ಬಸವತತ್ವ ರಕ್ಷಣೆಗೆ, ಲಿಂಗಾಯತ ಧರ್ಮದ ಹೋರಾಟಕ್ಕೆ ಈ ಸಂಘಟನೆ ಅನಿವಾರ್ಯ
ಚಾಮರಾಜನಗರ
ಬಸವ ಸಂಸ್ಕೃತಿ ಈ ನೆಲದ ಸಂಸ್ಕೃತಿ.
ಜಗತ್ತಿಗೆ ಸಮಾನತೆ, ಮಾನವೀಯತೆ, ಕಾಯಕ ಮತ್ತು ದಾಸೋಹದ ಮಹತ್ವವನ್ನು ಸಾರಿದ ಬಸವಣ್ಣನವರ ಕ್ರಾಂತಿಕಾರಿ ತತ್ವಗಳು ಇಂದಿನ ಸಮಾಜಕ್ಕೆ ದಿಕ್ಕು ತೋರಿಸುವ ದೀಪವಾಗಿವೆ.
ಈ ದೀಪವನ್ನು ಮುಂದಿನ ಪೀಳಿಗೆಗೆ ಬೆಳಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಯುವ ಜನತೆಯನ್ನು ತತ್ವನಿಷ್ಠವಾಗಿ ಸಂಘಟಿಸಿ, ಬಲವಾದ ವೇದಿಕೆಯನ್ನು ನಿರ್ಮಿಸಿದರೆ ಮಾತ್ರ ಇದು ಸಾಧ್ಯವಾಗುತ್ತದೆ.
ಈ ಮಹಾನ್ ಕಾರ್ಯಕ್ಕಾಗಿ ಬಸವಾಭಿಮಾನಿ ಯುವಕರು ಮತ್ತು ಯುವತಿಯರನ್ನು ಒಳಗೊಂಡ ‘ಗಣಾಚಾರ ವೇದಿಕೆ’ಯನ್ನು ಸ್ಥಾಪಿಸುವ ಕಾಲ ಬಂದಿದೆ.
ಈ ವೇದಿಕೆಯಲ್ಲಿ ಬಸವ ತತ್ವದ ಮೇಲೆ ಅಚಲ ನಂಬಿಕೆ ಹೊಂದಿರುವ, ಸಮಾಜಮುಖಿ ಚಿಂತನೆ ಹೊಂದಿರುವ, ಹಾಗೂ ಲಿಂಗಾಯತ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗೆ ಸನ್ನದ್ಧರಾಗಿರುವ 40 ವರ್ಷ ಒಳಗಿನ ಯುವಕರು ಮತ್ತು ಯುವತಿಯರಿಗೆ ಮಾತ್ರ ಸದಸ್ಯತ್ವ ನೀಡಬೇಕು.
ಪ್ರತಿ ಜಿಲ್ಲಾ ಕೇಂದ್ರದಲ್ಲಿ ಕನಿಷ್ಠ 100 ಗಣಾಚಾರಿಗಳನ್ನು ಒಳಗೊಂಡ ಬಲಿಷ್ಠ ತಂಡವನ್ನು ರಚಿಸಬೇಕು.
ರಾಜ್ಯಾದ್ಯಂತ ಇಂತಹ ಗಣಾಚಾರಿಗಳ ಪಡೆ ನಿರ್ಮಾಣವಾದರೆ, ಬಸವ ತತ್ವದ ರಕ್ಷಣೆ ಮತ್ತು ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ದೊರಕಿಸುವ ಹೋರಾಟಕ್ಕೆ ಅಪಾರ ಶಕ್ತಿ ದೊರೆಯುತ್ತದೆ.

ಗಣಾಚಾರ ವೇದಿಕೆಯ ಪ್ರಮುಖ ಗುರಿಗಳು:
- *ಲಿಂಗಾಯಿತ ಧರ್ಮದ ಅಸ್ತಿತ್ವದ ರಕ್ಷಣೆಗೆ ಬಲವಾದ ತಂಡವನ್ನು ನಿರ್ಮಿಸುವುದು.
- *ಲಿಂಗಾಯತ ಧರ್ಮ ಮಾನ್ಯತೆ ಹೋರಾಟವನ್ನು ಸಂಘಟಿತವಾಗಿ, ತೀವ್ರವಾಗಿ ಮುಂದುವರಿಸುವುದು.
- *ಧರ್ಮದ ಮೇಲೆ ಯಾವುದೇ ರೀತಿಯ ಅಪಮಾನ ಅಥವಾ ಕುತ್ತು ಬಂದರೆ ತಕ್ಷಣ ಸಂಘಟಿತವಾಗಿ ಸ್ಪಂದಿಸಿ ಹೋರಾಟ ನಡೆಸುವುದು.
- *ಬಸವಣ್ಣನವರ ತತ್ವಗಳು, ವಚನ ಸಾಹಿತ್ಯ ಮತ್ತು ಶರಣರ ಚಿಂತನೆಗಳನ್ನು ಯುವಜನರಲ್ಲಿ ವ್ಯಾಪಕವಾಗಿ ಹರಡುವುದು.
- *ಯುವಜನರಲ್ಲಿ ನಾಯಕತ್ವ ಬೆಳೆಸಿ ಬಸವ ಚಿಂತನೆಯ ಆಧಾರಿತ ಸಮಾಜ ನಿರ್ಮಾಣಕ್ಕೆ ದಾರಿದೀಪವಾಗುವುದು.
- *ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜಾಗೃತಿ ಅಭಿಯಾನ, ವಿಚಾರ ಸಂಕಿರಣ, ಸಭೆಗಳು ಮತ್ತು ಶಾಂತಿಯುತ ಹೋರಾಟಗಳನ್ನು ರೂಪಿಸುವುದು.
ಈ ರೀತಿ ಗಣಾಚಾರಿಗಳ ಪಡೆಗಳು ರಾಜ್ಯಾದ್ಯಂತ ಸಂಘಟಿತವಾದರೆ ಯಾವುದೇ ಸಂದರ್ಭದಲ್ಲೂ ಧರ್ಮ ಮತ್ತು ತತ್ವದ ರಕ್ಷಣೆಗೆ ಸದಾ ಸಜ್ಜಾಗಿರುವ ಬಲಿಷ್ಠ ಶಕ್ತಿ ಅಸ್ತಿತ್ವಕ್ಕೆ ಬರುತ್ತದೆ.
ಬಸವಾಭಿಮಾನಿಗಳು, ಲಿಂಗಾಯಿತ ಸಂಘ-ಸಂಸ್ಥೆಗಳು ಮತ್ತು ಸಮಾಜದ ಹಿರಿಯರು ತಮ್ಮ ಆಶೀರ್ವಾದ, ಮಾರ್ಗದರ್ಶನ ನೀಡಿದರೆ ಈ ಸಂಘಟನೆಯನ್ನು ಸುಲುಭವಾಗಿ ರಚಿಸಬಹುದು.
