ಬಸವಕಲ್ಯಾಣ
ಬಸವಣ್ಣನವರ ಅರಿವಿನ ಮನೆ ಪಕ್ಕದ ಅಪ್ಪಣ್ಣನವರ ಗವಿಯಲ್ಲಿ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಯವರು ರಾತ್ರೋರಾತ್ರಿ ಅನ್ಯ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ದೂರು ನೀಡಿದೆ.
ಈ ವಿಷಯದಲ್ಲಿ ಬಸವಕಲ್ಯಾಣ ಪೊಲೀಸ್ ಠಾಣೆಗೆ ದೂರು ಹಾಗೂ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಮನವಿಯನ್ನು ಸಂಘದ ಅಧ್ಯಕ್ಷ ರಾಚಪ್ಪ ಹಡಪದ, ಪ್ರಧಾನ ಕಾರ್ಯದರ್ಶಿ ಶಿವಾನಂದ ಜಿಂಗೆ ಅವರ ನೇತೃತ್ವದಲ್ಲಿ ದೂರು ಸಲ್ಲಿಸಲಾಗಿದೆ.
ಪಂಚ ಕಮಿಟಿಯವರು ಕಾನೂನು ಬಾಹಿರವಾಗಿ ಸ್ಥಾಪಿಸಿರುವ ಅನ್ಯ ಮೂರ್ತಿಯನ್ನು ತೆರವುಗೊಳಿಸಿ ಅಪರಾಧಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ನಗರ ಪೊಲೀಸ್ ಠಾಣೆಗೆ ಫೆಬ್ರವರಿ 7 ದೂರು ನೀಡಲಾಗಿದೆ.
ಅದೇ ದಿನ ಪ್ರಾಧಿಕಾರಕ್ಕೆ ನೀಡಿರುವ ಮನವಿಯಲ್ಲಿ ಅನ್ಯ ಮೂರ್ತಿಗಳನ್ನು ತೆರವುಗೊಳಿಸದ್ದಿದ್ದರೆ ಹಡಪದ ಸಮಾಜದ ಬಂಧುಗಳು ಅರಿವಿನ ಮನೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಲಾಗಿದೆ.
ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ದತ್ತಾತ್ರೇಯ ಬಾಂದೇಕರ್, ಉಪಾಧ್ಯಕ್ಷ ಜಗದೀಶ ನಲವಡಕರ್, ಪ್ರಮುಖರಾದ ಪಾಂಡುರಂಗ ಗದ್ಲೇಗಾವ, ಶರಣಪ್ಪ ಬೆಟಬಾಲಕುಂದ, ದತ್ತಾತ್ರೇಯ ಮೂಲಗೆ, ರಾಮಣ್ಣ ಹಡಪದ, ಭೀಮಾ ಬಾಂದೇಕರ್ ಮತ್ತಿತರರು ಉಪಸ್ಥಿತರಿದ್ದರು.
ತಹಶೀಲ್ದಾರ ಕಚೇರಿಯಲ್ಲಿ ಸಭೆ

ಮನವಿ ಸಲ್ಲಿಕೆಯಾದ ಮೇಲೆ ಸಹಾಯಕ ಆಯುಕ್ತ, ತಹಶೀಲ್ದಾರ ಮತ್ತು ಹಡಪದ ಸಮಾಜದ ಮುಖಂಡರನ್ನು ಒಳಗೊಂಡ ಸಭೆ ಫೆಬ್ರವರಿ 10ರಂದು ತಹಶೀಲ್ದಾರ ಕಚೇರಿಯಲ್ಲಿ ನಡೆದಿದೆ.
“ಇದೇ 15ರೊಳಗೆ ಗವಿಯಲ್ಲಿ ಪ್ರತಿಷ್ಠಾಪಿಸಿದ ಮೂರ್ತಿ ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಆಯುಕ್ತರು ಭರವಸೆ ನೀಡಿದ್ದಾರೆ. 15ರೊಳಗೆ ಪ್ರಾಧಿಕಾರ ಈ ಕಾರ್ಯ ಮಾಡದೇ ಹೋದರೆ ನಾವೆಲ್ಲ ರಾಜ್ಯಾದ್ಯಂತ ಹೋರಾಟಕ್ಕೆ ಇಳಿಯುತ್ತೇವೆ ಎಂದು ಹೇಳಿ ಬಂದಿದ್ದೇವೆ,” ಎಂದು ಸಂಘದ ಉಪಾಧ್ಯಕ್ಷ ಜಗದೀಶ ನಲವಡಕರ್ ಬಸವ ಮೀಡಿಯಾ ಜೊತೆ ಮಾತಾಡುತ್ತ ತಿಳಿಸಿದರು.
ಪಂಚಕಮಿಟಿ ಪ್ರತಿಕ್ರಿಯೆ
ಈ ಬಗ್ಗೆ ಬಸವ ಮೀಡಿಯಾ ಪಂಚಕಮಿಟಿ ಅಧ್ಯಕ್ಷ ಬಸವರಾಜ ಕೋರಕೆ ಅವರನ್ನು ಸಂಪರ್ಕಿಸಿದಾಗ ಅವರು, “ಬಸವಣ್ಣನವರ ಅರಿವಿನ ಮನೆ ಮೊದಲಿನಿಂದಲೂ ಪಂಚಕಮಿಟಿ ವಶದಲ್ಲೇ ಇದೆ. ದಿನನಿತ್ಯದ ಪೂಜೆ, ಪುನಸ್ಕಾರ ನಾವೇ ಮಾಡಿಕೊಂಡು ಬರುತ್ತಿದ್ದೇವೆ. ದೇವಸ್ಥಾನದ ವಿದ್ಯುತ್ ಬಿಲ್ ನಾವೇ ಕಟ್ಟುತ್ತಿದ್ದೇವೆ. ಅಕ್ಕನ ಬಳಗದವರು ನಮ್ಮ ಗಮನಕ್ಕೆ ತಂದು ಅಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ,” ಎಂದು ಹೇಳಿದರು.


