ಭಾಲ್ಕಿ
ಪಟ್ಟಣದ ಚನ್ನಬಸವಾಶ್ರಮದಲ್ಲಿ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಜಯಂತಿ ಹಾಗೂ ೩೧೬ ನೆಯ ಶರಣ ಸಂಗಮ ಜರುಗಿತು.
ದಿವ್ಯಸಾನಿಧ್ಯ ವಹಿಸಿದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು, ಮಹಾತ್ಮ ಬಸವಣ್ಣನವರ ಸಹೋದರಿಯಾದ ಕ್ರಾಂತಿಮಾತೆ ಅಕ್ಕನಾಗಮ್ಮತಾಯಿ ಹಾಗೂ ಶಿವಸ್ವಾಮಿ ದಂಪತಿಗಳ ಉದರದಲ್ಲಿ ಚನ್ನಬಸವಣ್ಣನವರ ಜನನವಾಯಿತು. ಅವರು ಜನಿಸಿದ್ದು ಬೆಳಕಿನ ಹಬ್ಬ ದೀಪಾವಳಿ ಪಾಡ್ಯದಂದು. ಚನ್ನಬಸವಣ್ಣ ಗರ್ಭದಲ್ಲಿರುವಾಗಲೆ ಎಂಟನೆ ತಿಂಗಳಿಗೆ ಗುರುಬಸವಣ್ಣನವರಿಂದ ಲಿಂಗಧಾರಣೆ ಸಂಸ್ಕಾರ ನಡೆಯಿತು.
ಚನ್ನಬಸವಣ್ಣನವರ ಜನನದಕ್ಕಿಂತ ಮುಂಚೆಯೇ ಬಸವಣ್ಣನವರ ಕ್ರಾಂತಿ ಪ್ರಾರಂಭವಾಗಿತ್ತು. ಅನುಭವಮಂಟಪ ರೂಪ ತಾಳಿತ್ತು. ಶರಣ ಸಂಕುಲ ಒಗ್ಗೂಡಿತ್ತು. ಚನ್ನಬಸವಣ್ಣನ ಬಾಲ್ಯ ಜೀವನ ಶರಣರ ಸಂಗದಲ್ಲಿಯೇ ಕಳೆಯಿತು. ಅದಕ್ಕಾಗಿ ಅವರಲ್ಲಿ ಸಹಜವಾಗಿಯೇ ಹೊಸ ಚಿಂತನೆಗಳನ್ನು ಅಂಕುರಿಸಿದವು.
ಅವರು ವಯಸ್ಸಿನಲ್ಲಿ ಕಿರಿಯರಾದರು ಜ್ಞಾನ ಸಂಪಾದನೆಯಲ್ಲಿ ಹಿರಿಯರಾಗಿ ಮಹಾಜ್ಞಾನಿಯಾದರು. ಅದಕ್ಕೆ ಅಲ್ಲಮಪ್ರಭು ಹೇಳುತ್ತಾರೆ, “ಕಿರಿಯದಾದಡೇನು? ಆದಿ ಅನಾದಿ ಇಲ್ಲದಂದು, ಅಜಾಂಡ ಬ್ರಹ್ಮಾಂಡ ಕೋಟಿಗಳುದಯವಾಗದಂದು, ಗುಹೇಶ್ವರ ಲಿಂಗದಲ್ಲಿ ನಿನೊಬ್ಬನೆ ಮಹಾಜ್ಞಾನಿ ಎಂಬುದು ಕಾಣಬಂದಿತ್ತು ಕಾಣಾ ಚನ್ನಬಸವಣ್ಣಾ”. ಶರಣ ಸಂಕುಲದಲ್ಲಿ ಚನ್ನಬಸವಣ್ಣನವರ ವ್ಯಕ್ತಿತ್ವವೇ ಅತ್ಯಂತ ಘನವಾಗಿತ್ತು. ಅವರ ಘನ ವ್ಯಕ್ತಿತ್ವ ಅನೇಕ ಶರಣರು ತಮ್ಮ ವಚನದಲ್ಲಿ ಚಿತ್ರಿಸಿದ್ದಾರೆ ಎಂದು ನುಡಿದರು. ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ದಿವ್ಯಸಮ್ಮುಖ ವಹಿಸಿದ್ದರು.

ಅಧ್ಯಕ್ಷತೆ ಮಡಿವಾಳಯ್ಯ ಹಿರೇಮಠ ಅವರು ವಹಿಸಿದ್ದರು. ಚಂದ್ರಕಾAತ ಬಿರಾದಾರ ಅವರಿಂದ ಅನುಭಾವ ಜರುಗಿತು. ಮುಖ್ಯ ಅತಿಥಿಗಳಾಗಿ, ಚಂದ್ರಕಾಂತ ಬಿರಾದಾರ ನಾವದಗಿ, ಶಿವಕುಮಾರ ಕಮಠಾಣೆ, ಶಿವರಾಜ ಯಾಲಾ, ನಾಮದೇವ ಗೋಖಲೆ, ಸಿದ್ದು ಸಂಜುಕುಮಾರ ಘಾಳೆ, ಡಾ.ಭಾಗ್ಯಲಕ್ಷಿ ನರಸಗೊಂಡ ಅವರು ಆಗಮಿಸಿದ್ದರು.
ವಿಶ್ವನಾಥ ಪಕ್ಕಾ ಅವರಿಂದ ವಚನ ಪಠಣ ನಡೆಯಿತು. ಅಶೋಕ ಬಿರಾದಾರ ಅವರು ಬಸವಗುರುಪೂಜೆ ಮಾಡಿದರು. ಶಿವರಾಜ ಪಾಟೀಲ್ ಮತ್ತು ಶ್ರೀದೇವಿ ಶಾಂತಯ್ಯ ಸ್ವಾಮಿ ಅವರಿಂದ ವಚನ ಸಂಗೀತ ನಡೆಯಿತು. ದೀಪಕ ಠಮಕೆ ನಿರೂಪಿಸಿದರು. ಶರಣೆ ಕರುಣಾ ಶರಣ ಶಿವಕುಮಾರ ಕಮಠಾಣೆ ಅವರಿಂದ ದಾಸೋಹ ಸೇವೆ ನಡೆಯಿತು. ಅಕ್ಕನಬಳಗದ ಶರಣೆಯರು ಹಾಗೂ ಬಸವಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
