ಪ್ಯಾರಿಸ್
ವಿಜಯನಗರದ ಸಾಮ್ರಾಜ್ಯವನ್ನು ಕರ್ನಾಟಕ ಸಾಮ್ರಾಜ್ಯ ಎಂದು ಬಣ್ಣಿಸುವುದು ಸೂಕ್ತ ಎಂದು ಫ್ರಾನ್ಸ್ ಕನ್ನಡತಿ, ಹಿರಿಯ ಸಂಶೋಧಕರಾದ ಡಾ. ವಸುಂಧರಾ ಫಿಲಿಯೋಜಾ ಅಭಿಪ್ರಾಯಪಟ್ಟರು.
ಅವರು ಬೆಂಗಳೂರಿನ ರಾಷ್ಟ್ರೀಯ ಬಸವ ಪ್ರತಿಷ್ಠಾನ ಹಾಗೂ ಫ್ರಾನ್ಸ್ ಕನ್ನಡ ಬಳಗದ ಸಹಯೋಗದೊಂದಿಗೆ ಆಯೋಜಿಸಿದ್ದ ಭಾರತ ವಚನ ಸಂಸ್ಕೃತಿ ಯಾತ್ರಾ – ೨೦೨೫ ರ ‘ರಾಷ್ಟ್ರೀಯ ಬಸವ ಪುರಸ್ಕಾರ’ ಸ್ವೀಕರಿಸಿ ಮಾತನಾಡಿದರು.
ಫಿಲಿಯೋಜಾ ಅವರು ಬಸವಣ್ಣನವರ ವಚನಗಳನ್ನು ಪ್ರೆಂಚ್ ಭಾಷೆಗೆ ಅನುವಾದಿಸಿದ್ದಲ್ಲದೆ, ಕಳೆದ ಆರು ದಶಕದಿಂದ ಭಾರತೀಯ ಸಂಸ್ಕೃತಿ, ಕನ್ನಡ ಭಾಷೆ ಹಾಗೂ ಕಲೆಗಳ ಸಂರಕ್ಷಣೆಗಾಗಿ ಶ್ರಮಿಸಿರುವುದನ್ನು ಗಮನಿಸಿ ಈ ಪುರಸ್ಕಾರ ನೀಡಲಾಯಿತು.

ಖ್ಯಾತ ನಟಿ ಹಾಗೂ ಶಾಸಕರಾದ ಉಮಾಶ್ರೀ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರು ಕೇವಲ ಕರ್ನಾಟಕದ ಸಾಂಸ್ಕೃತಿಕ ನಾಯಕ ಅಲ್ಲ ವಿಶ್ವದ ನಾಯಕ ಎಂದರು. ಎಸ್.ಎಂ. ಸುರೇಶ ಅವರು ತಮ್ಮ ರಾಷ್ಟ್ರೀಯ ಬಸವ ಪ್ರತಿಷ್ಠಾನದ ಮೂಲಕ ಈ ಕಾರ್ಯಕ್ರಮ ಆಯೋಜನೆ ಮಾಡಿ ಯುರೋಪಿನ ಸಂಸ್ಕೃತಿ ಪರಿಚಯಿದ್ದು ಅಭಿನಂದನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ, ವಚನ ಟಿವಿ ಸಂಸ್ಥಾಪಕ ಪ್ರೊ. ಸಿದ್ದು ಯಾಪಲಪರವಿ ಮಾತನಾಡಿ, ಭಾರತೀಯ ಮೂಲದ ಡಾ. ಮಹೇಶ ಘಟರಡ್ಡಿಹಾಳ ಈ ಪ್ರದೇಶದಲ್ಲಿ ಯೋಗದ ಪರಿಚಯ ಮಾಡಿ ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದಾರೆ, ಅದೇ ಮಾದರಿಯಲ್ಲಿ ಡಾ. ವಸುಂಧರಾ ಫಿಲಿಯೋಜಾ ಅವರು ಶ್ರಮಿಸಿ ಕನ್ನಡತನ ಮೆರೆದಿದ್ದಾರೆ. ರಾಷ್ಟೀಯ ಬಸವ ಪ್ರತಿಷ್ಠಾನದ ಸಂಸ್ಥಾಪಕ ಎಸ್.ಎಂ.ಸುರೇಶ್ ಅವರು ಇದನ್ನು ಸಾಂಸ್ಕೃತಿಕ ಯಾತ್ರೆಯನ್ನಾಗಿಸಲು ಯಶ ಸಾಧಿಸಿದ್ದಾರೆ. ಸಾಣೇಹಳ್ಳಿ ಶ್ರೀಗಳ ಸಾನಿಧ್ಯ ಈ ಪ್ರವಾಸದ ಘನತೆಯನ್ನು ಹೆಚ್ಚಿಸಿದೆ ಎಂದರು. ಫ್ರ್ಯಾನ್ಸ್ ಕನ್ನಡಿಗರ ಭಾಷಾ ಪ್ರೇಮ ಅನುಕರಣೀಯ ಎಂದರು.

ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಸಾಣೇಹಳ್ಳಿಯ ಪರಮಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯರು, ಬಸವಾದಿ ಶರಣರು ಪ್ರಶ್ನಿಸುವ ಮೂಲಕ ಪರಿಹಾರ ಕಂಡು ಹಿಡಿದು, ವಚನಗಳ ಮೂಲಕ ದಾಖಲಿಸಿದ ವಿಶೇಷ ಧರ್ಮ ಇದಾಗಿದೆ, ಲಿಂಗಾಯತ ಒಂದು ಜಾತಿಯಲ್ಲ ಅದೊಂದು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಪಂಥ. ಬಸವಾದಿ ಶರಣರು ಬಿಟ್ಟು ಹೋದ ಮೌಲ್ಯಗಳನ್ನು ಗಟ್ಟಿ ಹಿಡಿಯಲು ದೇಶ ವಿದೇಶಗಳ ಪ್ರಚಾರ, ಸಂಚಾರ ಅನಿವಾರ್ಯ ಎಂದರು.
ಬೆಟ್ಟದಹಳ್ಳಿಯ ಪೂಜ್ಯ ಶ್ರೀ ಚಂದ್ರಶೇಖರ ಸ್ವಾಮಿಗಳು ಬಸವಣ್ಣನವರ ವಚನಗಳು ಜಗತ್ತಿಗೆ ಮಾದರಿ ಎಂದರು.
ರಾಷ್ಟೀಯ ಬಸವ ಪ್ರತಿಷ್ಠಾನ ಅನೇಕ ವಿಧಾಯಕ ಕಾರ್ಯಕ್ರಮಗಳ ಮೂಲಕ ನೂರಾರು ಜನರನ್ನು ಸಂಘಟಿಸಿ ಲೋಕಸಂಚಾರ ಮಾಡುವುದು ಅವರ ಬಸವಪ್ರಜ್ಞೆಯ ಪ್ರತೀಕವಾಗಿದೆ.

ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷ, ಟಿಸಿಎಸ್ ಡ್ರೀಮ್ ಹಾಲಿಡೇಸ್ ಸಂಸ್ಥಾಪಕ ಪ್ರಾಸ್ತಾವಿಕ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ವೇದಿಕೆ ಮೇಲೆ ಸಾಹಿತಿಗಳಾದ ಪ್ರೊ.ಬಿ.ಆರ್. ಪೋಲಿಸ್ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ರೊಟ್ಟಿ, ಸಾಹಿತಿ ಅಶೋಕ ಮಳಗಲಿ, ಎಸ್. ಮಂಜುನಾಥ, ಫ್ರಾನ್ಸ್ ಕನ್ನಡ ಬಳಗದ ನವೀನ್ , ಶಿವಕುಮಾರ್ಯ, ಸುಚಿತ್ರಾರಾವ್, ಸಾಗರ್ ಉದಯಕುಮಾರ್ ಇತರರು ಉಪಸ್ಥಿತರಿದ್ದರು.
ಫ್ರಾನ್ಸ್ ಕನ್ನಡ ಬಳಗವು ವಚನ ವೈಭವದ ನೃತ್ಯ ಪ್ರದರ್ಶನ ನೀಡಿದ್ದು ವಿಶೇಷ. ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘದ ಕಲಾವಿದರು ಹಾಗೂ ಪ್ರವಾಸಿಗರು ‘ಮಹಾಬೆಳಕು’ ನಾಟಕದಲ್ಲಿ ಅಭಿನಯಿಸಿ ಎಲ್ಲರ ಮನ ಸೂರೆಗೊಂಡರು. ನಡುಗುವ ಛಳಿಯಲ್ಲಿ ಮೈಮನ ಪುಳಕಗೊಳಿಸಿದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಇದಾಗಿತ್ತು. ಸಾಕ್ಷಿ ಎ. ಮಲ್ಲಿಗೆರೆ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನಕುಮಾರ ಮರಡಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು
ಫ್ರಾನ್ಸ್ ಕನ್ನಡ ಬಳಗವು ವಚನ ವೈಭವದ ನೃತ್ಯ ಪ್ರದರ್ಶನ ನೀಡಿದ್ದು ವಿಶೇಷ. ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘದ ಕಲಾವಿದರು ಹಾಗೂ ಪ್ರವಾಸಿಗರು ‘ಮಹಾಬೆಳಕು’ ನಾಟಕದಲ್ಲಿ ಅಭಿನಯಿಸಿ ಎಲ್ಲರ ಮನ ಸೂರೆಗೊಂಡರು. ನಡುಗುವ ಛಳಿಯಲ್ಲಿ ಮೈಮನ ಪುಳಕಗೊಳಿಸಿದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಇದಾಗಿತ್ತು. ಸಾಕ್ಷಿ ಎ. ಮಲ್ಲಿಗೆರೆ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನಕುಮಾರ ಮರಡಿ ವಂದಿಸಿದರು