ಗದಗ
ಪುಸ್ತಕಗಳು ನಮ್ಮ ಸಹಾಯಕ್ಕೆ ಸದಾ ಸಿದ್ಧವಾಗಿರುತ್ತವೆ. ಅಪಾರವಾದ ಜ್ಞಾನಕೋಶದ ಪ್ರಾಪ್ತಿ ಪುಸ್ತಕಗಳಲ್ಲಿದೆ. ಆದ್ದರಿಂದ ಪುಸ್ತಕ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಕಿ ಅಶ್ವಿನಿ ಕೆ. ಬಳಿಗೇರ ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ ೨೭೪೩ನೇ ಶಿವಾನುಭವದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡುತ್ತ, ಗ್ರಂಥಾಲಯಗಳಲ್ಲಿ ಹೋಗಿ ಕೂತುಕೊಂಡಾಗ ನಮ್ಮ ಮುಂದೆ ವಿಶಾಲವಾದ ಪುಸ್ತಕಗಳ ರಾಶಿಯೇ ಬೀಳುತ್ತವೆ. ಉತ್ತಮ ಪುಸ್ತಕಗಳಿಂದ ಬದುಕಿಗೆ ಬೆಳಕು, ಸಮಾಧಾನ, ಸಂತೋಷ ದೊರೆಯುತ್ತದೆ. ಸಮಸ್ಯೆಗಳಿಗೆ ಪರಿಹಾರ, ನೊಂದ ಮನಸ್ಸಿಗೆ ಸಾಂತ್ವನ ನೀಡುತ್ತವೆ. ಗಾಂಧೀಜಿ, ಕಲಾಂ, ಅಂಬೇಡ್ಕರ್ ಮುಂತಾದ ಮಹಾನ್ವ್ಯಕ್ತಿಗಳ ಅಧ್ಯಯನದಿಂದ ಪುಸ್ತಕಗಳು ಪರಿಣಾಮ ಬೀರಿದ ಬಗ್ಗೆ ಹಾಗೂ ಬೇರೆ ದೇಶಗಳು ಪುಸ್ತಕಗಳಿಗೆ ಮಹತ್ವ ನೀಡುವ ಬಗ್ಗೆ ಮನೋಜ್ಞವಾಗಿ ತಿಳಿಸಿದರು.
ಶಿವಾನುಭವ ಕಾರ್ಯಕ್ರಮದ ಸಮ್ಮುಖ ವಹಿಸಿಕೊಂಡ ಪೂಜ್ಯ ಶ್ರೀ ಚಂದ್ರಶೇಖರ ದೇವರು ಮಾತನಾಡಿ, ಪುಸ್ತಕಗಳು ಜ್ಞಾನದ ಕೊಡಗಳು. ಕೊಡದಲ್ಲಿ ನೀರು ತುಂಬಿಕೊಂಡಂತೆ, ಪುಸ್ತಕಗಳ ಜ್ಞಾನವನ್ನು ಮನದಲ್ಲಿ ತುಂಬಿಕೊಂಡಾಗ ಬದುಕು, ಪಾವನವಾಗುತ್ತದೆ ಎಂದು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗದಗ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ. ಎ. ಬಳಿಗೇರವರು ವಿಶ್ವ ಪುಸ್ತಕ ದಿನದ ಮಹತ್ವವನ್ನು ಔಚಿತ್ಯಪೂರ್ಣವಾಗಿ ಮಾತನಾಡುತ್ತಾ, ಪುಸ್ತಕಗಳಿಗೆ ಎಂದೂ ಸಾವಿಲ್ಲ ಎಂದರು.
ಶಿಕ್ಷಕಿ ಪಾರ್ವತಿ ಬಳಿಗೇರ, ಶಿರಹಟ್ಟಿ ಹಾಗೂ ವಿರೇಶ ಬಾದಾಮಿ, ಬೆಂಗಳೂರು ಇವರು ಉಪಸ್ಥಿತರಿದ್ದರು.
ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ನಡೆಸಿದರು. ಧರ್ಮಗ್ರಂಥ ಪಠಣವನ್ನು ಕುಮಾರ ಶಿವನಾಗರಾಜ ಎ. ಆಸಂಗಿ, ವಚನ ಚಿಂತನವನ್ನು ಶಿವಾನಿ ಎ. ಆಸಂಗಿ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಮಲ್ಲಪ್ಪ ದ್ಯಾಮಪ್ಪ ಕಾಬಳ್ಳಿ, ಪ್ರಭು ಮೆಡಿಕಲ್ಸ್ ಗದಗ ಇವರು ವಹಿಸಿಕೊಂಡಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷರಾದ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮು ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷರಾದ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳರವರು ಉಪಸ್ಥಿತರಿದ್ದರು.
ಶಿವಾನುಭವ ಸಮಿತಿಯ ಚೇರ್ಮನ್ ಐ. ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.