ಕೊಪ್ಪಳ
ಜಿಲ್ಲಾ ಗಾಣಿಗ ಸಮುದಾಯ ಭವನದಲ್ಲಿ 34ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಡಾ. ಜಯಬಸವಕುಮಾರ ಮಹಾಸ್ವಾಮಿಗಳು, ಗಾಣಿಗ ಗುರುಪೀಠ, ವಿಜಯಪುರ ಇವರ ಸಾನಿಧ್ಯದಲ್ಲಿ ನಡೆಯಿತು.
ಇಷ್ಟಲಿಂಗ ಮಹತ್ವ ಮತ್ತು ವಿಕಾಸ ಕುರಿತು ಅನುಭವಿಗಳಾದ ಬಸವರಾಜ ತಾವರಗೊಂದಿ ಪ್ರಾದ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿಟ್ನಾಳ ಇವರು ಅನುಭಾವ ಮಾಡುತ್ತಾ, ಲಿಂಗಾಯತ ಧರ್ಮದಲ್ಲಿ ಲಿಂಗವನ್ನು ಕೊರಳಲ್ಲಿ ಕಟ್ಟಿಕೊಳ್ಳಬೇಕು. ಅದನ್ನು ಬಿಟ್ಟು ಕೆಲವರು ಗೂಟಕ್ಕೆ ತೂಗು ಹಾಕುತ್ತಿದ್ದಾರೆ ಅದು ಸರಿಯಲ್ಲ.
ಸಜ್ಜನೆಯಾಗಿ ಮಜ್ಜನಕ್ಕೆರೆವೆ ಶಾಂತಳಾಗಿ ಪೂಜೆಯ ಮಾಡುವೆ ಸಮರತಿಯಿಂದ ನಿಮ್ಮನೆ ಹಾಡುವೆ ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮನಗಲದ ಪೂಜೆ ಅನುವಾಯಿತೆನೆಗೆ ಎನ್ನುವ ವಚನದ ಸಾರವನ್ನು ಸವಿಸ್ತಾರವಾಗಿ ತಿಳಿಸಿದರು.

ಸೃಷ್ಟಿಯಲ್ಲಿ ಏನೇನಿದೆಯೋ ಅದೆಲ್ಲ ನಮ್ಮಲ್ಲಿಯೂ ಇದೆ. ಹಾಗಾಗಿ ಸೃಷ್ಟಿ ಆಕಾರದ ಲಿಂಗಯ್ಯನನ್ನು ಪೂಜಿಸಬೇಕು ಎಂದು ತಿಳಿಸಿದರು. ನಮಃ ಶಿವಾಯ ಓಂ ಬಸವ ಎಂಬುವ ಮಂತ್ರದ ಕುರಿತು ವಿವರಿಸಿದರು. ವೈಜ್ಞಾನಿಕವಾಗಿ ರೂಪುಗೊಂಡ ಲಿಂಗದ ಮಹತ್ವವನ್ನು ಅವರು ತಿಳಿಸಿದರು. ಯಾವ ರೀತಿ ಮೊಬೈಲ್ಗೆ ರಿಚಾರ್ಜ್ ಮಾಡುತ್ತೇವೆಯೋ, ಅದೇ ರೀತಿ ಗುರು ಲಿಂಗ ಜಂಗಮ ಎನ್ನುವಂತಹ ತತ್ವಗಳನ್ನು ರಿಚಾರ್ಜ್ ಮಾಡಿಕೊಳ್ಳಬೇಕು. ಬೆಳಗಾಗೆ ಎದ್ದು ಯಾರ್ಯಾರ ನೆನೆಯಲಿ ಎಂದರೆ ಲಿಂಗಯ್ಯನನ್ನು ನನೆಯಬೇಕು ಎಂದರು.
ಸತ್ತ ಮೇಲೆ ಯಾರೂ ಮೇಲಕ್ಕೆ ಹೋಗಲ್ಲ. ಸತ್ತವರನ್ನು ಮಣ್ಣಲ್ಲಿ ಹೂಳುತ್ತಾರೆ ವಿನಹ ಮೇಲಕ್ಕೆ ತೂರಲ್ಲ. ಪಂಚ ಮಹಾಭೂತಗಳಿಂದ ನಿರ್ಮಾಣವಾದಂತಹ ದೇಹವು ಪಂಚಮಹಾಭೂತಗಳಲ್ಲಿಯೇ ಲೀನವಾಗುತ್ತದೆ. ಇದನ್ನು ಅರಿತ ಬಸವಾದಿ ಶರಣರು ಪಂಚ ಮಹಾಭೂತಗಳನ್ನು ಅಳವಡಿಸಿಕೊಂಡು ಲಿಂಗವನ್ನು ತಯಾರಿಸಿದರು, ಹಾಗಾಗಿ ಅದನ್ನೇ ಪೂಜಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ನೇತೃತ್ವವನ್ನು ಗಾಳೆಪ್ಪ ಕಡೆಮನಿ, ವಿಶ್ವಗುರು ಬಸವೇಶ್ವರ ಟ್ರಸ್ಟ್ ಕೊಪ್ಪಳ ವಹಿಸಿದ್ದರು. ಅಧ್ಯಕ್ಷತೆಯನ್ನು ಶರಣ ಪರಮೇಶ ವಿರುಪಾಕ್ಷಪ್ಪ ಅಂಗಡಿ ವಹಿಸಿದ್ದರು. ವಚನ ಪಠಣ ಬಾಲಶರಣೆ ಬಿಂದುಶ್ರೀ ಬಾಪೂಗೌಡ ಪಾಟೀಲ ಮಾಡಿದರು.
ಪ್ರಸಾದ ದಾಸೋಹಿಗಳಾದ ಶರಣ ಯಮನೂರಪ್ಪ ಗುಡದಪ್ಪ ಕಬ್ಬಣ್ಣವರ, ಶರಣಪ್ಪ ಉಳ್ಳಾಗಡ್ಡಿ, ರುದ್ರಪ್ಪ ಹಳ್ಳಿ, ವೀರೇಶ ಕಾಸನಕಂಡಿ, ಮಲ್ಲಿಕಾರ್ಜುನ ಸಜ್ಜನ, ಶಿವಸಂಗಪ್ಪ ವಣಗೇರಿ, ಶೇಖರ್ ಇಂಗಳದಾಳ, ಡಾ. ಬಸವರಾಜ ಪರಗೊಂಡ್ರ, ಸುವರ್ಣ, ಶ್ರೀದೇವಿ ಇಂಗಳದಾಳ, ಅರ್ಚನಾ ಸಸಿಮಠ, ಅನಸಮ್ಮ ವಣಗೇರಿ, ಮತ್ತಿತರರು ಇದ್ದರು.