ರೇಣುಕಾ ಜಯಂತಿ: ಲಿಂಗಾಯತ ಅಸ್ಮಿತೆಯ ಮೇಲೆ ದಾಳಿ (ಶಾಂತಕುಮಾರ ಹರ್ಲಾಪುರ)

ಪುರಾಣದ ರೇಣುಕಾಚಾರ್ಯರನ್ನು ಬಸವಣ್ಣನವರಿಗಿಂತ ದೊಡ್ಡವರು ಎಂದು ಬಿಂಬಿಸಿ, ಲಿಂಗಾಯತರ ಮೇಲೆ ಪೌರೋಹಿತ್ಯದ ಸವಾರಿ ನಡೆಸುವ ಸಂಚು

ಬೆಂಗಳೂರು

(ರೇಣುಕಾಚಾರ್ಯ ಜಯಂತಿಗೆ ಶರಣ ಉದ್ಯಮಿ ಶಾಂತಕುಮಾರ ಹರ್ಲಾಪುರ ಅವರ ಪ್ರತಿಕ್ರಿಯೆ.)

1) ನೀವು ನೋಡಿದ ಹಾಗೆ ರೇಣುಕಾಚಾರ್ಯರ ಜಯಂತಿ ಆಚರಣೆ ಶುರುವಾಗಿದ್ದು ಯಾವಾಗ? ಜಯಂತಿ ಆಚರಣೆಯ ಪ್ರಮಾಣ ಹೆಚ್ಚುತ್ತಿದೆಯೇ?

ನಾನು ಮೊಟ್ಟ ಮೊದಲು ಕಲ್ಲಿನಿಂದ ಉದ್ಭವವಾದ ರೇಣುಕಾಚಾರ್ಯರ ಫೋಟೋ‌ ನೋಡಿದ್ದು ಧಾರವಾಡದ ವೀರಶೈವ ಖಾನಾವಳಿಯಲ್ಲಿ, ಚಿಕ್ಕವನಿದ್ದಾಗ.

ಬಸವಣ್ಣನವರ ಹಾಗೂ ಇನ್ನಿತರ ಶರಣರ ೧೦೦ ಕ್ಕೂ ಹೆಚ್ಚಿನ ವಚನಗಳನ್ನು ಕಂಠಪಾಠ ಮಾಡಿದ್ದ ನನಗೆ ಈ ರೇಣುಕಾಚಾರ್ಯರು ಯಾರು? ಇವರ ವಚನಗಳು ಇವೆಯಾ ಎನ್ನುವ ಪ್ರಶ್ನೆ ಮೂಡಿ ನನ್ನ ತಂದೆಯವರನ್ನು ಕೇಳಿದಾಗ, ಅಪ್ಪ ಹೇಳಿದ್ದು “ಶರಣರು ಬದುಕಿದ್ದರು ಸಮಾನತೆಗಾಗಿ ಹೋರಾಡಿದ್ದರು, ಅವರು ಐತಿಹಾಸಿಕ ವ್ಯಕ್ತಿಗಳು. ಆದರೆ ಈ ರೇಣುಕಾಚಾರ್ಯ ಕಲ್ಲಿನಲ್ಲಿ ಹುಟ್ಟಿದವರು ಅಂತ ಕಥೆ ಕಟ್ಟಿ ಈಗೀಗ ವೀರಶೈವ ಜಂಗಮರು ಫೋಟೋ ಹಾಕಾಕ ಶುರು ಮಾಡಿದಾರ. ಇವರು ಯಾವ ವಚನಗಳನ್ನೂ ಬರೆದಿಲ್ಲ, ಅಸಲಿಗೆ ಕಲ್ಲಿನಲ್ಲಿ ಯಾರೂ ಹುಟ್ಟುದಿಲ್ಲ, ಸುಮ್ಮನೆ ಅವರು ದೊಡ್ಡಸ್ತನಕ್ಕ ಫೋಟೋ ಹಾಕಾಕ ಶುರು ಮಾಡ್ಯಾರ ಎಂದು ಖಡಕ್ಕಾಗಿ ಅಪ್ಪ ಉತ್ತರ ಕೊಟ್ಟಿದ್ದರು.

