ಬೆಂಗಳೂರು:
ಮನುಷ್ಯ ಸಾಯುವವರೆಗೂ ಅಧ್ಯಯದಲ್ಲಿದ್ದು, ಕಲಿಕೆ ನಿರಂತರ. ಅದರಲ್ಲಿಯೂ ವಚನ ಕಲಿಕೆ ಬದುಕಿಗೆ ಪೂರಕವಾಗಿದೆ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ಹೇಳಿದರು.
ತುಮಕೂರು ರಸ್ತೆಯ ಪ್ರೆಸ್ಟೀಜ್ ಜಿಂದಾಲ್ ಸಿಟಿಯ ಕ್ಲಬ್ ಹೌಸನಲ್ಲಿ ವಚನಜ್ಯೋತಿ ಬಳಗವು ಪಿ.ಜೆ.ಸಿ. ವೀರಶೈವ ಲಿಂಗಾಯತ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ವಚನ ಕಲಿಕಾ ತರಗತಿ ಮತ್ತು ಸಿದ್ಧರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ವಚನಗಳೆಂದರೆ ನಡೆದಂತೆ ನುಡಿದ ಅನುಭಾವದ ಸೂಳ್ನುಡಿಗಳು. ತಾನು ಸುಖವಾಗಿ ಬದುಕುವುದಲ್ಲದೆ, ತನ್ನ ಜೊತೆಗಿದ್ದವರು, ಸಕಲ ಜೀವಾತ್ಮಗಳೂ ಚೆನ್ನಾಗಿ ಬದುಕಬೇಕೆಂಬ ಹಿರಿಯಾಸೆಯಿಂದ ಹೊರಬಂದ ಮುತ್ತುಗಳು. ಹೀಗಾಗಿ ವಚನಗಳಲ್ಲಿ ಜೀವನ ಮೌಲ್ಯಗಳಿವೆ. ಅವು ಎಲ್ಲರಿಗೂ ತಿಳಿಯಬೇಕೆಂದು ಆಡುಮಾತಿನಲ್ಲಿವೆ.
ಆಚರಣಾ ಸಾಧ್ಯವೂ ಅನುಸರಣ ಯೋಗ್ಯವೂ ಆದ ವಚನಗಳ ಕಲಿಕೆಯಿಂದ ಬದುಕು ಚೆಂದವಾಗಿ ವ್ಯಕ್ತಿಯಷ್ಟೇ ಅಲ್ಲ, ಸಮಾಜವು ಸದೃಢವಾಗುತ್ತದೆ ಎಂದು ವಿವರಿಸಿದರು.
ಇಂದು ನಾಡಿನಾದ್ಯಂತ ಆಚರಿಸುತ್ತಿರುವ ಸಿದ್ದರಾಮೇಶ್ವರ ಜಯಂತಿಯ ಕಥಾನಾಯಕ ಸಿದ್ದರಾಮರು ಸಹ ಕಲಿಕೆಗೆ ನಿದರ್ಶನವಾಗಿದ್ದು ಕೆರೆಯನ್ನು ಕಟ್ಟಿಸಿ, ಬಾವಿಗಳನ್ನು ತೋಡಿಸಿ, ಆಲಯಗಳ ನಿರ್ಮಿಸಿ ಆಶ್ರಯತಾಣಗಳನ್ನು ಜನರಿಗಾಗಿ ನೀಡಿದ್ದ ಸಿದ್ದರಾಮರು ಕರ್ಮಯೋಗದಿಂದ ಶಿವಯೋಗಕ್ಕೆ ರೂಪಾಂತರಗೊಂಡಿದ್ದೂ ಸಹ ಕಲಿಕೆಯ ಪ್ರಕ್ರಿಯೆ ಎಂದು ತಿಳಿಸಿದರು.
ಪ್ರಭುದೇವರಿಂದ ಅನುಗ್ರಹಿತರಾಗಿ ಚೆನ್ನಬಸವಣ್ಣನವರಿಂದ ದೀಕ್ಷಿತರಾಗಿ ಬಸವಣ್ಣನವರಿಂದ ಪರಿಪೂರ್ಣಿತರಾದ ಸಿದ್ದರಾಮರು ವಚನ ಕಲಿಕೆಯಿಂದ ಶೂನ್ಯ ಸಿಂಹಾಸನದ ಮೂರನೇ ಅಧ್ಯಕ್ಷರಾಗಿ ನಾಡಿನೆಲ್ಲೆಡೆ ಸಂಚರಿಸಿ ಬಸವಣ್ಣನವರು ಬೋಧಿಸಿದ ಕಾಯಕ ದಾಸೋಹ ಮಹಾಮಂತ್ರಗಳನ್ನು ಎಲ್ಲೆಡೆ ಹರಡಿದ ಮಹಾಶಿವಯೋಗಿಗಳು ಎಂದು ಬಣ್ಣಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಚಿಂತಕ ರಜನಿಕಾಂತ್ ಪ್ರೆಸ್ಟೀಜ್ ಜಿಂದಾಲ್ ಸಿಟಿ ಪ್ರತಿ ಮನೆ ಮನೆಗಳಿಗೂ ವಚನವನ್ನು ತಲುಪಿಸಿ ಸದಾಚಾರವನ್ನು ನೆನಪಿಸುವುದರೊಂದಿಗೆ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ತಮ್ಮ ಬಳಗದ್ದಾಗಿದೆ ಎಂದು ತಿಳಿಸಿದರು.
ಪಿಜೆಸಿ ಬಳಗದ ಕೋಶಾಧ್ಯಕ್ಷ ಬಸವರಾಜು, ಕಾರ್ಯದರ್ಶಿ ಭವ್ಯ, ನಿರ್ದೇಶಕರಾದ ಬಸವರಾಜು ಕೆ.ವಿ. ಶಿವಾನಂದ್, ಬಸವರಾಜು ಕೋಟೆ, ಲೋಕೇಶಮೂರ್ತಿ, ಮಲ್ಲಿಕಾ ಮೊದಲಾದವರು ಪಾಲ್ಗೊಂಡಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP
