ಶುಲ್ಕ ಭರಿಸಲಾಗದವರಿಗೆ ಉಚಿತ; ‘ಮುಕ್ತಿ ನಿಧಿ’ ಸ್ಥಾಪಿಸಲು ಸಿದ್ದರಾಮ ಶ್ರೀಗಳಿಂದ ಕರೆ
ಬೆಳಗಾವಿ
ಬಸವ ಕಾಯಕ ಜೀವಿಗಳ ಸಂಘ ಹಾಗೂ ರಾಷ್ಟ್ರೀಯ ಬಸವದಳ, ಬೆಳಗಾವಿ, ಇವರ ಆಶ್ರಯದಲ್ಲಿ 28 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶವ ಸಾಗಿಸುವ ಹವಾ ನಿಯಂತ್ರಿತ ‘ಮುಕ್ತಿ ವಾಹನ’ದ ಲೋಕಾರ್ಪಣೆ ನಗರದ ಮಹಾಂತ ಭವನದಲ್ಲಿ ಮಂಗಳವಾರ ನಡೆಯಿತು.

ಸಾನಿಧ್ಯ ವಹಿಸಿ ಗದಗ ತೋಂಟದಾರ್ಯ ಮಠದ ಪೂಜ್ಯ ಡಾ. ಸಿದ್ದರಾಮ ಮಹಾಸ್ವಾಮಿಗಳು ಮಾತನಾಡುತ್ತ ಎಲ್ಲರ ಸಹಯೋಗ, ಸಹಕಾರದಿಂದ ಈ ಕಾರ್ಯ ಜರುಗಿರುವುದು ವಿಶೇಷ. ಇಡೀ ಕರ್ನಾಟಕದಲ್ಲಿ ಒಂದು ಹೊಸ ಪರಿಕಲ್ಪನೆ ಕೊಡುವಂಥ ಮೊಟ್ಟಮೊದಲ ಮುಕ್ತಿ ವಾಹನ ಬಸವಣ್ಣನವರ ಐಕ್ಯ ಮಂಟಪ ಮಾದರಿಯಲ್ಲಿ ನಿರ್ಮಾಣವಾಗಿದೆ. ಈ ಯುವಕರು ಮಾದರಿ ಆಗುವಂಥ ಕಾರ್ಯ ಮಾಡಿದ್ದಾರೆ, ಎಂದು ಹೇಳಿದರು.

ಹಣಕಾಸಿನ ಕೊರತೆ ಇರುವ ಕುಟುಂಬದವರಿಗೆ ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ‘ಮುಕ್ತಿ ನಿಧಿ’ ಸಹಾಯಧನ ಕೊಡುವಂತ ವ್ಯವಸ್ಥೆ ಮುಂದಿನ ದಿನಗಳಲ್ಲಿ ಆಗಲಿ. ಅದಕ್ಕೆ ಬೇಕಾದ ಠೇವಣಿಯನ್ನು ಇಡುವಂತಹ ಒಂದು ವ್ಯವಸ್ಥೆ ರೂಪಗೊಳ್ಳಲಿ ಎಂಬುದು ನಮ್ಮ ಆಶಯ ಎಂದು ಸಿದ್ಧರಾಮ ಶ್ರೀಗಳು ಹೇಳಿದರು.

ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಬೆಳಗಾವಿ ಕಾರಂಜಿಮಠದ ಪೂಜ್ಯ ಗುರುಸಿದ್ಧ ಸ್ವಾಮೀಜಿ, ಹುಕ್ಕೇರಿ ಶ್ರೀಗುರು ಶಾಂತೇಶ್ವರ ಸಂಸ್ಥಾನದ ಪೂಜ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಯಮಕನಮರಡಿ ಶೂನ್ಯ ಸಂಪಾದನಾ ಪೀಠ ಹುಣಸಿಕೊಳ್ಳ ಮಠದ ಪೂಜ್ಯ ಸಿದ್ಧಬಸವ ಸ್ವಾಮೀಜಿ ಅನುಭಾವ ನೀಡಿದರು. ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೊಳಿ ಅತಿಥಿಯಾಗಿ ಮಾತನಾಡಿದರು.

