ಎರ್ಲಾಂಗಾನ್
ಮೊಟ್ಟ ಮೊದಲ ಬಾರಿಗೆ ಯುರೋಪಿನಲ್ಲಿ ಬಸವ ಜಯಂತಿಯನ್ನು ಅದ್ದೂರಿಯಾಗಿ ಮೇ31ರಂದು ಆಚರಿಸಲಾಯಿತು
ಜರ್ಮನಿ ದೇಶದ ಎರ್ಲಾಂಗನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುರೋಪಿನ ಹಲವಾರು ದೇಶಗಳಿಂದ 150ಕ್ಕಿಂತ ಹೆಚ್ಚು ಬಸವ ಭಕ್ತರು ಬಂದು ಭಾಗವಹಿಸಿದರು.

ಚಂದನ ಬಾಳೆ ಮತ್ತು ಮಕ್ಕಳ ತಂಡದವರಿಂದ ವಚನಗಾಯನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದ ಉದ್ಘಾಟನಾ ಭಾಷಣವನ್ನು ಮ್ಯೂನಿಚ್ ಭಾರತೀಯ ರಾಯಭಾರಿ ಕಚೇರಿಯ ಅಭಿನವ ಕುಮಾರ ನೆರವೇರಿಸಿದರು.
ಕಾರ್ಯಕಾರಿ ಸಮಿತಿಯ ಸದಸ್ಯರಾದ ವಿಜಯಕುಮಾರ ತುಮಕೂರು ಚಿಕ್ಕರುದ್ರಯ್ಯ ಅವರು ಬಸವ ಸಮಿತಿ ಯುರೋಪ್ ನಡೆದುಬಂದ ಹಾದಿಯನ್ನು ತಿಳಿಸುತ್ತಾ ಜಯಂತಿಯನ್ನು ಒಂದು ತಿಂಗಳು ತಡವಾಗಿ ಆಚರಿಸುತ್ತಿರುವದಕ್ಕೆ ಕ್ಷಮೆಯಾಚಿಸಿದರು.

“ನಾವು ಹೊರದೇಶದಲ್ಲಿ ನೆಲೆಸಿದರೂ ನಮ್ಮ ಮೂಲತತ್ವವಾದ ಬಸವತತ್ವವನ್ನು ಮರೆಯದೆ ಎತ್ತಿ ಹಿಡಿಯಲು ಮುಂದಾಗಬೇಕು. ಕೆಲಸಕ್ಕಾಗಿ ಬಂದು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಾಚನವನ್ನು ಪಾಲಿಸುತ್ತಿದ್ದೇವೆ. ಗೊತ್ತಿದ್ದೋ ಗೊತ್ತಿಲ್ದೇನೂ ಬಸವಣ್ಣ ತೋರಿದ ದಾರಿ ನಮ್ಮ ಜೀವನದ ಭಾಗವಾಗಿವೆ,” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಆಶಾ ರಮೇಶ್ ಅವರು ತಮ್ಮ ಭಾಷಣದಲ್ಲಿ ಚಿಕ್ಕವರಿದ್ದಾಗಿಂದಲೂ ಬಸವಣ್ಣವರಿಂದ ಪ್ರೇರಿತಗೊಂಡಿದ್ದನ್ನು ತಿಳಿಸಿದರು, ಕಾಯಕವೇ ಕೈಲಾಸವನ್ನು ಪ್ರತಿಪಾದಿಸಿ ಬೆಳೆದಿದ್ದೇನೆ, ಕರ್ಮಭೂಮಿ ಮತ್ತು ಜನ್ಮಭೂಮಿಯನ್ನ ಗೌರವಿಸುತ್ತೇನೆ, ಮನುಷ್ಯತ್ವವೇ ಮೊದಲು ಎಂದು ಬಸವಣ್ಣನವರ ಬಗ್ಗೆ ಕಿರುಮಾತನ್ನು ಮುಗಿಸಿದರು.
ಮುಖ್ಯ ಅತಿಥಿಗಳಾಗಿ ಬಂದಿದ್ದ ಎರ್ಲಾಂಗಾನ ವಲಸೆ ಪ್ರಾಧಿಕಾರದ ಅಧ್ಯಕ್ಷ ರಾಮಿ ಭೂಕಾಕೆಮ್ ನಾವು ಈ ದಿನಗಳಲ್ಲಿ ಎಲ್ಲರೂ ಒಂದೇ ಎಂದು ಹೇಳುತ್ತೇವೆ ಆದರೆ ಬಸವಣ್ಣನರು 12 ನೇ ಶತಮಾನದಲ್ಲಿಯೇ ಈ ಒಗ್ಗಟಿನ ಮಂತ್ರವನ್ನು ಘೋಷಣೆ ಮಾಡಿ ಕಾರ್ಯರೂಪಕ್ಕೆ ತಂದರು ಎಂದು ಹೇಳಿದರು.

ಈ ಸಂಧರ್ಭದಲ್ಲಿ ವಿನಯ ಶಿರಹಟ್ಟಿಮಠ ಮತ್ತು ಶಿಲ್ಪಾ ಶಿರಹಟ್ಟಿಮಠ ಬರೆದ “ಬಸವ ಭಾಷೆಯ ಚಲನಶೀಲತೆ” ಎಂಬ ಪುಸ್ತಕವನ್ನು ಮುಖ್ಯ ಅತಿಥಿಗಳು ಬಿಡುಗಡೆಮಾಡಿದರು.

ನಟ್ರಾಸ್ ತಂಡ, ಲೆಜಿಮ್, ಕಂಸಾಳೆ ಮತ್ತು ಓಂ ಧೋಲ್ ತಾಶಾ ನೃತ್ಯ ತಂಡದ ಕುಣಿತ ಎಲ್ಲರ ಮನಸೆಳೆಯಿತು.
ಕಾರ್ಯಕ್ರಮದಲ್ಲಿ ಜರ್ಮನಿ, ಬೆಲ್ಜಿಯಂ, ಲಕ್ಸೆಂಬರ್ಗ್, ಇಟಲಿ, ಪೋಲೆಂಡ್, ಆಸ್ಟ್ರಿಯಾ ಮತ್ತು ಫ್ರಾನ್ಸ್ ದೇಶದ ಭಕ್ತರು ಜೊತೆಗೂಡಿದರು. ಮ್ಯೂನಿಖ್, ಮ್ಯಾಗ್ಡೆಬರ್ಗ್, ಫ್ರಾಂಕ್ಫರ್ಟ್, ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಲಕ್ಸೆಂಬರ್ಗ್, ಇಟಲಿ, ಪೋಲೆಂಡ್, ಆಸ್ಟ್ರಿಯಾ, ಫ್ರಾನ್ಸ್ ಮತ್ತು ಜರ್ಮನಿಯ ಎಲ್ಲಾ ಕನ್ನಡ ಸಂಘಗಳು ಬೆಂಬಲ ನೀಡಿ, ಸಕ್ರಿಯವಾಗಿ ಭಾಗವಹಿಸಿದವು.