ಕುಷ್ಟಗಿ
ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬಸವ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಮಹಾಸಭಾ, ತಾಲೂಕ ಆಡಳಿತ ಮತ್ತು ಬಸವಪರ ಸಂಘಟನೆಗಳ ಸಹಯೋಗದಲ್ಲಿ ಲಿಂಗಾಯತ ಧರ್ಮಗುರು, ಸಾಂಸ್ಕೃತಿಕ ನಾಯಕ ಬಸವಣ್ಣನವರ 892ನೇಯ ಜಯಂತ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ಬಸವೇಶ್ವರರ ವಚನ ಅರಿತುಕೊಂಡರೆ ಉತ್ತಮ ಜೀವನ ಸಾಗಿಸಬಹುದು. ತಂದೆ ತಾಯಿಗಳು ಮಕ್ಕಳಿಗೆ ಕನಿಷ್ಠ 10 ವಚನಗಳನ್ನಾದರೂ ಕಲಿಸಬೇಕು. ಬಸವಣ್ಣನವರ ತತ್ವಾದರ್ಶಗಳು ಸಾರ್ವಕಾಲಿಕವಾಗಿದ್ದು, ಅವರ ಆಚಾರ ವಿಚಾರಗಳನ್ನು ಬೆಳೆಸಬೇಕಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಹೇಳಿದರು.

ಬಸವಣ್ಣನವರ ತತ್ವ ಚಿಂತನೆ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಆದರೆ ಇಲ್ಲಿಯವರೆಗೆ ಅದು ಆಗದೇ ಇರುವುದು ಕಳವಳಕಾರಿ ಸಂಗತಿ. ಮುಂದಿನ ದಿನಗಳಲ್ಲಿ ಎಲ್ಲಾ ಜಾತಿ, ಸಮುದಾಯದವರನ್ನು ಒಗ್ಗೂಡಿಸಿಕೊಂಡು ವಿಶ್ವಗುರು ಬಸವಣ್ಣನವರ ಜಯಂತಿ ಆಚರಿಸುವಂತೆ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.


ಪ್ರಾಚಾರ್ಯರಾದ ಡಾ. ಎಸ್. ವಿ. ಡಾಣಿ ಬಸವೇಶ್ವರರ ಕುರಿತು ಉಪನ್ಯಾಸ ನೀಡಿದರು.
ಮಾಜಿ ಶಾಸಕ, ವಕೀಲರಾದ ಕೆ. ಶರಣಪ್ಪ ಜಯಂತಿ ಕುರಿತು ಮಾತನಾಡಿದರು. ಪ್ರಾಸ್ತಾವಿಕವಾಗಿ ಕುಷ್ಟಗಿ ತಹಶೀಲ್ದಾರ ಅಶೋಕ್ ಶಿಗ್ಗಾವಿ ಮಾತನಾಡಿದರು.


ತಹಶೀಲ್ದಾರ ಕಾರ್ಯಾಲಯದಿಂದ ಆರಂಭಗೊಂಡ ಬಸವೇಶ್ವರರ ಭಾವಚಿತ್ರದ ಮೆರವಣಿಗೆಯಲ್ಲಿ, ಬಸವಾದಿ ಶರಣರ ವಚನ ಕಟ್ಟುಗಳನ್ನು ಹೊತ್ತು, ಬಸವೇಶ್ವರರಿಗೆ ಜಯಘೋಷ ಹಾಕುತ್ತ ಊರಿನ ಪ್ರಮುಖ ಬೀದಿಗಳ ಮುಖಾಂತರ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದವರೆಗೆ ವಾದ್ಯ ಮೇಳದೊಂದಿಗೆ ಅದ್ಧೂರಿಯಾಗಿ ಸಾಗಿ ಬಂದಿತು.

ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಪ್ರವಚನಕಾರ ಬಸವ ಕಿರಣ ಶರಣರು, ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ಜಾ.ಲಿಂ. ಮಹಾಸಭಾ ಅಧ್ಯಕ್ಷ ಟಿ. ಬಸವರಾಜ, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಉಮಾಪತಿ ಅಕ್ಕಿ, ದೇವೇಂದ್ರಪ್ಪ ಬಳೂಟಗಿ, ತಾ.ಪಂ.ಇಒ ಪಂಪಾಪತಿ ಹಿರೇಮಠ, ಪುರಸಭೆ ಅಧ್ಯಕ್ಷ ಮಹಾಂತೇಶ ಕಲ್ಲಬಾವಿ, ಮಹೇಶ ಹಡಪದ, ರಾಜೇಶ ಪತ್ತಾರ, ಶೇಖರಗೌಡ ಮಾಲಿಪಾಟೀಲ ಮತ್ತಿತರರು ಇದ್ದರು.