ಅಮೀನಗಡ
‘ಹೂಗಾರ ಸಮಾಜವು ತನ್ನದೇ ಆದ ಇತಿಹಾಸ ಹೊಂದಿದ್ದು, ಇಂತಹ ಹಿಂದುಳಿದ ಸಮಾಜಗಳ ಬಗ್ಗೆ ಸರ್ಕಾರ ಗಮನಹರಿಸಿ ಯೋಜನೆ ರೂಪಿಸಬೇಕು’ ಎಂದು ಮುದ್ದೇಬಿಹಾಳ ಎಂಜಿವಿಸಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಶಿವಾನಂದ ಹೂಗಾರ ಹೇಳಿದರು.
ಪಟ್ಟಣದ ಸಂಗಮೇಶ್ವರ ದೇವಸ್ಥಾನ ಹತ್ತಿರದ ಶಿವಸಿಂಪಿ ಸಮುದಾಯ ಭವನದಲ್ಲಿ ಹೂಗಾರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶುಕ್ರವಾರ ನಡೆದ ಶರಣ ಹೂಗಾರ ಮಾದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಮಾಜವು ಪ್ರಗತಿ ಹೊಂದಬೇಕಾದರೆ ಕುಲಕಸುಬಿನ ಜೊತೆಗೆ ಶಿಕ್ಷಣಕ್ಕೆ ಆದ್ಯತೆ ನೀಡುವುದು ಬಹುಮುಖ್ಯ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಬೇಕು. ಬಸವಣ್ಣನವರು ಕೆಳವರ್ಗದ ಸಮುದಾಯಗಳನ್ನು ಮೇಲೆತ್ತುವ ಕಾರ್ಯ ಮಾಡಿದರು’ ಎಂದರು.
ಪ್ರಭುಶಂಕರೇಶ್ವರ ಮಠದ ಶಂಕರರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಬಸವಾದಿ ಶರಣರ ವಿಚಾರಗಳಿಂದ ನಾವು ಉತ್ತಮ ಬದುಕು ಕಟ್ಟಿಕೊಳ್ಳಬಹುದು. ದುಶ್ಚಟಗಳ ದಾಸರಾದರೆ ಬದುಕಿನ ಬಂಡಿ ಹಳಿ ತಪ್ಪುತ್ತದೆ. ಪ್ರತಿಯೊಬ್ಬರು ಕಾಯಕದಲ್ಲಿ ತೊಡಗಿಸಿಕೊಳ್ಳಿ. ಹೂವು ಮಾರುವುದು ಮತ್ತು ಪತ್ರಿ ಕೊಡುವುದು ಪವಿತ್ರ ಕಾಯಕ, ಅದನ್ನು ಮರೆಯಬಾರದು’ ಎಂದು ತಿಳಿಸಿದರು.
ಮುಖಂಡರಾದ ಬಸವರಾಜ ಹೂಗಾರ ಮತ್ತು ಸಕ್ರಪ್ಪ ಹೂಗಾರ ಮಾತನಾಡಿದರು.
ಸಂಗಪ್ಪ ಹೂಗಾರ, ತಾಲ್ಲೂಕು ಹೂಗಾರ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಹೂಗಾರ, ಇಳಕಲ್ ತಾಲ್ಲೂಕು ಹೂಗಾರ ಸಮಾಜದ ಅಧ್ಯಕ್ಷ ಶಿವಲಿಂಗಪ್ಪ ಹೂಗಾರ, ಶರಣಪ್ಪ ಹೂಗಾರ, ಮಲ್ಲಪ್ಪ ಹೂಗಾರ, ಹನಮಂತಪ್ಪ ಹೂಗಾರ, ನಿಂಗಣ್ಣ ತಮದಡ್ಡಿ, ಶೇಕಣ್ಣ ಇಲಕಲ್ಲ, ಅಂದಪ್ಪ ತಾಳಿಕೋಟಿ, ಮಹಾಂತೇಶ ಐಹೊಳೆ ಮತ್ತಿತರರು ಇದ್ದರು.