ಲಿಂಗಾಯತ ಚಳುವಳಿ: ವೈದಿಕರಿಂದ ಅರಗಿಸಿಕೊಳ್ಳಲಾಗುತ್ತಿಲ್ಲ

ಲಿಂಗಾಯತ ಹೋರಾಟ ಜನಸಾಮಾನ್ಯರ ಬೆಂಬಲ ಪಡೆಯುತ್ತಿದೆ. ಸುಪ್ತವಾಗಿದ್ದ ಬೇಡಿಕೆ ಬಹಿರಂಗವಾಗಿದೆ.

ರಾಯಚೂರು

2017-18ರಲ್ಲಿ ಒಂಬತ್ತು ತಿಂಗಳುಗಳ ಕಾಲ ನಡೆದ ಲಿಂಗಾಯತ ಧರ್ಮದ ಚಳುವಳಿ ರಾಜ್ಯದಲ್ಲಿ ದೊಡ್ಡ ಸಂಚಲನ ಮೂಡಿಸಿ, ರಾಷ್ಟ್ರೀಯ, ಅಂತರಾಷ್ಟೀಯ ಮಾಧ್ಯಮಗಳ ಗಮನ ಸೆಳೆದವು.

ಆದರೆ ಇತ್ತೀಚೆಗೆ ರಂಭಾಪುರಿ ಶ್ರೀಗಳು ಈಗ ಲಿಂಗಾಯತ ಧರ್ಮದ ಚಳುವಳಿ ಇತಿಹಾಸಕ್ಕೆ ಸೇರಿ ಹೋಗಿದೆ, ಅದಕೆ ಎಲ್ಲರೂ ಮೊದಲಿನಂತೆಯೇ ವೀರಶೈವ-ಲಿಂಗಾಯತ ಎಂದು ಗುರುತಿಸಿಕೊಳ್ಳಿ ಎಂದು ಕರೆ ನೀಡಿದ್ದಾರೆ.

ಲಿಂಗಾಯತ ಚಳುವಳಿ ಸುಂಟರಗಾಳಿಯಂತೆ ಬಂದು ಸುಳಿವಿಲ್ಲದಂತೆ ಮಾಯವಾಯಿತೇ? ಅಥವಾ ನಮ್ಮಲ್ಲಿ ಮಹತ್ತರ ಬದಲಾವಣೆಗಳನ್ನು ತಂದು ಲಿಂಗಾಯತ ಸಮಾಜಕ್ಕೆ ಹೊಸ ದಿಕ್ಕು, ಸ್ವರೂಪ ನೀಡಿತೆ? ಎಂಟು ವರ್ಷಗಳ ನಂತರ ಅದರ ಪ್ರಭಾವವನ್ನು ನಾವು ಇಂದು ಹೇಗೆ ಅರ್ಥೈಸಬೇಕು?

ಈ ಪ್ರಶ್ನೆಗಳ ಮೇಲೆ ಶರಣ ಚಿಂತಕ ಬಸವರಾಜ ಕುರಗೋಡ ಅವರು ತಮ್ಮ ಚಿಂತನೆ ಹಂಚಿಕೊಂಡಿದ್ದಾರೆ.

ಪ್ರಶ್ನೆ 1: 2017-18 ರ ಚಳುವಳಿ ಬಂದ ಹಾಗೆ ಮಾಯವಾಯಿತೆ? ಅಥವಾ ಏನಾದರೂ ದೀರ್ಘಕಾಲಿನ ಬದಲಾವಣೆ ತಂದಿತೆ?

ಉತ್ತರ: ಚಳುವಳಿ ಮಾಯವಾಗಿಲ್ಲ. ಅಷ್ಟೇ ಅಲ್ಲ, ಅದು ಸಾಕಷ್ಟು ಬದಲಾವಣೆ ಕೂಡ ತಂದಿದೆ.

ಪ್ರಶ್ನೆ 2: 2017-18 ರ ಚಳುವಳಿ ತಂದ ದೀರ್ಘಕಾಲೀನ ಬದಲಾವಣೆಗಳೇನು?

ಉತ್ತರ: ಈ ಮೊದಲು ಧ್ವನಿ ಎತ್ತಿದ್ದ ಚಳುವಳಿ ಈಗ ಅದು ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ಶಬ್ದ ಮಾಡುತ್ತಿಲ್ಲ ಅಷ್ಟೇ. ಅದು ಈಗ ಜನಸಾಮಾನ್ಯರ ಬೆಂಬಲ ಪಡೆದುಕೊಳ್ಳುತ್ತಿರುವುದನ್ನು ವೈದಿಕರಿಂದ ಅರಗಿಸಿಕೊಳ್ಳಲಾಗುತ್ತಿಲ್ಲ. ಇದನ್ನು ನಾನು ದೀರ್ಘಕಾಲಿಕ ಬದಲಾವಣೆ ಎಂದೇ ಊಹಿಸುತ್ತೇನೆ.

