸಂಸ್ಕೃತಿ ಅಭಿಯಾನದಲ್ಲಿ ಪ್ರಕಟವಾಗಿದೆ.

ರಾಜಕೀಯ ಪಕ್ಷಗಳು ದುಡ್ಡು ಸುರಿದರೂ ತಮ್ಮ ಕಾರ್ಯಕ್ರಮಕ್ಕೆ ಜನ ಸೇರಿಸಲು ಒದ್ದಾಡುತ್ತಾರೆ. ಕಳೆದ ಚುನಾವಣೆ ಸಮಯದಲ್ಲಿ ಖುದ್ದು ಮೋದಿಯೇ ಬಂದರೂ ಅನೇಕ ಕಡೆ ಜನ ಸೇರಲಿಲ್ಲ. ಆದರೆ ಬಸವ ಸಂಘಟನೆಗಳು ಅಭಿಯಾನಕ್ಕೆ ಜಿಲ್ಲೆ ಜಿಲ್ಲೆಗಳಲ್ಲಿ ಒಂದು ಪೈಸೆ ಕೊಡದೆ ಸಾವಿರಾರು ಜನ ಸೇರಿಸಿದ್ದು ಐತಿಹಾಸಿಕ ಸಾಧನೆ. ನಮ್ಮ ನಾಡಿನಲ್ಲಿ ಪ್ರವಾಹದಂತೆ ಹರಿಯುತ್ತಿರುವ ಬಸವಣ್ಣನವರ ಪ್ರಭಾವವನ್ನೂ ಇದು ಸ್ಪಷ್ಟವಾಗಿ ತೋರಿಸುತ್ತದೆ.

ಇದು ರಾಜಕಾರಣಿಗಳ ಕಣ್ಣೂ ಕುಕ್ಕಿದೆ.

ಲಿಂಗಾಯತ ಸಮಾಜದ ಪರವಾಗಿ ಬಸವ ದ್ರೋಹಿ ರಾಜಕಾರಣಿಗಳಿಗೆ ಮೂಗುದಾರ ಹಾಕುವ ಕೆಲಸ ಮಾಡಲು ಬಸವ ಸಂಘಟನೆಗಳಿಂದ ಮಾತ್ರ ಸಾಧ್ಯ. ಸಮಾಜದ ಪರವಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ರಾಜಕಾರಣಿಗಳಿಗೆ ಸ್ಪಷ್ಟ ಬೇಡಿಕೆ ಹಾಗೂ ಒತ್ತಡ ತರುವ ನಿರಂತರ ಕೆಲಸವಾದರೆ ಮಾತ್ರ ಅವರು ದಾರಿಗೆ ಬರುತ್ತಾರೆ.

ರಾಜ್ಯದಲ್ಲಿ ಬಸವ ತತ್ವ ಬಿತ್ತಲು ಇಲ್ಲಿಯವರೆಗೆ ನಡೆದಿರುವ ಅತಿ ಮಹತ್ವದ ಚಳುವಳಿ ಬಸವ ಸಂಸ್ಕೃತಿ ಅಭಿಯಾನ. ಅದರಿಂದ ಹುಟ್ಟಿರುವ ಕಂಪನದಿಂದ ನಮ್ಮ ಸೈದ್ಧಾಂತಿಕ ವಿರೋಧಿಗಳು ಇನ್ನೂ ನಡುಗುತ್ತಿರುವುದು ಕಾಣಿಸುತ್ತದೆ.

ಬಸವ ಸಂಘಟನೆಗಳ ಸಂಘಟನಾ ಸಾಮರ್ಥ್ಯ
ಅಭಿಯಾನದಲ್ಲಿ ಪ್ರಕಟವಾಗಿದೆ.

ಅಭಿಯಾನದಲ್ಲಿ ನಾವು ಕಂಡುಕೊಂಡ ಸಂಘಟನಾ ಸಾಮರ್ಥ್ಯ ಈಗ ನಮ್ಮ ರಾಜಕೀಯ ವಿರೋಧಿಗಳ ಮೇಲೂ ಪ್ರಯೋಗಿಸಬೇಕು. ಆಗ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣ ನಿಲ್ಲುತ್ತದೆ ಮತ್ತು ಲಿಂಗಾಯತ ಹೋರಾಟಕ್ಕೆ ಹೊಸ ಶಕ್ತಿ ಬರುತ್ತದೆ.

3) ರಾಜಕೀಯ ಪ್ರಭಾವ ಬೆಳೆಸಿಕೊಳ್ಳೋಣ

ರಾಜಕಾರಣಿಗಳ ಮೇಲೆ ಒತ್ತಡ ತರಬೇಕಾದರೆ ಬಸವ ಸಂಘಟನೆಗಳ ರಾಜಕೀಯ ಪ್ರಜ್ಞೆ ಮತ್ತು ಪ್ರಭಾವ ಎರಡೂ ಬೆಳೆಯಬೇಕು.

ಇಂದು ಬಸವ ಸಂಘಟನೆಗಳು ಜಿಲ್ಲಾ, ತಾಲೂಕು, ಗ್ರಾಮ ಮಟ್ಟದಲ್ಲಿ ಬೆಳೆದಿವೆ. ಧರ್ಮ ಪ್ರಚಾರದಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ಜನರ ಜೊತೆ ಬೆರೆತುಕೊಂಡು ದುಡಿಯುತ್ತಿವೆ. ಈಗಿರುವ ಸಾಮಾಜಿಕ ಪ್ರಭಾವವನ್ನು ರಾಜಕೀಯವಾಗಿ ಬೆಳೆಸಿಕೊಳ್ಳುವ, ಬಳಸಿಕೊಳ್ಳುವ ಪ್ರಯತ್ನ ಶುರುವಾಗಬೇಕು.

ಕೆಲವರಲ್ಲಿ ಆಧ್ಯಾತ್ಮ ಒಳ್ಳೆಯದು, ರಾಜಕೀಯ ಕೆಟ್ಟದು ಎನ್ನುವ ಅಭಿಪ್ರಾಯವಿದೆ. ನಾವು ಮಾತನಾಡಿದ ಒಬ್ಬರು ವಚನಮೂರ್ತಿಗಳು ಬಸವ ಸಂಘಟನೆಗಳನ್ನು ರಾಜಕೀಯಕ್ಕೆ ಎಳೆದು ಹಾಳು ಮಾಡಬ್ಯಾಡ್ರಿ ಎಂದು ಎಚ್ಚರಿಸಿದರು.

ಆದರೆ ದಕ್ಷಿಣ ಕರ್ನಾಟಕದ ಒಬ್ಬರು ಮಠಾಧಿಪತಿಗಳು ಲಿಂಗಾಯತ ಧರ್ಮ ಹೋರಾಟ ಸಬಲವಾಗಬೇಕಾದರೆ ರಾಜಕೀಯವಾಗಿ ಪ್ರಭಾವ ಬೀರುವುದು ಅನಿವಾರ್ಯ. ಬಸವಾದಿ ಶರಣರ ಕ್ರಾಂತಿಗೆ ರಾಜಕೀಯ ಆಯಾಮವೂ ಇತ್ತು. ಬ್ರಿಟಿಷರನ್ನು ಓಡಿಸಿ, ಸ್ವಾತಂತ್ರ್ಯ ಗಳಿಸಿದ್ದು ರಾಜಕೀಯದ ಮೂಲಕವೇ, ಎಂದರು.

ಬಸವ ಸಂಘಟನೆಗಳ ರಾಜಕೀಯ ಪ್ರಜ್ಞೆ, ಪ್ರಭಾವ ಬೆಳೆಯಬೇಕು

4) ರಾಜಕೀಯಕ್ಕೆ, ಚುನಾವಣೆಗೆ ತರಬೇತಿ

ರಾಜಕೀಯವಾಗಿ ಸಕ್ರಿಯವಾಗಲು ಹಾಗೂ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಬಸವ ಸಂಘಟನೆಗಳಿಗೆ ತರಬೇತಿಯ ಅಗತ್ಯವಿದೆ ಎನ್ನುವ ಅಭಿಪ್ರಾಯ ಸಾಮಾನ್ಯವಾಗಿ ಕೇಳಿ ಬಂತು.

ನಿರ್ದಿಷ್ಟ ಉದ್ದೇಶಕ್ಕೆ ಜನರನ್ನು ಸಂಘಟಿಸುವುದು ರಾಜಕೀಯದ ಸರಳ ಅರ್ಥ.

