ತಾವೇ ಮಾಡಿಕೊಂಡ ಪ್ರಮಾದಗಳಿಂದ ಪಂಚ ಪೀಠಗಳು ಲಿಂಗಾಯತ ಸಮಾಜದ ಬೆಂಬಲ ಕಳೆದುಕೊಂಡಿವೆ.
ಸಿಂಧನೂರು
ಪಂಚ ಪೀಠಗಳ ನಡುವಿರುವ ಭಿನ್ನಾಭಿಪ್ರಾಯಗಳು ಎಲ್ಲರಿಗೂ ಗೊತ್ತಿರುವ ವಿಷಯವೇ.
ಕೆಲವು ವರ್ಷಗಳ ಹಿಂದೆ ಒಂದು ಗುರುಸ್ಥಳದ ಮಠದ ಪೀಠಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಅವರುಗಳು ರಾಜಕಾರಿಣಿಗಳಂತೆ ಮೇಲಾಟಕ್ಕೆ ನಿಂತದ್ದು, ಪರಸ್ಪರ ಗೌರವ, ನಂಬಿಕೆಯಿಲ್ಲದೆ ವರ್ತಿಸಿದ್ದೂ ನೋಡಿಯಾಗಿದೆ.
ಪಂಚಪೀಠಗಳಲ್ಲಿ ಹೆಚ್ಚು ಜ್ಞಾನ ಉಳ್ಳವರು ಕಾಶಿ ಜಗದ್ಗುರುಗಳು, ನಂತರ ಬರುವವರು ಶ್ರೀಶೈಲ ಪೀಠದ ಸ್ವಾಮೀಜಿ, ಮೂರನೇ ಸ್ಥಾನದಲ್ಲಿ ಇರುವವರು ರಂಭಾಪುರಿ ಸ್ವಾಮೀಜಿ, ಇನ್ನು ಉಜ್ಜನಿ, ಕೇದಾರ ಸ್ವಾಮಿಗಳು ಪೀಠಕ್ಕೆ ಅಧಿಕಾರಿಗಳು ಅಷ್ಟೇ. ಹೀಗಿರುವಾಗ ಪೀಠಗಳ ಹಿರಿಮೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡವರು ಬಾಳೆಹೊನ್ನೂರಿನ ರಂಭಾಪುರಿ ಸ್ವಾಮೀಜಿ. ಅವರ ರಾಜಕೀಯ ಸಖ್ಯ, ಪ್ರಭಾವ, ಗತ್ತು ಉಳಿದವರಿಗೆ ಬರುವದಿಲ್ಲ. ಹೀಗಾಗಿ ಅವರು ಒಂಟಿ, ಉಳಿದವರಿಗೆ ಅಸೂಯೆ.
ಆದರೆ ಲಕ್ಷ್ಮೇಶ್ವರದ ಮುಕ್ತಿಮಂದಿರದಲ್ಲಿ ಇಂದು (ಮೇ 7) ನಡೆಯುತ್ತಿರುವ ಸಭೆಯಲ್ಲಿ ಐದು ಆಚಾರ್ಯರೂ ಎಲ್ಲಾ ಭಿನ್ನತೆ ಬಿಟ್ಟು ಒಗ್ಗೂಡಲು ನಿರ್ಧರಿಸಿದಂತಿದೆ. ಈ ಬೆಳವಣಿಗೆಗೆ ಕಾರಣವೇನು?

ಪಂಚಪೀಠಗಳು ಮಾಡಿದ ತಪ್ಪುಗಳು
ಅಖಂಡ ಲಿಂಗಾಯತ ಸಮುದಾಯಕ್ಕೆ ಗುರುಗಳು ಎನಿಸಿಕೊಳ್ಳಲು ನೂರಾರು ವರ್ಷ ಪ್ರಯತ್ನ ಪಟ್ಟ ಪೀಠಗಳು, 50 ವರ್ಷಗಳ ಹಿಂದೆ ಸಮುದಾಯದ ವಿಶ್ವಾಸಕ್ಕೆ ಪಾತ್ರವಾಗಿದ್ದವು.
