ಗದಗ
ಹರ್ಡೇಕರ ಮಂಜಪ್ಪನವರು ಅಪ್ಪಟ ಗಾಂಧಿವಾದಿಗಳಾಗಿದ್ದರು. ಸಮಾಜದಲ್ಲಿ ಮೌಲ್ಯಗಳನ್ನು ಬೆಳೆಸುವಲ್ಲಿ, ಭಿತ್ತುವಲ್ಲಿ ತಮ್ಮ ಬದುಕನ್ನು ಮುಡಿಪಾಗಿಟ್ಟರು. ಹರ್ಡೇಕರ ಮಂಜ್ಜಪ್ಪನವರ ಬದುಕು ಮತ್ತು ಜೀವನಾದರ್ಶಗಳು ಅನುಕರಣೀಯ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೭೩೩ನೇ ಶಿವಾನುಭವ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಜನರಿಗೆ ಒಳ್ಳೆಯದನ್ನು ಕೊಡುವುದೇ ಶಿವಾನುಭವ. ನಡೆನುಡಿಗಳನ್ನು ಪರಿಶುದ್ಧವಾಗಿಟ್ಟುಕೊಂಡಾಗ ಮನಸ್ಸು ಒಳ್ಳೆಯದನ್ನು ಯೋಚಿಸುತ್ತದೆ.
ಬೆಳಗಾವಿಯ ಕಾಂಗ್ರೆಸ್ ಸಭೆಯಲ್ಲಿ ಮೊಟ್ಟ ಮೊದಲು ಬಸವಣ್ಣನವರ ವಚನಗಳನ್ನು ಇಂಗ್ಲೀಷ್ಗೆ ಭಾಷಾಂತರಿಸಿ ಗಾಂಧೀಜಿಯವರಿಗೆ ಕೊಡುವ ಮೂಲಕ ಪರಿಚಯಿಸಿದರು. ಮಂಜಪ್ಪನವರು ಗಾಂಧೀಜಿಯವರ ಪ್ರತಿರೂಪ. ಸಮಾಜ ಸೇವೆಗಾಗಿ ಮದುವೆಯಾಗದೇ ಬದುಕಿದರು. ಅಂಗಗುಣಗಳನ್ನು ತ್ಯಾಗ ಮಾಡಿ, ಲಿಂಗಗುಣ ಹೊಂದಿ ನಿಜವಾದ ಶರಣರಾಗಿ ಧರ್ಮ ಪಾಲನೆ ಮಾಡಿದರು ಎಂದು ಶ್ರೀಗಳು ಮಾತನಾಡಿದರು.
ಸಮ್ಮುಖ ವಹಿಸಿದ್ದ ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು ಭೈರನಟ್ಟಿ ಶಿರೋಳ ಅವರು ಮಾತನಾಡಿ, ಹರ್ಡೇಕರ ಮಂಜ್ಜಪ್ಪನವರು ಬನವಾಸಿಯಲ್ಲಿ ಜನಿಸಿ, ಅಲ್ಲಿಯೇ ಶಾಲೆ ಕಲಿತು, ಕಲಿತ ಶಾಲೆಯಲ್ಲಿಯೇ ಶಿಕ್ಷಕರಾಗಿ ಸಮಾಜದ ಏಳ್ಗೆಗಾಗಿ ಅವರು ಅವಿರತ ಶ್ರಮಿಸಿದರು. ಹರ್ಡೇಕರ ಮಂಜಪ್ಪನವರು ಕೊಟ್ಟ ಬಸವಣ್ಣನವರ ಇಂಗ್ಲಿಷ್ನಲ್ಲಿಯ ವಚನಗಳನ್ನು ಗಾಂಧೀಜಿಯವರು ನೋಡಿ, ಎಂಟುನೂರು ವರ್ಷಗಳ ಹಿಂದೆ ಅದ್ಬುತವಾದ ಕೆಲಸವನ್ನು ಮಾಡಿದ್ದನ್ನು ನೋಡಿ, ಬಸವಣ್ಣನವರು ಈಗ ಇದ್ದಿದ್ದರೇ ನಾನು ಅವರ ಕಾರ್ಯಕ್ಕೆ ಹೆಗಲು ಕೊಡುತ್ತಿದ್ದೆ ಎಂದಿದ್ದರಂತೆ. ಫ.ಗು ಹಳಕಟ್ಟಿಯವರು, ಡೆಪ್ಯುಟಿ ಚನ್ನಬಸಪ್ಪನವರು, ಹರ್ಡೇಕರ್ ಮಂಜಪ್ಪನವರು ಲಿಂಗಾಯತ ಧರ್ಮಕ್ಕೆ ಮೇರು ವ್ಯಕ್ತಿತ್ವ ತಂದು ಕೊಟ್ಟವರು ಎಂದು ಹೇಳಿದರು.

