ಬೆಂಗಳೂರು
ರಾಷ್ಟ್ರೀಯ ಬಸವದಳದಿಂದ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗುರು ಬಸವ ಮಂಟಪದ ಉದ್ಘಾಟನೆ ರವಿವಾರ ನೆರವೇರಿತು.

ಷಟಸ್ಥಲ ಧ್ವಜಾರೋಹಣ ಮಾಡಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶರಣ ಶಿವಾನಂದ ಜಾಮದಾರ ವಚನ ಸಾಹಿತ್ಯ ಇಂದಿಗೂ ಉಳಿಯಲು ಕಾರಣ ಫ.ಗು. ಹಳಕಟ್ಟಿಯವರು, ಹರ್ಡೇಕರ್ ಮಂಜಪ್ಪ ಮತ್ತು ಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಪೂಜ್ಯ ಮಾತೆ ಮಹಾದೇವಿಯವರ ಕಾರಣದಿಂದ ಉಳಿದಿದೆ ಎಂದು ಹೇಳಿದರು.

ಪೂಜ್ಯದ್ವಯರು ಐದು ದಶಕಗಳ ಕಾಲ ಬಸವತತ್ವ ಪ್ರಚಾರ ಮಾಡಿದ್ದಲ್ಲದೆ ಬಸವತತ್ವ ಶಾಶ್ವತವಾಗಿ ಉಳಿಸಿ ಬೆಳೆಸಲು ರಾಷ್ಟ್ರೀಯ ಬಸವದಳ ಎಂಬ ಬೃಹತ್ ಸಂಘಟನೆಯನ್ನು ಕಟ್ಟಿದರು ಮತ್ತು ಬಸವಧರ್ಮ ಸಂಸ್ಕಾರ ಪಡೆದುಕೊಳ್ಳಲು ಬಸವ ಮಂಟಪಗಳನ್ನು ಕಟ್ಟಿದರು. ಹೀಗಾಗಿ ಬಸವ ತತ್ವ ಸಂಸ್ಕಾರ ನೀಡುವಲ್ಲಿ ಬಸವ ಮಂಟಪಗಳ ಪಾತ್ರ ಹಿರಿದು ಎಂದು ಅಭಿಪ್ರಾಯಪಟ್ಟರು.

