ಕೊಪ್ಪಳ
ನಗರದ ಶರಣ ಗಾಣದ ಕಣ್ಣಪ್ಪ ಶಿವಾನುಭವ ಸೇವಾ ಸಮಿತಿ ವತಿಯಿಂದ 36ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಅಂಗವಾಗಿ ಬೆಳದಿಂಗಳ ಶಿವಾನುಭವ ಗೋಷ್ಠಿಯನ್ನು ಜಿಲ್ಲಾ ಗಾಣಿಗೇರ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.
’12ನೇ ಶತಮಾನದ ಶರಣೆಯರ ದಿಟ್ಟ ವ್ಯಕ್ತಿತ್ವ’ ಎಂಬ ವಿಷಯದ ಕುರಿತು ಶರಣೆ ಜಿ. ಶ್ರೀದೇವಿ ಕೃಷ್ಣಪ್ಪ ಅನುಭಾವವನ್ನು ನೀಡಿದರು. ಅವರು ಮಾತನಾಡುತ್ತಾ, ಈ ಅವಕಾಶ ಮಾಡಿಕೊಟ್ಟ ಶರಣ ಶೇಖರ ಇಂಗಳದಾಳ ಹಾಗೂ ಗಾಣದ ಕಣ್ಣಪ್ಪ ಶಿವಾನುಭವ ಸೇವಾ ಸಮಿತಿ ಕೊಪ್ಪಳ ಅವರಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದರು.

2022 ರಲ್ಲಿ ಉದ್ಘಾಟನೆಗೊಂಡ ಜಿಲ್ಲಾ ಗಾಣಿಗರ ಸಮುದಾಯ ಭವನದಲ್ಲಿ, ಅಂದಿನಿಂದ ಪ್ರತಿ ತಿಂಗಳ ಎರಡನೇ ಶನಿವಾರದಂದು ಮಾಸಿಕ ಶಿವಾನುಭವ ಕಾರ್ಯಕ್ರಮ ಏರ್ಪಡಿಸುತ್ತ, ಬಸವ ತತ್ವದ ಅನೇಕ ವಿಚಾರಧಾರೆಗಳನ್ನು ಪ್ರಚಾರಪಡಿಸುವ ಕೈಂಕರ್ಯತೊಟ್ಟ ಕೊಪ್ಪಳದ ಬಸವಾಭಿಮಾನಿಗಳ ಸೇವೆ ಸಾರ್ಥಕವಾದುದು. ಯಾವುದೇ ಒಂದು ಕಾರ್ಯಕ್ರಮದ ಆಯೋಜನೆ ಒಂದು ಸಲ ಮಾಡುವುದೇ ಕಷ್ಟವಾಗಿರುವಾಗ, ಕೇಳುಗರನ್ನು ಸೇರಿಸುವುದು ಇನ್ನೂ ಕಷ್ಟವಾಗಿರುವಾಗ ಪ್ರತಿ ತಿಂಗಳು ಕಾರ್ಯಕ್ರಮ ಏರ್ಪಡಿಸುವುದು ಒಂದು ಸವಾಲಿನ ಸಂಗತಿ.

ಅಂತಹ ಸವಾಲನ್ನು ಧೈರ್ಯವಾಗಿ ಸ್ವೀಕರಿಸಿ ಪ್ರತಿ ತಿಂಗಳು ಯಶಸ್ವಿ ಶಿವಾನುಭವ ಕಾರ್ಯಕ್ರಮವನ್ನು ಏರ್ಪಡಿಸಿ ವಿದ್ವಾಂಸರನ್ನು, ಉಪನ್ಯಾಸಕರನ್ನು ಕಾರ್ಯಕ್ರಮಕ್ಕೆ ಕರೆಸಿ ಅವರಿಂದ ಅನುಭಾವವನ್ನು ಹಂಚಿಕೊಳ್ಳುವ ವ್ಯವಸ್ಥೆ ಮಾಡುತ್ತಿರುವುದು ಅವರೆಲ್ಲರ ಬಸವ ನಿಷ್ಠೆಯನ್ನು ತೋರಿಸುತ್ತದೆ. ಅವರ ಈ ಸೇವೆ 12ನೇ ಶತಮಾನದ ಅನುಭವ ಮಂಟಪವನ್ನು ನೆನಪಿಗೆ ತರುವಂತಹದ್ದು.
ಪ್ರತಿ ಕಾರ್ಯಕ್ರಮದ ಪ್ರಾರಂಭದಲ್ಲಿ ವಚನ ಪ್ರಾರ್ಥನೆ ಹಾಗೂ ಬಾಲ ಶರಣ, ಶರಣೆಯರಿಂದ ವಚನ ಪಠಣ ಮಾಡಿಸುವುದು ಮಕ್ಕಳಲ್ಲಿ ಬಸವಾದಿ ಶರಣರ ವಚನಗಳ ಜ್ಞಾನವನ್ನು ಬಿತ್ತುವ ಕಾರ್ಯ ಮಾಡುತ್ತಿರುವುದು ಅನುಕರಣೀಯವಾಗಿದೆ ಎಂದು ಶ್ರೀ ದೇವಿ ಹೇಳಿದರು.

ಕಾರ್ಯಕ್ರಮವು ಕಾಯಕ ಜೀವಿಗಳಾದ ಶರಣಬಸಪ್ಪ ಕರಿಬಸಪ್ಪ ಗೋನಾಳ್ ಅವರ ನೇತೃತ್ವದಲ್ಲಿ, ಶರಣ ಕುಪ್ಪನಗೌಡ ಜಂಬಣ್ಣನವರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬೆಳದಿಂಗಳ ಬೆಳಕಿನಲ್ಲಿ ಅನೇಕ ಬಸವಾಭಿಮಾನಿಗಳ ಸಮ್ಮುಖದಲ್ಲಿ ಕಾರ್ಯಕ್ರಮದ ಕೊನೆಯಲ್ಲಿ ಶರಣೆ ಪುಷ್ಪ ಮತ್ತು ಶರಣಬಸಪ್ಪ ಬಿಳಿಯಲಿ ಸರ್ ಅವರ ಆತ್ಮೀಯ ಮಾತುಕತೆ ಎಲ್ಲರಲ್ಲೂ ಸಂತಸ ಮೂಡಿಸಿತು. ರುಚಿಕಟ್ಟಾದ ಪ್ರಸಾದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.