ನನಗ ರೇಣುಕಾಚಾರ್ಯರ ಪರಿಚಯವಾಗಿದ್ದು ವೀರಶೈವ ಖಾನಾವಳಿಯಲ್ಲಿ, ಇಂದಿಗೂ ಅದು ಅವರಿಗೆ ಸೀಮೀತವಾಗಿದೆ.

2) ರೇಣುಕಾಚಾರ್ಯರ ಜಯಂತಿಯನ್ನು ಜನಪ್ರಿಯಗೊಳಿಸುವ ಪ್ರಯತ್ನ ನಡೆಯುತ್ತಿದೆಯೇ? ಇದಕ್ಕೆ ಕಾರಣವೇನು? ಇದರ ಹಿಂದಿನ ಉದ್ದೇಶವೇನು?

ಭೂ ಒಡೆಯರಿಂದ ಹಿಡಿದು ಹಲವಾರು ಕಾಯಕ ವರ್ಗಗಳು ಇರುವ ದೊಡ್ಡ ಸಮುದಾಯ ಲಿಂಗಾಯತ. ಇಂತಹ ದೊಡ್ಡ ಸಮುದಾಯದ ಮೇಲೆ ಪೌರೋಹಿತ್ಯ ಸ್ಥಾಪಿಸುವ ಪ್ರಯತ್ನ ಶತಮಾನಗಳಿಂದ ವಿಫಲ ಪ್ರಯತ್ನ ನಡೆದಿವೆ. ಬಸವಣ್ಣನವರು ಮತ್ತು ಶರಣರು ಜಾತಿ ವ್ಯವಸ್ಥೆ, ಮೇಲು‌ ಕೀಳು ಖಂಡಿಸಿಯೇ, ಇಷ್ಟಲಿಂಗದ ಮೂಲಕ ಎಲ್ಲರೂ ಸಮಾನರು ಎಂದು ಸಾರಿರುವಾಗ ಸಮಸ್ತ ಲಿಂಗಾಯತರ ಮೇಲೆ ಪೌರೋಹಿತ್ಯ ಸ್ಥಾಪಿಸುವುದು ಸುಲಭದ ಮಾತಲ್ಲ.

ಹಾಗಾಗಿಯೇ ಪುರಾಣದ ಮೂಲಕ ರೇಣುಕಾಚಾರ್ಯರನ್ನು ಸ್ರಷ್ಟಿಸಿ, ಅವರು ಬಸವಣ್ಣನವರಿಗಿಂತ ದೊಡ್ಡವರು ಎಂದು ಬಿಂಬಿಸಿ, ಲಿಂಗಾಯತರ ಮೇಲೆ ಸರ್ವಕಾಲಿಕ ಲಾಭದಾಯಕ ವೀರಶೈವರ ಪೌರೋಹಿತ್ಯದ ಸವಾರಿ ನಡೆಸುವ ಹುನ್ನಾರವೇ ಈ ಯುಗಮಾನೋತ್ಸವ ಜಯಂತಿ. ಅವೈದಿಕ ಅಸ್ಮಿತೆಯ‌ ಲಿಂಗಾಯತರ ಮೇಲೆ ವೈದಿಕರ‌ ಆಚರಣೆಗಳ ಹೇರಿದರೆ ಅದು ಸಂಘ ಪರಿವಾರಕ್ಕೆ ಅನುಕೂಲಕರ.

