ರಾಷ್ಟ್ರೀಯತೆ, ದೇಶಭಕ್ತಿ ಲಿಂಗಾಯತರ ರಕ್ತದಲ್ಲಿಯೇ ಇದೆ: ಹಂದಿಗುಂದ ಶಿವಾನಂದ ಶ್ರೀ
ಬಸವಕಲ್ಯಾಣ:
ಲಿಂಗಾಯತ ಹೋರಾಟ ಯಾವುದೇ ಧರ್ಮ, ಪಕ್ಷ, ವ್ಯಕ್ತಿಗಳ ವಿರೋಧವಲ್ಲ. ಇದು ಎಲ್ಲರನ್ನು ಒಳಗೊಂಡಿರುವ ಹೋರಾಟವಾಗಿದೆ. ಲಿಂಗಾಯತ ಹೋರಾಟಗಾರರನ್ನು ರಾಷ್ಟ್ರದ್ರೋಹಿಗಳೆಂದು ಬಿಂಬಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅವರ ಪ್ರಯತ್ನ ಎಂದಿಗೂ ಫಲ ಕೊಡುವುದಿಲ್ಲ ಎಂದು ಲಿಂಗಾಯತ ಮಠಾಧೀಶರ ಒಕ್ಕೂಟದ ಕಾರ್ಯದರ್ಶಿ ಹಂದಿಗುಂದದ ಪೂಜ್ಯ ಶಿವಾನಂದ ಮಹಾಸ್ವಾಮಿಗಳು ನುಡಿದರು.
೪೬ನೇ ಶರಣ ಕಮ್ಮಟ ಮತ್ತು ಅನುಭವಮಂಟಪ ಉತ್ಸವ-೨೦೨೫ ಭಾಗವಾಗಿ ಹಮ್ಮಿಕೊಂಡಿರುವ ‘ಲಿಂಗಾಯತ ಹೋರಾಟ ಮತ್ತು ರಾಷ್ಟ್ರೀಯತೆ’ ಗೋಷ್ಠಿ-೨ ರ ಸಾನಿಧ್ಯ ವಹಿಸಿ ಮಾತನಾಡಿದರು.

ರಾಷ್ಟ್ರೀಯತೆ, ದೇಶಭಕ್ತಿ ಲಿಂಗಾಯತ ರಕ್ತದಲ್ಲಿಯೇ ಇದೆ. ವಿಶ್ವಗುರು ಬಸವಣ್ಣನರು ನೂರಾರು ಜಾತಿಗಳನ್ನು ನಿರ್ಮೂಲನೆ ಮಾಡಿ, ಸರ್ವರಿಗೆ ಸಮಾನತೆಯ ಆಧಾರದ ಮೇಲೆ ಲಿಂಗಾಯತ ಧರ್ಮ ನೀಡಿದರು. ಇದು ಆ ಕಾಲದಲ್ಲಿ ರಾಷ್ಟ್ರಕಟ್ಟುವ ದಿಶೆಯಲ್ಲಿ ಬಹುದೊಡ್ಡ ಮೈಲುಗಲ್ಲು ಆಗಿತ್ತು. ಲಿಂಗಾಯತ ಹೋರಾಟವೆಂದರೆ, ಅದು ರಾಷ್ಟ್ರೀಯತೆಯೇ ಆಗಿದೆ ಎಂದರು.
ಕೋರಣೇಶ್ವರ ಮಹಾಸ್ವಾಮಿಗಳು ಆಳಂದ, ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳು ಗುರುಮಠಕಲ್ ಪೂಜ್ಯರು ಲಿಂಗಾಯತ ಹೋರಾಟ ಸರ್ವಸಾಮಾನ್ಯರಿಗೂ ಬಸವಾದಿ ಶರಣರ ತತ್ವಾದರ್ಶಗಳ ಕುರಿತು ಜಾಗೃತ ಮೂಡಿಸುವ ಹೋರಾಟವಾಗಿದೆ ಎಂದು ನುಡಿದರು.
ಶ್ರೀಗುರು ಬಸವಮಹಾಮನೆ, ಮನಗುಂಡಿಯ ಪೂಜ್ಯ ಬಸವಾನಂದ ಮಹಾಸ್ವಾಮಿಗಳು, ಲಿಂಗಾಯತ ಹೋರಾಟ ಪ್ರಾರಂಭವಾಗಿದ್ದು ೧೨ನೆಯ ಶತಮಾನದಲ್ಲಿ. ಲಿಂಗಾಯತ ಧರ್ಮದ ಮೇಲೆ ಅಂದಿನಿಂದಲೂ ಅನೇಕ ದಾಳಿಗಳು ಆಗುತ್ತಲಿವೆ. ಆದರೆ ಆ ದಾಳಿಗಳನ್ನು ಎದುರಿಸುವ ಶಕ್ತಿ ಲಿಂಗಾಯತ ತತ್ವದಲ್ಲಿ ಅಡಗಿದೆ. ಅದಕ್ಕಾಗಿ ೯೦೦ ವರ್ಷಗಳ ನಂತರವು ಲಿಂಗಾಯತ ಧರ್ಮ ಉಳಿದಿದೆ. ದಿನ ದಿನಕ್ಕೂ ಬೆಳೆಯುತ್ತಿದೆ.