ಇದನ್ನು ಸಾಧಿಸಲು ಲಿಂಗಾಯತ ಧರ್ಮ, ಸಮಾಜಕ್ಕೆ ಅಗತ್ಯವಾದ ಬೇಡಿಕೆಗಳನ್ನು ರೂಪಿಸಬೇಕು, ಅವುಗಳ ಬಗ್ಗೆ ಜನರಲ್ಲಿ, ರಾಜಕಾರಣಿಗಳಲ್ಲಿ, ಮಾಧ್ಯಮಗಳಲ್ಲಿ ಅರಿವು ಮೂಡಿಸಬೇಕು.

ವಿವಿಧ ರೀತಿಗಳಲ್ಲಿ ಪ್ರಚಾರ ಮಾಡುವುದು, ಮಾಧ್ಯಮಗಳ ಜೊತೆ ಕೆಲಸ ಮಾಡುವುದು, ರಾಜಕಾರಣಿಗಳನ್ನು ಒಪ್ಪಿಸುವುದು, ಒಪ್ಪದಿದ್ದರೆ ವಿವಿಧ ರೀತಿಗಳಲ್ಲಿ ಸತ್ಯಾಗ್ರಹ ಮಾಡುವುದು, ಸಕಾರಾತ್ಮಕ ಕಾರ್ಯಕ್ರಮಗಳನ್ನು ರೂಪಿಸುವುದು – ಇವೆಲ್ಲಾ ರಾಜಕೀಯ ಚಟುವಟಿಕೆಗಳೇ.

ಚುನಾವಣೆ ಸಮಯದಲ್ಲಿ ಬೂತ್ ಮಟ್ಟದ ಮಾಹಿತಿ ವಿಶ್ಲೇಷಿಸುವುದು, ಲಿಂಗಾಯತ ಮತದಾರರಲ್ಲಿ ಜಾಗೃತಿ ಮೂಡಿಸುವುದು, ಮತಗಳನ್ನು ಕ್ರೋಡೀಕರಿಸುವುದು, ಅಭ್ಯರ್ಥಿಗಳ ಮೇಲೆ ಒತ್ತಡ ಹಾಕುವುದು, ಸಮಾನ ಮನಸ್ಕರ ಜೊತೆ ಕೈ ಜೋಡಿಸುವುದು – ಮುಂತಾದ ಕೆಲಸಗಳನ್ನು ಮಾಡಬೇಕಾಗುತ್ತದೆ.

ಈ ಕೆಲಸಗಳು ಅಷ್ಟು ಕಷ್ಟವಲ್ಲ. ಕೇವಲ ಎರಡು ಕೋಟಿಯಲ್ಲಿ ರಾಜ್ಯ ಮಟ್ಟದ ಅಭಿಯಾನ ಮಾಡಿದವರಿಗೆ ಇದು ಸುಲಭ ಸಾಧ್ಯ. ಸ್ವಲ್ಪ ಶ್ರಮ ಪಟ್ಟರೂ ಬಹಳ ಪ್ರತಿಫಲ ಬರುವ ಎಲ್ಲಾ ಸಾಧ್ಯತೆಗಳಿವೆ.

ಈ ವಿಶ್ವಾಸಕ್ಕೆ ಕಾರಣವಿದೆ.

ಇಂದು ರಾಜಕೀಯದಲ್ಲಿ ಪೈಪೋಟಿ ಹೆಚ್ಚಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲುವ ಅಂತರ ಬಹಳ ಕಡೆ ಕಡಿಮೆಯಾಗಿದೆ. ಬಸವ ಸಂಘಟನೆಗಳು ಕೇವಲ 500 ಮತಗಳನ್ನು ತಿರುಗಿಸುವ ಎಚ್ಚರಿಕೆ ನೀಡಿದರೂ ಯಾವ ಪುಡಾರಿಯೂ ಲಿಂಗಾಯತ ಧರ್ಮಕ್ಕೆ ದ್ರೋಹ ಬಗೆಯುವ ಸಾಹಸ ಮಾಡುವುದಿಲ್ಲ. ಅನೇಕ ಕ್ಷೇತ್ರಗಳಲ್ಲಿ ಸಾವಿರಾರು ಮತಗಳನ್ನು ನಿಯಂತ್ರಿಸುವ ಸಾಮರ್ಥ್ಯ ಬಸವ ಸಂಘಟನೆಗಳಿಗಿವೆ.

ಕೆಲವು ಲಿಂಗಾಯತ ವಿರೋಧಿ ರಾಜಕಾರಣಿಗಳ ಗೆಲುವಿನ ಅಂತರ ನೀವೇ ನೋಡಿ.

ಹೆಸರುಕ್ಷೇತ್ರಮತಗಳ ಅಂತರಫಲಿತಾಂಶ
ಸಿ.ಸಿ. ಪಾಟೀಲನರಗುಂದ1791ಗೆಲುವು
ಶಶಿಕಲಾ ಜೊಲ್ಲೆನಿಪ್ಪಾಣಿ7292ಗೆಲುವು
ಯತ್ನಾಳ್ಬಿಜಾಪುರ8233ಗೆಲುವು
ಸಿದ್ದು ಸವದಿತೇರದಾಳ10745ಗೆಲುವು
ಎಸ್.ಕೆ. ಬೆಳ್ಳುಬ್ಬಿಬಸವನ ಬಾಗೇವಾಡಿ24863ಸೋಲು
ಎ.ಎಸ್. ಪಾಟೀಲಮುದ್ದೇಬಿಹಾಳ7,637ಸೋಲು
ವಿಜಯೇಂದ್ರಶಿಕಾರಿಪುರ11,000ಗೆಲುವು
ಅಪ್ಪಾಸಾಹೇಬ ಪಟ್ಟಣಶೆಟ್ಟಿಬಿಜಾಪುರಟಿಕೆಟ್ ಸಿಕ್ಕಿಲ್ಲ

ಇಷ್ಟು ಅಸ್ಥಿರವಾಗಿರುವ ರಾಜಕಾರಣಿಗಳಿಗೆ ಬಸವ ಸಂಘಟನೆಗಳು ಗಂಭೀರವಾಗಿ ಎಚ್ಚರಿಕೆ ನೀಡಿದರೆ ಅವರ ಪ್ರತಿಕ್ರಿಯೆ ಹೇಗಿರುತ್ತದೆ, ನೀವೇ ಊಹಿಸಿಕೊಳ್ಳಿ. ಇಷ್ಟು ದಿನ ಇವರಿಗೆ ಅಂಕುಶ ಹಾಕದಿದ್ದು ಸಮಸ್ಯೆಯ ಮೂಲ. ಆ ಕೆಲಸ ಈಗ ಶುರುವಾಗಬೇಕು.

ಕೇವಲ 500 ಮತಗಳನ್ನು ತಿರುಗಿಸಿದರೂ ಲಿಂಗಾಯತ
ವಿರೋಧಿಗಳು ದಾರಿಗೆ ಬರುತ್ತಾರೆ

5) ನಮ್ಮದು ಪಕ್ಷಾತೀತ ರಾಜಕೀಯ

ಬಸವ ಸಂಘಟನೆಗಳು ಯಾವ ಪಕ್ಷ ಬೆಂಬಲಿಸುತ್ತವೆ ಅನ್ನುವುದು ಮುಖ್ಯವಲ್ಲ. ಬಸವ ಭಕ್ತರು ಎಲ್ಲಾ ಪಕ್ಷದಲ್ಲಿದ್ದಾರೆ. ಒಂದೇ ಘಟಕದ ಸದಸ್ಯರು ಬೇರೆ ಬೇರೆ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿದರೂ ಸಮಸ್ಯೆಯಿಲ್ಲ.

ಆದರೆ ಪ್ರತಿಯೊಬ್ಬರೂ ಒಮ್ಮತದಿಂದ ಲಿಂಗಾಯತ ಸಮಾಜ, ಧರ್ಮಕ್ಕೆ ಪೂರಕವಾದ ಬೇಡಿಕೆಗಳನ್ನು ರೂಪಿಸಿ ಅವುಗಳ ಬಗ್ಗೆ ಪ್ರತಿಯೊಬ್ಬ ಅಭ್ಯರ್ಥಿಯಲ್ಲಿಯೂ ಜಾಗೃತಿ ಮೂಡಿಸಬೇಕು. ಲಿಂಗಾಯತ ವಿರೋಧಿ ನಿಲುವು ತೆಗೆದುಕೊಳ್ಳುವ ರಾಜಕಾರಣಿಗಳ ಮೇಲೆ ಪಕ್ಷಾತೀತವಾಗಿ ಒತ್ತಡ ತರಬೇಕು.

