ರಾಯಚೂರು
ಕಳೆದ ಮಾರ್ಚ್ 1 ಮತ್ತು 2ರಂದು ರಾಯಚೂರು ಬಸವಪರ, ಲಿಂಗಾಯತಪರ ಸಂಘಟನೆಗಳ ಆಶ್ರಯದಲ್ಲಿ ಲಿಂಗಾಯತ ಧರ್ಮದ ಸಿದ್ದಾಂತ, ಸಂಸ್ಕೃತಿಗಳ ನಿಜಾಚರಣೆ ಕಮ್ಮಟ ನಡೆಯಿತು. ಕಮ್ಮಟದಲ್ಲಿ ಬೆಳಿಗ್ಗೆ ಪ್ರಾರಂಭವಾದ ಕಾರ್ಯಕ್ರಮಗಳು ಸಾಯಂಕಾಲ 7 ಗಂಟೆಯವರೆಗೆ ಬಿಡುವಿಲ್ಲದಂತೆ ನಡೆದವು. ಅಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಜನ ಭಾಗವಹಿಸಿ ಲಿಂಗಾಯತ ತತ್ವದ ಮಹತ್ವ, ಶ್ರೇಷ್ಠತೆ, ಅಲ್ಲಿನ ನಿಜಾಚರಣೆಗಳ ಮಾಹಿತಿಯನ್ನು ಪಡೆದರು. ರಾಯಚೂರಿನ ಬಸವಭಕ್ತರಿಗೆ ಪ್ರೇರಣಾ ರೂಪದಲ್ಲಿ ಕಾರ್ಯಕ್ರಮ ಮುಕ್ತಾಯಗೊಂಡಿತು.

ಇದನ್ನು ನೆನಪಿಸಿಕೊಳ್ಳುವ ಉದ್ದೇಶ ಏನೇಂದರೆ ಅಲ್ಲಿನ ಎರಡು ದಿನದ ಶರಣ ಸಂದೇಶಗಳನ್ನು ಅನುಭವಿಸಿದ ಶರಣ ಬಸ್ಸಪ್ಪ ಜಾಡಲದಿನ್ನಿಯವರು ತಮ್ಮ ಮಗಳ ಕಲ್ಯಾಣ ಮಹೋತ್ಸವವನ್ನು ಶರಣ ಸಂಸ್ಕೃತಿಯ ನಿಜಾಚರಣೆ ಅಡಿ ನಡೆಯಬೇಕೆಂದು ಅಂದೇ ನಿರ್ಧರಿಸಿದರು.
ಅದೇ ರೀತಿಯಂತೆ ಕಳೆದ ಮೇ 10 ಮತ್ತು 11ರಂದು ತಮ್ಮ ಮಗಳಾದ ಅಷ್ಟವರಣ ಸಂಪನ್ನೆ ಸೌಮ್ಯ ಅವರ ಕಲ್ಯಾಣ ಮಹೋತ್ಸವವನ್ನು , ಅಷ್ಟಾವರಣ ಸಂಪನ್ನ ಜಗದೀಶ್ ಕೆ. ಅವರ ಜೊತೆಗೆ ಲಿಂಗಾಯತ ಧರ್ಮದ ಅಡಿ ನಡೆಸಿದರು. ರಾಯಚೂರಿನ ಹರ್ಷಿತಾ ಗಾರ್ಡನ್ ನಲ್ಲಿ ನಡೆದ ಈ ಕಲ್ಯಾಣ ಮಹೋತ್ಸವವನ್ನು ಅನುಭಾವಿ ಎಂ. ಎಂ. ಸಂಗೊಳ್ಳಿಯವರು, ಪಾರ್ವತಿ ಪಾಟೀಲ್ ಜೊತೆಗೆ ಕ್ರಿಯಾ ಮೂರ್ತಿಗಳಾಗಿ ನಡೆಸಿದರು.

