ಬಾಳೆಹೊನ್ನೂರು
ಬಣಗಳಲ್ಲಿ ಒಡೆದಿರುವ ಪಂಚಪೀಠಗಳನ್ನು ಒಗ್ಗೂಡಿಸಲು ರಂಭಾಪುರಿ ಡಾ. ವೀರಸೋಮೇಶ್ವರ ಶ್ರೀಗಳು ಸಭೆ ಕರೆದು ಇತರ ಪಂಚಾಚಾರ್ಯರಿಗೆ ಪಾಲ್ಗೊಳ್ಳುವಂತೆ ಅಹ್ವಾನ ನೀಡಿದ್ದಾರೆ.
ಬಾಳೆಹೊನ್ನೂರು ರಂಭಾಪುರಿ ಪೀಠದ ಶಾಖಾ ಮಠ ಮುಕ್ತಿಮಂದಿರ ಕ್ಷೇತ್ರದಲ್ಲಿ ಮೇ 7 ಸಂಜೆ 7.00 ಗಂಟೆಗೆ ನಡೆಯಲಿರುವ ಸಭೆಗೆ ಬರುವಂತೆ ಶ್ರೀಗಳು ಉಜನಿ, ಕಾಶಿ, ಕೇದಾರ ಮತ್ತು ಶ್ರೀಶೈಲ ಶ್ರೀಗಳಿಗೆ ಪತ್ರ ಬರೆದಿದ್ದಾರೆ. ಪೀಠಾಚಾರ್ಯರ ಸಮಾಗಮದ ಮೂಲಕ ಆಂತರಿಕ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯಗೊಳಿಸುವುದು ಸಭೆ ಉದ್ದೇಶ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪಂಚಪೀಠಗಳ ಆಂತರಿಕ ಸಮಸ್ಯೆಗಳು ಭಕ್ತರ ಮನಸ್ಸಿಗೆ ನೋವನ್ನುಂಟು ಮಾಡಿದೆ. ಈ ಹಿಂದೆ 2-3 ಸಲ ರಂಭಾಪುರಿ ಪೀಠ ಪ್ರಾಮಾಣಿಕ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನ ಉಂಟಾಗಲಿಲ್ಲ, ಎಂದು ಶ್ರೀಗಳು ಪತ್ರದಲ್ಲಿ ಬರೆದಿದ್ದರೆ.
ಜಾತಿಗಣತಿ ವಿಷಯದ ಒಮ್ಮತ ಮೂಡಿಸಲು ಸಮಾಜವನ್ನು ಒಗ್ಗೊಡಿಸಲು ಅಖಿಲ ಭಾರತ ವೀರಶೈವ ಮಹಾಸಭಾ ನಡೆಸುತ್ತಿರುವ ಪ್ರಯತ್ನದ ಹಿನ್ನಲೆಯಲ್ಲಿಯೂ ಈ ಸಭೆಯನ್ನು ಕರೆಯಲಾಗಿದೆ.
ಭಾನುವಾರ ದಾವಣಗೆರೆಯಲ್ಲಿ ಮಾತನಾಡುತ್ತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ವೀರಶೈವ ಸಮುದಾಯದ ಪಂಚಪೀಠಗಳು ಒಗ್ಗೂಡಲು ಸಲಹೆ ನೀಡಿದ್ದೇನೆ, ಎಂದು ಹೇಳಿದರು.
ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಒಲವು ತೋರಿದ್ದಾರೆ. ಐದು ಪೀಠಗಳ ಮಠಾಧೀಶರನ್ನು ಒಗ್ಗೂಡಿಸಲು ದಾವಣಗೆರೆಯಲ್ಲಿ ವೇದಿಕೆ ರೂಪಿಸಲಾಗುವುದು’ ಎಂದು ಹೇಳಿದ್ದರು.
‘ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಮಠ ಹಾಗೂ ಮಠಾಧೀಶರು ಒಗ್ಗೂಡುವ ಅಗತ್ಯವಿದೆ. ಸಮುದಾಯದ ಹಿತಾಸಕ್ತಿಯಿಂದ ಎಲ್ಲ ಮಠಾಧೀಶರು ಒಗ್ಗಟ್ಟು ಪ್ರದರ್ಶಿಸುವ ಅನಿವಾರ್ಯತೆ ಎದುರಾಗಿದೆ’ ಎಂದರು.
