ಜಮಖಂಡಿ
ಮೊದಲು ದುಡಿಯುವವ ಬಡವನಾಗಿದ್ದ, ದುಡಿಸಿಕೊಳ್ಳುವವ ಶ್ರೀಮಂತನಾಗಿದ್ದ. ದುಡಿಯುವವರನ್ನು ಕಾರ್ಮಿಕ, ಸೇವಕ, ಜೀತದಾಳು ಎಂದು ಕರೆಯಲಾಗುತ್ತಿತ್ತು. ಆದರೆ, ದುಡಿಯುವವರು ದೊಡ್ಡವರಾಗಬೇಕು ಎಂಬ ಪರಿಕಲ್ಪನೆ ಹುಟ್ಟುಹಾಕಿ ದುಡಿಯುವವರಿಗೆ ಕಾಯಕಯೋಗಿ ಎಂಬ ಪಟ್ಟ ಕೊಟ್ಟು ನಾಡಿಗೆ ಪರಿಚಯಿಸಿದವರು ವಿಶ್ವಗುರು ಬಸವಣ್ಣ ಎಂದು ಮನಕವಾಡದ ಶ್ರೀದೇವ ಮಂದಿರದ ಅಭಿನವ ಮೃತ್ಯುಂಜಯ ಸ್ವಾಮಿಗಳು ಹೇಳಿದರು.
ನಗರದ ಓಲೇಮಠದಲ್ಲಿ ಆನಂದ ದೇವರ ನೇತೃತ್ವದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ ಮತ್ತು ಸದ್ಭಾವನಾ ಪಾದಯಾತ್ರೆ ಅಂಗವಾಗಿ ಶನಿವಾರ ನಡೆದ ವಚನ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮರ-ಮರಗಳ ನಡುವಿನ ತಿಕ್ಕಾಟದಿಂದ ಕಾಡು ನಾಶ. ಮತ-ಮತಗಳ ನಡುವಿನ ತಿಕ್ಕಾಟದಿಂದ ನಾಡು ನಾಶ. ಆದ್ದರಿಂದ ಬಸವಣ್ಣನವರು ಜಾತಿ ಕಟ್ಟೆಯನ್ನು ನಿರ್ಮೂಲನೆ ಮಾಡಿ, ನೀತಿ ಕಟ್ಟೆಯ ಮೇಲೆ ಸ್ವಾಸ್ತ್ಯ ಸಮಾಜ ನಿರ್ಮಾಣ ಮಾಡಲು 12ನೇ ಶತಮಾನದಲ್ಲಿ ಮಹಾಕ್ರಾಂತಿ ಮಾಡಿದ್ದರು ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಯುವಕರು ಚಿಕ್ಕ ವಯಸ್ಸಿನಲ್ಲಿ ದಾರಿತಪ್ಪಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ದುಶ್ಚಟ ಮಾಡುತ್ತ ತೀರ್ಥಕ್ಷೇತ್ರಗಳಿಗೆ ಪಾದಯಾತ್ರೆ ಮಾಡಿದರೆ ದೇವರು ಒಲಿಯುವುದಿಲ್ಲ. ಆದ್ದರಿಂದ ಯುವಕರು ಬಸವಣ್ಣನವರ ತತ್ವ ಸಿದ್ಧಾಂತ ಅರಿತು ಸನ್ಮಾರ್ಗದಲ್ಲಿ ಸಾಗಬೇಕು ಎಂದರು.
ಸಾಹಿತಿ ಮಹಾದೇವಪ್ಪ ಝುಲಪಿ ವಿರಚಿತ ‘ನೂರೊಂದು ವಚನ ದೀಪ್ತಿ’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು
ಪ್ರಾಚಾರ್ಯ ಟಿ.ಪಿ. ಗಿರಡ್ಡಿ, ರಾಣಿ ಚೆನ್ನಮ್ಮ ಮಹಿಳಾ ಮಂಡಳದ ಸುನೀತಾ ಬಳಗಾರ ಮಾತನಾಡಿದರು.
ಚಿಕ್ಕಲಕಿ ಭಗೀರಥ ಪೀಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಹುನ್ನೂರಿನ ವಿಶ್ವನಾಥ ಶಾಸ್ತ್ರಿ, ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ವಕೀಲ ಡಿ.ಎಂ.ಜತ್ತಿ, ಈರಣ್ಣ ಬಂಡಿಗಣಿ, ಸಿಪಿಐ ಮಲ್ಲಪ್ಪ ಮಡ್ಡಿ, ಬಸವರಾಜ ಕಲೂತಿ, ರುದ್ರೇಶ ಚಿತ್ತರಗಿ, ಪೌರಾಯುಕ್ತ ಜ್ಯೋತಿ ಗಿರೀಶ ಎಸ್., ಸುಮಿತ್ರಾ ನ್ಯಾಮಗೌಡ, ಅರುಣಕುಮಾರ ಶೆಟ್ಟಿ, ಮಹಾದೇವ ತೆಲಬಕ್ಕನವರ, ನಂದೆಪ್ಪ ನ್ಯಾಮಗೌಡ, ಎನ್.ಆರ್.ನ್ಯಾಮಗೌಡ, ಗುರುಲಿಂಗ ನ್ಯಾಮಗೌಡ ಇದ್ದರು.