ರಾಯಚೂರು ತಾಲೂಕಾ ಜಾ. ಲಿಂ.ಮ. ಅಧ್ಯಕ್ಷ ಜೆ. ಬಸವರಾಜ ಸ್ವಾಗತ ಕೋರಿದರು. 10ರ ರಾತ್ರಿ ನಡೆದ ಶರಣ ಸಮ್ಮತಿ ಕಾರ್ಯಕ್ರಮವನ್ನು ಸುಮಾರು 300 ಜನ ವೀಕ್ಷಿಸಿದರು.
11ರ ಬೆಳಿಗ್ಗೆ ಲಿಂಗಸಾಕ್ಷಿಯಾಗಿ ಅಷ್ಟವರಣ ಸಂಪನ್ನೆ ಸೌಮ್ಯ ರವರ ಕಲ್ಯಾಣ ಮಹೋತ್ಸವವು, ಅಷ್ಟಾವರಣ ಸಂಪನ್ನ ಜಗದೀಶ್ ಕೆ. ರವರ ಜೊತೆ ನೆರವೇರಿತು.

ಸೌಮ್ಯ ಅವರಿಗೆ ಜಗದೀಶ ಮಾಂಗಲ್ಯ ಧಾರಣ ಮಾಡಿದರು, ಸೌಮ್ಯ ಅವರು ಜಗದೀಶ ಅವರಿಗೆ ರುದ್ರಾಕ್ಷಿ ಧಾರಣ ಮಾಡಿ, ಪರಸ್ಪರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಷ್ಟು ಬೆಳಿಗ್ಗೆಯೇ ಸುಮಾರು 200 ಜನರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
10.30 ರ ಸಮಯಕ್ಕೆ ಜಂಗಮ ಸಾಕ್ಷಿಯಾಗಿ ಕಾರ್ಯಕ್ರಮ ಪ್ರಾರಂಭವಾಯಿತು. ರಾಯಚೂರು ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಪಿ. ರುದ್ರಪ್ಪ ಅವರು ಬದುಕಿಗೆ ಶರಣ ತತ್ವದ ಮಹತ್ವ ಅದು ಬದುಕಿಗೆ ಹೀಗೆ ಪೂರಕವಾಗಿರುತ್ತದೆ ಎನ್ನುವ ಹಿನ್ನೆಲೆಯನ್ನು ತಿಳಿಸಿ, ಪ್ರಸ್ತುತ ಉಪಜಾತಿಗಳ ವಿಂಗಡಣೆ ಹೀಗೆ ಲಿಂಗಾಯತ ಧರ್ಮಕ್ಕೆ ಹಿನ್ನೆಡೆ ತರುತ್ತಿದೆ ಎನ್ನುವುದನ್ನು ಸಹ ವಿವರಿಸಿದರು.

ಕಾರ್ಯಕ್ರಮದಲ್ಲಿ ವಿಭೂತಿ ಧಾರಣೆ, ರುದ್ರಾಕ್ಷಿ ಧಾರಣೆ, ವಚನ ಗಂಟು, ಪ್ರಮಾಣ ವಚನ, ಅಷ್ಟಪುಷ್ಪದಳ, ಪುಸ್ಪಾರತಿ ನಡೆಯಿತು. ಈ ಕಾರ್ಯಕ್ರಮಕ್ಕೆ ಶರಣ ಎಂ ಎಂ ಸಂಗೊಳ್ಳಿ, ಪಾರ್ವತಿಪಾಟೀಲ್, ಮುದ್ದನಗೌಡ ಬಸಾಪುರ, ಲಕ್ಷ್ಮೀದೇವಿ ಪಿ ಇವರು ಕ್ರಿಯಾ ಮೂರ್ತಿಗಳಾಗಿ ಕಾರ್ಯ ನಿರ್ವಹಿಸಿದರು. ಪಿ. ಬಸವರಾಜ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಸಂಗೀತ ಬಳಗದಿಂದ ನೆರವೇರಿದ ವಚನ ಸಂಗೀತ ಜನರ ಮನಸ್ಸಿಗೆ ಮುದ ನೀಡಿತು, ಭಕ್ತಿ ಭಾವ ಮೂಡಿಸಿತು.

ಕಲ್ಯಾಣ ಮಹೋತ್ಸವದಲ್ಲಿ ಸಾವಿರಕ್ಕೂ ಹೆಚ್ಚು ಜನರು ಹಾಜರಿದ್ದು, ನೂತನ ಶರಣ ದಂಪತಿಗೆ ಪುಷ್ಪವೃಷ್ಠಿ ಮಾಡುವ ಮೂಲಕ ಭಾವಪೂರ್ಣವಾಗಿ ಆಶೀರ್ವಾದ ಮಾಡಿದರು.