ನಿಮಗೆ ಯಾವ ಪಕ್ಷದ ಬಗ್ಗೆ ಒಲವಿದೆ ಎನ್ನುವುದು ಮುಖ್ಯವಲ್ಲ. ನಿಮ್ಮ ಅಭ್ಯರ್ಥಿಗಳು ಹೇಗೆ ನಿಮ್ಮ ಮಾತು ಕೇಳುವಂತೆ ಮಾಡುತ್ತೀರಿ ಎನ್ನುವುದು ಮುಖ್ಯ.

6) ಬಸವ ಶಕ್ತಿ ಸಮಾವೇಶ

ಬಸವ ಸಂಘಟನೆಗಳಲ್ಲಿ ರಾಜಕೀಯ ಪ್ರಜ್ಞೆ ಹಾಗೂ ಸಾಮರ್ಥ್ಯ ಮೂಡಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ‘ಬಸವ ಶಕ್ತಿ’ ಸಮಾವೇಶ ಆಯೋಜಿಸಲು ಸಲಹೆ ಬಂದಿದೆ.

ಈ ಸಮಾವೇಶದ ಮುಖ್ಯ ಉದ್ದೇಶ ಬಸವ ಸಂಘಟನೆಗಳಿಗೆ ರಾಜಕೀಯ ಮತ್ತು ಚುನಾವಣೆಗೆ ಸಂಬಂಧಿತ ಚಟುವಟಿಕೆಗಳಿಗೆ ಬೇಕಾದ ತರಬೇತಿ ನೀಡುವುದು. ಜೊತೆಗೆ ಈ ಕಾರ್ಯಕ್ರಮದಲ್ಲಿ ಬಸವ ಸಂಘಟನೆಗಳು ತಮ್ಮ ಅನುಭವ ಮತ್ತು ಆಲೋಚನೆಗಳನ್ನೂ ಹಂಚಿಕೊಳ್ಳಬಹುದು.

ಇದು ಎರಡು ದಿನದ ಕಾರ್ಯಕ್ರಮವಾದರೆ ಮೊದಲ ದಿನ ಬಸವ ಸಂಘಟನೆಗಳ ಅನುಭವ ಹಂಚಿಕೆ, ಎರಡನೆಯ ದಿನ ರಾಜಕೀಯ ತರಬೇತಿ ಶಿಬಿರ ನಡೆಸಬಹುದು.

ಬಸವ ಸಂಘಟನೆಗಳು ಚುನಾವಣೆ ಮೇಲೆ ಪ್ರಭಾವ ಬೀರಬೇಕು

ಬಸವ ಶಕ್ತಿ ಸಮಾವೇಶ ಸಧ್ಯಕ್ಕೆ ಆಲೋಚನಾ ಹಂತದಲ್ಲಿದೆ. ಇಷ್ಟು ದಿನ ವೈಯಕ್ತಿಕವಾಗಿ ಅನೇಕ ಬಸವ ಕಾರ್ಯಕರ್ತರ ಅಭಿಪ್ರಾಯ ಪಡೆದಿದ್ದೇವೆ. ಅವರ ಪ್ರೋತ್ಸಾಹ, ಬೆಂಬಲದಿಂದ ಈಗ ಒಂದು ಹೆಜ್ಜೆ ಮುಂದೆ ಹೋಗಿ ಸಾರ್ವಜನಿಕವಾಗಿ ಚರ್ಚೆ ಶುರುಮಾಡಿದ್ದೇವೆ. ಎಲ್ಲರ ಅಭಿಪ್ರಾಯದಂತೆ ಮುನ್ನಡೆಯುತ್ತೇವೆ.

ನಮ್ಮ ಓದುಗರಲ್ಲಿ ಮನವಿ – ದಯವಿಟ್ಟು ಈ ಐದು ಪ್ರಶ್ನೆಗಳಿಗೆ ಉತ್ತರಿಸಿ, ಇಲ್ಲೇ ಕಾಮೆಂಟಿನಲ್ಲಿ ಹಾಕಿ ಅಥವಾ ನಮಗೆ ವೈಯಕ್ತಿಕವಾಗಿ ಕಳಿಸಿ.

1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೇ? ಯಾಕೆ?

2) ಇದಕ್ಕೆ ತರಬೇತಿಯ ಅಗತ್ಯವಿದೆಯೇ?

3) ಬಸವ ಶಕ್ತಿ ಸಮಾವೇಶದ ರೂಪುರೇಷೆಯ ಬಗ್ಗೆ ನಿಮ್ಮ ಸಲಹೆ.

4) ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತೀರಾ?

5) ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ?

ಈ ಪ್ರಯತ್ನ ಮುಂದುವರೆಸುವ ಹಾಗಿದ್ದರೆ ಬಸವ ಶಕ್ತಿ ಸಮಾವೇಶವನ್ನು ಬೇಗನೆ ಆಯೋಜಿಸಬೇಕು. ಮುಂದಿನ ಚುನಾವಣೆಗೆ ಎರಡೂವರೆ ವರ್ಷವಿದೆ. ಅಲ್ಲಿಯವರೆಗೆ ನಾವು ಸಿದ್ಧವಾದರೆ ಲಿಂಗಾಯತ ಸಮಾಜ, ಧರ್ಮದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಬಸವ ಶಕ್ತಿ ಸಮಾವೇಶ ನಡೆಸಬೇಕಾದರೆ ಮೊದಲು ಸಂಘಟಕರ ತಂಡ ರಚನೆಯಾಗಬೇಕು. ಆಸಕ್ತರು ದಯವಿಟ್ಟು ಮುಂದೆ ಬಂದು ಕೈ ಜೋಡಿಸಲು ವಿನಂತಿಸಿಕೊಳ್ಳುತ್ತಿದ್ದೇವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
34 Comments
  • ಲಿಂಗಾಯತ ಧರ್ಮವನ್ನು ತುಳಿಯುವ, ವಿರೋಧಿಸುವ RSS, ತನ್ನ ಕೆಲಸವನ್ನು ಅಪರೋಕ್ಷವಾಗಿ, ಪಡೆದೆ ಹಿಂದೆ ನಿಂತು ಮಾಡಿಸುತ್ತವೆ.
    ಲಿಂಗಾಯತ ಧರ್ಮ ದ್ರೋಹಿಗಳು ಆ ಕೆಲಸ ಮಾಡುತ್ತಿದ್ದಾರೆ.
    ಈಗ ಪಂಚಪೀಠಾಧೀಶ್ವಾರರು ಲಿಂಗಾಯತ ಧರ್ಮ ಬೆಳವಣಿಗೆಗೆ ಯಾವುದೇ ಕಾರ್ಯ ಮಾಡದೆ ಹೋದರು, ಪುರ ಪ್ರವೇಶ, ಕೊಡಗಳ ಮೇಳ (ಕುಂಭ ಹೊರುವುದು) ಮಾಡಿ, ಲಿಂಗಾಯತರ ಕೋಟ್ಯಾನುಕೋಟಿ ಹಣವನ್ನು ದಾನ ಧರ್ಮಗಳ ಮೂಲಕ ಪಡೆಯುತ್ತಿದ್ದಾರೆ.
    ಹಳ್ಳಿಗಳ ಜನರನ್ನು ಬಹಳ ಬೇಗ ಸೆಳೆಯುತ್ತಾರೆ. ಪ್ರಾಯೋಜಕರು ಮತ್ತು ತಾವು ಹಂಚಿಕೊಳ್ಳುತ್ತಾರೆ.

    • ಭೀಮಪ್ಪ ಭೀಮಾನಂದ ಮುದಕಣ್ಣವರ, ಹುಕ್ಕೇರಿ, ಬೆಳಗಾವಿ ಜಿಲ್ಲೆ, ಕರ್ನಾಟಕ. says:

      ಹೌದು ನಿಜ ಸ್ವಾಮಿ, ನಮ್ಮ ನೋವುಗಳು ನೂರೆಂಟು, ಹಾಗಾಗಿ ನಾವುಗಳು ಲಿಂಗಾಯತ ಅನುಯಾಯಿಗಳು ರಾಜಕೀಯ ಶಕ್ತಿ ಪ್ರದರ್ಶನ ಮಾಡುವುದು ತುಂಬಾ ಅನಿವಾರ್ಯವಾಗಿದೆ. ಹಿಂದೆಂದಿಗಿಂತಲೂ ಇಂದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮತ್ತಷ್ಟು ಗಟ್ಟಿ ಧ್ವನಿಯಾಗಿ, ಸಂಘಟಿತರಾಗಿ ಹೋರಾಟ ನಡೆಸಬೇಕಿದೆ. ಲಿಂಗಾಯತ ಅಸ್ಮಿತೆ ರಾಜಕೀಯ ನೆಲೆಯಲ್ಲಿ ಗಟ್ಟಿಗೊಳ್ಳಬೇಕಿದೆ.

