15,000 ಬಸವ ಭಕ್ತರಿಗೆ ಪ್ರಸಾದ ವ್ಯವಸ್ಥೆ; ಮೈಸೂರು-ಊಟಿ ಹೆದ್ದಾರಿಯಲ್ಲಿ ತೆವಳಿದ ಟ್ರಾಫಿಕ್
ಗುಂಡ್ಲುಪೇಟೆ
ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಗುಂಡ್ಲುಪೇಟೆಯಲ್ಲಿಂದು ಅದ್ಧೂರಿಯಾಗಿ ಬಸವ ಜಯಂತಿಯನ್ನು ಆಚರಣೆ ಮಾಡಲಾಯಿತು. ಹಿಂದೆ ನಡೆದ ಬಸವ ಜಯಂತಿಗೆ ಹೋಲಿಸಿದರೆ ಈ ವರ್ಷ ಹೆಚ್ಚಿಗೆ ಸಾವಿರಾರು ಸಂಖ್ಯೆಯಲ್ಲಿ ಬಸವ ಭಕ್ತರು ಸೇರಿದ್ದರು.

ಪಟ್ಟಣದ ಜೆಎಸ್ಎಸ್ ಕಾಲೇಜು ಬಳಿ ಬಸವೇಶ್ವರ ಭಾವಚಿತ್ರಕ್ಕೆ ಸೋಮಹಳ್ಳಿ ಮಠಾಧೀಶ ಸಿದ್ದಮಲ್ಲಸ್ವಾಮೀಜಿ ಸಾನ್ನಿಧ್ಯದಲ್ಲಿ ಶಾಸಕ ಗಣೇಶ್ ಪ್ರಸಾದ್, ಮಾಜಿ ಶಾಸಕ ನಿರಂಜನ್ ಕುಮಾರ್ ಜೊತೆಗೂಡಿ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.
ನಂದೀಧ್ವಜ, ಮಹಿಳಾ ಹಾಗೂ ಪುರುಷರ ವೀರಗಾಸೆ, ಕೇರಳದ ಚಂಡೆ ಮದ್ದಳೆ, ಹುಲಿವೇಷಧಾರಿಗಳು, ಕಂಸಾಳೆ, ಗೊರವರ ಕುಣಿತ ಸೇರಿದಂತೆ ಹತ್ತಾರು ಜನಪದ ಕಲಾತಂಡಗಳ ಜತೆಗೆ ಡಿಜೆಗಳ ಅಬ್ಬರದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಯುವಕರು ಹಾಗೂ ಮುಖಂಡರು ಸಂಗೀತಕ್ಕೆ ತಕ್ಕಂತೆ ಹೆಜ್ಜೆಹಾಕಿದರು.

ಮಡಹಳ್ಳಿ ರಸ್ತೆ, ಬಸವೇಶ್ವರವೃತ್ತ, ಹಳೇ ಬಸ್ ನಿಲ್ದಾಣ, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ, ಕೋಡಹಳ್ಳಿ ಸರ್ಕಲ್, ಚಾಮರಾಜನಗರ ಜೋಡಿ ರಸ್ತೆಯ ಮೂಲಕ ಮೆರವಣಿಗೆ ಸಾಗಿತು. ಸೋಮೇಶ್ವರ ವಿದ್ಯಾರ್ಥಿನಿಲಯದಲ್ಲಿ ಸುಮಾರು 15 ಸಾವಿರ ಜನರಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು.

