ನಂಜನಗೂಡು
ಬೀರೂರಿನ ಮಂಗಳಮ್ಮ ಮತ್ತು ರೇವಣಸಿದ್ದಪ್ಪರವರ ಮಗ ತನುಜಕುಮಾರ ಎನ್. ಆರ್. ಅವರ ಕಲ್ಯಾಣವು ಮರಳ್ಳಿಪುರದ ಪ್ರಮೀಳಾ ಮತ್ತು ಲಿಂಗೈಕ್ಯ ಮಹಾದೇವಸ್ವಾಮಿರವರ ಮಗಳು ಹರ್ಷಿತ ಎಂ. ಅವರ ಜೊತೆ ವಚನ ಕಲ್ಯಾಣ ಮಹೋತ್ಸವ ಬುಧವಾರ ಜರುಗಿತು.

ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದ ಆರಂಭದಲ್ಲಿ ಪೂಜ್ಯ ಬಸವಯೋಗಿಪ್ರಭು ಸ್ವಾಮಿಗಳ ಜೊತೆ ವಧು ವರರು ಇಷ್ಟಲಿಂಗ ಪೂಜೆಯನ್ನು ನೆರವೇರಿಸಿದರು. ನಂತರ ಮೂಡಗೂರಿನ ಪೂಜ್ಯ ಉದ್ದಾನ ಮಹಾಸ್ವಾಮಿಗಳ ಸಮ್ಮುಖದಲ್ಲಿ ಬಸವಣ್ಣರವರ ಷಟ್ಸ್ಥಲ ಧ್ವಜಾರೋಹಣ ನಡೆಯಿತು. ಹಲ್ಲರೆ ಶಿವಬುದ್ಧಿ ಮತ್ತು ತಂಡದವರ ವಚನ ಧ್ವಜಗೀತೆ ಹಾಡಿದರು.

ವಚನ ಮೂರ್ತಿಗಳಾದ ಮೇಲಾಜಿಪುರ ಶಿವಕುಮಾರ ಸ್ವಾಮೀಜಿ ಮತ್ತು ಕಾಳನಹುಂಡಿ ಕುಮಾರಸ್ವಾಮಿ ಬಸವಾದಿ ಶರಣರ ಆಶಯದಂತೆ ವರನಿಂದ ವಧುವಿಗೆ ಮಾಂಗಲ್ಯ ಧಾರಣೆ ಹಾಗೂ ವಧುವಿಂದ ವರನಿಗೆ ರುದ್ರಾಕ್ಷಿ ಧಾರಣೆಯನ್ನು ಮಾಡಿಸಿದರು. ನವದಂಪತಿಗಳಿಗೆ ನೆರೆದಿರುವ ಎಲ್ಲರೂ ಪುಷ್ಪಾರ್ಚನೆ ಮಾಡಿ ಶುಭಹಾರೈಸಿದರು.

ಲಿಂಗಾಯತರು ವಚನ ಮಾಂಗಲ್ಯ ಹಾಗೂ ಸರಳ ವಿವಾಹಗಳನ್ನು ನಡೆಸಬೇಕೆಂದು ಮೂಡಗೂರಿನ ಉದ್ದಾನ ಶ್ರೀಗಳು ತಮ್ಮ ಅನುಭಾವ ನುಡಿಗಳಲ್ಲಿ ಹೇಳಿದರು. ಮೇಲಾಜಿಪುರ ಶಿವಕುಮಾರ ಸ್ವಾಮಿಗಳು ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳ ಬಗ್ಗೆ ವಿವರವಾಗಿ ತಿಳಿಸಿದರು.
ಚೆನ್ನವಡೆಯನಪುರದ ಚನ್ನಪ್ಪ ಅವರು ನಿರೂಪಣೆ ಮಾಡಿದರು, ವಿಶ್ವಬಸವಸೇನೆಯ ಅಧ್ಯಕ್ಷರಾದ ಬಸವ ಯೋಗೇಶರವರು ಸ್ವಾಗತ ಮಾಡಿದರು ಹಾಗೂ ಎರಡೂ ಕಡೆಯ ಬಂಧು ಮಿತ್ರರು ಪಾಲ್ಗೊಂಡು ವಚನ ಕಲ್ಯಾಣವನ್ನು ಯಶಸ್ವಿಗೊಳಿಸಿದರು.