  • ಎಲ್ಲರಿಗೂ ಶರಣು ಶರಣಾರ್ಥಿಗಳು.
    1. ಬಸವ ಸಂಘಟನೆಗಳು ಅಭ್ಯರ್ಥಿ ಲಿಂಗಾಯತ ಅಂದ ಮಾತ್ರಕ್ಕೆ ಬೆಂಬಲಿಸಬಾರದು. ಆತ ಲಿಂಗಾಯತ ಸಮಾಜದ ಕಾರ್ಯದಲ್ಲಿ ಹೇಗೆ ತೊಡಗಿಸಿಕೊಂಡಿದ್ದಾನೆ ಮತ್ತು ಕೊಡುಗೆ ಏನು ನೋಡಬೇಕು.
    2.ದೊಡ್ಡ ಮಟ್ಟದ ತರಬೇತಿ ಅವಶ್ಯಕತೆ ಇಲ್ಲ, ಆದರೆ ಎಲ್ಲರೂ ಕೂಡಿ ಕೆಲಸ ಮಾಡುವಂತೆ ಪ್ರೇರೇಪಿಸುವುದು ಅವಶ್ಯ.
    3. ಒಂದೇ ಕಡೆ ಮಾಡುವ ಬದಲು 4-5 ಕಡೆ ಆಯೋಜನೆ ಮಾಡಿದರೆ ಒಳ್ಳೆಯದು.
    4.ಈಗಲೇ ಹೇಳುವುದು ಕಷ್ಟಸಾಧ್ಯ.
    5. ನಮ್ಮದು ವಸತಿ ಶಾಲೆ ಇರುವುದರಿಂದ ಸ್ಥಳಾವಕಾಶ ಒದಗಿಸಬಹುದು.

  • ನಾನು ವೈಯಕ್ತಿಕವಾಗಿ ಮೇಲಿನ ಎಲ್ಲಾ ಚಿಂತನೆಗಳನ್ನು ಒಪ್ಪುತ್ತೇನೆ ಬೆಂಬಲಿಸುತ್ತೇನೆ

    • ನಾವ್ ರೆಡಿ ಲಿಂಗಾಯತ ವಿರೋಧಿಗಳಿಗೆ ಉತ್ತರ ಕೊಡಲು ಯಾವ ರೀತಿಯಿಂದಲಾದರೂ ರೆಡಿ..ನಾವು ವಿಜಯನಗರ ಜಿಲ್ಲೆ, ಹೊಸಪೇಟೆಯವರು ನಮಗೆ ಮೊದಲು ಕೆಲವುವೀರಶೈವರೇ ಜೊತೆಲಿದುಕೊಂಡೆ ಮೋಸ ಮಾಡುವವರು ಇದ್ದಾರೆ

  • ೧. ಹೌದು. ಎಲ್ಲ ಬಸವ ಪರ ಸಂಘಟನೆಗಳು ರಾಜಕೀಯ ಪ್ರಭಾವ ಬಳಸಿಕೊಂಡು, ಬಸವ ನಿಷ್ಠರಿಗೆ ಮತ್ತು ಬಸವ ತತ್ವ ನಿಷ್ಠರಿಗೆ ರಾಜಕೀಯ ಅಧಿಕಾರ ಸಿಗುವಂತೆ ಮಾಡಬೇಕು. ಇದರಿಂದ ‘ಲಿಂಗಾಯತ ಧರ್ಮ’ ಕ್ಕೆ ಮಾನ್ಯತೆ ಪಡೆಯುವ ದಾರಿ ಸುಗಮಗೊಳಿಸಿಕೊಳ್ಳಲು ಒಂದು ದೊಡ್ಡ ಅಸ್ತ್ರವಾಗುತ್ತದೆ.

    ೨. ಹೌದು. ದ್ವಂದ್ವ ನಿಲುವಿನ ಲಿಂಗಾಯತ ರಾಜಕಾರಣಿಗಳಿಗೆ ಬುದ್ಧಿ ಕಲಿಸಲು ಸಂಘಟಕರಿಗೆ ತರಬೇತಿ ನೀಡುವುದು ಅತ್ಯಂತ ಅವಶ್ಯಕ.

    ೩. ‘ಬಸವ ಸಂಸ್ಕೃತಿ ಅಭಿಯಾನ’ ದಂತೆ ‘ಬಸವಶಕ್ತಿ ಸಮಾವೇಶ’ ವೂ ಜರುಗಿದರೆ ಬಹಳ ಒಳ್ಳೆಯದು.

    ೪. ನಮ್ಮ ತಾಲೂಕಿನ ವತಿಯಿಂದ ಸುಮಾರು 50 ಜನ ತರಬೇತಿ ಪಡೆಯಲು ಸಿದ್ದರಾಗಿದ್ದೇವೆ.

    ೫. ಹೌದು ಆಸಕ್ತಿ ಇದೆ. ಈ ‘ಬಸವ ಶಕ್ತಿ ಸಮಾವೇಶ’ ಕ್ಕಾಗಿ ರೂ. 50,000/- ಸಂಗ್ರಹಿಸುವ ಶಕ್ತಿಯೂ ಇದೆ.

  • ಮೊದಲಿಗೆ ಲಿಂಗಾಯತ ಧರ್ಮ ಮಾನ್ಯತೆಗೆ ವಿರುದ್ಧ ನಿಲುವು ಹೊಂದಿರುವ ಲಿಂಗಾಯತ ರಾಜಕಾರಣಿ ಯಾವುದೇ ಪಕ್ಷಕ್ಕೆ ಸೇರಿದವನಾಗಿದ್ದರೂ ಸಹ ಮುಂದಿನ ಚುನಾವಣೆಯಲ್ಲಿ ಆತನಿಗೆ ತಕ್ಕ ಶಾಸ್ತಿ ಮಾಡಲು ಬಸವಾಭಿಮಾನಿಗಳೆಲ್ಲರೂ ಈಗಿನಿಂದಲೇ ಮನೋ ವೇದಿಕೆ ಸಿದ್ಧಪಡಿಸಿಕೊಳ್ಳಬೇಕು . ಚುನಾವಣಾ ಸಂದರ್ಭದಲ್ಲಿ ತಮ್ಮ ಬಂಧು ಬಾಂಧವರು ಬಸವಾಭಿಮಾನಿ ಮಿತ್ರರು ದಾರಿ ತಪ್ಪದಂತೆ ಎಚ್ಚರ ವಹಿಸಬೇಕು.

    • ಸಂಘಟನೆಗೆ ಬಹು ಮುಖ್ಯವಾಗಿ ವಯಕ್ತಿಕ ಪ್ರತಿಷ್ಟೇ, ಫಲಾಪೇಕ್ಷೆ ಇವುಗಳನ್ನೆಲ್ಲ ಬದಿಗಿರಿಸಿದಲ್ಲಿ ಮಾತ್ರ ಸಂಘಟನೆಗೆ ಒಂದು ಶಕ್ತಿ ಸಿಗಬಹುದು ಈ ಮೇಲಿನ ಚಿಂತನೆಗಳನ್ನು ಒಪ್ಪುತ್ತೇನೆ ಬೆಂಬಲಿಸುತ್ತೇನೆ

      • ಈ ಸಮಾವೇಶದಲ್ಲಿ ಬಸವ ಭಕ್ತರಿಗೆ ಬುದ್ಧ + ಬಸವ + ಅಂಬೇಡಕರ ಓಗ್ಗೂಡಿಸಿಕೊಂಡು ಹೋರಾಡಿದ ಅಂಕೆ ಸಂಖ್ಯೆಯ ಸರಿಯಾದ ತಿಳುವಳಿಕೆ ಕೊಟ್ಟರೆ ಈ ಲಿಂಗಾಯತ ವಿರೋಧಿ ರಾಜಕಾರಣಿಗಳನ್ನ ಮಣಿಸುವುದು ಸುಲಭ.

