‘ಕೈದಿಗಳು ಶರಣರಾಗಲಿ, ಜೈಲುಗಳು ಅನುಭವ ಮಂಟಪವಾಗಲಿ’

ಬಸವ ಮೀಡಿಯಾ
ಬಸವ ಮೀಡಿಯಾ

ಹಾವೇರಿ

ಜೈಲುಗಳು ಶರಣರ ಅನುಭವ ಮಂಟಪಗಳಾಗಲಿ. ಸಾಹಿತ್ಯ ಸಂಪರ್ಕದಿಂದ ಕೈದಿಗಳು ಶರಣರಾಗಲಿ ಎಂದು ಶಿಗ್ಗಾವಿಯ ಚೆನ್ನಪ್ಪ ಕುನ್ನೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ನಾಗರಾಜ ಜಿ.ದ್ಯಾಮನಕೊಪ್ಪ ಶುಕ್ರವಾರ ಆಶಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಹಾವೇರಿಯ ಜಿಲ್ಲಾ ಕಾರಾಗೃಹದಲ್ಲಿ ಏರ್ಪಡಿಸಿರುವ ಸಾಹಿತ್ಯ ಕಮ್ಮಟದ ಎರಡನೇ ದಿನ ‘ವಚನ ಸಾಹಿತ್ಯದ ಮಹತ್ವ’ ಕುರಿತು ಅವರು ಮಾತನಾಡಿದರು.

ಜಡತ್ವ ಸಮಾಜವನ್ನು ಜಂಗಮವಾಗಿಸಿದ ಅಲ್ಲದೆ ಜಾತಿ ವ್ಯವಸ್ಥೆ ಮುರಿದು ಸಮಾನತೆಯ ಸಮಾಜ ಕಟ್ಟಲು ಬಸವಾದಿ ಶರಣರು ಶ್ರಮಿಸಿದರು. ಸಮಾಜದ ಓನ್ನತ್ಯಕ್ಕೆ ಶ್ರಮಿಸಿದ ಬಸವಾದಿ ಶರಣರ ಆಶಯಕ್ಕೆ ಅನುಗುಣವಾಗಿ ಬದುಕಬೇಕಿದೆ ಎಂದು ಸಲಹೆ ನೀಡಿದರು.

‘ಕಲಬೇಡ ಕೊಲಬೇಡ ಹುಸಿಯ ನುಡಿಯಲುಬೇಡ’ ಎಂದ ಬಸವಣ್ಣನವರ ವಚನದಂತೆ ಬೇಡಗಳನ್ನು ಅಳವಡಿಸಿಕೊಂಡರೆ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಕಿವಿಮಾತು ಹೇಳಿದರು.

‘ಕನ್ನಡ ಕಾವ್ಯದಲ್ಲಿ ಸೌಹಾರ್ದ ನೆಲೆಗಳು’ ಕುರಿತು ಸಾಹಿತಿ ಹೆಬಸೂರ ರಂಜಾನ್ ಮಾತನಾಡಿ, ತುಳಿದು ಬದುಕುವುದಕ್ಕಿಂತ ತಿಳಿದು ಬದುಕಬೇಕು. ತಿಳಿದು ಬದುಕಿದರೆ ಅಳಿದ ಮೇಲೂ ಉಳಿಯುತ್ತೇವೆ ಎಂದರು.

ಸೌಹಾರ್ದ ಎಂದರೆ ಮನುಷ್ಯತ್ವ. ಆದರೆ ಮನುಷ್ಯರನ್ನು, ಮನುಷ್ಯತ್ವವನ್ನು ಕೊಲ್ಲುವ ವ್ಯವಸ್ಥೆಯಲ್ಲಿದ್ದೇವೆ. ಇದಕ್ಕಾಗಿ ಸಾಹಿತ್ಯ ಓದಬೇಕು. ಸಾಹಿತ್ಯವು ಜ್ಞಾನದ ಜೊತೆಗೆ ವಿವೇಕವನ್ನು ಮತ್ತು ಮನುಷ್ಯತ್ವವನ್ನು ಕಲಿಸುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾದ ಗೊಟಗೋಡಿಯ ರಾಕ್ ಗಾರ್ಡನ್ ಕ್ಯುರೇಟರ್ ವೇದಾರಾಣಿ ದಾಸನೂರ ಮಾತನಾಡಿ, ಇನ್ನೊಬ್ಬರೊಂದಿಗೆ ಹೊಡೆದಾಡಲು ಜಿಮ್‌ಗೆ ಹೋಗಬೇಡಿ. ಹರೆಯ ಎಂದರೆ ಕುದಿಯಿದ್ದ ಹಾಗೆ. ಕುದಿಯದೆ ಕುದ್ದು ಆರಿದ ನೀರಿನ ಹಾಗೆ ಬದುಕಿರಿ ಎಂದರು.