ಲಿಂಗಾಯತರಲ್ಲಿ ದೇಶಪ್ರೇಮ ತುಂಬಿಕೊಂಡಿದೆ. ದೇಶದ ಅಖಂಡತೆಗಾಗಿ ಲಿಂಗಾಯತರು ಮಾಡಿರುವ ತ್ಯಾಗ, ಬಲಿದಾನದ ಇತಿಹಾಸ ಎಂದೂ ಮರೆಯಲಿಕ್ಕೆ ಸಾಧ್ಯವಿಲ್ಲ ಎಂದು ಅನುಭಾವ ನೀಡಿದರು.

ವೈದ್ಯಕೀಯ ರಂಗದಲ್ಲಿ ಗಣನಿಯ ಸೇವೆ ಸಲ್ಲಿಸಿದ ಡಾ. ಉಲ್ಕಾ ಡಾ. ಮಲ್ಲಿಕಾರ್ಜುನ ರಗಟೆ ಅವರಿಗೆ ವೈದ್ಯ ಸಂಗಣ್ಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾವಯವ ಕೃಷಿಕರಾದ ರಮೇಶ ಮೋರ್ಗೆ ಅವರಿಗೆ ಒಕ್ಕಲಿಗ ಮುದ್ದಣ್ಣ ಸಾವಯವ ಪ್ರಶಶ್ತಿ-೨೦೨೪ ಪ್ರದಾನ ಮಾಡಲಾಯಿತು. ಶರಣ ಸೋಮಶಂಕರ ಕಾರಾಮುಂಗೆ ಅವರಿಗೆ ೨೦೨೫ರ ಒಕ್ಕಲಿಗ ಮುದ್ದಣ್ಣ ಸಾವಯವ ಕೃಷಿ ಪ್ರದಾನ ಮಾಡಲಾಯಿತು.
ಅಧ್ಯಕ್ಷತೆಯನ್ನು ಜೆ.ಎಲ್.ಎಂ. ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಡಾ. ತೃಪ್ತಿ ಕರಿಕಟ್ಟಿ ಕೋಲ್ಹಾಪುರ, ಪನ್ನರಾಜ್ ಬಳ್ಳಾರಿ, ನಿಷ್ಠಿ ರುದ್ರಪ್ಪ ಬಳ್ಳಾರಿ, ರವಿಶಂಕರ ಬಳ್ಳಾರಿ, ಎಸ್. ಬಸವರಾಜ ಮಾವಿನಹಳ್ಳಿ ವಿಜಯಪುರ, ಡಾ. ಮಹಾಬಳೆಶ್ವರರೆಡ್ಡಿ ವಿಜಯನಗರ, ಹನುಮೇಶ ಕಲ್ಮಂಗಿ ಕೊಪ್ಪಳ, ಸೌಮ್ಯ ವಿಜಯ ನಾಲ್ವಾಡ ಕೊಪ್ಪಳ, ರುದ್ರಪ್ಪ ಪಿ. ರಾಯಚೂರು, ನಾಗನಗೌಡರು ಹರವಿ ರಾಯಚೂರು, ಚನ್ನಬಸವಣ್ಣ ರಾಯಚೂರು ಆಗಮಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹರೀಶ ಸುಮೈರ್, ಧನರಾಜ ತಾಳಂಪಳ್ಳಿ, ಡಾ.ಚಂದ್ರಕಾಂತ ಗುದಗೆ, ಮಹಾದೇವ ಪಾಟೀಲ ಅವರಿಗೆ ಸನ್ಮಾನಿಸಲಾಯಿತು.
ನಿರೂಪಣೆ ಡಾ. ಸಂಗೀತಾ ಡಾ. ರಮೇಶ ಮಂಠಾಳೆ ಮಾಡಿದರು. ವೀರಭದ್ರಪ್ಪ ಬಸವಕಲ್ಯಾಣದ ಶರಣು ಸಮರ್ಪಣೆ ಮಾಡಿದರು. ರಾಜಕುಮಾರ ಹೂಗಾರ ಹಾಗೂ ರಾಮಚಂದ್ರ ಹಲ್ಲಹಿಪ್ಪರ್ಗಿ ಅವರಿಂದ ವಚನ ಸಂಗೀತ ಜರುಗಿತು. ಅನುಭವಮಂಟಪ ಸಂಸ್ಕೃತಿ ವಿದ್ಯಾಲಯ ಮಕ್ಕಳಿಂದ ವಚನ ನೃತ್ಯ ನೋಡುಗರ ಮನ ರಂಜಿಸಿತು.
