ಕಲಬುರಗಿ
ಸತ್ಯಶುದ್ಧ ಕಾಯಕ, ದಾಸೋಹದ ಮೂಲಕ ಇಡೀ ವಿಶ್ವಕ್ಕೆ ಹೊಸ ತತ್ವಾದರ್ಶಗಳನ್ನು ನೀಡಿದ ಶರಣರ ವಚನಗಳು ಶಾಂತಿ, ಸೌಹಾರ್ದತೆ, ಸಹಬಾಳ್ವೆ, ಮಾನವೀಯ ಮೌಲ್ಯಗಳಿಂದ ಕೂಡಿವೆ ಎಂದು ಶರಣಬಸವೇಶ್ವರ ಮಹಾಸಂಸ್ಥಾನದ ಚೇರ್ ಪರ್ಸನ್ ಮಾತೋಶ್ರೀ ದಾಕ್ಷಾಯಣಿ ಎಸ್. ಅಪ್ಪ ನುಡಿದರು.

ಬಸವ ಜಯಂತಿ ಉತ್ಸವ ಸಮಿತಿ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಮಂಗಳವಾರ ಸಂಜೆ ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 892ನೇ ಜಯಂತ್ಯುತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಬಸವಾಭಿಮಾನಿಗಳ ಬೃಹತ್ ಬಹಿರಂಗ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಮೊಟ್ಟ ಮೊದಲ ಸ್ವಾತಂತ್ರ್ಯ ಒದಗಿಸಿಕೊಟ್ಟವರು. ಮಹಾದಾಸೋಹಿ ಶರಣ ಬಸವೇಶ್ವರರು ಸ್ತ್ರೀ ಸಬಲೀಕರಣಕ್ಕೆ ನಾಂದಿ ಹಾಡಿದರು ಎಂದು ಅಭಿಪ್ರಾಯಪಟ್ಟರು.
ಸಾನ್ನಿಧ್ಯ ವಹಿಸಿದ್ದ ಬೆಳವಿಯ ಶರಣ ಬಸವದೇವರು ಮಾತನಾಡಿ, ಇಂದಿನ ಮತ್ತು ಮುಂದಿನ ಜ್ವಲಂತ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರವಿದೆ. ವಚನ ಸಂವಿಧಾನ, ಭಾರತ ಸಂವಿಧಾನ ಎರಡೂ ಒಂದೇ! ಎಂದು ಹೇಳಿದರು.

ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಘೋಷಣೆ ಮಾಡಿದ್ದರಿಂದ ಸರ್ಕಾರದ ಆಯುಷ್ಯ ಹೆಚ್ಚಾಗಿದೆ. ಮುಂದೊಂದು ದಿನ ಬಸವಣ್ಣ ಭಾರತದ ಸಾಂಸ್ಕೃತಿಕ ನಾಯಕ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಲ್ಯಾಣದ ಹೆಬ್ಬಾಗಿಲು ಕಲಬುರಗಿಯ ಬಸವಣ್ಣನ ಅನುಯಾಯಿಗಳು ಎಲ್ಲರೂ ಒಂದೆನ್ನುವುದನ್ನು ಈ ಮೂಲಕ ತೋರಿಸಿಕೊಟ್ಟಿದ್ದೀರಿ. ಲಿಂಗಾಯತ ಸ್ವತಂತ್ರ ಧರ್ಮ ಆಗಲಿ. ಕಲಬುರಗಿಯ ಶ್ರೀ ಶರಣ ಬಸವೇಶ್ವರರು ಬಸವಣ್ಣನ ಕಾರಣದಿಂದ ದೊಡ್ಡವರಾದರು ಎಂದರು.
ವಿಶೇಷ ಉಪನ್ಯಾಸ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ. ಸಿದ್ಧರಾಮಯ್ಯ ಮಾತನಾಡಿ, ಸನಾತನರನ್ನು ಅಲ್ಲಗಳೆದು ಪುರಾತನ, ಸ್ಥಾವರಲಿಂಗದ ಬದಲಿಗೆ ಇಷ್ಟಲಿಂಗ, ಕರ್ಮಕ್ಕೆ ಬದಲಾಗಿ ಕಾಯಕ, ದಾನದ ಬದಲಿಗೆ ದಾಸೋಹ, ಅಸಮಾನತೆ ಬದಲಿಗೆ ಸಮಾನತೆ ಎಂಬಿತ್ಯಾದಿ ಪರ್ಯಾಯಗಳನ್ನು ಕಟ್ಟಿದ ಬಸವಾದಿ ಶರಣರು, ಪ್ರಜಾಸತ್ತಾತ್ಮಕ ಧರ್ಮವನ್ನು ಸ್ಥಾಪಿಸಿದರು ಎಂದು ತಿಳಿಸಿದರು.

