ಬೀದರ:
ದೇವನು ಸರ್ವಾಂತರ್ಯಾಮಿ. ಸರ್ವಶಕ್ತ. ನಿರಾಕಾರ ನಿರ್ಗುಣನಾದ ಪರಮಾತ್ಮನನ್ನು ಅರಿಯಬೇಕಾದರೆ ನಮ್ಮ ಮನಸ್ಸು ನಿರ್ಮಲವಾಗಬೇಕು. ತಿಳಿಯಾದ ನೀರಿನಲ್ಲಿ ನಮ್ಮ ಮುಖ ಕಾಣುವಂತೆ, ಶುದ್ಧವಾದ ಮನದಲ್ಲಿ ಮಾತ್ರ ದೇವನು ನೆಲೆಸುತ್ತಾನೆ. ದೇವನನ್ನು ಕಾಣಬೇಕಾದರೆ ದೇಹ ಭಾವ ಅಳಿಯಬೇಕು ಎಂದು ಲಿಂಗಾಯತ ಮಹಾಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಪ್ರಭುದೇವ ಮಹಾಸ್ವಾಮೀಜಿ ನುಡಿದರು.
ಮಾಸಿಕ ಶರಣ ಸಂಗಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಮಾನವನ ನಿಜವಾದ ಶೃಂಗಾರ ಯಾವುದೆಂದರೆ? ಕಣ್ಣುಗಳಿಂದ ಗುರು ಹಿರಿಯರ ನೋಡುವುದು. ಕಿವಿಗಳಿಂದ ಶರಣರ ಅನುಭಾವದ ನುಡಿಗಳ ಕೇಳುವುದು. ಕೈಗಳಿಂದ ಸತ್ಪಾತ್ರಕ್ಕೆ ದಾಸೋಹಗೈಯ್ಯುವುದು. ಕಾಲುಗಳಿಂದ ಸತ್ಯದ ದಾರಿಯಲ್ಲಿ ನಡೆಯುವುದು.
ಜೀವಿಸುವ ಜೀವನದ ಶೃಂಗಾರವಾಗುದೆಂದರೆ? ಶರಣರ ಗಣಮೇಳಾಪ ಇದುವೇ ನಿಜವಾದ ಶೃಂಗಾರ. ಆದರೆ ಮಾನವನು ಈ ಶೃಂಗಾರವನ್ನು ಮರೆತು ಭೌತಿಕ ಸುಖದತ್ತ ಸಾಗಿ ದುಃಖವನ್ನೇ ಅನುಭವಿಸುತ್ತಿದ್ದಾನೆ. ದೇವ ಪಥದಿಂದ ದೂರಾಗಿದ್ದಾನೆ.

ದೇವನ ಒಲುಮೆ ಆಗಬೇಕಾದರೆ ಕಾಯ, ವಾಚ, ಮನಸಾ ತ್ರಿಕರಣ ಶುದ್ಧವಾದದಾಗ ಮಾತ್ರ ದೇವನು ತನ್ನೊಳಗೆ ನೆಲೆಸುತ್ತಾನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪರುಷಕಟ್ಟೆ ಚನ್ನಬಸವಣ್ಣ, ನಮ್ಮ ಜೀವನ ಪಾವನವಾಗಬೇಕಾದರೆ ಮನಸು ಹೇಳಿದಂತೆ ನಾವು ಕೇಳಬಾರದು, ನಾವು ಹೇಳಿದಂತೆ ಮನಸ್ಸು ಕೇಳಬೇಕು. ತಾನು ಬಯಸಿದಂತೆ ತನಗೆ ಬೇಕಾದಂತೆ ಯಾರಾದರೂ ನುಡಿದರೆ ಮನವು ಹಿಗ್ಗಿ ನಲಿದಾಡುವುದು. ತನ್ನ ಬಯಕೆಯ ವಿರುದ್ಧವಾಗಿ ಮಾತನಾಡಿದರೆ ಕುಗ್ಗುವುದು. ತನ್ನ ವಿರುದ್ಧ ಸತ್ಯವನ್ನೇ ನುಡಿದರು ಸಹಿಸಲಾರದು. ತನಿಚ್ಛೆಯಂತೆ ನುಡಿದವರನ್ನು ಮಾತ್ರ ಪ್ರೀತಿಸುತ್ತದೆ. ಇದು ಮನದ ಸ್ವಭಾವ. ಹೊಗಳಿಕೆಗೆ ಉಬ್ಬದವರೇ ಇಲ್ಲ. ಇದರಿಂದ ಅಹಂ ಹೆಚ್ಚಾಗುವುದಲ್ಲದೆ ಬೇರೇನು ಸಾಧನೆಯಾಗದು ಎಂದು ತಿಳಿಸಿದರು.
ಓಂಕಾರ ಬಿರಾದರ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಷಟಸ್ಥಲ ಧ್ವಜಾರೋಹಣ ಜೈಕುಮಾರ ಬಿರಾದರ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಧನ್ನುರಾ(ಕೆ) ಗ್ರಾಮದ ನೀಲಮ್ಮನ ಬಳಗದ ನೂತನ ಅಧ್ಯಕ್ಷೆ ಸಂಗೀತಾ ಶಿಖರೇಶ್ವರ ಬಿರಾದರ ಹಾಗೂ ನೀಲಮ್ಮನ ಬಳಗದ ಸರ್ವಸದಸ್ಯರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜಕುಮಾರ ಬಿರಾದರ ವಹಿಸಿದರು. ವಿಜಯಲಕ್ಷ್ಮಿ ರಾಜೋಳೆ ಮುಖ್ಯ ಅತಿಥಿಗಳಾಗಿದ್ದರು.
ಗಂಗಮ್ಮ ಚಂದ್ರಶೇಖರ ಜಗಶೆಟ್ಟೆ ಕಾರ್ಯಕ್ರಮಕ್ಕೆ ದಾಸೋಹಗೈದರು. ನೀಲಾವತಿ ದತ್ತಾತ್ರಿ ಜಗಶೆಟ್ಟಿ ಗುರುಪೂಜೆ ನೆರವೇರಿಸಿದರು. ಗೋದಾವರಿ ರಾಜೋಳೆ ನಿರೂಪಣೆ ಗೈದರು. ಶಾಶ್ವತ್ ಸೋಮನಾಥಪ್ಪ ರಾಜೇಶ್ವರೆ ಸ್ವಾಗತಿಸಿದರು. ಬಾಬುರಾವ ರಾಜೋಳೆ, ಚಂದ್ರಕಾಂತ ಕಣಜೆ, ಸುಭಾಶ ಪತಂಗೆ, ಶಿವರಾಜ ಕನಕಟ್ಟೆ, ಶ್ರೀಮಂತಪ್ಪ ರಾಜೇಶ್ವರೆ ಮತ್ತಿತರರು ಉಪಸ್ಥಿತರಿದ್ದರು.
