ಇಳಕಲ್ಲ ಮಠದಲ್ಲಿ ‘ನಮ್ಮ ಸೈನಿಕರಿಗೆ ಸಾವಿರ ಸಾವಿರ ನಮನ’ ವಿಶೇಷ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಇಳಕಲ್ಲ

ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಮಠದ 649ನೇ ಶಿವಾನುಭವ ಗೋಷ್ಠಿಯ ಅಂಗವಾಗಿ “ನಮ್ಮ ಸೈನಿಕರಿಗೆ ಸಾವಿರ ಸಾವಿರ ನಮನ” ಎಂಬ ವಿಶೇಷ ಕಾರ್ಯಕ್ರಮ ನಡೆಸಲಾಯಿತು.

ದಿವ್ಯ ಸಾನಿಧ್ಯವನ್ನು ವಹಿಸಿದ್ದ ಪೂಜ್ಯ ಗುರುಮಹಾಂತ ಮಹಾಸ್ವಾಮಿಗಳು ಮಾತನಾಡಿ, “ನಾವೆಲ್ಲ ಸೈನಿಕರಿಗೆ ತುಂಬಾ ಋಣಿಯಾಗಿರಬೇಕು, ಕಾರಣ ಅವರ ಬಲಿದಾನ – ತ್ಯಾಗದ ಫಲವೇ ನಾವು ನಾಡಿನಲ್ಲಿ ಸುಖ-ನೆಮ್ಮದಿಯಿಂದಿರಲು ಸಾಧ್ಯ,” ಎಂದರು.

ಪೂಜ್ಯ ಗುರುಮಹಾಂತಪ್ಪಗಳ ಜನ್ಮದಿನವಾಗಿದ್ದರಿಂದ ಬಹಳಷ್ಟು ಸಂಘ, ಸಮುದಾಯಗಳು ಅವರಿಗೆ ಸತ್ಕಾರವನ್ನು ಮಾಡಿದರು.

ಇದೇ ಸಂದರ್ಭದಲ್ಲಿ ನಾಗನೂರ ಗುರುಬಸವ ಮಠದ ಕುಮಾರ ಚನ್ನಬಸವ ಪಾಟೀಲ ತಾನೇ ಚಿತ್ರಿಸಿದ ಲಿಂಗೈಕ್ಯ ಮಹಾಂತ ಸ್ವಾಮೀಜಿ ಜೊತೆ ಗುರುಮಹಾಂತಪ್ಪ ಶ್ರೀಗಳಿರುವ ಭಾವಚಿತ್ರವನ್ನು ಪೂಜ್ಯರಿಗೆ ಅರ್ಪಿಸಿದನು.

ಕಾರ್ಯಕ್ರಮದ ಅನುಭಾವಿಗಳಾದ ನಾಗನೂರ ಗುರುಬಸವ ಮಠದ ಪೂಜ್ಯ ಬಸವಗೀತಾ ತಾಯಿಯವರು ಕಾರ್ಯಕ್ರಮವನ್ನು ಸೈನಿಕರಿಗೆ ಅರ್ಪಿಸಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಜೊತೆಗೆ ಸ್ವಾತಂತ್ರ್ಯ ಸಿಗುವ ಮುನ್ನ ಆಗಿರುವ ಹೋರಾಟಗಳ ಮೆಲುಕು ಹಾಕಿದರು. ಇಲಕಲ್ಲದ ಮಠವು ಬಸವತತ್ವದ ಪ್ರಮುಖ ಮಠಗಳಲ್ಲಿ ಒಂದಾಗಿದೆ‌. ಇಷ್ಠಲಿಂಗವನ್ನು ಕಟ್ಟುವ ಕೆಲಸವನ್ನು ಮಹಾಂತ ಶಿವಯೋಗಿಗಳು ಹೆಚ್ಚಾಗಿ ಮಾಡಿದ್ದಾರೆ” ಎಂದು ಮಾತಾಜಿ ಹೇಳಿದರು.