ಸಂಘ ಪರಿವಾರದವರ ಇಂತಹ ಚಾಣಾಕ್ಷ ನಡೆಗಳ ಬಗ್ಗೆ ಅರಿತಿದ್ದ ಯಡಿಯೂರಪ್ಪನವರು ಅಂದು ಮುಖ್ಯಂತ್ರಿಯಾಗಿದ್ದಾಗ ರೇಣುಕಾಚಾರ್ಯ ಜಯಂತಿಗೆ ಸ್ಪಂದಿಸಿದ್ದಿಲ್ಲ ಆದರೆ‌ ಅವರ‌ ನಂತರ ಕಾಲ್ಪನಿಕ ವ್ಯಕ್ತಿ ರೇಣುಕಾಚಾರ್ಯ ಜಯಂತಿ ಆಚರಣೆಗೆ ಅನುವು‌ ಮಾಡಿಕೊಟ್ಟ ಬೊಮ್ಮಾಯಿ ಸಂಘ ಪರಿವಾರದ ಒಂದು ದೊಡ್ಡ ಷಡ್ಯಂತ್ರದ ಭಾಗವಾಗಿ ಬಿಟ್ಟರು. ಇದರ ಮುಂದುವರಿದ ಭಾಗವೇ ಈಗ ಒತ್ತಾಯದ ವಿಜ್ರಂಭಣೆಯಿಂದ ನಡೆಯುತ್ತಿರುವ ರೇಣುಕಾಚಾರ್ಯ ಜಯಂತಿ.

3) ಕಳೆದ ಕೆಲವು ವರ್ಷಗಳ ಯಾವುದಾದರು ಬೆಳವಣಿಗೆಗಳಿಗೆ ಅವರು ಪ್ರತಿಕ್ರಿಯೆ ನೀಡುತ್ತಿದ್ದಾರೆ ಅನಿಸುತ್ತದೆಯೇ?

ತಾವು ಹುಟ್ಟಿನಿಂದ ಶ್ರೇಷ್ಟರು‌ ಎಂದು ನಂಬುವ ವೀರಶೈವ ಜಂಗಮರು ಮೊದಲಿಂದಲೂ ಬಸವಣ್ಣ ಹಾಗೂ ಬಸವತತ್ವವನ್ನು‌ ನಾಶಮಾಡಲು ಸರ್ವಪ್ರಯತ್ನ ಮಾಡಿಕೊಂಡು ಬಂದವರೇ ಆದರೆ ಯಶಸ್ಸು ಕಂಡಿಲ್ಲ. ಇವರನ್ನು ಹೊರುವ ಅಡ್ಡಪಲ್ಲಕ್ಕಿಗಳಿಗೆ ಎಂದಿಗಿಂತಲೂ ಈಗ ಹೆಚ್ಚಿನ ವಿರೋಧ ಹಾಗೂ ಜನರೂ ಸೇರುತ್ತಿಲ್ಲ.

ಇಂದು ದೇಶಾದ್ಯಂತ ‌ಸಾಮಾಜಿಕ ಜಾಲತಾಣದ ಮೂಲಕ, ಭಾಷಾಂತರದ ಮೂಲಕ, ವಚನಗಳು ಕುತೂಹಲ ಮೂಡಿಸಿದೆ. ವರ್ಣಭೇದ, ಹೋಮ, ಅಗ್ನಿಪೂಜೆ, ಜಾತಿವ್ಯವಸ್ಥೆ ಖಂಡಿಸಿರುವ ವಚನ ಸಾಹಿತ್ಯದ ಪ್ರಚಾರ ವೀರಶೈವರ ಪಂಚಪೀಠಗಳಿಗೆ ನುಂಗಲಾರದ ತುತ್ತಾಗಿದೆ.