  • ಬಸವಣ್ಣನವರ ಬಗ್ಗೆಯಾಗಲಿ ,ಲಿಂಗಾಯತ ಧರ್ಮದ ಬಗ್ಗೆ ಯಾರೆ ಮಾತನಾಡಿದರೂ ತಕ್ಷಣವೇ ಪ್ರತಿಕ್ರಿಯೆ ಕೊಡುವಂತೆ ಪ್ರತಿನಿಧಿಗಳನ್ನು ತಯಾರುಮಾಡಬೇಕು.ಪ್ರತಿಕ್ರಿಯೆ ಹೇಗಿರಬೇಕೆಂದರೆ ವಿರೋಧಿಗಳು ಮುಟ್ಟಿನೋಡುಕೊಳ್ಳುವಂತಿರಬೇಕು .
    ಅಂತಹ ಒಂದು ಗಣಾಚಾರಪಡೆಯನ್ನು ಹುಟ್ಟುಹಾಕಬೇಕು,ಅದಕ್ಕೆ ಬೇಕಾದ ತರಬೇತಿ ನೀಡುವ ಮೂಲಕ ಲಿಂಗಾಯತ ಧರ್ಮದ ಮಠಾಧೀಶರು,ಬಸವಪರ ಸಂಘಟನೆಗಳು ,ಬಸವಾನುಯಾಯಿ ರಾಜಕಾರಣಿಗಳು ಲಿಂಗಾಯತ ಧರ್ಮದ ಅಭಿಮಾನಿಗಳು ಸೇರಿ ತರಬೇತಿಗೆ ಬೇಕಾದ ತನುಮನ,ಧನಸಹಾಯ ಹಾಗೂ ತಾವು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.
    ಇಷ್ಟು ನನಗೆ ಅನಿಸಿದ ಚಿಕ್ಕ ವ್ಯಕ್ತಿಯ ಸಣ್ಣ ಸಲಹೆ. ಶರಣುಶರಣಾರ್ಥಿಗಳು

  • ಶರಣರೇ,
    1. ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳುವುದು ಅತ್ಯವಶ್ಯ.
    ಲಿಂಗಾಯತ ಧರ್ಮದ ಏಳು ಬೀಳುಗಳನ್ನು ಅವಲೋಕಿಸಿದಾಗ ಮೊದಲಿನ ರಾಜರ ಆಶ್ರಯ ಇದ್ದಾಗ ಅದು ಬೆಳೆದಿದೆ ಇಲ್ಲದೆ ಇದ್ದಾಗ ಸೊರಗಿದೆ. ಈಗಿನ ಪ್ರಮುಖ ರಾಜಕೀಯ ಪಕ್ಷ ಬಿಜೆಪಿ ಯನ್ನು ಲಿಂಗಾಯತರು ಬಳಸಿಕೊಳ್ಳುವುದಕ್ಕಿಂತ ಬಿಜೆಪಿಯೆ ಲಿಂಗಾಯತರನ್ನು ಬಳಸಿಕೊಂಡಿದೆ. ಇನ್ನು ಕಾಂಗ್ರೆಸ್ ಪಕ್ಷ ವೀರೇಂದ್ರ ಪಾಟೀಲರನ್ನು ಹೇಗೆ ಬಳಸಿಕೊಂಡಿದೆ ಎಂಬುದನ್ನು ಎಲ್ಲರೂ ಬಲ್ಲರು. ತದ ನಂತರ ಅಹಿಂದ ವರ್ಗಗಳದ್ದೇ ದರ್ಬಾರು. ಇವೆರಡು ಪಕ್ಷಗಳಿಂದ ಸಮಾನಾಂತರ ಕಾಯ್ದುಕೊಂಡು ನಾವು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕಾಗಿದೆ. ನಾವು ಆ ಪಾರ್ಟಿ, ಈ ಪಾರ್ಟಿ ಅಂತ ಬ್ರಾಂಡ್ ಆಗದೆಯೇ ಲಿಂಗಾಯತ ಧರ್ಮದ ಆಶೆ ಆಕಾಂಕ್ಷೆಗಳನ್ನು ಸಮರ್ಥವಾಗಿ ವಿಧಾನಸಭೆ ಹಾಗೂ ಲೋಕಸಭೆಗಳಲ್ಲಿ ಮಂಡಿಸುವ ಅಭ್ಯರ್ಥಿಗಳಿಗೆ ಬೆಂಬಲ ಕೊಡಬೇಕಾಗಿದೆ.
    ಇನ್ನು ನಾವು ಮುಸ್ಲಿಮರ ಪರ ಅಥವಾ ವಿರೋಧಿ ನಡೆಗಳಿಂದ ದೂರ ಕಾಯ್ದುಕೊಳ್ಳುವುದು ಅಷ್ಟೇ ಮಹತ್ವದ್ದು.

    2. ತರಬೇತಿ ಅತ್ಯಗತ್ಯ ರಾಜಕೀಯದಲ್ಲಿ, ಜಾತಿ ರಾಜಕಾರಣದಲ್ಲಿ ಸಿಲುಕದಂತೆ ಎಚ್ಚರವಹಿಸುವುದು ಮತ್ತು ನಮ್ಮ ಧುರೀಣರು ಮತ್ತೆ ಬೇರೆ ಆಕಾಂಕ್ಷೆಗಳಿಗೆ ಮಾರು ಹೋಗದಂತೆ ನೋಡಿಕೊಳ್ಳುವುದು.

    3. ನಾವು ಯಾವ ರಾಜಕೀಯ ಧುರೀಣರ ಬೆಂಬಲ ಪಡೆದುಕೊಳ್ಳುತ್ತೇವೆಯೋ ಅವರಿಂದ ಅದರ ದುರುಪಯೋಗ ಆಗದಂತೆ, ನೇತೃತ್ವವನ್ನು ಲಿಂಗಾಯತ ಸ್ವಾಮೀಜಿಗಳಿಂದ ಹಾಗೂ ಇತರ ಬಸವಪರ ಸಂಘಟನೆಗಳಿಂದ ಆಯ್ದ ಕೆಲವು ನಾಯಕರೇ ಸಾಮೂಹಿಕವಾಗಿ ಹಾಗೂ ಸರ್ವಾನುಮತದಿಂದ ನಿರ್ಣಯಗಳನ್ನು ತೆಗೆದುಕೊಂಡು ಇದರ ರೂಪುರೇಷೆ ತಯಾರಿಸಬೇಕು.

    4. ನಾನೊಬ್ಬ ನಿವೃತ್ತ ಉದ್ಯೋಗಿ ಆಗಿರುವುದರಿಂದ ನನ್ನ ಯಾವ ಸಂಘಟನೆ ಇಲ್ಲ. ಆದರೆ ನನ್ನಿಂದ ಸಾಧ್ಯವಾದಷ್ಟು ಸೇವೆ ಮಾಡಲು ಸದಾ ಸಿದ್ಧ.

    5. ಆಸಕ್ತಿ ಇದೆ. ನನ್ನ ಆರೋಗ್ಯದ ಇತಿಮಿತಿಯಲ್ಲಿ.

    ನೀವು ಬಸವ ಮೀಡಿಯಾದವರು ಕೈಗೊಳ್ಳುತ್ತಿರುವ ಎಲ್ಲ ಕಾರ್ಯಗಳು ಪ್ರಶಂಸನೀಯ.

    ಶರಣು ಶರಣಾರ್ಥಿ

  • ಬಸವ ಸಂಘಟನೆಗಳು ಧರ್ಮದ ವಿಚಾರಕ್ಕೆ ಮಾತ್ರ ಸೀಮಿತ ವಾಗಿರ ಬೇಕಾಗುತ್ತದೆ. ಚುನಾವಣೆ ಸಂದರ್ಬದಲ್ಲಿ ಮಾತ್ರ ಸೂಕ್ತ ತೀರ್ಮಾನ ಕೈಗೊಳ್ಳುವಂತಿರ ಬೇಕು. ಇಲ್ಲಿ ಲಿಂಗಾಯತ ಅಭ್ಯರ್ಥಿ ಮುಖ್ಯವಲ್ಲ. ಸಮಾಜಕ್ಕೂ,ಲಿಂಗಾಯತ ಸಮುದಾಯಕ್ಕೆ ಒಳ್ಳೆಯದು ಮಾಡುವುವರು ಮುಖ್ಯ. ಲಿಂಗಾಯತ ಮತಗಳು ಕೆಲವು ಕ್ಷೇತ್ರಗಳಲ್ಲಿ ನಿರ್ಣಾಯಕ.

