ಗುಂಡ್ಲುಪೇಟೆ
ಮಡಹಳ್ಳಿ ಗ್ರಾಮದ ಮಹದೇವಮ್ಮ ಮತ್ತು ಹೊಂಗಹಳ್ಳಿ ಎಚ್.ಎಮ್. ಸುಬ್ಬಪ್ಪ ಅವರ ಮನೆಯ ಗುರುಪ್ರವೇಶವು ಬಸವಾದಿ ಶರಣರ ಭಾವಚಿತ್ರವನ್ನು ಹೊತ್ತು ಬಸವ ಅನುಯಾಯಿಗಳು ನೂತನ ಮನೆ ಪ್ರವೇಶಿಸುವುದರ ಮೂಲಕ ನೆರವೇರಿತು.

ನವಗ್ರಹಪೂಜೆ, ಹೋಮ, ಹವನ, ಹಸು ಬಿಡುವುದು, ಒಲೆಯ ಮೇಲೆ ಹಾಲು ಉಕ್ಕಿಸುವುದು ಮುಂತಾದ ಅನ್ಯ ಆಚರಣೆಗಳನ್ನು ಮಾಡದೇ ‘ಶ್ರೀ ಕಾಡಬಸವೇಶ್ವರ ನಿಲಯ’ದ ಗುರು ಪ್ರವೇಶ ಲಿಂಗಾಯತ ನಿಜಾಚರಣೆ ಮೂಲಕ ನಡೆಯಿತು.

ಮಡಹಳ್ಳಿ ಸುತ್ತಮುತ್ತಲಿನ ಬಸವ ಭಕ್ತರು ಸೇರಿ ಬಸವಾದಿ ಶರಣರ ವಚನಗಳ ಕಟ್ಟುಗಳನ್ನು ತಲೆಯ ಮೇಲೆ ಹೊತ್ತು, ಬಸವಾದಿ ಶರಣರ ಭಾವಚಿತ್ರವನ್ನು ಕೈಯಲ್ಲಿ ಹಿಡಿದು, ಬಸವ ಜಯಗೋಷ ಹಾಕುತ್ತಾ ಊರಿನ ಪ್ರಮುಖ ರಸ್ತೆಯಲ್ಲಿ ಸಾಗಿದರು.
ಸಾಂಸ್ಕೃತಿಕ ನಾಯಕ ಬಸವಣ್ಣರವರ ಷಟ್ಸ್ಥಲ ಧ್ವಜಾರೋಹಣ ನಂಜದೇವನಪುರದ ಮಾದಪ್ಪನವರ ತಂಡದವರಿಂದ ವಚನ ಗಾಯನದೊಂದಿಗೆ ನೆರವೇರಿತು.

ಪೂಜ್ಯ ಬಸವಯೋಗಿ ಪ್ರಭು ಸ್ವಾಮೀಜಿಯವರು ಇಷ್ಟಲಿಂಗ ಪೂಜೆ, ಇಷ್ಟಲಿಂಗದ ಮಹತ್ವ, ಅಷ್ಟಾವರಣಗಳ ಅರಿವು, ಪಂಚಾಚಾರ ಆಚರಣೆಗಳನ್ನು ವಿವರವಾಗಿ ತಿಳಿಸಿದರು.

ನೆರೆದಿರುವ ಭಕ್ತರು ಮೂಢನಂಬಿಕೆ, ದುರಭ್ಯಾಸ, ಬಿಡಬೇಕೆಂದು ಬಸವತತ್ವ ಪ್ರಚಾರಕರಾದ ತಿ. ನರಸೀಪುರದ ಚೌಹಳ್ಳಿ ಲಿಂಗರಾಜಪ್ಪರವರು ಹೇಳಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮೂಡಗೂರಿನ ವಿರಕ್ತಮಠದ ಪೂಜ್ಯ ಶ್ರೀ ಉದ್ದಾನ ಸ್ವಾಮಿಗಳು ಮಾತನಾಡಿದರು.

ನಂಜನಗೂಡಿನ ಶರಣಪ್ರಸಾದ ವೇದಿಕೆಯ ಅಧ್ಯಕ್ಷರಾದ ಕಾ.ಸು. ನಂಜಪ್ಪನವರು ಗುರುಪ್ರವೇಶ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಶ್ವ ಬಸವಸೇನೆ, ಜಾಗತಿಕ ಲಿಂಗಾಯತ ಮಹಾಸಭಾ ಸದಸ್ಯರು ಹಾಗೂ ಮಡಹಳ್ಳಿ, ಹೊಂಗಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.