ರೇಣುಕಾಚಾರ್ಯ ಜಯಂತಿಯಂದು ಭದ್ರಾ‌ನದಿ ದಂಡೆಯಲ್ಲಿ ಸ್ಥಾವರಲಿಂಗಕ್ಕೆ ಪೂಜೆ ಮಾಡಿ, ಅಲ್ಲಿ ಹೋಮವನ್ನೂ ಮಾಡುವ ಇವರು, ಲಿಂಗಾಯತರ ಮನಸ್ಸಿನಿಂದ ದೂರ ಸರಿದು ಹೋಗಿದ್ದಾರೆ,‌ ಕಾಲ್ಪನಿಕ ರೇಣುಕಾಚಾರ್ಯರ ಆಚರಣೆ ಕೇವಲ ವೀರಶೈವ ಜಂಗಮರಿಗೆ ಮಾತ್ರ ಮೀಸಲಾಗಿ ಉಳಿಯಲಿದೆ.

ಈಗಾಗಲೇ ಸಹಸ್ರಾರು ಜಾತಿ‌ ಜಂಗಮರು ಬೇಡ ಜಂಗಮದ ಹೆಸರಲ್ಲಿ ಹಿಂಬಾಗಿಲಿನ ಮೂಲಕ ದಲಿತರ ಮೀಸಲಾತಿ‌ ಹೊಡೆದುಕೊಂಡಿದ್ದಾರೆ. ಇವರ ಬಗ್ಗೆ‌ ಸಮಾಜದಲ್ಲಿ ದೊಡ್ಡ ಆಕ್ಷೇಪಣೆ ಎದ್ದಿವೆ, ಅತ್ತ ದಲಿತರಿಗೂ ಅನ್ಯಾಯ‌ಮಾಡಿ, ಇತ್ತ ಲಿಂಗಾಯತರ ಗುರುಗಳೆಂದು ವೈದಿಕ ಆಚರಣೆ ಹೇರಿ ದಾರಿ ತಪ್ಪಿಸುವ ಇವರು ಇಂದು‌ ತಮ್ಮ‌ ಅಸ್ತಿತ್ವಕ್ಕಾಗಿ ಪರದಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ‌ .

ಪ್ರಜ್ಞಾವಂತ ವೀರಶೈವ ಜಂಗಮ ಯುವಕ ಯುವತಿಯರು ಈಗಾಗಲೇ ಪಂಚಪೀಠಗಳ ಸ್ವಾಮಿಗಳ ಎರಡೆರಡು ನಾಲಗೆಯನ್ನು, “ಒಮ್ಮೆ ಬೇಡಜಂಗಮ ಎನ್ನುತ್ತ ದಲಿತರನ್ನಾಗಿಸುವ ಮತ್ತೊಮ್ಮೆ ಲಿಂಗಾಯತರ ಗುರುಗಳು ಎಂದು ಶ್ರೇಷ್ಟತೆಯ ವ್ಯಸನ ಬಿತ್ತುವ” ಇವರ ಕಪಟ ನಡೆಯನ್ನು ಅರಿತು ಈಗ ಅವರನ್ನ ಬಹಿರಂಗವಾಗಿ ಸಮರ್ಥಿಸುವದನ್ನು‌ ನಿಲ್ಲಿಸುತ್ತಿದ್ದಾರೆ. ಇವರ ಇಬ್ಬಗೆಯ ಈ ನಡೆಯನ್ನು ಬೆಂಬಲಿಸುತ್ತ ಹೋದರೆ ವೀರಶೈವ ಯುವಕರಿಗೆ ಸಮಾಜದ ಸಂಘಟನೆಯಲ್ಲಿ ಯಾವುದೇ ಭವಿಷ್ಯವಿಲ್ಲ ಎಂದು ಅರಿತಿದ್ದೇ ಅವರನ್ನು ತಿರಸ್ಕರಿಸುವವರ ಸಂಖ್ಯೆ ಹೆಚ್ಚಾಗಿದೆ.

4) ರೇಣುಕಾಚಾರ್ಯರ ಜಯಂತಿಯ ಕಾರ್ಯಕ್ರಮಗಳಲ್ಲಿ ಬರುತ್ತಿರುವ ಸಂದೇಶವೇನು?