ಮಹಾಸಭಾ ತಾಲೂಕು ಅಧ್ಯಕ್ಷ ರವಿ ಕಮರಹಳ್ಳಿ, ಪ್ರಧಾನ ಕಾರ್ಯದರ್ಶಿ ಮಾಡ್ರಹಳ್ಳಿ ನಾಗೇಂದ್ರ, ಯುವಘಟಕದ ಅಧ್ಯಕ್ಷ ಗುರು ವೀರನಪುರ ಸೇರಿದಂತೆ ಎಲ್ಲ ಘಟಕದ ಪದಾದಿಕಾರಿಗಳು ಹಾಗೂ ಮುಖಂಡರು ಪಾಲ್ಗೊಂಡಿದ್ದರು. ಡಿವೈಎಸ್ಪಿ ಲಕ್ಷ್ಮಯ್ಯ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಜಯಕುಮಾರ್ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಿದ್ದರು.
ತಾಲೂಕು ಘಟಕದ ಪರಿಶ್ರಮ
ಕಾರ್ಯಕ್ರಮವನ್ನು ನಡೆಸಲು ಮಹಾಸಭಾದ ತಾಲೂಕು ಘಟಕ ಕಳೆದ ಒಂದು ತಿಂಗಳಿನಿಂದ ಶ್ರಮಿಸಿತ್ತು. ಮಹಾಸಭಾ ಪದಾದಿಕಾರಿಗಳು ಹಾಗೂ ಮುಖಂಡರು ಪ್ರತಿ ಗ್ರಾಮಗಳಿಗೂ ತೆರಳಿ ಆಹ್ವಾನ ಪತ್ರಿಕೆ ನೀಡಿದ್ದು ಉತ್ತಮ ಪ್ರತಿಕ್ರಿಯೆ ಬಂದಿದೆ. ಸಾವಿರಾರು ಅಭಿಮಾನಿಗಳು ಉದಾರವಾಗಿ ದೇಣಿಗೆ ನೀಡುವ ಜತೆಗೆ ಕೆಲವು ಹೊಣೆಗಳನ್ನು ವಹಿಸಿಕೊಂಡಿದ್ದರು.

ದಸರಾ ವೈಭವ
ಕಳೆದ ನಾಲ್ಕು ದಿನಗಳಿಂದ ಪಟ್ಟಣದ ಎಲ್ಲಾ ರಸ್ತೆಗಳಲ್ಲಿ ಬಸವೇಶ್ವರ ಭಾವಚಿತ್ರ ಅಳವಡಿಸಿದ್ದರು. ಮೈಸೂರು ದಸರೆ ಮಾದರಿಯಲ್ಲಿ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿದ್ದರಿಂದ ಪಟ್ಟಣವು ಝಗಮಗಿಸುತ್ತಿತ್ತು. ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಮತ್ತು ಶಿವಕುಮಾರಸ್ವಾಮಿಗಳಿಗೆ ಲೇಸರ್ ದೀಪ ಅಳವಡಿಸಿದ್ದರಿಂದ ಪಟ್ಟಣದಲ್ಲಿ ಹಬ್ಬದ ವಾತಾವರಣ ಎದ್ದುಕಾಣುತ್ತಿತ್ತು.
ಊಟಿ ಹೆದ್ದಾರಿಯಲ್ಲಿ ತೆವಳಿದ ಟ್ರಾಫಿಕ್
ಪಟ್ಟಣದ ಮೈಸೂರು-ಊಟಿ ಹೆದ್ದಾರಿ, ಚಾಮರಾಜನಗರ -ಗುಂಡ್ಲುಪೇಟೆ ಹೆದ್ದಾರಿಯಲ್ಲಿ ಮೆರವಣಿಗೆ ಸಾಗುವ ರಸ್ತೆಯ ಒಂದು ಬದಿ ಮೆರವಣಿಗೆ ಸಾಗಿದರೂ
ಮತ್ತೊಂದು ರಸ್ತೆಯ ಮತ್ತೊಂದು ಬದಿಯಲ್ಲಿ ಎರಡು ಕಡೆಯಿಂದ ವಾಹನಗಳು ಸಂಚರಿಸುತ್ತಿದ್ದ ಕಾರಣ ಪ್ರಯಾಣಿಕರು ಹೈರಾಣರಾಗಬೇಕಾಯಿತು. ಪೊಲೀಸರು ಅಧಿಕ ಸಂಖ್ಯೆಯಲ್ಲಿದ್ದರೂ ಸುಗಮ ಸಂಚಾರಕ್ಕೆ ಆಗಲಿಲ್ಲ.

ಆಪರೇಷನ್ ಸಿಂಧೂರ ಪೋಸ್ಟರ್ಸ್
ಪಹಲ್ಗಾಮ್ನಲ್ಲಿ ಉಗ್ರಗಾಮಿಗಳು ನಡೆಸಿದ ಹತ್ಯಾಕಾಂಡಕ್ಕೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂದೂರ ಬೆಂಬಲಿಸಿ ಯುವಕರು ಕೈಯಲ್ಲಿ ಪೋಸ್ಟರ್ ಹಿಡಿದು ಸೈನಿಕರಿಗೆ ನೈತಿಕ ಬೆಂಬಲ ಸೂಚುಸುವ ಮೂಲಕ ಜನರ ಗಮನ ಸೆಳೆದರು.