ನಡೆ ನುಡಿ ಸಿದ್ಧಾಂತದಿಂದ ಪಾಕಗೊಂಡ ಶರಣ ಧರ್ಮದಲ್ಲಿ ಶರಣೆಯರು ಅಸಂಗ್ರಹ, ಅಪರಿಗ್ರಹ ತತ್ವ ಬಾಳಿದವರು ಇದಕ್ಕೆ ಆಯ್ದಕ್ಕಿ ಲಕ್ಕಮ್ಮ ಮತ್ತು ಸತ್ಯಕ್ಕ ಉತ್ತಮ ಉದಾಹರಣೆಯಾಗಿದ್ದಾರೆ ಎಂದರು.
ಚಾತುರ್ವರ್ಣ ವೈದಿಕ ಪಠ್ಯಗಳಲ್ಲಿ ಒಂದು ವರ್ಣದ ಹಿತಾಸಕ್ತಿಯಿದ್ದು, ಸಾಂಸ್ಕೃತಿಕ ಮೌಢ್ಯ, ದಬ್ಬಾಳಿಕೆಯಲ್ಲಿ ಜನರನ್ನು ಹಿಡಿದಿಡಲಾಗಿದೆ. ಹೀಗಾಗಿ ವೇದಗಳಲ್ಲಿ ಇರುವುದು ವಚನಗಳಲ್ಲಿ ಇದೆ ಎಂದು ತಪ್ಪು ದಾರಿಗೆ ಎಳೆಯುವ ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿದೆ. ಬಸವಣ್ಣನ ವಾರಸುದಾರರೆನಿಸಿಕೊಳ್ಳುವವರು ಈ ಹುನ್ನಾರಕ್ಕೆ ಬಲಿಯಾಗಬಾರದು ಎಂದು ಕರೆ ನೀಡಿದರು.

ಸಮ್ಮುಖ ವಹಿಸಿದ್ದ ಯಡ್ರಾಮಿ ವಿರಕ್ತ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಮಾತನಾಡಿ,
ಬಸವಣ್ಣನವರ ಕಾಲಘಟ್ಟದಲ್ಲಿ ಪರಧನ, ಪರದೈವ, ಪರಸತಿಗೆ ಎರಗಬಾರದು ಎಂಬ ಎಚ್ಚರವನ್ನು ಕೊಟ್ಟರು ಮಾತ್ರವಲ್ಲ, ಅದರಂತೆ ಬಾಳಿದರು. ಬಸವಾದಿ ಶರಣರು ವಚನಗಳನ್ನು ಕನ್ನಡದಲ್ಲಿ ಬರೆದು ಕನ್ನಡ ಭಾಷೆಯನ್ನು ಇಮ್ಮಡಿಗೊಳಿಸಿದವರು ಎಂದು ತಿಳಿಸಿದರು.
ನೇತೃತ್ವವಹಿಸಿದ್ದ ಶಿರೂರ ಮಹಾಂತತೀರ್ಥ ಮಠದ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ಬಸವಣ್ಣ ಯುಗ, ಯುಗದ ಉತ್ಸಾಹಿ. ಶರಣರ ಒಂದೇ ಒಂದು ವಚನ ಪಚನ ಆದರೆ ಮನ ಘನ, ಮನ ಹೃನ್ಮನ ಆಗಲಿದೆ. ಶರಣಸತಿ ಲಿಂಗಪತಿ ಎಂಬ ಶರಣರ
ಲಿಂಗಾಂಗ ಸಾಮರಸ್ಯದಲ್ಲಿ ಸುಖವಿದೆ ಎಂದು ಹೇಳಿದರು.
ಬಸವಣ್ಣನ ಧರ್ಮ ಹೊರಗೆ ನೋಡುವುದಲ್ಲ. ಒಳಗಿಳಿದು ನೋಡುವುದು. ಲಿಂಗ ಸುಖ ಇಂದ್ರಿಯಾತೀತ. ಮನುಷ್ಯ ಜನ್ಮ ಅರಿವಿನ ಜನ್ಮವಾಗಿದೆ ಎಂದು ತಿಳಿಸಿದರು.
ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಂ.ವೈ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವೈದ್ಯಕೀಯ ಶಿಕ್ಷಣ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.
ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಷಟಸ್ಥಲ ದ್ವಜಾರೋಹಣ ನೆರವೇರಿಸಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಮೋದಿ ಸ್ವಾಗತಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ವಂದಿಸಿದರು. ನವಲಿಂಗ ಪಾಟೀಲ, ವಾಣಿಶ್ರೀ ಮಾಳಗೆ ನಿರೂಪಿಸಿದರು. ಶಂಕರ ಹೂಗಾರ ಹಾಗೂ ಸಂಗಡಿಗರು ಪ್ರಾರ್ಥನೆಗೀತೆ ಹಾಡಿದರು.