ಕರ್ನಾಟಕದ ಹಳ್ಳಿಗಳಲ್ಲಿ ನೆಲೆಸಿದ ಹಿರೇಮಠದವರು ಬಸವಾದಿ ಶರಣರ ತತ್ವ ಪ್ರಸಾರಕ್ಕಾಗಿ ಬದ್ಧರಾಗಿದ್ದ ಲಕ್ಷದ ತೊಂಬತ್ತಾರು ಸಾವಿರ ಚರಜಂಗಮರ ವಂಶಸ್ಥರು ಎನ್ನುವುದನ್ನು ಮರೆಸಿ ಐದು ಪೀಠಗಳು ಅವರನ್ನು ತಮ್ಮದಾಗಿಸಿಕೊಂಡರು.
ಆದರೆ ಇವರು ಮಾಡಿದ ಬಹಳ ದೊಡ್ಡ ತಪ್ಪು ಎಂದರೆ ಅಸ್ತಿತ್ವವೇ ಇಲ್ಲದ ಪುರಾಣದ ಪುರುಷನನ್ನು ಧರ್ಮ ಸ್ಥಾಪಕ ಎಂದು ಬಿಂಬಿಸಲು ಹೊರಟದ್ದು ಮತ್ತು ಅದಕ್ಕಾಗಿ ಬಸವಾದಿ ಶಿವಶರಣರ ಅವಹೇಳನ ಮಾಡುವ ಸಾಹಸಕ್ಕೆ ಕೈ ಹಾಕಿದ್ದು.
ಬಸವಣ್ಣನವರ ಭಾವಚಿತ್ರ ಕಂಡರೆ ಅದನ್ನು ತೆಗೆಯುವರೆಗೆ ನಾವು ಊರನ್ನು, ಮನೆಯನ್ನು ಪ್ರವೇಶ ಮಾಡುವದಿಲ್ಲ ಎಂದು ಹಠ ಹಿಡಿದದ್ದು, ಬಸವಣ್ಣನವರ ಭಾವಚಿತ್ರ ತೆಗೆಸಿ ತಾವು ಊರುಗಳಿಗೆ ಪ್ರವೇಶ ಮಾಡಿದ್ದು ಎಲ್ಲರಿಗೂ ನೆನಪಿನಲ್ಲಿ ಇರುವಂತಹದ್ದು. ಆಗಿನ ಪರಿಸ್ಥಿತಿಯಲ್ಲಿ ಲಿಂಗಾಯತ ಸಮುದಾಯದ ಅಕ್ಷರಜ್ಞಾನ ಕಡಿಮೆ ಇದ್ದಿತು.
ಲಿಂಗಾಯತರಿಗೆ ಬಸವಣ್ಣನವರ ತತ್ವಗಳು ವಿಸ್ತರಿಸಿಕೊಳ್ಳವಂತೆ ದುಡಿಯಬೇಕಿದ್ದ ವಿರಕ್ತ ಪೀಠಗಳ ಸ್ವಾಮಿಗಳು ನಿಷ್ಕ್ರಿಯರಾಗಿ ಸುಮ್ಮನೆ ಮಠಗಳಲ್ಲಿ ಕುಳಿತುಕೊಳುವಂತೆ ಮಾಡುವಲ್ಲಿ ಪಂಚಪೀಠಗಳು ಯಶಸ್ವಿಯಾದವು. ಹೊರಗೆ ನಮ್ಮ ಆಸನ ವಿರಕ್ತರಿಗಿಂತ ಒಂದಡಿ ಎತ್ತರ ಇರಬೇಕೆಂದು ಹಠ ಮಾಡುತ್ತಿದ್ದ ಅವರು, ಅಂತರಂಗದಲ್ಲಿ ಗಾಢ ಜಾತಿ ಸಂಬಂಧ ಹೊಂದಿದ್ದವರಾಗಿದ್ದರು.