ಬಸವತತ್ವದಡಿಯಲ್ಲಿ ಈಗ ನೂರಾರು ಸಂಘಟನೆಗಳಾಗಿವೆ, ಆ ಸಂಘಟನೆಗಳೆಲ್ಲ ಮತ್ತೊಮ್ಮೆ ಒಂದಾಗಿ ಮಾನ್ಯತೆಗಾಗಿ ಶ್ರಮಿಸಿದರೆ ಆದಷ್ಟು ಬೇಗನೆ ಧರ್ಮದ ಮಾನ್ಯತೆ ದೊರೆಯಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಬಿ. ಶಿವಣ್ಣ ಮಾತನಾಡಿ ಬಸವ ಮಂಟಪದ ಉದ್ಧೇಶ ಬಸವತತ್ವ ಸಂದೇಶವನ್ನು ಸಾರುವುದೇ ಆಗಿದೆ. ಸಮಾಜದ ಅನೇಕ ಸಮಸ್ಯೆಗಳಿಗೆ ಬಸವತತ್ವದಲ್ಲಿ ಪರಿಹಾರವಿದೆ, ರಾಷ್ಟ್ರೀಯ ಬಸವದಳ ಸಂಘಟನೆಯ ಕಾರ್ಯಗಳಿಗೆ ಮತ್ತು ಆನೇಕಲ್ ಭಾಗದಲ್ಲಿ ಬಸವತತ್ವ ಪ್ರಚಾರ ಮಾಡುವ ಯಾವುದೇ ಬಸವಪರ ಸಂಘಟನೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತೇನೆ ಎಂದರು.
ದಿವ್ಯ ನೇತೃತ್ವ ವಹಿಸಿದ್ದ ಚಿಗರಳ್ಳಿ ಮರುಳ ಶಂಕರದೇವ ಪೀಠದ ಪೂಜ್ಯ ಶ್ರೀ ಸಿದ್ಧಬಸವ ಕಬೀರ ಸ್ವಾಮಿಗಳು ಮಾತನಾಡಿ, ಮಾತಾಜಿಯವರು ಅದ್ಭುತ ಸಂಘಟಕರಾಗಿದ್ದರು, ಅವರ ಪ್ರವಚನ ಕೇಳಿ ನಾನು ಸರಕಾರಿ ಹುದ್ದೆ ತೊರೆದು ಬಸವ ತತ್ವ ಮಾಡುವ ಜಂಗಮನಾದೆ.
ಅವರಲ್ಲಿ ಬಸವತತ್ವ ನಿಷ್ಟೆ ಪ್ರಬಲವಾಗಿತ್ತು. ಇಂದು ಯಾವ ಸಂಘಟನೆಗಳು ರಾಷ್ಟ್ರೀಯ ಬಸವದಳದಷ್ಟು ಗಟ್ಟಿ ಸಂಘಟನೆಗಳಾಗಿ ಉಳಿದಿಲ್ಲ, ಆ ಗಟ್ಟಿತನ ಬರಲು ಮಾತಾಜಿಯವರ ಬಸವತತ್ವ ನಿಷ್ಟೆಯೇ ಕಾರಣ ಎಂದರು. ಬಸವ ಮಂಟಪ ನಿವೇಶನ ನೀಡಿದ ಸ್ಥಳೀಯ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಪ್ರಭಾಕರ ರೆಡ್ಡಿ ಮತ್ತು ಸದಸ್ಯರಾದ ಶ್ರೀನಿವಾಸ ರೆಡ್ಡಿ ಅವರ ಕಾರ್ಯಕ್ಕೆ ಮತ್ತು ಅವರು ನೀಡಿದ ಸ್ಥಳದಲ್ಲಿ ರಾಷ್ಟ್ರೀಯ ಬಸವದಳ ಯುವಕರು ತನು ಮನ ಧನದಿಂದ ದುಡಿದು ಬಸವ ಮಂಟಪ ಕಟ್ಟಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಬಸವ ಮಂಟಪ ಕಟ್ಟಡ ಉದ್ಘಾಟನೆ ಮಾಡಿ ಬಸವಧರ್ಮ ಪೀಠಾಧ್ಯಕ್ಷ ಜಗದ್ಗುರು ಮಾತೆ ಗಂಗಾದೇವಿಯವರು ಲಿಂಗಾನಂದ ಸ್ವಾಮೀಜಿಯವರು ಮತ್ತು ಪೂಜ್ಯ ಮಾತೆ ಮಹಾದೇವಿಯವರು ಬಸವಣ್ಣನವರಂತೆಯೇ ಬದುಕಿದವರು. ಬಸವಣ್ಣನವರ ತತ್ವ ಸ್ಥಿರಸ್ಥಾಯಿಯಾಗಿ ಉಳಿಸಲೋಸುಗವಾಗಿ ಸ್ಥಾಪಿಸಿದ ರಾಷ್ಟ್ರೀಯ ಬಸವದಳವು ಇಂದು ರಾಜ್ಯ ಮತ್ತು ಹೊರರಾಜ್ಯದಲ್ಲಿ ಹೆಮ್ಮರವಾಗಿ ಬೆಳೆದಿದೆ.
ಬಸವ ತತ್ವಕ್ಕಾಗಿಯೇ ಹುಟ್ಟಿಕೊಂಡ ರಾಷ್ಟ್ರೀಯ ಬಸವದಳ ಸಂಘಟನೆಯನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ನಾವು ನೀವು ಪ್ರಾಮಾಣಿಕವಾಗಿ ದುಡಿಯಬೇಕಿದೆ. ಗುರು ಶಿಷ್ಯರಲ್ಲಿ ಎಷ್ಟೇ ಭಿನ್ನಾಭಿಪ್ರಾಯವಿದ್ದರೂ ಬಸವಣ್ಣನವರಿಗಾಗಿ ನಾವು ಒಂದಾಗಿ ಕಾರ್ಯಮಾಡಬೇಕು ಎಂದರಲ್ಲದೆ ಆ ಎಲ್ಲಾ ಭಿನ್ನಾಭಿಪ್ರಾಯಗಳ ಮದ್ಯೆಯೂ ಬಸವಣ್ಣನವರನ್ನು ಆದರ್ಶವಾಗಿಟ್ಟುಕೊಂಡು ಸಾಗುತ್ತಿರುವ ನಮ್ಮ ಸಂಘಟನೆ ಬಗ್ಗೆ ನನಗೆ ಹೆಮ್ಮೆ ಇದೆ ಎಂದರು.

