ಗದಗ
ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ ೨೭೪೭ ಶಿವಾನುಭವದಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ ಪ್ರಥಮ, ದ್ವಿತೀಯ, ತೃತೀಯ ಬಂದ ೨೧ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಿಧ್ಯಾರ್ಥಿ ಜೀವನ ತಪಸ್ಸು ಇದ್ದಂತೆ. ಪ್ರತಿಯೊಂದು ಬೆಳಗಿನ ಓದು, ರಾತ್ರಿ ತಯಾರಿ ನಿಮ್ಮ ಸಾಧನೆಯನ್ನು ಉತ್ತುಂಗಕ್ಕೇರಿಸುತ್ತದೆ. ಈ ಯಶಸ್ಸು ಶಿಕ್ಷಣ ಮಾರ್ಗದ ಒಂದು ಹೆಜ್ಜೆ ಅಷ್ಟೆ. ಮುಂದೆ ಹೋದಂತೆ ಹೆಚ್ಚಿನ ಅವಕಾಶಗಳು ಮತ್ತು ಗುರಿಗಳಿವೆ. ಈ ಸಾಧನೆಗಳು ಉಜ್ವಲವಾದ ಭವಿಷ್ಯಕ್ಕೆ ದಾರಿಯಾಗಿದೆ. ನಿಮ್ಮ ಭವಿಷ್ಯ ಬೆಳಕಿನಿಂದ ತುಂಬಿರಲಿ. ನೀವು ಉಜ್ವಲ ನಕ್ಷತ್ರಗಳಾಗಿರಿ ಎಂದು ಪ್ರತಿಭಾ ಪುರಸ್ಕಾರ ಪಡೆದ ವಿಧ್ಯಾರ್ಥಿಗಳಿಗೆ ಶ್ರೀಗಳು ಹಾರೈಸಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಗದುಗಿನ ಶಾಲಾ ಶಿಕ್ಷಣ ಇಲಾಖೆಯ ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿಗಳಾದ ಎಚ್.ಬಿ. ರಡ್ಡೇರ ಅವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯ ಓದುವ ಬಗ್ಗೆ ಸಮರ್ಪಣಾಭಾವ ಮತ್ತು ಶಿಸ್ತು ಉತ್ತಮ ಅಂಕ ಪಡೆಯಲು ಸಾಧ್ಯವಾಗಿದೆ. ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧಿಸಿದ ಉನ್ನತ ಫಲಿತಾಂಶ ಶಿಕ್ಷಣ ಇಲಾಖೆಗೆ ಸಾಧನೆಯ ಮುಕುಟವಾಗಿದೆ. ನಿಮ್ಮ ಮುಂಬರುವ ಶಿಕ್ಷಣದ ಆಯ್ಕೆ ನಿಮ್ಮ ಆಸಕ್ತಿಯ ಆಯ್ಕೆ ಆಗಿರಲಿ ಎಂದು ಮಾರ್ಗದರ್ಶಿಯ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ ಜಿಲ್ಲೆಯ ಉಪನಿರ್ದೇಶಕರಾದ ಆರ್.ಎಸ್. ಬುರಡಿ ಅವರು ಮಾತನಾಡುತ್ತಾ, ಪರೀಕ್ಷೆಯಲ್ಲಿ ಪರಿಶ್ರಮ ಪಟ್ಟು ಓದಿ ಉತ್ತಮ ಅಂಕ ಪಡೆದಿದ್ದೀರಿ. ನಿಮ್ಮ ಫಲಿತಾಂಶ ನೈಜ ಫಲಿತಾಂಶ. ವೆಬ್ಕಾಸ್ಟಿಂಗ್ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಇದ್ದಾಗಲು ಪರಿಶ್ರಮಪಟ್ಟು ಓದಿ ಜಿಲ್ಲೆಯ ಕೀರ್ತಿಯನ್ನು ತಂದಿದ್ದೀರಿ. ಇದೇ ರೀತಿ ನಿಮ್ಮ ಸಾಧನೆ ಸಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗದುಗಿನ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್.ಬಿ. ಮಸನಾಯಕ, ಹಾಗೂ ಶಿರಹಟ್ಟಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಂ.ಸಿ. ಗಿರಿತಮ್ಮಣ್ಣವರ ಉಪಸ್ಥಿತರಿದ್ದರು. ವಚನ ಸಂಗೀತ ಸೇವೆಯನ್ನು ಗುರುನಾಥ್ ಸುತಾರ ಹಾಗೂ ಅನಿರುದ್ಧ ಧನೇಶ್ ದೇಸಾಯಿ ಮತ್ತು ಶಿವಾನಂದ ಭಾವಿಕಟ್ಟಿ ನಡೆಸಿಕೊಟ್ಟರು.

ತೋಂಟದಾರ್ಯ ಕೈಗಾರಿಕಾ ತರಬೇತಿ ಕೇಂದ್ರ, ಮಂಡಲಗೇರಿಯ ಕಿರಿಯ ತರಬೇತಿ ಅಧಿಕಾರಿಗಳಾದ ಭೋಜರಾಜ ಸೊಪ್ಪಿಮಠ ಅವರು ರಚಿಸಿದ “ಎಲ್ಲಾ ನನ್ನವಳದೆ” ಪುಸ್ತಕ ಲೋಕಾರ್ಪಣೆಯಾಯಿತು.
ಧಾರ್ಮಿಕ ಗ್ರಂಥ ಪಠಣವನ್ನು ಕುಮಾರ ವಿಶ್ವಾಸ ಎಂ. ಮಳಗಾವಿಮಠ ಹಾಗೂ ವಚನ ಚಿಂತನವನ್ನು ಕುಮಾರಿ ಸ್ಪೂರ್ತಿ ಎಂ. ಮಳಗಾವಿಮಠ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಲಿಂಗನಗೌಡ ಶಂಕರಗೌಡ ಬೆಳವಟಿಗಿ ನಿವೃತ್ತ ಶಿಕ್ಷಕರು ಗದಗ ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷರಾದ ಡಾ. ಉಮೇಶ ಪುರದ ಹಾಗೂ ವಿದ್ಯಾ ಪ್ರಭು ಗಂಜಿಹಾಳ ಕಾರ್ಯದರ್ಶಿ ವೀರಣ್ಣ ಗೋಟಡಕಿ ಸಹಕಾರ್ಯದರ್ಶಿ ಸೋಮು ಪುರಾಣಿಕ ಹಾಗೂ ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ ಕೋಶಾಧ್ಯಕ್ಷರಾದ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ, ಸಹಚೇರ್ಮನ್ ಶಿವಾನಂದ ಹೊಂಬಳ ಸೇರಿದಂತೆ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ಡಾ. ಉಮೇಶ ಪುರದ ಸ್ವಾಗತಿಸಿದರೆ, ಅಶೋಕ ಹಾದಿ ಕಾರ್ಯಕ್ರಮ ನಿರೂಪಿಸಿದರು.