ಒಂದು ಹಾಸ್ಯಾಸ್ಪದ ಸಂಗತಿಯೆಂದರೆ ವೀರಶೈವ ಧರ್ಮ ಎಂದು ಶುರುಮಾಡುವ ಇವರು, ತಾವು ಹಿಂದೂಗಳೂ ಎಂದು ಹೇಳುತ್ತಾರೆ, ಇವರು ಹಿಂದೂಗಳಾದರೆ ವೀರಶೈವ ಧರ್ಮ ಎಂದು‌ ಏಕೆ ಹೇಳುತ್ತಾರೆ ಎಂದು ಯುವಕರು ಪ್ರಶ್ನಿಸಿದರೆ ಅದಕ್ಕೆ ಉತ್ತರವಿಲ್ಲ.

ಒಂದೋ ವೀರಶೈವ ಮತ್ತು ಹಿಂದೂ ಧರ್ಮ ಬೇರೆ ಬೇರೆ ಎಂದು ಹೇಳಬೇಕು, ಹಿಂದೂ ಧರ್ಮದ ಒಳಗೆ ಇನ್ನೊಂದು ಧರ್ಮ ವೀರಶೈವ ಧರ್ಮ ಹೇಗಿರಲು ಸಾಧ್ಯ? ಒಂದು ಧರ್ಮದ ಒಳಗೆ ಇನ್ನೊಂದು‌ ಧರ್ಮ ತುರುಕಲು‌ ಹೇಗೆ ಸಾದ್ಯ ?

ರೇಣುಕಾಚಾರ್ಯ ಸಹಸ್ರಾರು ವರ್ಷ ಹಿಂದೆ ಲಿಂಗೋಧ್ಬವವಾದರು, ಬಸವಣ್ಣನವರು ಅವರ ಭಕ್ತರಾಗಿದ್ರು, ರೇಣುಕರೇ ದೊಡ್ಡವರು ಎಂಬ ಭ್ರಾಂತಿಯನ್ನು ಹರಡುವುದೇ ಈ‌ ಜಯಂತಿಯ ಉದ್ದೇಶವಲ್ಲದೇ ಬೇರೆ ಮತ್ತೇನಿಲ್ಲ.

5) ರೇಣುಕಾಚಾರ್ಯರ ಜಯಂತಿಯ ಹಿಂದೆ ಯಾರಿದ್ದಾರೆ, ಯಾವ ಸಂಘಟನೆಗಳಿವೆ? ಅವರಿಗೆ ಯಾವ ರೀತಿ ಜನಬೆಂಬಲವಿದೆ?

ರೇಣುಕಾಚಾರ್ಯ ‌ಜಯಂತಿಯನ್ನು ಪಂಚಪೀಠಗಳು ಆಚರಿಸುತ್ತಿವೆ. ಜೊತೆಗೆ ಸಂಘ ಪರಿವಾರದವರು, ವೀರಶೈವ ಮಹಾಸಭಾದಂತವರೂ ಇದ್ದಾರೆ. ಆದರೂ ಇದಕ್ಕೆ ಇಂದಿಗೂ ಜನಮನ್ನಣೆ ಸಿಕ್ಕಿಲ್ಲ.

6) ಈ ಬೆಳವಣಿಗೆಯನ್ನು ಲಿಂಗಾಯತರು ಹೇಗೆ ನೋಡಬೇಕು? ಹೇಗೆ ಪ್ರತಿಕ್ರಿಯೆ ನೀಡಬೇಕು?