ನಾಗನೂರಿನ ಬಸವಾಶ್ರಮದ ಡಿ.ಪಿ. ನಿವೇದಿತಾ ಬಸವಣ್ಣನವರನ್ನು ವಿಶ್ವಗುರು ಬಸವಣ್ಣ ಎಂದು ಏಕೆ ಕರೆಯಬೇಕು ಎಂಬ ಪ್ರಶ್ನೆ ಉದಯಿಸಿದಾಗ ಹೇಗೆಲ್ಲಾ ಉತ್ತರಿಸಬೇಕು ಎಂದು ಹೇಳಿದರು. ಲಿಂಗ ಸಮಾನತೆ, ಅಂಗ ಸಮಾನತೆ, ವರ್ಗ-ವರ್ಣಗಳ ಭೇದವನ್ನು ತೊಡೆದು ಹಾಕಿದರು, ಸ್ತ್ರೀಯು ಅಡುಗೆ ಮನೆ ಬಿಟ್ಟು ಪಡಸಾಲೆಗೆ ಬರಲೂ ಸ್ವಾತಂತ್ಯವಿಲ್ಲದ ಕಾಲದಲ್ಲಿ ಸ್ತ್ರೀಯನ್ನು ಜಗನ್ಮಾತೆಯನ್ನಾಗಿ ಮಾಡಿದರು, ಜಾತಿಭೂತದ ನಡುವೆ ಅಪ್ಪನು ನಮ್ಮ ಮಾದಾರ ಚನ್ನಯ್ಯ, ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ ಎಂದು ಹೇಳಿ ತಾವು ಕಿಂಕರರಾಗಿ ಉಳಿದವರನ್ನು ಶಂಕರರನ್ನಾಗಿಸಿದರು‌. ಹೀಗಿರುವಾಗ ಬಸವಣ್ಣನವರನ್ನು ವಿಶ್ವಗುರು ಎನ್ನಲು ಹಿಂಜರಿಕೆಯೇಕೆ” ಎಂದರು.

ಅತಿಥಿಗಳಾದ ಮಾಜಿ ಸೈನಿಕ ಪರಪ್ಪ ಅಥಣಿಯವರು ಮಾತನಾಡಿ, ಭಾರತ ನೆಮ್ಮದಿಯಿಂದಿರಲು ಇಬ್ಬರ ಅವಶ್ಯಕತೆ ತುಂಬಾ ಇದೆ. ಒಬ್ಬ ಕೃಷಿಕ ಮತ್ತೊಬ್ಬ ಸೈನಿಕ. ಇತ್ತೀಚಿಗೆ ನಡೆದ ಪಹಲ್ಗಾಮ್ ದಾಳಿಯನ್ನು ನೆನೆದು ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ಮನೆ ಮನೆಗೂ ಒಬ್ಬೊಬ್ಬ ಸೈನಿಕರನ್ನು ದೇಶಕ್ಕೆ ಕೊಡುಗೆಯನ್ನಾಗಿ ಕೊಡಿ, ಮಕ್ಕಳಿಗೆ ಉತ್ತಮ ಸಾಧಕರ ಕಥೆಗಳನ್ನು ಹೇಳಿ” ಎಂದರು.

ಕಾರ್ಯಕ್ರಮದಲ್ಲಿ ನಾಗನೂರಿನ ಗುರುಬಸವ ಮಠದ ಪೂಜ್ಯ ಶ್ರೀ ಬಸವಪ್ರಕಾಶ ಸ್ವಾಮೀಜಿಯವರು, ಅಖಿಲ ಕರ್ನಾಟಕದ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಸುಬೇದಾರ ಬಾಳಪ್ಪ ಕಿರೆಸೂರ ಉಪಸ್ಥಿತರಿದ್ದರು.

ಅಕ್ಕನ ಬಳಗದ ತಾಯಂದಿರು ವಚನ ಪ್ರಾರ್ಥನೆಯನ್ನು ಮಾಡಿದರು. ವಿಜಯ ಶಿಂಗಶೆಟ್ಟಿ ಡ್ಯಾನ್ಸ್ ಅಕಾಡೆಮಿಯಿಂದ ದೇಶಭಕ್ತಿಗೀತೆಯ ನೃತ್ಯವು ಪ್ರದರ್ಶಿಸಲ್ಪಟ್ಟಿತು.

ಶರಣೆ ಶಶಿಕಲಾ ಮಠ, ಶರಣ ಡಾ. ಜಿ. ಮಲ್ಲಯ್ಯ ಇಳಕಲ್ ಇವರು ದಾಸೋಹ ಸೇವೆಗೈದರು. ಕಾರ್ಯಕ್ರಮದ ಅಂಗವಾಗಿ ಪ್ರಾಥ:ಕಾಲ ಮಠದಿಂದ ಪ್ರಭಾತ ಸಂಚಲನ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Dv8eAoC8n2rJOtZKYt4o86

Share This Article
Leave a comment

Leave a Reply

Your email address will not be published. Required fields are marked *