ಬದಲಾದ ಕಾಲ
ಆದರೆ ಕಾಲ ಯಾವಾಗಲೂ ಒಂದೇ ರೀತಿ ಇರುವುದಿಲ್ಲ, ಪ್ರಕೃತಿ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿಯಂಥವರನ್ನು ಹುಟ್ಟು ಹಾಕಿ ಬಸವ ತತ್ವಕ್ಕೆ ಶಕ್ತಿ ತುಂಬಿತು. ಅವರ ಪ್ರವಚನಗಳು ಜನರ ಪ್ರಜ್ಞಾವಲಯ ವಿಸ್ತರಿಸಿ ಕೊಳ್ಳಲು ಕಾರಣ ಆದವು.
ಜನ ಹೊರುವ ಪಲ್ಲಕ್ಕಿ ಮೇಲೆ ಕುಳಿತು ಮೆರವಣಿಗೆ ಮಾಡಿಸಿಕೊಳ್ಳುವ ಇವರ ನಡೆಗಳನ್ನು ಪ್ರಶ್ನೆ ಮಾಡಲು ಪ್ರಾರಂಬಿಸಿದರು. ಪಂಚಮಸಾಲಿಗಳು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮದೇ ಪೀಠವನ್ನು ಸ್ಥಾಪಿಸಿಕೊಂಡದ್ದು ಈ ಪೀಠಗಳಿಗೆ ನುಂಗಲಾರದ ತುತ್ತಾಯಿತು.
ಲಿಂಗಾಯತ ಸಮುದಾಯದ ಮತ್ತೊಂದು ಬಲಿಷ್ಠ ವರ್ಗ ಸಾದರೂ ಮೊದಲೇ ಉಜ್ಜನಿ ಪೀಠ ವ್ಯಾಜ್ಯದ ಸಂಬಂಧ ಪಂಚಪೀಠಗಳ ಮೇಲೆ ವಿಶ್ವಾಸ ಹೊಂದಿರಲಿಲ್ಲ. ಸಾದು ಲಿಂಗಾಯತರಿಗೆ ತಮ್ಮದೇ ಪೀಠಗಳಿವೆ. ಆ ಸಮಾಜದ ವಿಶ್ವಾಸ ಮರು ಪಡೆಯುವದು ಅಸಾಧ್ಯ. ಬಣಜಿಗರ ನಂಬಿಕೆಯೂ ಸಹ ಪೀಠಗಳ ಮೇಲೆ ಅಷ್ಟಾಗಿ ಉಳಿದಿಲ್ಲ.
ಹಿಂದುಳಿದ ವರ್ಗಗಳ ವಿಶ್ವಾಸವೂ ಕಡಿಮೆಯಾಗುತ್ತಿದೆ. ಇನ್ನು ಚಿಕ್ಕಪುಟ್ಟ ಉಪಜಾತಿಗಳೂ ತಮ್ಮ ಸ್ವತಂತ್ರ ಅಸ್ತಿತ್ವಕ್ಕಾಗಿ ಪ್ರಯತ್ನಿಸುತ್ತಿವೆ. ಅವರವರಿಗೆ ಅವರ ಗುರುಗಳು ಸಿಕ್ಕಿದ್ದಾರೆ. ಹಾಗಾಗಿ ಭೇದ ಮರೆತು ಅಸ್ತಿತ್ವವನ್ನು ಉಳಿಸಿಕೊಳ್ಳುವದು ಪಂಚ ಪೀಠಗಳಿಗೆ ಅನಿವಾರ್ಯವಾಗಿದೆ.
ಇಂತಹ ಸಂಧರ್ಭದಲ್ಲಿ ಅವರು ತಮ್ಮದೇ ಹುಟ್ಟಿನ ಸಂಬಂಧದ ಜಾತಿಜಂಗಮರ ನಿಷ್ಠೆ ಮತ್ತು ಅಲ್ಪ ಸ್ವಲ್ಪ ಉತ್ತರ ಕರ್ನಾಟಕದ ಲಿಂಗಾಯತ ರೆಡ್ಡಿಗಳ ಮೇಲೆ ಅವಲಂಬಿತರಾದರು.