    • All points are good,we have to go ahead with proper planning.
      Other things can be discussed in training sessions

      • Irrespective of the party Lingayats should fight against leaders who consider Lingayats ‘ votes as guaranteed. Silent killers of vachana Sahitya and Basava way of life must be identified and warned .

  • ಲಿಂಗಾಯತ ವಿರೊಧಿ ಗಳಿಗೆ ತಕ್ಕ ಪಾಠ ಕಲಿಸಬೇಕು ಇದಕ್ಕೆ ನಾವು ನಿಮ್ಮ ಜೊತೆ ಬರುತ್ತೇವೆ

  • ಒಂದನೆಯದು ಖಂಡಿತವಾಗಿ ಬಸವ ಸಂಘಟನೆ ಗಳು ರಾಜಕೀಯ ಪ್ರಭಾವವನ್ನು ಬೆಳೆಸಿಕೊಳ್ಳಬೇಕು ಏಕೆಂದರೆ ನಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳು ವಿಧಾನಸಭೆಯಲ್ಲಾಗಲಿ ಲೋಕಸಭೆಯಲ್ಲಾಗಲಿ ನಮ್ಮ ಧರ್ಮದ ಬಗ್ಗೆ ಮಾತನಾಡುತ್ತಾರೆ ಯಾವುದೇ ಒಂದು ಧರ್ಮ ಬೆಳೆಯಬೇಕಾದರೆ ರಾಜಕೀಯ ಆಶ್ರಯ ಅತ್ಯಗತ್ಯ ಎರಡನೆಯದಾಗಿ ಇದಕ್ಕೆ ತರಬೇತಿ ಅಗತ್ಯವಿದೆ ಮೂರನೆಯದಾಗಿ ಬಸವಶಕ್ತಿ ಸಮಾವೇಶ ಎರಡು ಅಥವಾ ಮೂರು ಜಿಲ್ಲೆಗಳಿ ಒಂದರಂತೆ ಮಾಡಬಹುದು ನಾಲ್ಕನೆಯದು ನಮ್ಮ ತಾಲೂಕಿನಿಂದ ಕನಿಷ್ಠ 50 ಜನ ಭಾಗವಹಿಸುತ್ತೇವೆ ಐದನೆಯದಾಗಿ ಸಮಾವೇಶ ಸಂಘಟಿಸಲು ನೆರವಾಗಲು ನಮಗೆ ಆಸಕ್ತಿ ಇದೆ

  • ಖಂಡಿತ ಮಾಡಬೇಕು ಈಗಾಗಲೇ ಮೈಸೂರು ಜಿಲ್ಲೆಯಲ್ಲಿ ಈ ರೀತಿಯ ಚಟುವಟಿಕೆ ಪ್ರಾರಂಭ ಆಗಿದೆ ತುಂಬಾ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಚರ್ಚೆ ಮಾಡಿದ್ದೇವೆ ಮುಂದಿನ ದಿನಮಾನದಲ್ಲಿ ಜಿಲ್ಲೆ ಪುರಾ ಸಂಘಟನೆ ಹಾಗು ಸಭೆ ಮಾಡಬೇಕು

  • ಬಸವ ಶಕ್ತಿ ಸಮಾವೇಶದ ಅವಶ್ಯಕತೆ ತುಂಬಾ ಇದೆ. ಇದಕ್ಕೆ ನನ್ನ ಸಹಮತ ಮತ್ತು support ಇದೆ. ವೈಯುಕ್ತಿಕವಾಗಿ ಮತ್ತು ಆರ್ಥಿಕವಾಗಿ ಸಹಾಯ ಮಾಡುತ್ತೇನೆ

    • ರಾಜಕೀಯ ಪಕ್ಷಗಳು ನಾಯಕರುಗಳನನ್ನು ಬಿಟ್ಟು ಸಮಾಜ ಕಟ್ಟಲು ಪ್ರಾರಂಭಿಸಿ, ರಾಜಕೀಯ ನಾಯಕರು ಗೋಳನ್ನು ಹಿಂಬಾಲಿಸುವಸ್ವಾರ್ಥೀಗಳು ಅವಕಾಶ ವಾದಿಗಳು ಅವರು ಹಿಂಬಾಲಿಸಿ ಕೊಂಡು ಹೋಗುವ ವರು ಇದ್ದಾರೆ ಅಂತ ವರನನ್ನು ದೋರಹಿಟ್ಟು ಸಮಾಜ ಕಟ್ಟಲು ಪ್ರಾರಂಭಿಸಿ ಸಕ್ರೀಯವಾಗಿ ಪಾಲ್ಗೊಂಡು ಉತ್ತಮ ಸಂಘಟನೆ ಕಟ್ಟಬಹುದು , ತರಬೇತಿ ಆರಂಬಿಸಿ,

  • Many lingayat politicians are playing with basava dharmi, we have to teach them other wise we have no future, I am a follower of Basava, by his grace we are leading happy life, I am ready to work with you by all means. Lord Basava bless you all, I am one of you.

  • ಐದು ಪ್ರಶ್ನೆಗಳಿಗೆ ನನ್ನ ಉತ್ತರಗಳು:-
    1. ಹೌದು. ಖಂಡಿತವಾಗಿಯೂ ಬೆಳೆಸಿಕೊಳ್ಳಬೇಕು. ಏಕೆಂದರೆ ನಾವು ನಮ್ಮಷ್ಟಕ್ಕೆ ಇದ್ದರೆ ಸಾಲದು, ನಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬ ಅರಿವು ಇರುವುದು ಬಹಳ ಮುಖ್ಯ.
    2. ತರಬೇತಿಯ ಅಗತ್ಯ ಖಂಡಿತವಾಗಿಯೂ ಇದೆ.
    3. ಮೂರು. ಸರಳವಾಗಿ ಲಿಂಗಾಯತ ಧರ್ಮ ಎಂದರೆ ಏನು, ಅದು ವೀರಶೈವ ಮತ್ತು ಹಿಂದೂ ಧರ್ಮಗಳಿಗಿಂತ ಯಾವ ರೀತಿ ಭಿನ್ನವಾಗಿದೆ, ಎಂಬುದನ್ನು ವಿವರಿಸಿ ಹೇಳುವುದು. ಮತ್ತು ಇದರ ಬಗ್ಗೆ ಪ್ರಶ್ನೋತ್ತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು. ಇದನ್ನು ಭಾಷಣಗಳ ಮೂಲಕ, ಟಿವಿ ಮಾಧ್ಯಮದ ಮೂಲಕ, ಸೋಶಿಯಲ್ ಮೀಡಿಯ ಮತ್ತು ದಿನಪತ್ರಿಕೆಗಳ ಮೂಲಕ ಮಾಡಬಹುದು.
    4. ನನ್ನದು ಏಕ ವ್ಯಕ್ತಿ ಸಂಘಟನೆ!! 100% ಭಾಗವಹಿಸುವ ಆಸೆ, ಆಸಕ್ತಿ ಇದೆ.
    5. ಈ ಸಂಬಂಧವಾಗಿ ಸಮಯ ಮತ್ತು ಧನ ಸಹಾಯಗಳ ಮೂಲಕ.

  • ಲಿಂಗಾಯತರನ್ನು ವಿರೋಧಿಸುವ ಸಂಘ ಪರಿವಾರ ದ ಅಥವಾ ಬೇರೆ ಬೇರೆ ಯವರ ದಾಖಲೆಗಳನ್ನು ಸಂಗ್ರಹಿಸುವ ಕೆಲಸ ಲಿಂಗಾಯತರಿಂದ ಪರಿಣಾಮಕಾರಿಯಾಗಿ ಆಗಬೇಕಿದೆ. .

