ಕಲಬುರಗಿ:
ಬಸವ ಸಮಿತಿಯ ಅಕ್ಕನ ಬಳಗವು ಸತತವಾಗಿ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ‘ಮಹಾದೇವಿಯಕ್ಕಗಳ ೧೫ನೇ ಸಮ್ಮೇಳನ’ ಡಿಸೆಂಬರ್ ೧೩ ಮತ್ತು ೧೪ ರಂದು, ಜಯನಗರದಲ್ಲಿರುವ ಅನುಭವ ಮಂಟಪದಲ್ಲಿ ಜರುಗಲಿದೆ.
ಸಮ್ಮೇಳನದ ಅಧ್ಯಕ್ಷರಾಗಿ ಪುಷ್ಪಾ ವಾಲಿ ಅವರು ಆಯ್ಕೆ ಆಗಿದ್ದಾರೆ. “ಡಾ. ಬಿ.ಡಿ. ಜತ್ತಿ ವೈರಾಗ್ಯನಿಧಿ ಅಕ್ಕ ಪ್ರಶಸ್ತಿ-೨೦೨೫” ಈ ಪ್ರಶಸ್ತಿಯನ್ನು ರಾಜಕಾರಣಿ, ಮಾಜಿಮಂತ್ರಿ, ಸಾಹಿತಿ, ಅಕ್ಕಮಹಾದೇವಿ ಸಮಿತಿ, ಉಡುತಡಿ ಇದರ ಅಧ್ಯಕ್ಷರಾದ ಡಾ. ಲೀಲಾದೇವಿ ಆರ್. ಪ್ರಸಾದ ಅವರಿಗೆ ಕೊಡಮಾಡಲಾಗುತ್ತದೆ.

ಇದೇ ಸಂದರ್ಭದಲ್ಲಿ ಸ್ಥಳೀಯರಾದ ವಿಭಿನ್ನ ಕಾಯಕದಲ್ಲಿ ನಿರತರಾಗಿರುವ ೫ ಜನ ಮಹಿಳೆಯರಿಗೆ ಗೌರವಿಸಿ ಸನ್ಮಾನಿಸಲಾಗುತ್ತದೆ. ಈ ಸಮ್ಮೇಳನದ ವಿಶೇಷವೆಂದರೆ ೨೦೦ ಜನ ಮಹಿಳೆಯರೇ ಭಾಗವಹಿಸುವುದು. ಇವರಲ್ಲಿ ಗೃಹಿಣಿಯರ ಸಂಖ್ಯೆಯೇ ಹೆಚ್ಚಿಗಿರುತ್ತದೆ. ಜೊತೆಗೆ ಕಿರಿಯ ವಯಸ್ಸಿನ ಬಾಲಕಿಯರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡಲಾಗಿದೆ.
೧೩ರಂದು ಮುಂಜಾನೆ ಈ ಸಮ್ಮೇಳನವನ್ನು ಕಲಬುರಗಿ ಭಾಗದ ಪ್ರಖ್ಯಾತ ಜನಪದ ಹಾಡುಗಾರ್ತಿಯಾದ ನೆಲೋಗಿ ಗ್ರಾಮದ ನೀಲಮ್ಮ ನೆಲೋಗಿ ಅವರು ಉದ್ಘಾಟಿಸುವರು.
ಸಮ್ಮೇಳನದಲ್ಲಿ ಶರಣೆಯರ ಕುರಿತು ವಿಚಾರಗೋಷ್ಠಿಗಳು, ಜನಪದ ಹಾಡುಗಳು, ವಚನ ಗಾಯನ ಮತ್ತು ಚಿತ್ರ ಬಿಡಿಸುವುದು, ಶರಣರ ಕುರಿತು ನಾಟಕ, ವಚನ ನೃತ್ಯ ಪ್ರದರ್ಶನಗಳೂ ನಡೆಯಲಿವೆ.

ಕಲಬುರಗಿ ನಗರದ ನಾಗರಿಕರು ಈ ಸಮ್ಮೇಳನಕ್ಕೆ ಪ್ರೇಕ್ಷಕರಾಗಿ ಹಾಜರಾಗಿ, ಪ್ರೋತ್ಸಾಹಿಸಬೇಕೆಂದು ಬಸವ ಸಮಿತಿ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಶರಣಮ್ಮ ಕಲಬುರಗಿ, ಕಾರ್ಯದರ್ಶಿಗಳಾದ ಅನಸೂಯಾ ನಡಕಟ್ಟಿ, ಕಾರ್ಯಾಧ್ಯಕ್ಷರು, ಸಂಚಾಲಕರೂ ಆದ ಡಾ. ಜಯಶ್ರೀ ದಂಡೆ ಅವರು ಪತ್ರಿಕಾಗೋಷ್ಠಿ ನಡೆಸಿ ವಿನಂತಿಸಿಕೊಂಡಿದ್ದಾರೆ.