ಮನುಕುಲಕ್ಕೆ ಮಾದರಿ ಶರಣರು
ಬಸವಾದಿ ಶರಣರು ಮನುಕುಲಕ್ಕೆ ದಾರಿ ತೋರಿದರು. ಅವರ ಮಾರ್ಗದಲ್ಲಿ ಸಾಗುವ ಪ್ರಯತ್ನ ಇದು. ಶರಣರ ಅನುಭಾವದ ಮಾತುಗಳು ವಚನಗಳಾದವು. ವಚನ ಸಾಹಿತ್ಯದಲ್ಲಿ ಬಹಳ ದೊಡ್ಡ ಶಕ್ತಿಯಿದೆ. ಮುಂದಿನ ಪೀಳಿಗೆಗೆ ವಚನ ಸಾಹಿತ್ಯ ಪರಿಚಯಿಸಬೇಕಿದೆ. ಇಷ್ಟಲಿಂಗ ಪೂಜೆಯಿಂದ ವ್ಯಕ್ತಿತ್ವ ವಿಕಸನ, ಲಿಂಗಾಯತ ಧರ್ಮ ವೈಜ್ಞಾನಿಕ ಧರ್ಮ. ಮೃದು ವಚನಗಳೇ ಸಕಲ ತಪಂಗಳಯ್ಯ. ಅವುಗಳಿಂದ ಪರಿವರ್ತನೆ ಸಾಧ್ಯ. ಪರಿವರ್ತನೆ ನಮ್ಮಿಂದಲೇ ಪ್ರಾರಂಭ ಆಗಬೇಕು. ಹಣ, ಆಸ್ತಿ, ಅಧಿಕಾರದಿಂದ ಶಾಂತಿ, ನೆಮ್ಮದಿ ಸಿಗುವುದಿಲ್ಲ. ಬಸವ ಧರ್ಮ ಎಲ್ಲರನ್ನು ಅಪ್ಪಿಕೊಳ್ಳುವ ಧರ್ಮ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು
ಶಾಸಕರಾದ ಬಸವರಾಜ ಮತ್ತಿಮಡು, ಅಲ್ಲಮಪ್ರಭು ಪಾಟೀಲ, ಡಾ. ಅಜಯಸಿಂಗ್, ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಬಿ.ಜಿ. ಪಾಟೀಲ, ಶಶೀಲ್ ನಮೋಶಿ, ಜಗದೇವ ಗುತ್ತೇದಾರ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಮುಖಂಡರಾದ ಚಂದು ಪಾಟೀಲ, ವೀರಶೈವ ಸಮಾಜ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ, ಕುಡಾ ಅಧ್ಯಕ್ಷ ಮಜಹರ್ ಆಲಂ ಖಾನ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ರವೀಂದ್ರ ಶಾಬಾದಿ, ಆರ್. ಜಿ. ಶೆಟಗಾರ, ಗೌರಿ ಚಿಚಕೋಟೆ, ಮಾಲಾ ಕಣ್ಣಿ, ಜಯಶ್ರೀ ಚಟ್ನಳ್ಳಿ, ಸಂತೋಷ ಲಂಗರ್ , ಡಾ. ನಾಗವೇಣಿ ಪಾಟೀಲ, ಶರಣು ಭೂಸನೂರ, ಉಮೇಶ ಶೆಟ್ಟಿ ಇತರರಿದ್ದರು.
ಸೌಜನ್ಯದ ಶಕ್ತಿ ಪ್ರದರ್ಶನ
ಸ್ವಾಮೀಜಿಗಳು, ಸಚಿವರು, ಶಾಸಕರು ಎಲ್ಲರೂ ಕೆಳಗಡೆ ಕುಳಿತಿದ್ದರು. ಮಾತನಾಡುವವರು ಮಾತ್ರ ವೇದಿಕೆ ಹತ್ತಿ ಮಾತಾಡಿ ಕೆಳಗಿಳಿಯುವುದು. ಕೆಳಗಡೆಯೇ ಗೌರವ ಸನ್ಮಾನ ಮಾಡುವುದು ಈ ಬಾರಿಯ ಬಸವ ಜಯಂತಿ ವಿಶೇಷವಾಗಿತ್ತು. ಎಲ್ಲರೂ ಒಂದಾಗಿ ಚಂದಾಗಿ ಲಿಂಗಾಯತರ ಸೌಜನ್ಯದ ಶಕ್ತಿ ಏನು ಎಂಬುದನ್ನು ತೋರಿಸಿಕೊಡುವಂತಿತ್ತು.