ಬೆಳಗಾವಿ
ಜಯನಗರದ ಸಮೃದ್ಧ ಅಂಗವಿಕಲರ ಸಂಸ್ಥೆಯ ವಿಕಲಚೇತನ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಸಂಚಾರಿ ಗುರುಬಸವ ಬಳಗದ ವತಿಯಿಂದ ವೈಚಾರಿಕತೆಯ ‘ಬಸವ ಪಂಚಮಿ’ ಆಚರಿಸಲಾಯಿತು.

ಬಳಗದ ಶಿವಾನಂದ ಲಾಳಸಿಂಗಿ ಪ್ರಾಸ್ತಾವಿಕವಾಗಿ ಮಾತನಾಡಿ, ನಾಗರ ಪಂಚಮಿ ದಿನದಂದು ಕಲ್ಲು ಹಾಗೂ ಮಣ್ಣಿನ ಮೂರ್ತಿಗಳಿಗೆ ಹಾಲು ಹಾಕಿ ಅಮೃತಕ್ಕೆ ಸಮನಾದ ಹಾಲನ್ನು ವ್ಯರ್ಥಮಾಡದೆ, ಹಸಿದವರಿಗೆ, ರೋಗಿಗಳಿಗೆ, ಮಕ್ಕಳಿಗೆ ಹಾಗೂ ವೃದ್ಧರಿಗೆ ಕೊಟ್ಟು ವೈಚಾರಿಕ ಪ್ರಜ್ಞೆಯಿಂದ ವಿಶೇಷವಾಗಿ ಬಸವ ಪಂಚಮಿಯನ್ನು ಆಚರಿಸೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಲಿಂಗಾಯತ ಸಂಘಟನೆಯ ಕಾರ್ಯದರ್ಶಿ ಸುರೇಶ ನರಗುಂದ, ಜಾಗತಿಕ ಲಿಂಗಾಯತ ಮಹಾಸಭೆಯ ಖಜಾಂಚಿ ಎಂ.ಎಂ. ಬಾಳಿ ಮಾತನಾಡಿ, ಹಾವು ಮಾಂಸಾಹಾರಿ ಸರಿಸೃಪ, ಅದು ಹಾಲನ್ನು ಕುಡಿಯುವದಿಲ್ಲ. ಅದೇ ಹಾಲನ್ನು ಮಕ್ಕಳಿಗೆ ಕೊಡುವುದರ ಮೂಲಕ ಮೂಢನಂಬಿಕೆಯಿಂದ ಜನರು ಹೊರಗೆ ಬಂದು ವೈಚಾರಿಕ ಹಾಗೂ ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಶಿವನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಶಾಂತ ಪೋತದಾರ ಸ್ವಾಗತಿಸಿದರು
ಮಂಜುನಾಥ ಕಡಲಗಿ, ಈಶ್ವರ ತಿಮ್ಮಾಪೂರ, ಸಂಚಾರಿ ಗುರು ಬಸವ ಬಳಗದ ಶರಣ ಶರಣೆಯರು ಉಪಸ್ಥಿತರಿದ್ದರು.
ಉಮಾ ದುಂಡಪ್ಪ ಸಂಕೇಶ್ವರ ಮಕ್ಕಳಿಗೆ ಮುಂಜಾನೆ ಅಲ್ಪೋಪಹಾರದ ದಾಸೋಹ ಮಾಡಿದರು. ಅಧ್ಯಕ್ಷರಾದ ಮಹಾಂತೇಶ ತೋರಣಗಟ್ಟಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿ ಶರಣು ಸಮರ್ಪಿಸಿದರು.