ಉಪನ್ಯಾಸಕರಾಗಿ ಆಗಮಿಸಿದ ವಿಜಯಪುರದ ನಿವೃತ್ತ ಪ್ರಾಚಾರ್ಯರಾದ ಗಾನಕೋಗಿಲೆ ಶ್ರೀ ಬಸವರಾಜ ಕೆಂಧೂಳಿ ಮಾತನಾಡಿ, ಸಾರ್ಥಕ ಜೀವನದ ಸೂತ್ರಗಳು ಬಗ್ಗೆ ಮಾತನಾಡುತ್ತಾ ಹಲವಾರು ಬಸವಣ್ಣನವರ ವಚನಗಳನ್ನು ಸುಶ್ರಾವ್ಯವಾಗಿ ಹಾಡಿ, ಜೀವನದ ಸಪ್ತ ಸೂತ್ರಗಳು ಹೇಗೆ ವಚನಗಳಲ್ಲಿ ಅಡಕವಾಗಿವೆ ಎಂದು ತಿಳಿಸಿದರು. ಹಾಗೆಯೇ ಸಮಾಜದಲ್ಲಿ ಜಾಗ್ರತಿ ಮೂಡಿಸುವ ಹಲವಾರು ಗೀತೆಗಳನ್ನು ಹಾಡಿದರು.
ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತ ಸೇವೆ ನೇರವೇರಿಸಿದರು. ಧರ್ಮಗ್ರಂಥ ಪಠಣವನ್ನು ವರ್ಷಾ ಆರ್. ಮಳಜಿ ಹಾಗೂ ವಚನ ಚಿಂತನವನ್ನು ಸಾನ್ವಿ ಆರ್. ಪಾಟೀಲ ಮಾಡಿದರು.
ದಾಸೋಹ ಸೇವೆಯನ್ನು ಶಾಂತಾದೇವಿ ಅಂದಾನಪ್ಪ ಗೌಡರ ಹಾಗೂ ಕುಟುಂಬ ವರ್ಗದವರು ಮತ್ತು ಶ್ರೀಮತಿ ಎಚ್. ವನಜಾಕ್ಷಿ ಹಾಗೂ ಎಚ್. ಮಹೇಂದ್ರ ಬೆಂಗಳೂರ ಹಾಗೂ ತೋಂಟದಾರ್ಯ ಮಠ ಶಿರೋಳದ ಜಾತ್ರಾ ಮಹೋತ್ಸವ ಸಮಿತಿ ೨೦೨೫ ಅಧ್ಯಕ್ಷರಾದ ಶಿವಾನಂದ ಯಲಬಳ್ಳಿ, ಉಪಾಧ್ಯಕ್ಷ ಶ್ರೀಧರ ಶಿಪ್ರಿ, ಕಾರ್ಯದರ್ಶಿ ಬಸವರಾಜ ಕುರಿ, ಸಹ ಕಾರ್ಯದರ್ಶಿ ಪರಶುರಾಮ ಮಡಿವಾಳರ ಇವರುಗಳು ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ.ಉಮೇಶ ಪುರದ, ವಿದ್ಯಾ ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
ವಿದ್ಯಾ ಗಂಜಿಹಾಳ ಸ್ವಾಗತಗೈದರು. ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಪರಿಚಯಿಸಿದರು. ಅಶೋಕ್ ಹಾದಿ ಹಾಗೂ ಡಾ.ಉಮೇಶ ಪುರದ ಕಾರ್ಯಕ್ರಮ ನಿರೂಪಿಸಿದರು.