ಭಾಲ್ಕಿ:
ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಫೆಬ್ರವರಿ 15ರಂದು ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ತಿಳಿಸಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ನಡೆದ ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಇಷ್ಟಲಿಂಗ ಪೂಜೆ ಶರಣ ಸಂಪ್ರದಾಯದ ಪ್ರಮುಖ ಆಧ್ಯಾತ್ಮಿಕ ಆಚರಣೆ ಎಂದು ಹೇಳಿದರು.
ಶರಣರ ದೃಷ್ಟಿಯಲ್ಲಿ ಮಹಾಶಿವರಾತ್ರಿ ಕೇವಲ ವರ್ಷಕ್ಕೊಮ್ಮೆ ಬರುವ ಹಬ್ಬವಲ್ಲ. ಅದು ಲಿಂಗಾರ್ಚನೆ, ಶಿವಧ್ಯಾನ ಹಾಗೂ ಅಂತರಂಗ ಶುದ್ಧೀಕರಣದ ಮೂಲಕ ಪ್ರತಿದಿನವೂ ಆಚರಿಸಬೇಕಾದ ಆತ್ಮಜಾಗೃತಿ ಹಬ್ಬವಾಗಿದೆ.
ಇಷ್ಟಲಿಂಗವು ಭಕ್ತನ ಕೈಯಲ್ಲಿರುವ ಜೀವಂತ ದೈವದ ಸಂಕೇತ. ಅದನ್ನು ಪೂಜಿಸುವುದರಿಂದ ಆತ್ಮಚಿಂತನೆ, ಶಿಸ್ತು, ಸಮಾನತೆ ಮತ್ತು ಭಕ್ತಿಭಾವ ವೃದ್ಧಿಯಾಗುತ್ತದೆ.
ಸಾಮೂಹಿಕ ಪೂಜೆಗಳಿಂದ ಸಮಾಜದಲ್ಲಿ ಏಕತೆ, ಸೌಹಾರ್ದತೆ ಮತ್ತು ಆಧ್ಯಾತ್ಮಿಕ ಜಾಗೃತಿ ಹೆಚ್ಚುತ್ತದೆ ಎಂದು ಮಹಾಶಿವರಾತ್ರಿ ಮಹತ್ವವನ್ನು ವಿವರಿಸಿದರು.
ಅಂದು ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಭೂಷಣ ಮಾಮಡಿ, ಜಾಗತಿಕ ಲಿಂಗಾಯತ ಮಹಾಸಭೆಯ ತಾಲ್ಲೂಕು ಅಧ್ಯಕ್ಷ ಬಸವರಾಜ ಮರೆ, ನಿವೃತ್ತ ಎಂಜಿನಿಯರ್ ಶರಣಪ್ಪ ಬಿರಾದಾರ, ಶಿವಾನಂದ ಗುಂದಗೆ, ರೇಖಾಬಾಯಿ ಅಷ್ಟೂರೆ ಹಾಗೂ ರೇಖಾ ಮಹಾಜನ ಮತ್ತಿತರರು ಉಪಸ್ಥಿತರಿದ್ದರು.