  • || ಓಂ ಶ್ರೀ ಗುರು ಬಸವಲಿಂಗಾಯ ನಮಃ ||
    ಸರ್ವರಿಗೂ ಶರಣ ಸಂಕ್ರಾಂತಿಯ ಹಾರ್ದಿಕ ಶುಭಾಷಯಗಳೊಂದಿಗೆ ಶರಣು ಶರಣಾರ್ಥಿಗಳು 🙏🙏
    ಉತ್ತರ ೧):- ಅತ್ಯಂತ ಜರೂರತ್ತಾಗಿ ಮಾಡಬೇಕಾದ ಕಾರ್ಯವಿದು. ಲಿಂಗಾಯತರ ಅಸ್ಮಿತೆ, ರಾಜಕೀಯ ಪ್ರಭಾವ ಬೆಳೆಸಿಕೊಂಡಾಗ ಮಾತ್ರ ಸಾಧ್ಯ. ಏಕೆಂದರೆ ನಮ್ಮ
    ಅಸ್ತಿತ್ವದ ಅರಿವು ರಾಜಕಾರಣಿಗಳಿಗೆ ಸಿಂಹ ಸ್ವಪ್ನವಾಗುತ್ತದೆ
    ಉತ್ತರ ೨):- ತರಬೇತಿ ಅಗತ್ಯವಾಗಿ ಬೇಕು ಸರ್.
    ಉತ್ತರ ೩):- 1) ಮೊದಲ ಹಂತದಲ್ಲಿ ಪಕ್ಷಾತೀತವಾದ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವುದು.
    2) ಗ್ರಾಮ, ಹೋಬಳಿ, ತಾಲೂಕ ಮತ್ತು ಜಿಲ್ಲಾ ಮಟ್ಟದಲ್ಲಿ
    ಬಸವ ಪರ ಸಂಘಟನೆಗಳಲ್ಲಿ ಐಕ್ಯತೆ ಸಾಧಿಸುವುದು.
    3) ವಸ್ತ್ರ ಸಂಹಿತೆ ಪಾಲಿಸುವುದು.
    ಉತ್ತರ ೪):- ನಮ್ಮ ಅಥಣಿ ತಾಲೂಕಿನಿಂದ 50 ರಿಂದ 100 ರ ವರೆಗೆ ಜನರು ಭಾಗವಹಿಸಲು ಪ್ರಯತ್ನಿಸುತ್ತೇವೆ.
    ಉತ್ತರ ೫):- ನಾನು ತನು ಮನ ಧನದಿಂದ ನೆರವಾಗುತ್ತೇನೆ .
    ಜೈ ಬಸವ , ಜೈ ಲಿಂಗಾಯತ 🙏 🙏 🇮🇳 🙏 🙏
    4) ಪ್ರಚಾರ ಮತ್ತು ಪ್ರಸಾರಕ್ಕೆ ಲಭ್ಯವಿರುವ ಮಾಧ್ಯಮಗಳನ್ನು ಬಳಸಿಕೊಳ್ಳುವುದು.
    5) ಸಾರ್ವಜನಿಕರಿಗೆ ತೊಂದರೆ ಮತ್ತು ನೋವಾಗದಂತೆ ಶಿಸ್ತು ಮತ್ತು ಸಂಯಮದಿಂದ ವರ್ತಿಸುವುದು.

  • ಶರಣರೇ ನಮ್ಮದೇ ಒಂದು ರಾಜಕೀಯ ಸಂಘಟನೆ ಕಟ್ಟಲು ಕಾಲ ಪಕ್ವವಾಗಿದೆ ಆರ್ ಎಸ್ ಎಸ್ ಮಾದರಿಯಲ್ಲಿ ಅದಕ್ಕಿಂತ ಉತ್ತಮವಾದ ಒಂದು ರಾಜಕೀಯ ಸಂಘಟನೆ ಅಗತ್ಯ ವಾಗಿದೆ. ಇದನ್ನು ಗ್ರಾಮ ಮಟ್ಟದಿಂದ ಕಟ್ಟಬೇಕಾಗಿದೆ. ಲಿಂಗಾಯತ ರು ಯಾವುದೇ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡಿರಲ್ಲಿ ಆದರೆ ಅವರೆಲ್ಲರೂ ಒಂದೇ ವೇದಿಕೆ ಯಲ್ಲಿ ಸಂಘಟನೆ ಯಾಗಬೇಕು ಅದು ಅನುಭವ ಮಂಟಪದೊಳಗೆ

  • 1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೇ? ಯಾಕೆ?

    ಹೌದು ಬಸವ ಸಂಘಟನೆಗಳಿಗೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬ ಲಿಂಗಾಯತ ಮನೆಯಲ್ಲೂ ಯುವಕರಲ್ಲೂ ರಾಜಕೀಯ ತಿಳುವಳಿಕೆ ಬಹಳ ಮುಖ್ಯ . ಸಂಘಟನೆ ಪ್ರತಿ ಹಳ್ಳಿಗಳಿಗೂ ತಯಾರಾಗಬೇಕು..

    ಸೈದ್ಧಾಂತಿಕ ರಾಜಕಾರಣಿ ಆಗಲು ಬಸವ ಸಿದ್ಧಾಂತ ಅಥವಾ ಕಾಯಕ ಸಿದ್ಧಾಂತ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಅದಕಾರಣ ರಾಜಕೀಯ ದಲ್ಲಿ ಲಿಂಗಾಯತ ಬಸವನುಯಾಯಿಗಳ ಅನುಭವ ಅರಿವಿನ ಜಾಗತಿಕ ಬೆಳವಣಿಗೆ ಆಗಲೂ ರಾಜಕಾರಣದಿಂದ ಸಾದ್ಯ

    ಇಂಡಿಯಾ ಈಸ್ ರೂಲ್ಡ್ ಬೈ ಪೊಲಿಟಿಕ್ಸಿಯನ್ಸ್

    ಅದಕ್ಕೆ ಪ್ರತಿಯೊಬ್ಬರು ಅದು ಬಸವ ಪರ ಸಂಘಟನೆಗಳು ಅದನ್ನು ಕಾಯಕದ ರೂಪದಲ್ಲಿ ಬಾವಿಸಿ ರಾಜಕೀಯದಲ್ಲಿ ಬೆಳಗಬೇಕು

    2) ಇದಕ್ಕೆ ತರಬೇತಿಯ ಅಗತ್ಯವಿದೆಯೇ? ಹೌದು ನಮಗೆಲ್ಲ ಜೀವನ ಹೇಗೆ ರೂಪಿಸಿಕೊಳ್ಳಬೇಕು ಎಂದು ಶಿಕ್ಷಣ ಆಚಾರ ವಿಚಾರ ಗಳು ಮೂಲಕ ಚಿಕ್ಕವಯಸ್ಸಿನಿಂದ ಹೇಳಿಕೊಂಡು ಬಂದಿದ್ದಾರೆ ಆದರೆ ರಾಜಕೀಯ ಬಹಳ ಅಪರೂಪ ಮತ್ತು ದೂರ . ಅದಕ್ಕೆ ತರಬೇತಿ ಅದು ರಾಜಕೀಯ ನುರಿತರಿಂದ ಒದಗಿಸಬೇಕು

    3) ಬಸವ ಶಕ್ತಿ ಸಮಾವೇಶದ ರೂಪುರೇಷೆಯ ಬಗ್ಗೆ ನಿಮ್ಮ ಸಲಹೆ.

    ಬಸವ ಶಕ್ತಿ ಸಮಾವೇಶವು ಸಾರ್ವಕಾಲಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮತ್ತು ವಿಮರ್ಶೆ (ಅನುಭವ ಮಂಟಪ) ಅದು ಚಿಕ್ಕದಾದರೂ ಬಹಳ ಅರ್ಥಪೂರ್ಣವಾಗಿರಬೇಕು ಮತ್ತು ಜನರಿಗೆ ನಾವೂ ಯಾವುದರ ಬಗ್ಗೆ ಹೇಳ್ತಿದ್ದೀವಿ ಅಂತ ಪಾರದರ್ಶಕವಾಗಿ ತಿಳಿಸಬೇಕು

    ಹಳ್ಳಿಗೊಂದು ಬಸವ ಶಕ್ತಿ ಸಂಘಟನೆ ,ಸಾಮಾಜಿಕ ಕಾಯಕ ಮತ್ತು ಆರ್ಥಿಕತೆಯ ನಿಜವ್ಷವನ್ನು ತಿಳಿಸಬೇಕು .

    ರಾಜಕೀಯದಲ್ಲಿ ಎಲ್ಲಾ ಧರ್ಮ ಸಂಘಟನೆ ಸಾಮಾನ್ಯ ಅದಕ್ಕೆ ರಾಜಕೀಯಕ್ಕೆ ಬಸವ ಶಕ್ತಿ ಅಸ್ತಿತ್ವ ಬೇಕು ..

    4) ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತೀರಾ?

    ಶಕ್ತಿ ಮತ್ತು ಯುಕ್ತಿ ಕೂಡುವುದು ರಾಜಕೀಯದಲ್ಲಿ ಅದಕ್ಕೆ ಯಾವದೇ ನಿಯಮಿತ ಲೆಕ್ಕವಿರುವದಿಲ್ಲ

    5) ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ?

    ಹೌದು

  • ಯಾವುದೇ ವಿಚಾರಗಳನ್ನು ಮಾತನಾಡುವ ಗೌಪ್ಯವಾಗಿ ಬಸವ ಒಂದು ಗೌಪ್ಯವಾದ ಒಂದು ಗ್ರೂಪ್ ಅನ್ನು ಮಾಡಿ ಆನಂತರ ಅದರಲ್ಲಿ ವಿಚಾರ ತತ್ವಗಳನ್ನು ಹೇಗೆ ಮಾತನಾಡುವುದು ಹೇಗೆ ತತ್ವವನ್ನು ಆಚರಿಸುವುದು ಧರ್ಮದ ಬಗ್ಗೆ ಲಿಂಗಾಯತ ಬಗ್ಗೆ ವಿರೋಧವಾಗಿ ಬಗ್ಗೆ ತಿಳಿಸಿ ನಮ್ಮಲ್ಲಿ ಕಂಡುಬರುವ ವಿಚಾರವೆಂದರೆ ಗ್ರೂಪಿನಲ್ಲಿ ಹಾಕುವ ಮೀಡಿಯಾಗಳಲ್ಲಿ ಇದನ್ನು ವಿಚಾರವನ್ನು ಇನ್ನೊಬ್ಬರಿಗೆ ತಂದು ಹೋಗಿರುವುದನ್ನು ಮಾಡುತ್ತಾರೆ ಶರಣು ಶರಣಾರ್ಥಿಗಳು

  • ಇಲ್ಲಿ ನೀವು ಮಾತನಾಡಿರೋದು ಜಾತಿ ಲಿಂಗಾಯತರ ಬಗ್ಗೆ. ಜಾತಿ ಲಿಂಗಾಯತರಿಗೆ ತತ್ವ ಪ್ರಜ್ಞೆ ಇಲ್ಲ ಮತ್ತು ಅದು ಬರುವುದೂ ಇಲ್ಲ. ಜಾತಿಗೂ ಲಿಂಗಾಯತಕ್ಕೂ ಸಂಬಂಧವೇ ಇಲ್ಲ. ಆದ್ದರಿಂದ ತತ್ವ ಲಿಂಗಾಯತರಾದರೆ ಮಾತ್ರ ನೀವು ಹೇಳುತ್ತಿರುವ ರಾಜಕೀಯ ಪ್ರಜ್ಞೆ ಬರುವುದೇ ಹೊರತು ಇಲ್ಲದಿದ್ದರೆ ಬರಲಾರದು. ತತ್ವ ಲಿಂಗಾಯತರಿಗೆ ರಾಜಕೀಯ ಪ್ರಜ್ಞೆ ಬರಬೇಕಿರುವುದು ಅಧಿಕಾರ ಹಿಡಿಯಲು ಅಲ್ಲ! ಸರ್ವರ ಶ್ರೇಯಸ್ಸಿಗೋಸ್ಕರ !ಬಸವಾದಿಶರಣರ ಇಚ್ಛೆಯಂತೆ.

    • ಭೀಮಪ್ಪ ಭೀಮಾನಂದ ಮುದಕಣ್ಣವರ, ಹುಕ್ಕೇರಿ, ಬೆಳಗಾವಿ ಜಿಲ್ಲೆ, ಕರ್ನಾಟಕ. says:

      ಲಿಂಗಾಯತ ಸಂಘಟನೆ, ಸಾಮಾಜಿಕ ಸೇವೆಗಳು.

  • ಶ್ರೀಯುತ : ಚಿನ್ನಪ್ಪಗೌಡ , ಮ , ಪಾಟೀಲ . ಸಾ / ಆಚಮಟ್ಟಿ -591110 says:

    ಲಿಂಗಾಯಿತ ಧರ್ಮವಾಗಲಿ,, ಇನ್ನುಳಿದ ಪ್ರತಿ ಧರ್ಮಗಳಲ್ಲೂ ಸಮಸ್ಯೆಗಳು ಇದ್ದೇಇವೆ. ಪ್ರತಿ ಪ್ರಜೆಯನ್ನು ರಾಜಕಾರಣಿಗಳು ತಮ್ಮ ರಾಜಕೀಯ ಏಣಿ ಯನ್ನಾಗಿ ಬಳಸಿಕೊಂಡು ರಾಜಕಾರಣ ನಡೆಯುತ್ತಿದೆ. ಇದು ಖಂಡನೀಯ. ಎಲ್ಲರೂ ಎಚ್ಚತ್ತು ಕೊಳ್ಳಬೇಕು. ನನ್ನ ಅನಿಸಿಕೆ :- ಇಂದಿನ ದಿನ ಮಾನ ನೋಡಿದರೆ,,,, ಜ್ಯಾತಿಯ ವಿಷಯ ದಿ ಸಂಭದಗಳು ಹತ್ತಿರವಾಗುತ್ತಾ ನಡೆದಿವೆ. ಕಾರಣ,,,,,, ಜ್ಯಾತಿಯಲ್ಲಿ ಕೇವಲ 2 ವಂದು ಹೆಣ್ಣು,, ವಂದು ಗಂಡು. ಈ ಪ್ರಕಾರ ಇದ್ದು ದು ನಿಜ. ಕಾರಣ ಲಿಂಗಾಯಿತ,, ಹರಿಜನ,, ಗಿರಿಜನ ಬ್ರಾಹ್ಮಣ ಇವೆಲ್ಲ ತೆಗೆದು ಸರಕಾರಗಳು ಆ ಪಟ್ಟಿಯಲ್ಲಿ ಕೇವಲ ಹೆಣ್ಣು , ಗಂಡು. ಇಷ್ಟೇ ಇರಿಸಿದರೆ ಹೇಗೆ ?

  • BASAVA PRAGNE MODALU
    RAAJAKEEYA PRAGNE NANTARA
    JILLA TALUK HOBLI MATTADALLI SANGATANEGALU SAMAVESHAGALU
    MAADABEKU.
    BASAVA JAAGRUTHI ABHIYANA JOTE JOTE LINGAAYATA SAMAJA DA RAAJAKEEYA JAAGRUTHI SAMAVESHAGALANNU AAYOJISABEKU.
    SHARANARTHI.

  • ಬಸವತತ್ವ, ಬಸವ ಶಕ್ತಿ, ಬಸವ ನಿಷ್ಠಾವಂತರು ಎಂದು ಗುರಿತಿಸುವುದು ಹೇಗೆ? ತಮ್ಮ ವಾಸಸ್ಥಾನದ ಮುಖ್ಯ ಪ್ರವೇಶದಲ್ಲಿ ನಿಮ್ಮ ಓಣಿಯಲ್ಲಿ ಹಾದು ಹೋಗುವ ಸಾಮಾನ್ಯರು ಗುರಿತಿಸುವ ಹಾಗೆ 3″ x 8″ ಹಿತ್ತಾಳೆ ಸೀಟನಲ್ಲಿ ( ) ಮುದ್ರಿಸಿ ತಮ್ಮ ಸಂಘಟನೆಯ ನಿಭಂದನೆಗಳಿಗೆ ಬದ್ಧನಾಗಿದ್ದೇನೆ ಎಂದು ಪ್ರಮಾಣಿಕರಿಸಿ ನಿಗದಿತ ಶುಲ್ಕ ಪಾವತಿಸಿ ಬೇರೆಯವರು ಕೀಳದ ಹಾಗೆ ತಮ್ಮ ದ್ವಾರಕ್ಕೆ ಲಗತಿಸಬೇಕು. ಆವಾಗಲೆನೇ ಜನಸಾಮಾನ್ಯರಿಗೆ ಪರಿಚಯವಾಗುವುದು. ದ್ವಂದ ನಿಲುವು ಹೊಂದಿದ ಸಾಕಷ್ಟು ಜನ ಗೋಸುಂಬೆ ತರಹ ಬಣ್ಣಬದಲಾಯಿಸುವರ ಸಂಖೆ ಕಡಿಮೆಯಾದಿತು. ನಮ್ಮವರೆಂದು ಗುರುತಿಸಿ ಮನಬಿಚ್ಚಿ ಮಾತಾಡುವರ ಸಂಖೆ ಹೆಚ್ಚಾದಿತು, ನಮ್ಮ ನಮ್ಮವರಲ್ಲಿ ಆತ್ಮೀಯತೆ, ವಿಶ್ವಾಸ ಹೆಚ್ಚಾದೀತು ಎಂದು ನನ್ನ ಅನಿಸಿಕೆ.

Leave a Reply

Your email address will not be published. Required fields are marked *