ಜಗಳೂರು
ಒಕ್ಕಲುತನದಲ್ಲಿ ದಾಸೋಹ ತತ್ವ ಅಡಗಿದ್ದು, ಪ್ರತಿಯೊಬ್ಬರು ಕಾಯಕ, ದಾಸೋಹ ತತ್ವ ಅಳವಡಿಸಿಕೊಳ್ಳಬೇಕೆಂದು ಬಸವ ಕೇಂದ್ರದ ಮುಖ್ಯಸ್ಥರು, ಶರಣತತ್ವ ಚಿಂತಕರಾದ ಅಶೋಕ ಬರಗುಂಡಿ ಅವರು ಅಭಿಪ್ರಾಯಪಟ್ಟರು.
ಅವರು ಶನಿವಾರ ಜಗಳೂರು ತಾಲೂಕಿನ ದೊಣೆಹಳ್ಳಿ ಗ್ರಾಮದ ಶರಣ ಬಸವೇಶ್ವರ ದಾಸೋಹ ಮಠದ ವತಿಯಿಂದ ಹಮ್ಮಿಕೊಂಡಿರುವ ‘ದಾಸೋಹ ಸಂಸ್ಕೃತಿ ಉತ್ಸವ’ದಲ್ಲಿ ಸಮಗ್ರ ನೀರಾವರಿ ಹಕ್ಕೋತ್ತಾಯ ಸಮಾವೇಶದಲ್ಲಿ ದಿಕ್ಸೂಚಿ ಚಿಂತನೆ ನೀಡುತ್ತಾ ವಿಭೂತಿ, ರುದ್ರಾಕ್ಷಿ ಧರಿಸುವ ನಿಜ ಶರಣ ಸಂಸ್ಕೃತಿ ಕೊಡುವಲ್ಲಿ ದೊಣೆಹಳ್ಳಿ ದಾಸೋಹಮಠ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಹೆಬ್ಬಾಗಿಲಾಗಲಿದೆ.
ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಶರಣ ಸಂಸ್ಕೃತಿಯನ್ನು ಅಳವಡಿಸಿಕೊಂಡು ಪವಿತ್ರ ಭಾವನೆ ಹೊಂದಬೇಕು. ವೈಜ್ಞಾನಿಕ ಮತ್ತು ವೈಚಾರಿಕ ಮೀಮಾಂಸೆ ಚಿತ್ರದುರ್ಗ ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಶಯವಾಗಿತ್ತು. ಸಂವಿಧಾನದ ಆಶಯದಂತೆ ಸಮಾನತೆ, ಜಾತ್ಯತೀತತೆ, ಧರ್ಮನಿರಪೇಕ್ಷತೆ ಉಳಿಯಬೇಕು ಆಗ ಮಾತ್ರ ಈ ನಾಡು ಸಮೃದ್ಧಿಗೊಳ್ಳಲು ಸಾಧ್ಯ ಎಂದು ಹೇಳಿದರು.

ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಎಸ್ ಜೆ ಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರಸ್ವಾಮಿಗಳು, ಮಾದಾರ ಚೆನ್ನಯ್ಯ ಗುರು ಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಗುರುಮಠಕಲ್ಲ ಶಾಂತವೀರ ಮುರಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಶಿರಸಂಗಿಯ ಬಸವ ಮಹಾಂತ ಸ್ವಾಮಿಗಳವರು ಸಮಾರಂಭ ಕುರಿತು ಮಾತನಾಡಿದರು.
ಶಾಸಕರುಗಳಾದ ಚಳ್ಳಕೆರೆಯ ಟಿ. ರಘುಮೂರ್ತಿ, ಜಗಳೂರು ಶಾಸಕ ದೇವೇಂದ್ರಪ್ಪ, ಕೂಡ್ಲಿಗಿ ಶಾಸಕರಾದ ಡಾ. ಶ್ರೀನಿವಾಸ್, ಮಾಜಿ ಶಾಸಕರುಗಳಾದ ಎಸ್. ವಿ. ರಾಮಚಂದ್ರ, ಎಚ್. ಪಿ. ರಾಜೇಶ್ ಸೇರಿದಂತೆ ಸಮಗ್ರ ನೀರಾವರಿ ಬಗ್ಗೆ ಇವರೆಲ್ಲರೂ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯ ರೈತ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪ್ರಗತಿಪರ ರೈತರಾದ ವಕೀಲ ಆರ್. ಓಬಳೇಶ್, ಸತೀಶ್ ಮಲೆಮಾಚಿಕೆರೆ, ಮಹಾಲಿಂಗಪ್ಪ , ಕೂಡ್ಲಿಗಿಯ ಗುರುಸಿದ್ದನಗೌಡ, ಪಾಲವನಹಳ್ಳಿ ಪ್ರಸನ್ನ ಕುಮಾರ್, ಗೌರಿಪುರ ಸತ್ಯಮೂರ್ತಿ ಮತ್ತಿತರರು ನೀರಾವರಿ ಹೋರಾಟದ ಬಗ್ಗೆ ಗಮನ ಸೆಳೆದರು.
ಹಿರಿಯ ಪತ್ರಕರ್ತರು, ದೊಣೆಹಳ್ಳಿ ಶರಣಬಸವೇಶ್ವರ ದಾಸೋಹ ಮಠದ ಅಭಿವೃದ್ಧಿ ಸಮಿತಿ ಸಂಘಟನಾ ಸಂಚಾಲಕ ದೊಣೆಹಳ್ಳಿ ಗುರುಮೂರ್ತಿ, ನಿವೃತ್ತ ಪ್ರಾಂಶುಪಾಲ ಪ್ರಗತಿಪರ ಚಿಂತಕ ಯಾದವರೆಡ್ಡಿ ಮತ್ತಿತರರು ಮಾತನಾಡಿದರು. ನೂರಾರು ಜನ ಶರಣ-ಶರಣೆಯರು ಉಪಸ್ಥಿತರಿದ್ದರು.