ಲಿಂಗಾಯತರ ಅಸ್ಮಿತೆ ನಿಂತಿರುವುದೇ ವಚನ ಸಾಹಿತ್ಯ ಮತ್ತು ಬಸವಾದಿ ಶರಣರ ಮೌಡ್ಯ ವಿರೋಧಿ, ಮಹೂರ್ತ ವಿರೋಧಿ, ಜಾತಿ ವಿರೋಧಿ ನಿಲುವಿನಿಂದ, ಇದಕ್ಕೆ ಸಂಪೂರ್ಣ ತದ್ವಿರುದ್ದ ಈ ವೀರಶೈವರ ಪಂಚಾಚಾರ್ಯರ ನಡೆ ನುಡಿ.

ಲಿಂಗಾಯತ ಅಸ್ಮಿತೆ ನಾಶಮಾಡುವ ಈ ಕಾಲ್ಪನಿಕ ರೇಣುಕಾಚಾರ್ಯ ಜಯಂತಿಗೆ ಸಂಘ ಪರಿವಾರದ ಬೆಂಬಲ ದೊರಕಿದೆ. ಹಾಗಾಗಿಯೇ ಈಗ ರೇಣುಕಾಚಾರ್ಯ ಕಾರ್ಯಕ್ರಮಕ್ಕೆ ಲಕ್ಷಾಂತರ ರೂಪಾಯಿ‌ ಸುರಿದು ರಾಜ್ಯದ ಎಲ್ಲ ಕಡೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

ವಚನ ದರ್ಶನದಂತಹ ಪುಸ್ತಕ ಪ್ರಕಟಣೆ ಮಾಡಿದ ಸಂಘ ಪರಿವಾರದಿಂದ ಲಿಂಗಾಯತ ಅಸ್ಮಿತೆಯ ಮೇಲೆ ನಡೆಯುತ್ತಿರುವ ಮುಂದುವರಿದ ದಾಳಿ ಈ‌ ಅದ್ದೂರಿ ರೇಣುಕಾಚಾರ್ಯ ಜಯಂತಿ ಆಚರಣೆ. ಇದು ಲಿಂಗಾಯತರಿಗೆ ಸ್ಪಷ್ಟವಾಗಿ ತಿಳಿಯುತ್ತಿದೆ ಮತ್ತು ಬೇರೆ ಬೇರೆ ರೂಪದಲ್ಲಿ ಪ್ರತಿರೋಧವೂ ಕಾಣುತ್ತಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
3 Comments
  • ಕಾಲ್ಪನಿಕ ರೇಣುಕಾಚಾರ್ಯ ರ ಬಗ್ಗೆ ಪಂಚ ಪೀಠಗಳು ಮಾಡುತ್ತಿರುವ ಹುನ್ನಾರವನ್ನು ತುಂಬಾ ಚನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ ಶಾಂತಕುಮಾರ್ ರವರೇ. ಶರಣು ಶರಣಾರ್ಥಿಗಳು.

  • ಬಸವಣ್ಣ ಈರುಳ್ಳಿ ಕಟ್ಟಿಕೊಂಡು ಮಹಾಮನೆಗೆ ಬಂದ ಕಳ್ಳರನ್ನು ಮುಟ್ಟಿದ ತಕ್ಷಣ ಅದು ಇಷ್ಟಲಿಂಗವಾಗಿ ಬದಲಾಯಿತೇ?? ಲಕ್ಷದ ತೊಂಬತ್ತಾರು ಸಾವಿರ ಜಂಗಮರನ್ನು ಕಾಶ್ಮೀರದಿಂದ ಜೊಳಿಗೆಯಲ್ಲಿ ತಂದರು ಏನ್ನುವುದು ಎಲ್ಲಿಂದ ನಗಬೇಕು???? ಹೇಳುವುದು ಬಸವ ತತ್ತವ ಆದರೆ ಮನೆಯಲ್ಲಿ ಮಠಗಳಲ್ಲಿ ಹೋಮ ಹವನ ಇತ್ಯಾದಿ…

Leave a Reply

Your email address will not be published. Required fields are marked *

ಎಂಬಿಎ ಪದವೀಧರರು ಮತ್ತು ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