‘ಭಾರತದ ಭಕ್ತಿ ಚಳುವಳಿಗಿಂತ ಬಿನ್ನವಾಗಿದ್ದ ಕರ್ನಾಟಕದ ವಚನ ಚಳುವಳಿ’

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರ್ಗಿ

ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ 26ನೇ ದಿನದಂದು ಬೆಳಗಾವಿಯ ಬಸವ ಬೆಳವಿಯ ಚರಂತೇಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಮಾತನಾಡಿದರು.

ಕೇಂದ್ರ ಸರ್ಕಾರ ಭಾರತ ವಿವಿಗಳಲ್ಲಿ ಅಧ್ಯಯನ ಪೀಠ ಸ್ಥಾಪಿಸಿ ಶರಣರನ್ನು ಭಕ್ತಿ ಚಳುವಳಿಯ ವಾರಸುದಾರರೆಂದು ಬಿಂಬಿಸಿದರೆ ಶರಣ ಸಿದ್ಧಾಂತದ ಕೊಲೆ ಮಾಡಿದಂತೆ. ಶರಣ ಸಿದ್ಧಾಂತ ಸ್ವತಂತ್ರ ಧರ್ಮ ಸಿದ್ಧಾಂತವಾಗಿದೆ.

ಭಾರತದ ಭಕ್ತಿ ಚಳುವಳಿ ಕರ್ನಾಟಕದ ವಚನ ಚಳುವಳಿ ಎರಡು ಬೇರೆ ಬೇರೆಯಾಗಿವೆ. ವಾರಕಾರಿ ಚಳುವಳಿ ಬರೀ ಭಕ್ತಿಯನ್ನು ಹೇಳುತ್ತದೆ, ವಚನ ಚಳುವಳಿ ವೈಚಾರಿಕ ಭಕ್ತಿ ಆರಾಧನೆಯನ್ನು ಹೇಳುತ್ತದೆ.

ದಾಸ ಸಾಹಿತ್ಯಕ್ಕೂ ವಚನ ಚಳುವಳಿಗೂ ಬಹಳಷ್ಟು ವ್ಯತ್ಯಾಸವಿದೆ. ಇಹದ ಬದುಕನ್ನು ಸುಧಾರಿಸಲು ಶರಣರು ಚಿಂತಿಸಿದರೆ ಹೊರತಾಗಿ ದ್ವೈತ ಅದ್ವೈತ ವಿಶಿಷ್ಟಾದ್ವೈತದ ಬಗ್ಗೆ ಅವರು ತಲೆಕೆಡಿಸಿಕೊಳ್ಳಲಿಲ್ಲ. ಮಹಾರಾಷ್ಟ್ರದ ವಾರಕಾರಿ ಚಳುವಳಿಯ ಅಭಂಗಗಳು ವೇದ ಆಗಮ ಒಪ್ಪುತ್ತವೆ, ಕರ್ನಾಟಕದ ವಚನಕಾರರು ವೇದ ಆಗಮಗಳನ್ನು ಖಂಡಿಸಿದರು, ಎಂದು ಶರಣಬಸವ ಸ್ವಾಮೀಜಿ ನುಡಿದರು.

ವಚನ ಸಾಹಿತ್ಯದ ಮೇಲೆ ಇಂದು ನಡೆಯುತ್ತಿರುವ ಅಧ್ಯಯನದ ಬಗ್ಗೆಯೂ ವಿವರಿಸಿದರು.

ಧಾರವಾಡದ ವಿಶ್ವವಿದ್ಯಾಲಯದ ಬಸವ ಪೀಠವು ವಚನ ಸಾಹಿತ್ಯದ ಕುರಿತಾದ ಪ್ರಾಮಾಣಿಕ ಅಧ್ಯಯನ ಮಾಡಿದೆ. ಫ.ಗು. ಹಳಕಟ್ಟಿ, ಉತ್ತಂಗಿ ಚನ್ನಪ್ಪ, ಧಾರವಾಡದ ಮೃತ್ಯುಂಜಯ ಅಪ್ಪಗಳವರು ವಚನ ಸಾಹಿತ್ಯವನ್ನು ಉಳಿಸಿ ಬೆಳೆಸಿದರು. ಈ ಪರಂಪರೆಯಲ್ಲಿ ಪ್ರಸ್ತುತ ಸಂದರ್ಭದಲ್ಲಿ ಬಸವ ಸಮಿತಿಯು ಶರಣ ಸಿದ್ದಾಂತವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ.

