ಕಲಬುರ್ಗಿ:
ಅಲ್ಲಮಪ್ರಭುಗಳ ವ್ಯಕ್ತಿತ್ವ ಮಾಯೆ ಮೋಹಗಳಿಲ್ಲದ ಮೇರು ವ್ಯಕ್ತಿತ್ವವಾಗಿತ್ತು. ಜಗತ್ತಿನ ಎಲ್ಲ ಯೋಗಸಿದ್ಧಿಗಳನ್ನು ಅವರು ಸಾಧಿಸಿದ್ದರು. ಬಸವಣ್ಣನವರ ದೃಷ್ಟಿಯಲ್ಲಿ ಅಲ್ಲಮ ಕತ್ತಲೆಯನ್ನು ನುಂಗಿದ ಬೆಳಕಿನಂತಿದ್ದರು, ಕಮಲದಂತಿದ್ದರು ಎಂದು ಬೀದರಿನ ಶರಣತತ್ವ ಚಿಂತಕಿ ಸುವರ್ಣ ಚಿಮಕೋಡ ಹೇಳಿದರು.
ಬಸವ ಸಮಿತಿ ಅನುಭವ ಮಂಟಪ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದಲ್ಲಿ ಲಿಂಗೈಕ್ಯ ನೀಲಮ್ಮ ಶರಣಪ್ಪ ವಾಲಿ ಅವರ ಸ್ಮರಣಾರ್ಥ ಜರುಗಿದ ಅರಿವಿನ ಮನೆ 892ನೆಯ ದತ್ತಿ ಕಾರ್ಯಕ್ರಮದಲ್ಲಿ ಅನುಭಾವ ನೀಡಿದರು.
ತನುವ ತೋಂಟವ ಮಾಡಿ ವಚನದಲ್ಲಿ ಅಲ್ಲಮಪ್ರಭುಗಳು ತನುಮನ ಭಾವ ಶುದ್ದಿಯ ಕುರಿತು ಹೇಳುತ್ತಾರೆ. ವ್ಯಕ್ತಿ ತನ್ನೊಳಗಿನ ಅರಿವು ಜಾಗೃತ ಮಾಡಿಕೊಳ್ಳಬೇಕು. ಲಿಂಗಯೋಗ ಮಾಡುವ ಶರೀರ ಚೆನ್ನಾಗಿಟ್ಟುಕೊಳ್ಳಬೇಕು ಮತ್ತು ಯೌವ್ವನದಲ್ಲಿ ಇದ್ದಾಗಲೇ ಲಿಂಗಯೋಗ ಮಾಡಿ ಪರಮಾತ್ಮನನ್ನು ಅರಿತುಕೊಳ್ಳಬೇಕು.
ಕೂಡಲಸಂಗಮದೇವ ಕೊಟ್ಟಿರುವ ಪ್ರಸಾದ ಶರೀರವನ್ನು ಹಾಳು ಮಾಡಿಕೊಳ್ಳಬಾರದು. ಅದರ ಪೋಷಣೆ ಮಾಡಬೇಕು. ತನುವನ್ನು ತೋಟ ಮಾಡಿ ಮನವನ್ನು ಗುದ್ದಲಿಯಾಗಿಸಿ ಶರೀರವೆಂಬ ಹೊಲ ಹದ ಮಾಡಬೇಕು.
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಂಗಳ ಚೇಷ್ಟೆಗೆ ಮನವೆ ಬೀಜವಾಗಿದೆ. ಆದ್ದರಿಂದ ಮನವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಮನಸ್ಸು ಸಾಧಕನ ಹತೋಟಿಯಲ್ಲಿದ್ದರೆ ತನುವಿನ ತೋಟ ಸುಂದರವಾಗುತ್ತದೆ. ಮನುಷ್ಯನಿಗೆ ಜೀವನದಲ್ಲಿ ಅಹಂಕಾರದ ಭ್ರಾಂತಿಗಳಿರುತ್ತವೆ. ಅವುಗಳನ್ನು ಕಿತ್ತು ತೆಗೆಯಬೇಕು ಎಂದು ಶರಣರು ಹೇಳಿದ್ದಾರೆಂದು ನುಡಿದರು .
ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸ್ವತಿ ಕೂಬಾ, ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ, ಉದ್ಯಮಿ ರಾಜೇಂದ್ರ ಕೂಬಾ, ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ, ದತ್ತಿ ದಾಸೋಹಿಗಳಾದ ಡಾ.ಕೆ. ಎಸ್. ವಾಲಿ, ವಿಶ್ವನಾಥ ಮಂಗಲಗಿ, ಶರಣಗೌಡ ಪಾಟೀಲ ಪಾಳ, ಉದ್ದಂಡಯ್ಯ ಭಾಗವಹಿಸಿದ್ದರು.
