ಹೊನ್ನಾಳಿ
ಪಟ್ಟಣದ ಅಭಿನೇತ್ರಿ ನೃತ್ಯ ಮತ್ತು ಸಂಗೀತ ಮಂದಿರದಲ್ಲಿ ಇತ್ತೀಚಿಗೆ ನಡೆದ “ವಚನೋತ್ಸವ” ಕಾರ್ಯಕ್ರಮದಲ್ಲಿ 60 ಮಹಿಳೆ ಮತ್ತು ಮಕ್ಕಳಿಗೆ ವಚನ ಗಾಯನ ತರಬೇತಿ ನೀಡಲಾಯಿತು.
ತರಬೇತಿಯನ್ನು ಕದಳಿ ಮಹಿಳಾ ವೇದಿಕೆಯ ದಾವಣಗೆರೆ ಜಿಲ್ಲಾ ಘಟಕ ಹಾಗೂ ಹೊನ್ನಾಳಿ ತಾಲೂಕು ಘಟಕಗಳು ಜಂಟಿಯಾಗಿ ಆಯೋಜಿಸಿದ್ದವು.

ಗಾಯನ ತರಬೇತಿ ನೀಡಲು ಆಗಮಿಸಿದ್ದ ಕದಳಿ ಮಹಿಳಾ ವೇದಿಕೆಯ ಗೌರವ ಸಲಹೆಗಾರರಾದ ಶರಣೆ ಯಶಾ ದಿನೇಶ್ ಯಶಾ ದಿನೇಶ್ ಅವರು 12ನೇ ಶತಮಾನದ ವಚನಕಾರ್ತಿಯರ ಆಯ್ದ 5 ವಚನಗಳನ್ನು ಸುಶ್ರಾವ್ಯವಾಗಿ ರಾಗಬದ್ಧವಾಗಿ ಹಾಗೂ ಸುಮಧುರವಾಗಿ ಹಾಡಲು ಕಲಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಅವರು ವಚನೋತ್ಸವ ಕಾರ್ಯಕ್ರಮವನ್ನು ದಾವಣಗೆರೆಯ ಎಲ್ಲಾ ತಾಲೂಕುಗಳಲ್ಲಿ ಹಮ್ಮಿಕೊಂಡಿದ್ದೇವೆ, ಈಗಾಗಲೇ ಹರಿಹರ ತಾಲೂಕಿನಲ್ಲಿ ಯಶಸ್ವಿಯಾಗಿ ನೆರವೇರಿದೆ. ಇಂದು ಇಲ್ಲಿ ನೆರವೇರಲಿದ್ದು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ನೋಡಿ ತುಂಬಾ ಸಂತೋಷವಾಗಿದೆ. ಮಹಿಳೆಯರು ಮಕ್ಕಳು ಹಾಗೂ ಪುರುಷರು ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ವೇದಿಕೆ ಜಿಲ್ಲಾಧ್ಯಕ್ಷೆ ಮಮತಾ ನಾಗರಾಜ್ ಪ್ರಾಸ್ತಾವಿಕ ನುಡಿಯಲ್ಲಿ, ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಹಾಗೂ ಅವುಗಳಲ್ಲಿ ಜೀವನದ ಸಮಸ್ಯೆಗಳಿಗೆ ಉತ್ತರವಿದೆ. ಅವು ನಮ್ಮ ಬಾಳಿಗೆ ದಾರಿದೀಪದಂತಿದ್ದು ನಮ್ಮ ಜ್ಞಾನವನ್ನು, ಅರಿವನ್ನು ಹೆಚ್ಚಿಸುತ್ತವೆ ಎಂದರು.
ಹೊನ್ನಾಳಿ ತಾಲೂಕು ವೇದಿಕೆ ಗೌರವಾಧ್ಯಕ್ಷೆ ಶಾರದಾ ಕೊಣಕೊಟಗಿಯವರು ವಚನಕಾರರನ್ನು ಪರಿಚಯಿಸಿ ವಚನಗಳ ಮೂಲವನ್ನು, ಮಹತ್ವವನ್ನು ತಿಳಿಸಿ, ಸಮಯ ವ್ಯರ್ಥ ಮಾಡದೆ ಶರಣ ಸಾಹಿತ್ಯವನ್ನು ಓದಲು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ಅಧ್ಯಕ್ಷೆ ಡಾ. ಪ್ರತಿಭಾ ನಿಜಗುಣ ಶಿವಯೋಗಿ ವಹಿಸಿ ಮಾತನಾಡಿ, ಶರಣೆಯರ ವಚನ ಸೌರಭವನ್ನು ನಾಡಿನ ಮೂಲೆ ಮೂಲೆಗೆ ತಲುಪಿಸಲು ಇಂತಹ ಕಾರ್ಯಕ್ರಮಗಳು ಪೂರಕವಾಗಿ ಕೆಲಸ ಮಾಡುತ್ತವೆ. ಮಹಿಳೆಯರು ಮನೆಯಲ್ಲಿ ವ್ಯರ್ಥವಾಗಿ ಕುಳಿತುಕೊಳ್ಳದೆ ವಚನೋತ್ಸವದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ನಮ್ಮ ವಚನಕಾರರ ವಚನಗಳನ್ನು ಕಲಿತು ಅರ್ಥ ಮಾಡಿಕೊಳ್ಳಬಹುದು ಹಾಗೂ ವಚನಗಳನ್ನು ರಚಿಸಲಿಕ್ಕೂ ಪ್ರಯತ್ನ ಪಡಬಹುದು ಎಂದು ಹೇಳಿದರು.

ಭಾಗವಹಿಸಿದ 60 ಶಿಬಿರಾರ್ಥಿಗಳೆಲ್ಲರೂ ಆಸಕ್ತಿಯಿಂದ ಶ್ರದ್ಧೆಯಿಂದ ಕಲಿತರು. ಮಮತಾ ನಾಗರಾಜ್ ಅವರು ವಚನಗಳ ಭಾವಾರ್ಥ ವಿವರಿಸಿ, ವಿಶ್ಲೇಷಣೆ ಮಾಡಿದರು.
ಹೊನ್ನಾಳಿ ಕದಳಿ ಮಹಿಳಾ ವೇದಿಕೆ ಸದಸ್ಯರೆಲ್ಲರೂ ಸೇರಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು. ವೇದಿಕೆಯ ದಾವಣಗೆರೆ ತಾಲೂಕು ಕಾರ್ಯದರ್ಶಿ ರತ್ನ ಸಿ. ರೆಡ್ಡಿ ಮತ್ತು ಜಿಲ್ಲಾ ಸಹ ಕಾರ್ಯದರ್ಶಿಯವರಾದ ಪೂರ್ಣಿಮಾ ಪ್ರಸನ್ನಕುಮಾರ ಉಪಸ್ಥಿತರಿದ್ದರು.