ಜಾತಿ, ಧರ್ಮ ಎನ್ನದ ಸಂಘಟನೆ ಬಸವ ಕಾಯಕ ಜೀವಿಗಳ ಸಂಘವಾಗಿದೆ. ಈ ಸಂಘಟನೆಯ ಯುವಕರು ಒಂದು ಉತ್ತಮ ಸಮಾಜ ಕಟ್ಟಬಲ್ಲರು. ಇವರನ್ನು ಪ್ರೋತ್ಸಾಹಿಸಿ, ಬೆನ್ನುತಟ್ಟುವ ಕೆಲಸವನ್ನು ಲಿಂಗಾಯತ ಸಮಾಜ ಮಾಡಬೇಕು, ಆ ಮೂಲಕ ಬಸವಣ್ಣನವರ ಆಶಯದ ಸಮಾಜ ಕಟ್ಟುವ ಕೆಲಸ ಆಗಬೇಕು, ಎಂದು ಶಂಕರ ಗುಡಸ ಮಾತನಾಡಿದರು.

ಅಧ್ಯಕ್ಷತೆಯನ್ನು ಬಸವ ಕಾಯಕ ಜೀವಿಗಳ ಸಂಘದ ಅಧ್ಯಕ್ಷ ಸೂರ್ಯಕಾಂತ ಭಾಂವಿ, ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ಅಶೋಕ ಬೆಂಡಿಗೇರಿ ವಹಿಸಿದ್ದರು.
ಈ ಕಾರ್ಯದ ದಾಸೋಹಿಗಳು, ಹಲವಾರು ಸಮಾಜದ ಮುಖಂಡರುಗಳಿಗೆ ಸತ್ಕರಿಸಲಾಯಿತು.

ಮುಕ್ತಿ ವಾಹನ ಬೇಕಾದವರು ಅದರ ನಿರ್ವಹಣಾ ವೆಚ್ಚವನ್ನು ಮಾತ್ರ ಭರಿಸಬೇಕಾಗುತ್ತದೆ. ಅದರ ಶುಲ್ಕ 2001/- ಎಂದು ನಿಗದಿಪಡಿಸಲಾಗಿದೆ. ಶುಲ್ಕ ಭರಿಸಲಾಗದ ಬಡವರಿಗೆ ಉಚಿತ ನೀಡಲಾಗುವದು. ಜೂನ್ 18, 2025 ರಿಂದ ಸೇವೆಗೆ ಲಭ್ಯವಿರುತ್ತದೆ. ಬಸವ ಕಾಯಕ ಜೀವಿಗಳ ಸಂಘ, ರಾಷ್ಟ್ರೀಯ ಬಸವದಳ ಮೊ. ಸಂಖ್ಯೆ 854880011, ವಿಶ್ವಗುರು ಬಸವ ಮಂಟಪ, ಮಹಾಂತೇಶ ನಗರ, ಬೆಳಗಾವಿ ಇವರನ್ನು ಸಂಪರ್ಕಿಸಬಹುದು ಎಂದು ಸಂಘಟಕರು ಘೋಷಿಸಿದರು.

ಸಂಜಯ ಭಾಂವಿ, ಮಹಾಂತೇಶ ಗುಡಸ, ರತ್ನಪ್ರಭಾ ಬೆಲ್ಲದ, ಈರಣ್ಣ ದೇಯಣ್ಣವರ, ಕೆ. ಶರಣಪ್ರಸಾದ, ಸಂತೋಷ ಗುಡಸ, ಆನಂದ ಗುಡಸ, ಸಲೀಂ ನದಾಫ್, ಶರಣು ಲಿಂಗಾಯತ, ರವಿ ಪಾಟೀಲ, ಸುನಿತಾ ಪಾಟೀಲ, ಚಂದ್ರಶೇಖರ ಬೆಂಬಳಗಿ, ರಾಜಶೇಖರ ಡೋಣಿ, ಹನುಮಂತ ಕೊಂಗಾಳೆ, ಲಕ್ಷ್ಮೀ ರಾಠೋಡ, ಸವಿತಾ ಪಾಟೀಲ, ಮಹಾಂತೇಶ ತೋರಣಗಟ್ಟಿ ಮತ್ತಿತರರು ವೇದಿಕೆ ಮೇಲಿದ್ದರು.
ಇಂಥ ವ್ಯವಸ್ಥೆ ಎಲ್ಲಾ ನಗರಗಳಲ್ಲೂ ಆರಂಭವಾಗಲಿ