ಮುಕ್ತಿಮಂದಿರದ ಸಭೆ
ಮುಕ್ತಿಮಂದಿರದಲ್ಲಿ ನಡೆಯುವ ಸಭೆಯಲ್ಲಿ ಅವರು ಮೊದಲು ಮಾಡುವದು ವೀರಶೈವ ಮಹಾಸಭೆಯ ನಿರ್ಣಯದಂತೆ ಕರ್ನಾಟಕ ಸರಕಾರದ ಜಾತಿ ಸಮೀಕ್ಷೆಯನ್ನು ವಿರೋಧಿಸುವದು.
ಒಂದೂವರೆ ಕೋಟಿ ಇರುವ ಲಿಂಗಾಯತ ಸಮುದಾಯ ಅರವತ್ತಾರು ಲಕ್ಷಕ್ಕೆ ಇಳಿಸಿದ್ದು, ಸರಕಾರ ಲಿಂಗಾಯತರ ವಿರುದ್ಧ ಮಾಡಿದ ಷಡ್ಯಂತ್ರ, ಲಿಂಗಾಯತದ ಉಪಜಾತಿಗಳಿಗೆ ಮೀಸಲಾತಿ ಆಮಿಷ ಒಡ್ಡಿ ಬೇರೆಯಾಗುವಂತೆ ಮಾಡಿದೆ ಎನ್ನುವದು ಇವರ ವಾದ. ಹಾಗಾಗಿ ಮತ್ತೊಮ್ಮೆ ಮರುಸಮೀಕ್ಷೆ ಮಾಡಿಸಿ ನಿರ್ಣಯ ತೆಗೆದುಕೊಳ್ಳಬೇಕು ಎನ್ನುವದು ವೀರಶೈವ ಮಹಾಸಭೆಯ ಬೇಡಿಕೆ.
ಇದನ್ನೇ ಮುಕ್ತಿ ಮಂದಿರದ ಸಭೆಯಲ್ಲಿ ನಿರ್ಣಯ ಕೈಗೊಳುವ ಸಾಧ್ಯತೆ ಇದೆ. ಈ ರೀತಿ ಲಿಂಗಾಯತರ ಸಂಖ್ಯೆ ಕಡಿಮೆ ಆಗಲು ಕಾರಣವೇನು ಎಂದು ಪಂಚಪೀಠದ ಸ್ವಾಮಿಗಳು ಆತ್ಮವಾಲೋಕನ ಮಾಡಿಕೊಳ್ಳಬೇಕು.
ಬೇಡ ಜಂಗಮ ಆವಾಂತರ
ಎಲ್ಲರಿಗೂ ಗುರುಗಳು ಎನ್ನುವವರು ನಾವು “ಬೇಡ ಜಂಗಮರು” ನಮಗೆ ಎಸ್ ಸಿ ಮೀಸಲಾತಿಯಲ್ಲಿ ಅವಕಾಶ ಕೊಡಿ ಎಂದು ಕೇಳಿ, ದಾಖಲೆಗಳಲ್ಲಿ “ಹಿಂದೂ ಬೇಡ ಜಂಗಮ” ಎಂದು ಬರೆಸಿದ್ದು ಆವಾಂತರಕ್ಕೆ ಕಾರಣವಾಯಿತು. ಪಂಚಪೀಠದ ಐವರು ಗುರುಗಳು ರಾಷ್ಟ್ರಪತಿಯನ್ನು ಭೇಟಿಯಾಗಿ ತಮ್ಮ ಸಮುದಾಯದವರಿಗೆ ಬೇಡ ಜಂಗಮ ಮೀಸಲಾತಿ ಕೊಡಬೇಕೆಂದು ಮನವಿ ಕೊಟ್ಟದ್ದು, ಲಿಂಗಾಯತದ ಇತಿಹಾಸದಲ್ಲಿ ಮಾಡಿದ ಮತ್ತೊಂದು ಪ್ರಮಾದ.
