ಈಗ ನಗರದಲ್ಲಿ ಕೇವಲ ಗಂಗಾಧರರಾವ್ ದೇಶಪಾಂಡೆ ಅವರ ಪುತ್ಥಳಿ ಅನಾವರಣ ಹಾಗೂ ಸ್ಮಾರಕ ಭವನ ನಿರ್ಮಿಸಲಾಗುತ್ತಿದೆ…
ಬೆಳಗಾವಿ
ಕರ್ನಾಟಕದ ಗಾಂಧಿ ಎಂದು ಪರಿಗಣಿಸಲ್ಪಡುವ ಹರ್ಡೆಕರ್ ಮಂಜಪ್ಪನವರ ಸ್ಮಾರಕವನ್ನು ಬೆಳಗಾವಿಯಲ್ಲಿ ನಿರ್ಮಾಣ ಮಾಡಬೇಕು ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಜರುಗಿದ ಕಾಂಗ್ರೆಸ್ ಮಹಾ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ವೈಭವದಿಂದ ಆಚರಿಸುತ್ತಿರುವದು ಶ್ಲಾಘನೀಯ, ಇದೇ ಸಂದರ್ಭದಲ್ಲಿ ಅಂದಿನ ಅಧಿವೇಶನ ಯಶಸ್ವಿಯಾಗಲು ಹಗಲಿರುಳು ಶ್ರಮಿಸಿದ ಕರ್ನಾಟಕ ಸಿಂಹ ಗಂಗಾಧರರಾವ್ ದೇಶಪಾಂಡೆ ಮತ್ತು ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪನವರನ್ನು ನೆನಪಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದ್ದಾರೆ.
ಆದರೆ ಬೆಳಗಾವಿಯಲ್ಲಿ ಕೇವಲ ಗಂಗಾಧರರಾವ್ ದೇಶಪಾಂಡೆ ಅವರ ಪುತ್ಥಳಿ ಅನಾವರಣ ಹಾಗೂ ಸ್ಮಾರಕ ಭವನ ನಿರ್ಮಿಸಲಾಗುತ್ತಿದೆ. ಇದರೊಂದಿಗೆ ಕರ್ನಾಟಕದ ಗಾಂಧಿ ಎಂದೇ ಖ್ಯಾತರಾದ ಹರ್ಡೇಕರ್ ಮಂಜಪ್ಪನವರ ಪುತ್ಥಳಿಯನ್ನು ಕೂಡ ಅನಾವರಣಗೊಳಿಸಬೇಕು ಹಾಗೂ ಸ್ಮಾರಕ ಭವನ ನಿರ್ಮಿಸಬೇಕು ಎಂದು ಶ್ರೀಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ೧೯೨೪ ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮಾ ಗಾಂಧಿ ವಹಿಸಲು ಗಂಗಾಧರ ರಾವ್ ದೇಶಪಾಂಡೆ ಅವರು ಕಾರಣರಾದಂತೆ ಶ್ರೀ ಬಸವೇಶ್ವರ ಸೇವಾದಳ ಎಂಬ ಯುವಕರ ಸಂಘಟನೆಯನ್ನು ಸ್ಥಾಪಿಸಿದ ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪನವರು ಯುವಕರನ್ನು ಸಂಘಟಿಸಿ ಸಮ್ಮೇಳನದ ಸಮಸ್ತ ಚಟುವಟಿಕೆಗಳನ್ನು ಕೈಗೊಂಡು ಸಮ್ಮೇಳನದ ಯಶಸ್ಸಿಗೆ ಕಾರಣೀಭೂತರಾಗಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದಾರೆ. ಸತ್ಯಾಗ್ರಹಿ ಬಸವೇಶ್ವರ ಎಂಬ ಹಿಂದಿ ಪುಸ್ತಕವೊಂದನ್ನು ಮಹಾತ್ಮ ಗಾಂಧೀಜಿಯವರ ಕೈಗಿತ್ತು ವಿಶ್ವಗುರು ಬಸವಣ್ಣನವರನ್ನು ಗಾಂಧೀಜಿಯವರಿಗೆ ಪರಿಚಯಿಸಿದ್ದರು.
ಬದುಕಿನುದ್ದಕ್ಕೂ ಬ್ರಹ್ಮಚಾರಿಯಾಗಿದ್ದು ಜನಮನವನ್ನು ತಲುಪಿದ ಮಂಜಪ್ಪನವರ ಸ್ಮಾರಕ ಬೆಳಗಾವಿ ಮಹಾನಗರದಲ್ಲಿ ನಿರ್ಮಿಸಬೇಕು ಮತ್ತು ಅವರ ಹೆಸರಿನಲ್ಲಿ ಗಾಂಧೀತತ್ವಗಳ ಪ್ರತಿಪಾದಕರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡುವಂತಹ ಕೆಲಸ ಆಗಬೇಕು ಎಂದು ಶ್ರೀಗಳು ಒತ್ತಾಯಿಸಿದ್ದಾರೆ.