ಪ್ರಶ್ನೆ 3: 2017-18 ಕ್ಕಿಂತ ಮುಂಚೆ ಬಸವ ತತ್ವದ ಪ್ರಚಾರ, ಪ್ರಸಾರ ಹೇಗಿತ್ತು? ಈಗ ಹೇಗಿದೆ?

ಉತ್ತರ: ಈ ಸಮಯದ ಮುಂಚೆ ಅಂದರೆ ಧರ್ಮದ ಮಾನ್ಯತೆ ವಿಷಯಕ್ಕಿಂತ ಮೊದಲು ಲಿಂಗಾಯತ ಮತ್ತು ವೀರಶೈವಗಳ ವ್ಯತ್ಯಾಸವನ್ನು ಜನಸಾಮಾನ್ಯರಿಗೆ ಗುರುತಿಸಲು ಆಗುತ್ತಿದ್ದಿಲ್ಲ. ಸಾಮಾನ್ಯವಾಗಿ ಎರಡು ಒಂದೇ ಎಂಬ ತಿಳುವಳಿಕೆ ಇತ್ತು. ಹಾಗಾಗಿ ಯಾರೇ ಮಾತಾಡಲಿ ಅವರು ಒಂದು ವಚನ ಹೇಳಿದರೆ ಸಾಕು, ಅದೇ ಬಸವತತ್ವದ ಪ್ರಚಾರ ಎಂದು ತಿಳಿಯುತ್ತಿದ್ದರು.

ಈಗ ಹಾಗಿಲ್ಲ. ವಚನ ಹೇಳುವವರ ವಿಶ್ಲೇಷಣೆ, ಅದರಲ್ಲಿ ವೈದಿಕತೆ ಬೆರೆತಿದೆಯಾ ಇಲ್ಲವಾ ಎಂದು ಸೂಕ್ಷ್ಮವಾಗಿ ಚರ್ಚಿಸುವಷ್ಟು ಜಾಗೃತಿ ಬಹಳಷ್ಟು ಜನರಲ್ಲಿ ಬಂದಿದೆ. ಇದು ಸಂತೋಷದ ವಿಷಯ.

ಪ್ರಶ್ನೆ 4: 2017-18 ರ ನಂತರ ಜಿಲ್ಲಾ, ತಾಲ್ಲೂಕು ಬಸವ ಕಾರ್ಯಕರ್ತರಲ್ಲಿ ಕಾಣುತ್ತಿರುವ ಬದಲಾವಣೆ?

ಉತ್ತರ: ಈ ಮೊದಲು ಯಾವುದೇ ಸ್ವಾಮೀಜಿಯವರು ಅಥವಾ ಓದಿದವರು ಹೇಳಿದ್ದೆಲ್ಲಾ ಸರಿ ಇರುತ್ತದೆ ಎಂಬ ಭಾವ ಇರುತ್ತಿತ್ತು. ಆದರೆ ಈ ಚಳುವಳಿ ನಂತರ ಧರ್ಮ ಮಾನ್ಯತೆ ವಿಷಯದಲ್ಲಿ ವೈದಿಕರ ಪರೋಕ್ಷ ಪ್ರತಿರೋಧ ಕಂಡು ಅದನ್ನು ಎದುರಿಸುಷ್ಟು ಪ್ರಜ್ಞಾವಂತಿಕೆ ಕಾರ್ಯಕರ್ತರಲ್ಲಿ ಬೆಳೆದು ಬಂದಿದೆ.

ಅದರೆ ವೈದಿಕ ಪಟಾಲಂಗಳು ನೇರವಾಗಿ ಮತ್ತು ವೀರಶೈವ ಪಂಚಾಚಾರ್ಯರ ಮೂಲಕ ಮಾಡುತ್ತಿರುವ ಅಪಪ್ರಚಾರ ನೋಡಿದರೆ ಈಗ ನಾವು ಬೆಳೆಸಿಕೊಂಡಿರುವ ಬಸವ ಪ್ರಜ್ಞೆ ಸಾಲದು, ನಾವು ಇನ್ನಷ್ಟು ಹೆಚ್ಚು ಪ್ರಜ್ಞಾವಂತರಾಗಬೇಕು ಎಂಬುದು ನನ್ನ ಅನಿಸಿಕೆ.

ಪ್ರಶ್ನೆ 5: 2017-18ರ ಮುಂಚೆ ಲಿಂಗಾಯತ ಧರ್ಮದ ಬೇಡಿಕೆ ಹೇಗಿತ್ತು? ಈಗ ಹೇಗಿದೆ?

ಉತ್ತರ: ಚಳುವಳಿಗಿಂತ ಮೊದಲು ಧರ್ಮದ ಮಾನ್ಯತೆ ಬೇಡಿಕೆ ಸುಪ್ತವಾಗಿತ್ತು. ಚಳುವಳಿ ನಂತರ ಅದು ಬಹಿರಂಗವಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
Leave a comment

Leave a Reply

Your email address will not be published. Required fields are marked *