ಕುಡಗೋಲು, ಕೊಡಲಿಗಳನ್ನು ಹೊಲದಲ್ಲಿ ಕೆಲಸ ಮಾಡಲು ಬಳಸಿ. ಯಾವುದೇ ಕಾರಣಕ್ಕೂ ಇನ್ನೊಬ್ಬರ ಕುತ್ತಿಗೆ ಕೊಯ್ಯಲು ಬಳಸಬೇಡಿ. ಮದ್ಯವ್ಯಸನಿಯಾಗದೆ ಹೊಸ ಬದುಕು ಕಟ್ಟಿಕೊಳ್ಳಿ ಎಂದು ತಿಳಿಸಿದರು.

ರೈತ ಹಾಗೂ ಕವಿ ಚಂಸು ಪಾಟೀಲ ಮಾತನಾಡಿ, ನಮ್ಮ ಜಮೀನಿಗೆ ಗೊಬ್ಬರ, ಓಷಧಿ ಹಾಕದೆ ಸಾವಯವ ಕೃಷಿಯಿಂದಾಗಿ ಖರ್ಚು ಕಡಿಮೆಯಾಗಿದೆ. ಬೀಜ, ಗೊಬ್ಬರ, ಓಷಧಿ ಖರೀದಿಸದೆ ಇರುವುದರಿಂದ ಬಂಡವಾಳ ಕಡಿಮೆ ಹಾಗೂ ಲಾಭ ಹೆಚ್ಚು. ಕೃಷಿ ಸಲುವಾಗಿ ಸಾಲ ಮಾಡದೆ ನೆಮ್ಮದಿಯಿಂದ ಇದ್ದೇನೆ ಎಂದು ಹೆಮ್ಮೆಯಿಂದ ಹೇಳಿದರು.

ಕೃಷಿಯಿಂದ ಲಾಭವಿಲ್ಲ ಎಂದು ಊರು ತೊರೆಯುವ ಯುವಕರು ಸಣ್ಣಪುಟ್ಟ ಕೆಲಸಗಳಿಗಾಗಿ ನಗರ ಸೇರುತ್ತಾರೆ. ಆದರೆ ಭೂಮಿತಾಯಿ ನಂಬಿ ಕೃಷಿ ಮಾಡಬೇಕು. ಇದರಿಂದ ಹಳ್ಳಿಗಳಲ್ಲಿ ಉಳಿಯಲು ಸಾಧ್ಯವಾಗುತ್ತದೆ ಎಂದರು.

ಜಾನಪದ ಕಲಾವಿದರಾದ ಬಸವರಾಜ ಶಿಗ್ಗಾಂವ್ ಮತ್ತು ಬಸವರಾಜ ಕರಡಿ ತತ್ವಪದಗಳನ್ನು ಹಾಡಿದರು.

ಸಾಹಿತ್ಯ ಕಮ್ಮಟದ ಸಂಚಾಲಕ ಗಣೇಶ ಅಮೀನಗಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಸಂಚಾಲಕ ಡಾ.ಮಲ್ಲಿಕಾರ್ಜುನ ಬಿ.ಮಾನ್ಪಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಜೂನ್ 19,20,21ರಂದು ಮೂರು ದಿನಗಳ ‘ಕಾರಾಗೃಹವಾಸಿಗಳಿಗೆ ಸಾಹಿತ್ಯ ಕಮ್ಮಟ’ ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಹಾವೇರಿ ಜಿಲ್ಲಾ ಕಾರಾಗೃಹ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಲಾಗಿದೆ.

Share This Article
Leave a comment

Leave a Reply

Your email address will not be published. Required fields are marked *