ಮಲೆ ಮಹದೇಶ್ವರ ಬೆಟ್ಟ
ಬಸವ ಜಯಂತಿ ಅಂಗವಾಗಿ ಮಲೆಮಾದೇಶ್ವರ ಬೆಟ್ಟದ ಕಾಡಂಚಿನ ಗ್ರಾಮಗಳಲ್ಲಿ ಧರ್ಮಗುರು ಬಸವಣ್ಣನವರ ಪ್ರತಿಮೆ ಮೆರವಣಿಗೆ ಮತ್ತು ಶರಣರ ಸಂದೇಶ ಸಾರುವ ವಾಹನ ಜಾಥಾ ಸೋಮವಾರ ನಡೆಯಿತು.
ಮಂಡ್ಯ ಜಿಲ್ಲಾ ಬಸವ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾಥಾದ ನೇತೃತ್ವವನ್ನು ಕೇಂದ್ರದ ಜಿಲ್ಲಾಧ್ಯಕ್ಷ ಬಸವಪ್ರಿಯ ನಾಗರಾಜು, ಸಂಚಾಲಕ ಯೋಗೇಶ ವಹಿಸಿಕೊಂಡಿದ್ದರು.

ಸಾಲೂರು ಮಠದ ಮಹಾದೇಶ್ವರ ದೇವಸ್ಥಾನದಲ್ಲಿ ಮಹೇಶಸ್ವಾಮಿಗಳು ಬಸವೇಶ್ವರ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿ ಜಾಥಾಕೆ ಚಾಲನೆ ನೀಡಿದರು. ಅಲ್ಲಿಂದ ತಂಬಡಗೇರಿ ಬೀದಿ ಮಾರ್ಗವಾಗಿ ವಡಿಕೆಹಳ್ಳ, ಪೊನ್ನಾಚಿ, ಮರೂರು, ಅಸ್ತೂರು, ಕೌದಳ್ಳಿ, ರಾಮಾಪುರ, ಅಜ್ಜಿಪುರ, ಎಲೆಮಾಳ, ಹನೂರು ಗುರುಮಲ್ಲೇಶ್ವರ ಮಠ, ಮಂಗಲ, ಕಾಮಗೆರೆ, ಸಿಂಗಾನಲ್ಲೂರು, ದೊಡ್ಡಇಂಡವಾಡಿ, ಮಧುವನಹಳ್ಳಿ, ಸರಗೂರು, ಧನಗೆರೆ, ಸತ್ತೇಗಾಲ, ಯಡಕುರಿ ಗ್ರಾಮಗಳಲ್ಲಿ ಜಾಥಾ ಸಂಚರಿಸಿತು.

ಮೆರವಣಿಗೆಯ ಜಾಥಾದ ಗ್ರಾಮ ಸಭೆಗಳಲ್ಲಿ ಲಿಂಗಾಯತ ಧರ್ಮ, ಧರ್ಮಸ್ಥಾಪಕ ಬಸವಣ್ಣ, ಬಸವಾದಿ ಶರಣರು, ವಚನಗಳು, ಲಿಂಗದೀಕ್ಷೆ, ಶಿವಯೋಗ, ಲಿಂಗಾಯತ ಸಂಘಟನೆ ಕುರಿತು ಚಿಂತನೆ ಮಾಡುತ್ತ, ವಚನಗಳನ್ನು ಹಾಡುತ್ತ ಸಾಗಲಾಯಿತು.
ಪ್ರತಿವರ್ಷ ಈ ಮೆರವಣಿಗೆ ಜಾಥಾ ಮಾಡುತ್ತಿದ್ದು, ಇದು 20ನೇ ವರ್ಷದ್ದು ಎಂದು ನಾಗರಾಜು ತಿಳಿಸಿದರು.
“ಮೊದಲು ಇಲ್ಲಿ ಮಹದೇಶ್ವರರ ಗದ್ದುಗೆ ಮಾತ್ರ ಇತ್ತು. ಈಗ ದೇವಸ್ಥಾನವಾಗಿ ಮುಜರಾಯಿ ಇಲಾಖೆಗೆ ಒಳಪಟ್ಟರೂ ವೈದಿಕರ ಕಪಿಮುಷ್ಟಿಗೆ ಹೋಗಿ ವೈದಿಕಮಯವಾಗಿದೆ.
ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಶರಣ ಸಮಾವೇಶ, ಸಹಜಶಿವಯೋಗ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಈ ಭಾಗದ ಎಲ್ಲಾ ಹಳ್ಳಿಗಳವರನ್ನು ಸೇರಿಸಿ ಲಿಂಗಾಯತ ಧರ್ಮ ಪ್ರಜ್ಞೆ ಮೂಡಿಸುವ ಕೆಲಸ ಮಾಡುತ್ತೇವೆ. ಆ ಮೂಲಕ ಕ್ಷೇತ್ರವನ್ನು ಶರಣ ಪರಂಪರೆಯಂತೆ ಮತ್ತೆ ಬದಲಾಯಿಸಲು ಪ್ರಯತ್ನಿಸುತ್ತೇವೆ,” ಎಂದು ಹೇಳಿದರು.

ಮಹದೇಶ್ವರ ಬೆಟ್ಟದ ಕ್ಷೇತ್ರ, ಕಾಡಂಚಿನ ಗ್ರಾಮಗಳಲ್ಲಿ, ತಾಲೂಕ ಮಟ್ಟದಲ್ಲಿ ಜನರಿಗೆ ಶರಣ ಪರಂಪರೆಯ ಮಹದೇಶ್ವರರ ಬಗ್ಗೆ ಅಪಾರ ಭಕ್ತಿ, ಗೌರವ ಇದೆ. ಮಹದೇಶ್ವರರ ಪರಂಪರೆ ಅದು ಬಸವ ಪರಂಪರೆಯೇ ಆಗಿದೆ, ಎಂದು ಹೇಳಿದರು.

ಗ್ರಾಮಗಳ ಬಸವಕೇಂದ್ರ, ಲಿಂಗಾಯತ ವೀರಶೈವ ಸಂಘಟನೆಗಳು, ಮುಖಂಡರಾದ ಪ್ರಕಾಶ, ಚನ್ನಬಸವಯ್ಯ, ಪುಟ್ಟಣ್ಣ, ಪೊನ್ನಾಚಿಗೌಡ್ರು ಶಿವಬಸಪ್ಪ, ಸಿದ್ದಲಿಂಗಸ್ವಾಮಿ, ಕೇಶವಮೂರ್ತಿ, ವೃಷಭೇಂದ್ರಸ್ವಾಮಿ, ಬಸವರಾಜ, ಕೋಟೆ ಬಸಪ್ಪ, ಆನಂದ, ಗುರುಸ್ವಾಮಿ ಮತ್ತಿತರರು ಮೆರವಣೆಗೆಯಲ್ಲಿದ್ದು ಸಹಕರಿಸಿದರು.