ಚಿತ್ರದುರ್ಗದ ಜಯದೇವ ಜಗದ್ಗುರುಗಳು ವರ್ಷದಲ್ಲಿ 11 ತಿಂಗಳು ಜಂಗಮ ಸಂಚಾರ ಮಾಡಿ ನಾಡಿನಾದ್ಯಂತ ಬಸವ ಸಿದ್ಧಾಂತ ಪಸರಿಸಿದರು. ಹಾನಗಲ್ ಕುಮಾರಸ್ವಾಮಿ, ಮುರಗೋಡ ಮಹಾಂತ ಅಜ್ಜ, ಬಂತನಾಳದ ಗುರುಗಳು ಬಸವ ತತ್ವವನ್ನು ಮನೆ ಮನೆಗೆ ತಲುಪಿಸಿದರು. ಧಾರವಾಡದ ವಿವಿ ಬಸವ ಅಧ್ಯಯನ ಪೀಠ ಸ್ಥಾಪಿಸಲು ಬಂತನಾಳದ ಅಜ್ಜನವರು ತಮ್ಮ ಶತಾಯುಷ್ಯದ ಸಂಭ್ರಮದ ಆಚರಣೆಗೆ ಭಕ್ತರು ಕೂಡಿಸಿಟ್ಟ 3 ಲಕ್ಷ ರೂಪಾಯಿಗಳನ್ನು 1967 ರಲ್ಲಿ ನೀಡಿ ಅದನ್ನು ಆರಂಭಿಸಿದರು.

ಸಂ.ಶಿ. ಭೂಸನೂರಮಠರ ಭವ್ಯಮಾನವ ಅತ್ಯಂತ ಮೌಲಿಕ ಕೃತಿಯಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ ಧಾರವಾಡದ ವೀರಣ್ಣ ರಾಜೂರ, ಕಲಬುರ್ಗಿಯ ವೀರಣ್ಣ ದಂಡೆ ಅಂತವರು ಶರಣ ಸಾಹಿತ್ಯ ರಚನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಶ್ವವಿದ್ಯಾಲಯಗಳು ಬಸವ ಸಿದ್ಧಾಂತ ಅಧ್ಯಯನ ಮಾಡುತ್ತಿದ್ದರೂ ಕೂಡ ಅದಕ್ಕೆ ಮಿತಿ ಇದೆ, ಅವು ಜನ ಸಮೂಹವನ್ನು ತಲುಪಲು ಆಗುತ್ತಿಲ್ಲ. ಪದವಿ ಪಡೆಯಲು ಪಿಎಚ್ಡಿ ಸಂಶೋಧನಾ ಅಧ್ಯಯನ ಮಾಡಿದರೆ ಸಾಲದು, ಪ್ರಾಮಾಣಿಕ ಅಧ್ಯಯನ ಮತ್ತು ಅನುಷ್ಠಾನ ನಡೆದಾಗ ಮಾತ್ರ ಬಸವ ಸಿದ್ದಾಂತ ಉಳಿಯಲು ಸಾಧ್ಯವಿದೆ, , ಎಂದು ಹೇಳಿದರು.

ಇಂದಿನ ಪ್ರಸಾದ ದಾಸೋಹಿಗಳನ್ನು ಸತ್ಕರಿಸಲಾಯಿತು. ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ, ಶರಣಗೌಡ ಪಾಟೀಲ ಪಾಳಾ, ಡಾ . ಕೆ ಎಸ್ ವಾಲಿ, ಬಂಡಪ್ಪ ಕೇಸುರ, ಚಾಮರಸ ಸಂಗಣ್ಣ ಸತ್ಯಂಪೇಟ, ನಾಗಮ್ಮ ಸುರಪುರ, ಚಂದ್ರಮಪ್ಪ ಹಡಪದ ಅವರು ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *