ನರಗುಂದ
ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸರಕಾರಿ ನೌಕರರಿಗೆ, ಕನ್ನಡ ಮನಸ್ಸುಗಳಿಗೆ ಸರಕಾರ ಸೂಕ್ತ ಭದ್ರತೆ ಹಾಗೂ ಪ್ರತ್ಯೇಕ ಗಡಿ ನೌಕರರ ಸುರಕ್ಷತಾ ಕಾಯ್ದೆಯನ್ನು ಜಾರಿಗೆ ತರಬೇಕು.
ಕರ್ನಾಟಕದ ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ ಕರುನಾಡಿನಲ್ಲಿಯೇ ಕನ್ನಡತನವನ್ನು ಹುಡುಕುವಂತಹ ಸಂದಿಗ್ದ ಪರಸ್ಥಿತಿ ಬರುತ್ತದೆ. ಇದಾಗುವ ಮುನ್ನವೇ ಸರಕಾರ ಎಚ್ಚೆತ್ತುಕೊಂಡು ಮೀನಾಮೇಷ ಎಣಿಸದೇ ಕರ್ನಾಟಕದ ನೀರು-ಗಾಳಿಯನ್ನು ಸೇವಿಸಿ ಕನ್ನಡಿಗರ ಮೇಲೆ ಪುಂಡಾಟಿಕೆ ಮಾಡುವವರ ವಿರುದ್ಧ ಕೂಡಲೇ ಕಾನೂನು ಕ್ರಮ ತಗೆದುಕೊಳ್ಳಬೇಕು ಎಂದು ಭೈರನಹಟ್ಟಿ-ಶಿರೋಳ ಮಠದ ಪೂಜ್ಯ ಶಾಂತಲಿಂಗ ಶ್ರೀಗಳು ರಾಜ್ಯ ಸರಕಾರಕ್ಕೆ ಆಗ್ರಹಿಸಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ನರಗುಂದ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಿಂದಗಿ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಸ್ಮರಣಾರ್ಥ ಶಾಂತಲಿಂಗ ಸ್ವಾಮಿಗಳ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಹಿಂದೆ ಬೆಳಗಾವಿಯಲ್ಲಿ ಸಾರಿಗೆ ನಿರ್ವಾಹಕನ ಮೇಲೆ ಮರಾಠಿಗರು ದರ್ಪವನ್ನು ತೋರಿ ದೈಹಿಕ ಹಲ್ಲೆ ಮಾಡಿದ್ದರು. ಆ ಗಾಯ ಮಾಸುವ ಮುನ್ನವೆ ಮತ್ತೆ ಇದೀಗ ಬೆಳಗಾವಿ ತಾಲೂಕಿನ ಕಿಣೆ ತಿಪ್ಪಣ್ಣ ಡೋಕ್ರೆ ಎನ್ನುವ ವ್ಯಕ್ತಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡುವಂತೆ ಗ್ರಾಮ ಪಂಚಾಯತಿ ಪಿ ಡಿ ಓ ನಾಗೇಂದ್ರ ಪತ್ತಾರ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ದಮ್ಕಿ ಹಾಕಿರುವುದು ಖಂಡನೀಯವಾದುದು ಎಂದು ಅವರು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಎಸ್.ಎಸ್. ಪೂಜಾರ ಮಾತನಾಡಿ ಬಸವಣ್ಣನವರ ಸಮನ್ವಯ ದೃಷ್ಠಿ, ಅಲ್ಲಮ ಪ್ರಭುವಿನ ಪೂರ್ಣದೃಷ್ಠಿಗಳೆರಡರ ಸಾಕ್ಷಿ ಸಂಗಮವಾಗಿದ್ದ ಕಾರಣಿಕ ಯುಗಪುರುಷ ಹಾನಗಲ್ಲ ಕುಮಾರ ಶಿವಯೋಗಿಗಳು ಸಂತ ಶ್ರೇಷ್ಠರು. ಸಮಾಜವೆ ತಮ್ಮ ಮನೆಯೆಂದು ಭಾವಿಸಿ ತಮ್ಮ ಜೀವನದುದ್ದಕ್ಕೂ ಸಮಾಜಕ್ಕಾಗಿಯೆ ಬದುಕಿದ ಅವರ ಜೀವನವೆ ನಮಗೆ ಆದರ್ಶ. ೧೯-೨೦ ನೇ ಶತಮಾನದ ಅವದಿಯಲ್ಲಿ ಸಾಮಾಜಿಕ, ಆಧ್ಯಾತ್ಮಿಕ, ಶೈಕ್ಷಣಿಕ, ನೈತಿಕ ಹಾಗೂ ಆರ್ಥಿಕ ದೀಪವನ್ನು ಹೊತ್ತಿಸಿದ ಪೂಜ್ಯರು ಶತಮಾನಕ್ಕೊಬ್ಬರು ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಶೋಭಾ ಆಡಿನ ಹಾಗೂ ನರಗುಂದ ಕ.ಸಾ.ಪ. ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಪ್ರೊ. ರಮೇಶ ಐನಾಪೂರ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು. ವೇದಿಕೆ ಮೇಲೆ ನರಗುಂದ ಕ.ಸಾ.ಪ. ಅಧ್ಯಕ್ಷ ಪ್ರೊ. ಬಿ. ಸಿ. ಹನಮಂತಗೌಡ್ರ, ವಿಶ್ರಾಂತ ಉಪತಹಸಿಲ್ದಾರ ವ್ಹಿ. ಜಿ. ಐನಾಪೂರ, ಉಣಕಲ್ಲದ ಬಸಯ್ಯ ಹಿರೇಮಠ, ಹೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಶ್ವನಾಥ ಶಿರಹಟ್ಟಿಮಠ, ಶಾಂತಪ್ಪ ಆಡಿನ, ವೀರಯ್ಯ ವಸ್ತ್ರದ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಪ್ರೊ. ಆರ್. ಬಿ. ಚಿನಿವಾಲರ ಕಾರ್ಯಕ್ರಮ ನಿರ್ವಹಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.