ಇದನ್ನೇ ಅನುಸರಿಸಿದ ಇತರ ಉಪಜಾತಿಗಳು “ಹಿಂದೂ ಬಣಜಿಗ”, “ಹಿಂದೂ ಗಾಣಿಗ” “ಹಿಂದೂ ಹಡಪದ” ಎಂದು ದಾಖಲೆಗಳಲ್ಲಿ ಬರೆಸಿ ಲಿಂಗಾಯತದಿಂದ ಹೊರಗಾದರು. ಇನ್ನು ಪ್ರತಿಷ್ಠೆ ಬಿಡದ ಪಂಚಪೀಠದವರ ಮಾತು ಕೇಳಿ ವೀರಶೈವ ಮಹಾಸಭೆ, ಧರ್ಮದ ಅಂಕಣದಲ್ಲಿ “ವೀರಶೈವ ಲಿಂಗಾಯತ” ಎಂದು ಬರೆಸಲು ತಿಳಿಸಿತು. ಅದರಂತೆ ಅಲ್ಲಿ ಇನ್ನಷ್ಟೂ ಸಂಖ್ಯೆ ಇಳಿಮುಖವಾಯಿತು.
ಈ ಸಮಸ್ಯೆಯನ್ನು ಸೃಷ್ಟಿ ಮಾಡಿಕೊಂಡವರು ಯಾರು? ಅಖಂಡ ಲಿಂಗಾಯತ ಧರ್ಮದಡಿ ಎಲ್ಲರೂ ಧರ್ಮದ ಅಂಕಣದಲ್ಲಿ ಲಿಂಗಾಯತ ಎಂದು ಬರೆಸಿ ಸ್ವತಂತ್ರ ಧರ್ಮ ಮಾನ್ಯತೆ ಪಡೆದಿದ್ದರೆ, ಸಂಖ್ಯೆ ಅಷ್ಟೇ ಉಳಿಯುತ್ತಿತ್ತು.
ಜೈ ಗುರು ಬಸವೇಶ್ವರ
ಸುಳ್ಳಿನ ಕಾಲ ಮುಗಿದಿದೆ. ಸತ್ಯದ ಕಾಲ ಶುರುವಾಗಿದೆ. ವೀರಶೈವ ಮಹಾಸಭೆಯ ಮೊದಲ ಅಧಿವೇಶನದ ನಿರ್ಣಯಗಳೆಲ್ಲ ತಲೆಕೆಳಗಾಗಿ ಲಿಂಗಾಯತ ಮಹಾಧಿವೇಶನ ನಿರ್ಣಯಗಳು ಮಾತ್ರ ಜಾರಿಯಾಗುವ ಸಮಯ ಬಂದಿದೆ. ಇನ್ನು ಮುಂದೆ ಪಂ.ಪೀ ಗಳ ಪ್ರಭಾವ ಲಿಂಗಾಯತರಲ್ಲಿ ಕ್ಷಿಣಿಸುತ್ತಿದ್ದು ಅವರು ಕೇವಲ ಜಾತಿ ಜಂಗಮರಿಗೆ ಮಾತ್ರ ಸೀಮಿತರಾಗುವುದು ಶತಸಿದ್ದ.
ಬಸವಣ್ಣನವರನ್ನು ಲಿಂಗಾಯತ ಧರ್ಮ ಗುರುವೆಂದು ಒಪ್ಪಿ ಒಗ್ಗಟ್ಟಿನಿಂದ ವಚನಗಳ ಆಧರಿತ ಲಿಂಗಾಯತ ಧರ್ಮದ ಅರಿವು ಆಚರಣೆಗೆ ಆದ್ಯತೆ ಕೊಟ್ಟರೆ ಲಿಂಗಾಯತ ಧರ್ಮ ಬಲಗೊಳ್ಳುವುದರಲ್ಲಿ ಸಂಶಯವಿಲ್ಲ ಇಲ್ಲ.
🥲💐