ಪೂಜ್ಯ ಬಸವಪ್ರಭು ಸ್ವಾಮೀಜಿಯವರು ಬೆಳಿಗ್ಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಬಸವಸ್ತೋತ್ರ ತ್ರಿವಿಧಿ ಪಠಣ ಪಾರಾಯಣ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.
ರಾಷ್ಟ್ರೀಯ ಬಸವದಳ ಅಧ್ಯಕ್ಷರಾದ ಶರಣ ಸಂತೋಷ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಕೆ. ರಮೇಶ, ಶ್ರೀನಿವಾಸ್ ರೆಡ್ಡಿ ಮಾತನಾಡಿದರು.

ಬಸವ ಮಂಟಪ ಉದ್ಘಾಟನೆಗೂ ಮುನ್ನ ಶರಣ ಶರಣೆಯರು ವಚನ ಸಾಹಿತ್ಯವನ್ನು ತಲೆಯ ಮೇಲೆ ಹೊತ್ತು ಮೆರವಣಿಗೆ ನಡೆಸಿದರು.
ಕಾರ್ಯಕ್ರಮದಲ್ಲಿ ದಿವ್ಯಾ, ಶ್ರೀನಿಧಿ, ಅಂಕಿತಾ, ದೀಪಿಕಾ ಇವರು ವಚನ ನೃತ್ಯ ನಡೆಸಿಕೊಟ್ಟರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಂದು ಬಸವ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ತೆರಳಿದರು.
ಗೌರವಾಧ್ಯಕ್ಷರಾದ ಪೂಜ್ಯ ಶ್ರೀ ಸದ್ಗುರು ಬಸವಯೋಗಿ ಸ್ವಾಮೀಜಿ, ಶ್ರೀಶೈಲ ಮಸೂತೆ, ಪ್ರಭಾಕರ್ ರೆಡ್ಡಿ, ಲೀಲಾವತಿ ಕರಡಿ, ಆನಂದ ರೆಡ್ಡಿ, ಚಂದ್ರಪ್ಪ ಎಮ್, ಎನ್. ಮೂರ್ತಿ, ಕೆ.ಪಿ. ರಾಜು, ಮಹೇಶ ಇನ್ನಕ್ಕಿ, ಕೆ. ವಿರೇಶ, ರವೀಂದ್ರ, ಚಾಮರಾಜ ಎನ್, ರಮೇಶ ಹುಲ್ಲೂರು, ಪದಾಧಿಕಾರಿಗಳಾದ ಸಂತೋಷ ಬಿರಾದಾರ, ಸಿದ್ದರಾಮಪ್ಪ ನೀರಗುಡಿ, ಕುಮಾರ ಕಳಕಪ್ಪ, ಉದಯಕುಮಾರ ಕೊಂತಿಕಲ್, ಚಂದ್ರಕಾಂತ ಹಳ್ಳ, ಶಂಕರ ಐನಾಪೂರು, ವಿಜಯಕುಮಾರ, ನಿಜಲಿಂಗಪ್ಪ ಮಹಾಜನ್, ಆನಂದಕುಮಾರ ಹಡಪದ, ನಾಗೇಂದ್ರಪ್ಪ ಕಲಬುರಗಿ, ಜಗದೀಶ್ ಪತ್ತಾರ್, ಸಂಗಪ್ಪ ಗಂಗಾವತಿ, ಕಸ್ತೂರಿ ಎಸ್, ಲಲಿತಾ ಅಶೋಕ, ಅಂಬಿಕಾ, ಗೀತಾ, ಪ್ರವೀಣ ಕೊಚ್ಚಾಕಿ, ಕಿರಣ ಬೆಲ್ಲದ ಉಪಸ್ಥಿತರಿದ್ದರು.
ಸಂಗಮೇಶ್ ಕಂಬಾರ ಸ್ವಾಗತಿಸಿದರೆ, ಶೋಭಾ ನಿರೂಪಿಸಿದರು, ಸಿದ್ರಾಮಪ್ಪ ನೀರಗುಡಿ ವಂದಿಸಿದರು.
ಉತ್ತಮವಾದ ಕಾರ್ಯಕ್ರಮವನ್ನ ರಾಷ್ಟ್ರೀಯ ಬಸವ ದಳದವರು ಮಾಡಿರುವುದು ಸಂತೋಷ……ಮುಂದಿನ ದಿನಗಳಲ್ಲಿ ಬಸವತತ್ವ ಬಾನೆತ್ತರವಾಗಿ ಬೆಳೆಯಲು ರಾಷ್ಟ್ರೀಯ ಬಸವ ದಳದ ಪಾತ್ರ ಬಹಳ ಮುಖ್ಯವಾಗಿದೆ .ಎಲ್ಲರಿಗೂ ಅನಂತ ಶರಣು