ದುಬೈ (ಯುಎಇ):
ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ದುಬೈ ನಗರದಲ್ಲಿ ಬಸವ ಸಮಿತಿ ವತಿಯಿಂದ ಬಸವ ಜಯಂತಿಯನ್ನು ಸಡಗರ ಸಂಭ್ರಮದಿಂದ ಮೇ 18 ಆಚರಿಸಲಾಯಿತು.

ಇಲ್ಲಿನ ಬಸವ ಸಮಿತಿ ಸುಮಾರು 18 ವರ್ಷಗಳಿಂದ ಈ ಮರುಭೂಮಿ ಪ್ರದೇಶದಲ್ಲಿ ಬಸವೇಶ್ವರರ ಕಾಯಕ, ದಾಸೋಹ ತತ್ವಗಳನ್ನು ಪಸರಿಸುತ್ತಾ, ತವರೂರಿನ ಸಂಸ್ಕೃತಿಗಳನ್ನು ಬೆಳೆಸುತ್ತ ಬರುತ್ತಿದೆ.

ಬಸವ ಜಯಂತಿ ಸಮಿತಿ ಅಧ್ಯಕ್ಷ ವೀರೇಶ್ ಪಾಟೀಲ್ ಅವರ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬಸವ ಜಯಂತಿ ಆಚರಣೆಯು ವೈಭವದಿಂದ ಜೆಎಸ್ಎಸ್ ಪ್ರೈವೇಟ್ ಸ್ಕೂಲ್, ಅಲ್ ಸಫಾ ಸಭಾಂಗಣದಲ್ಲಿ ನೆರವೇರಿತು.

ಸಿದ್ಧಗಂಗಾ ಮಠದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು, ದುರುದುಂಡೀಶ್ವರ ಸಿದ್ದಸಂಸ್ಥಾನ ಮಠದ ಪೂಜ್ಯ ನಿಜಲಿಂಗೇಶ್ವರ ಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬಸವ ತತ್ವವನ್ನು ಜಗತ್ತೇ ಒಪ್ಪಿಕೊಂಡಿದೆ, ಬಸವತತ್ವ ಹೇಳೋಣ ಅದರಂತೆ ನಡೆಯೋಣ ಎಂದು ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಈ ಸಮಾರಂಭದಲ್ಲಿ ಕೊಡಗಿನ ಅರಮೇರಿ ಕಳಂಚೇರಿ ಮಠದ ಪೂಜ್ಯ ಶಾಂತ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಬೆಂಗಳೂರಿನ ಗುರುವಣ್ಣದೇವರ ಮಠಾಧ್ಯಕ್ಷರಾದ ಪೂಜ್ಯ ನಂಜುಂಡಸ್ವಾಮಿಗಳು, ಚನ್ನಪಟ್ಟಣದ ಬೇವೂರು ಮಠದ ಪೂಜ್ಯ ಮೃತ್ಯುಂಜಯಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ಸಮಾರಂಭದಲ್ಲಿ ವಿಜಯ ಸಂಕೇಶ್ವರ ಅವರಿಗೆ ಬಸವ ಭೂಷಣ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಕಾನ್ಸುಲೆಟ್ ಜನರಲ್ ಸತೀಶಕುಮಾರ್ ಶಿವನ್ ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದರು.

ಮುಖ್ಯ ಆಕರ್ಷಣೆಯಾಗಿ ಕೋಗಳಿ ಕೊಟ್ರೇಶ್ ಹಾಸ್ಯ ಭಾಷಣ, ಕೊಡ್ಲಿಗಿ ಅವರ ಸಂಗೀತ ಸಂಜೆ ನಡೆಯಿತು.
ಕಿರಿಯರಿಂದ ಹಿರಿಯರವರೆಗೂ ವಚನ ಸಾಹಿತ್ಯ, ಸಂಗೀತ ನೃತ್ಯ ಕಲಾ ವೈಭವವು ಕಾರ್ಯಕ್ರಮಕ್ಕೆ ಮೆರಗು ನೀಡಿತು.

ಕರ್ನಾಟಕದಲ್ಲಿ ನಾಡು ನುಡಿಗಾಗಿ ಸೇವೆ ಸಲ್ಲಿಸಿದ ಗೌರವ ವ್ಯಕ್ತಿಗಳನ್ನು ಗುರುತಿಸಿ ಬಸವ ಭೂಷಣ ಪ್ರಶಸ್ತಿ ಪ್ರದಾನ ಮಾಡಿ ಅವರಿಗೆ ಹಸಿರು ಸಸಿಗಳನ್ನು ಕೊಟ್ಟು ಪ್ರಕೃತಿ ಪ್ರೇಮಿಸುವದು ಎಲ್ಲರಿಗೂ ಮಾದರಿಯಾಗಿದೆ.
ಯುಎಇ ಬಸವ ಸಮಿತಿಯ ಬಸವ ಜಯಂತಿ ಶರಣ ಸಂಸ್ಕೃತಿಯನ್ನು ಪಸರಿಸುತ್ತಿದೆ ಎಂದು ಯುಎಇ ಬಸವ ಸಮಿತಿ ದುಬೈನ ಅಧ್ಯಕ್ಷ ಶರಣ ವೀರೇಶ ಪಾಟೀಲ ಈ ಸಂದರ್ಭದಲ್ಲಿ ತಿಳಿಸಿದರು.
ಸಮಾರಂಭದಲ್ಲಿ ಯುಎಇ ಬಸವ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.